ಗಾಲೆ ಟೆಸ್ಟ್‌ನಲ್ಲಿ ಭಾರತವು ಶ್ರೀಲಂಕಾ ವಿರುದ್ಧ 165 ರನ್‌ಗಳ ಭರ್ಜರಿ ಜಯ ಸಾಧಿಸಿ, ತನ್ನ 600ನೇ ಟೆಸ್ಟ್ ಗೆಲುವಿನ ಮೈಲಿಗಲ್ಲು ಸ್ಥಾಪಿಸಿತು. ಈ ನಿಟ್ಟಿನಲ್ಲಿ ಮಾತನಾಡಿದ ಲಂಕಾ ನಾಯಕ ಧನಂಜಯ ಡಿ ಸಿಲ್ವಾ ಶ್ರೀಲಂಕಾ ಸೋಲಿಗೆ ಆ ಇಬ್ಬರೆ ಕಾರಣ ಎಂದಿದ್ದಾರೆ.

ಗಾಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರೋಚಕ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ 165 ರನ್‌ಗಳ ಅಂತರದ ಭರ್ಜರಿ ಜಯ ಸಾಧಿಸಿದೆ. ಈ ಐತಿಹಾಸಿಕ ಗೆಲುವಿನೊಂದಿಗೆ ಟೀಮ್ ಇಂಡಿಯಾ ತನ್ನ ಕ್ರಿಕೆಟ್ ಚರಿತ್ರೆಯಲ್ಲಿ 600ನೇ ಟೆಸ್ಟ್ ಜಯವನ್ನು ಪೂರ್ಣಗೊಳಿಸಿ ದಾಖಲೆ ಬರೆದಿದೆ. ಪಂದ್ಯದ ಕೊನೆಯ ಇನ್ನಿಂಗ್ಸ್‌ನಲ್ಲಿ 372 ರನ್‌ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಲಂಕಾ ಪಡೆ, ಭಾರತೀಯ ಬೌಲರ್‌ಗಳ ಮಾರಕ ದಾಳಿಗೆ ತಡೆಯಿಲ್ಲದೆ ಕೇವಲ 206 ರನ್‌ಗಳಿಗೆ ಆಲೌಟ್ ಆಯಿತು.

ಶ್ರೀಲಂಕಾ ನಾಯಕ ಧನಂಜಯ ಡಿ ಸಿಲ್ವಾ ಪ್ರತಿಕ್ರಿಯೆ!

ಪಂದ್ಯದ ಸೋಲಿನ ನಂತರ ಮಾತನಾಡಿದ ಶ್ರೀಲಂಕಾ ತಂಡದ ನಾಯಕ ಧನಂಜಯ ಡಿ ಸಿಲ್ವಾ, ತಮ್ಮ ತಂಡದ ಪ್ರದರ್ಶನ ಮತ್ತು ಟಾಸ್ ವಹಿಸಿದ ಪ್ರಮುಖ ಪಾತ್ರದ ಕುರಿತು ಮುಕ್ತವಾಗಿ ಮಾತನಾಡಿದರು. "ನಾವು ಎರಡನೇ ದಿನದಿಂದಲೇ ಪಂದ್ಯಕ್ಕೆ ಕಂಬ್ಯಾಕ್ ಮಾಡಲು ಪ್ರಯತ್ನಿಸಿದೆವು. ಆಟಗಾರರು ಉತ್ತಮವಾಗಿಯೇ ಪ್ರದರ್ಶನ ನೀಡಿದರು. ನಾಲ್ಕನೇ ಇನ್ನಿಂಗ್ಸ್‌ನಲ್ಲಿಯೂ ನಮ್ಮ ಹೋರಾಟ ಉತ್ತಮವಾಗಿತ್ತು. ಆದರೆ ಗಾಲೆ ಮೈದಾನದಲ್ಲಿ ಕೊನೆಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಅತ್ಯಂತ ಸವಾಲಿನ ಕೆಲಸ" ಎಂದು ಅಭಿಪ್ರಾಯಪಟ್ಟರು.

ಟಾಸ್ ಅಪಶಕುನ ಮತ್ತು ಆರಂಭಿಕರ ಭದ್ರ ಬುನಾದಿ!

ಟಾಸ್ ಸೋತಿದ್ದು ಪಂದ್ಯದ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಲಂಕಾ ನಾಯಕ, ಬಹುಶಃ ಹೌದು, ಭಾರತ ಟಾಸ್ ಗೆದ್ದು ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಪೇರಿಸಿದ್ದು ನಮ್ಮ ಮೇಲೆ ತೀವ್ರ ಒತ್ತಡವನ್ನು ಹೇರಿತು ಎಂದು ಒಪ್ಪಿಕೊಂಡಿದ್ದಾರೆ.

ಈ ಇಬ್ಬರೇ ಕಾರಣ; ಧನಂಜಯ್!

ತಮ್ಮ ಸೋಲಿಗೆ ಭಾರತೀಯ ಬ್ಯಾಟರ್‌ಗಳಾದ ಕೆ.ಎಲ್.ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಅವರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವೇ ಪ್ರಮುಖ ಕಾರಣವೆಂದು ಧನಂಜಯ ಬೆಟ್ಟು ಮಾಡಿದರು. ರಾಹುಲ್ ಮತ್ತು ಪಡಿಕ್ಕಲ್ ಭಾರತಕ್ಕೆ ನೀಡಿದ ಬಿರುಸಿನ ಓಪನಿಂಗ್ ಪಾರ್ಟ್‌ನರ್‌ಶಿಪ್ ಮತ್ತು ಆ ರನ್‌ಗಳನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಿದ ರೀತಿ ಪಂದ್ಯದ ಲಯವನ್ನು ಸಂಪೂರ್ಣವಾಗಿ ಭಾರತದತ್ತ ತಿರುಗಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ನಾವು ಆರಂಭದಲ್ಲೇ ಸಾಲು ಸಾಲು ವಿಕೆಟ್‌ಗಳನ್ನು ಕಳೆದುಕೊಂಡಿದ್ದು ನಮಗೆ ದೊಡ್ಡ ಹಿನ್ನಡೆಯಾಯಿತು. ನಾವು ಇನ್ನಷ್ಟು ಶಿಸ್ತು ಮತ್ತು ಸಂಯಮದ ಶಾರ್ಟ್ ಸೆಲೆಕ್ಷನ್‌ನೊಂದಿಗೆ ಬ್ಯಾಟಿಂಗ್ ಮಾಡಬೇಕಿತ್ತು ಎಂದರು.

ಮಾನವ್ ಸುತಾರ್ ಮಾರಕ ಸ್ಪಿನ್ ದಾಳಿ!

ಈ ಟೆಸ್ಟ್ ಪಂದ್ಯದಲ್ಲಿ ಭಾರತದ ಯುವ ಸ್ಪಿನ್ನರ್ ಮಾನವ್ ಸುತಾರ್ ಅವರ ಬೌಲಿಂಗ್ ಪ್ರದರ್ಶನ ಪಂದ್ಯದ ಪ್ರಮುಖ ಹೈಲೈಟ್ ಆಗಿತ್ತು. ಲಂಕಾ ನಾಯಕ ಧನಂಜಯ ಕೂಡ ಸುತಾರ್ ಅವರ ವೈವಿಧ್ಯಮಯ ಸ್ಪಿನ್ ಬೌಲಿಂಗ್ ಅನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅದ್ಭುತ ಲೈನ್ ಮತ್ತು ಲೆಂತ್ ಕಾಯ್ದುಕೊಂಡ ಸುತಾರ್, ಒಂದೇ ಓವರ್‌ನಲ್ಲಿ ವಿಕೆಟ್ ಕಬಳಿಸುವ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಒಟ್ಟಾರೆಯಾಗಿ ತಮ್ಮ ಅತ್ಯುತ್ತಮ ಸ್ಪೆಲ್‌ನಲ್ಲಿ 5 ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ 'ಫೈವ್ ವಿಕೆಟ್ ಹಾಲ್' ಸಾಧನೆ ಮಾಡಿದರು. ಅವರಿಗೆ ಸೂಕ್ತ ಬೆಂಬಲ ನೀಡಿದ ವೇಗಿ ಪ್ರಸಿದ್ಧ್ ಕೃಷ್ಣ 2 ವಿಕೆಟ್ ಪಡೆದರೆ, ಅನುಭವಿ ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಕಬಳಿಸಿ ಶ್ರೀಲಂಕಾದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ಪಂದ್ಯದ ಮುಖ್ಯಾಂಶಗಳು!

ಭಾರತದ ಐತಿಹಾಸಿಕ ಸಾಧನೆ; ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತಕ್ಕೆ ಇದು 600ನೇ ಜಯ.

ಗೆಲುವಿನ ಅಂತರ; 165 ರನ್‌ಗಳ ಬೃಹತ್ ಜಯ.

ಲಂಕಾ ಕೊನೆಯ ಇನ್ನಿಂಗ್ಸ್; 372 ರನ್‌ಗಳ ಗುರಿ ಬೆನ್ನಟ್ಟಿ 206 ರನ್‌ಗಳಿಗೆ ಆಲೌಟ್.

ಬೌಲಿಂಗ್ ಹೀರೋ; 5 ವಿಕೆಟ್ ಕಬಳಿಸಿ ಮಿಂಚಿದ ಭಾರತದ ಯುವ ಸ್ಪಿನ್ನರ್ ಮಾನವ್ ಸುತಾರ್.

ಪ್ರಮುಖ ಬ್ಯಾಟಿಂಗ್; ಕೆ.ಎಲ್. ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಅವರ ಬಿರುಸಿನ ಆರಂಭಿಕ ಜೊಟಾಟ.

ಪ್ರೆಂಡ್ಲಿ ಬ್ಯಾಟಿಂಗ್‌ ಟ್ರ್ಯಾಕ್!

ಮೊದಲ ಮೂರು ದಿನಗಳು ಪಿಚ್ ಬ್ಯಾಟಿಂಗ್‌ಗೆ ಅತ್ಯಂತ ಅನುಕೂಲಕರವಾಗಿತ್ತು. ಆದರೆ ನಾಲ್ಕನೇ ದಿನದಿಂದ ಪಿಚ್‌ನಲ್ಲಿ 'ವೇರ್ ಅಂಡ್ ಟೇರ್' ಹೆಚ್ಚಾಗಿ ಸ್ಪಿನ್ನರ್‌ಗಳಿಗೆ ಹೆಚ್ಚಿನ ಟರ್ನ್ ಮತ್ತು ಬೌನ್ಸ್ ಲಭಿಸಿತು. ಇದನ್ನು ಸರಿಯಾಗಿ ಬಳಸಿಕೊಂಡ ಭಾರತೀಯ ಬೌಲಿಂಗ್ ಪಡೆ, ಶ್ರೀಲಂಕಾವನ್ನು ಸಂಪೂರ್ಣವಾಗಿ ಕಟ್ಟಿಹಾಕಿ ಸರಣಿಯಲ್ಲಿ ಭಾರತದ ಆಧಿಪತ್ಯವನ್ನು ಸ್ಥಾಪಿಸಿತು.