ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಮತ್ತು ಮೊಹಮ್ಮದ್ ಶಮಿ ಅವರ ಮಾರಕ ಬೌಲಿಂಗ್ ನೆರವಿನಿಂದ ಪೂರ್ವ ವಲಯ ತಂಡವು ಕೇಂದ್ರ ವಲಯವನ್ನು ಸೋಲಿಸಿ ದುಲೀಪ್ ಟ್ರೋಫಿ ಫೈನಲ್‌ಗೆ ಪ್ರವೇಶಿಸಿದೆ. ಐದು ವಿಕೆಟ್ ಪಡೆದ ಶಮಿ ಭಾರತ ತಂಡಕ್ಕೆ ಮರಳುವ ಬಗ್ಗೆ ಆಯ್ಕೆ ಸಮಿತಿಗೆ ಸಂದೇಶ ರವಾನಿಸಿದ್ದಾರೆ. ಫೈನಲ್‌ನಲ್ಲಿ ಪೂರ್ವ ವಲಯವು ದಕ್ಷಿಣ ವಲಯವನ್ನು ಎದುರಿಸಲಿದೆ.

ಬೆಂಗಳೂರು: ವೈಭವ್ ಸೂರ್ಯವಂಶಿಯ ವಿಸ್ಪೋಟಕ ಬ್ಯಾಟಿಂಗ್ ಹಾಗೂ ಅನುಭವಿ ವೇಗಿ ಮೊಹಮ್ಮದ್ ಶಮಿ ಮತ್ತು ಮುಕೇಶ್ ಕುಮಾರ್ ಮಾರಕ ದಾಳಿಯ ನೆರವಿನಿಂದ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಕೇಂದ್ರ ವಲಯವನ್ನು ಸೋಲಿಸಿದ ಪೂರ್ವ ವಲಯ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಇದೀಗ 2012-13ನೇ ಸೀಸನ್ ಚಾಂಪಿಯನ್ ಪೂರ್ವ ವಲಯ ತಂಡವು ಫೈನಲ್‌ನಲ್ಲಿ ದಕ್ಷಿಣ ವಲಯ ತಂಡವನ್ನು ಎದುರಿಸಲಿದೆ. ಸೆಪ್ಟೆಂಬರ್‌ 06ರಿಂದ ಚೆನ್ನೈನ ಚೆಪಾಕ್ ಮೈದಾನದಲ್ಲಿ ದುಲೀಪ್ ಟ್ರೋಫಿ ಫೈನಲ್ ಪಂದ್ಯ ನಡೆಯಲಿದೆ. ಕೇಂದ್ರವಲಯವನ್ನು ಕೇವಲ 158 ರನ್‌ಗಳಿಗೆ ಆಲೌಟ್ ಮಾಡಿದ ಪೂರ್ವ ವಲಯ ತಂಡವು ಕೇವಲ ಆರು ವಿಕೆಟ್ ಕಳೆದುಕೊಂಡು ಅನಾಯಾಸವಾಗಿ ಗೆಲುವಿನ ನಗೆ ಬೀರಿತು.

5 ವಿಕೆಟ್ ಕಬಳಿಸಿ ಬಿಸಿಸಿಐ ಆಯ್ಕೆ ಸಮಿತಿಗೆ ವಾರ್ನಿಂಗ್ ಕೊಟ್ಟ ಮೊಹಮ್ಮದ್ ಶಮಿ

ಪೂರ್ವ ವಲಯ ಪರ ಕಣಕ್ಕಿಳಿದ ಬಂಗಾಳ ಮೂಲದ ಅನುಭವಿ ವೇಗಿ ಮೊಹಮ್ಮದ್ ಶಮಿ, ದುಲೀಪ್ ಟ್ರೋಫಿ ಸೆಮಿಫೈನಲ್‌ನಲ್ಲಿ ಪ್ರಮುಖ ಐದು ವಿಕೆಟ್ ಕಬಳಿಸುವ ಮೂಲಕ ಮತ್ತೊಮ್ಮೆ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೇಂದ್ರ ವಲಯದ ಮೊದಲ ಇನ್ನಿಂಗ್ಸ್‌ನಲ್ಲಿ ಯಶ್ ರಾಥೋಡ್ ಹಾಗೂ ಅರ್ಶದ್ ಖಾನ್ ಅವರನ್ನು ಬಲಿ ಪಡೆದ ಶಮಿ, ಎರಡನೇ ಇನ್ನಿಂಗ್ಸ್‌ನಲ್ಲೂ ಮಾರಕ ದಾಳಿ ನಡೆಸಿದರು. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಶಮಿ ವಿಕೆಟ್ ಕೀಪರ್ ಬ್ಯಾಟರ್ ಆರ್ಯನ್ ಜುರೆಲ್, ಯಶ್ ರಾಥೋಡ್ ಹಾಗೂ ಹರ್ಷ್ ದುಬೆ ಅವರನ್ನು ಬಲಿ ಪಡೆಯುವ ಮೂಲಕ ಪೂರ್ವ ವಲಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಅಂದಹಾಗೆ ಮೊಹಮ್ಮದ್ ಶಮಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ಭಾರತ ತಂಡದಿಂದ ಹೊರಗುಳಿಯುತ್ತಲೇ ಬಂದಿದ್ದಾರೆ. ಆದರೆ ಶಮಿ ಗಾಯದಿಂದ ಚೇತರಿಸಿಕೊಂಡ ಬಳಿಕ ದೇಶಿ ಕ್ರಿಕೆಟ್‌ನಲ್ಲಿ ಮಾರಕ ದಾಳಿ ನಡೆಸುತ್ತಲೇ ಬಂದಿದ್ದಾರೆ. ಇದೀಗ ದುಲೀಪ್ ಟ್ರೋಫಿ ಸೆಮಿಫೈನಲ್‌ನಲ್ಲೂ ಮಾರಕ ದಾಳಿ ನಡೆಸುವ ಮೂಲಕ ಶಮಿ, ಇನ್ನೂ ತಮ್ಮಲ್ಲಿ ಕ್ರಿಕೆಟ್ ಬಾಕಿ ಇದೆ. ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ರೆಡಿಯಿದ್ದೇನೆ ಎನ್ನುವ ಖಡಕ್ ವಾರ್ನಿಂಗ್ ಅನ್ನು ಶಮಿ ಬಿಸಿಸಿಐ ಸೆಲೆಕ್ಟರ್ಸ್‌ಗೆ ರವಾನಿಸಿದ್ದಾರೆ.

ಮುಂಬೈ ರಣಜಿ ತಂಡಕ್ಕೆ ಇನ್ನು ಶಾರ್ದೂಲ್‌ ಬದಲು ಸಿದ್ಧೇಶ್‌ ಲಾಡ್‌ ನಾಯಕತ್ವ

ಮುಂಬೈ: ಈ ಆವೃತ್ತಿಯ ರಣಜಿ ಟ್ರೋಫಿ ಆರಂಭಕ್ಕೂ ಮುನ್ನ ಮುಂಬೈ ತಂಡದ ನಾಯಕತ್ವ ಬದಲಾವಣೆಯಾಗಿದೆ. ಆಲ್ರೌಂಡರ್‌ ಶಾರ್ದೂಲ್‌ ಠಾಕೂರ್‌ ನಾಯಕತ್ವ ಕಳೆದುಕೊಂಡಿದ್ದು, ಮಧ್ಯಮ ಕ್ರಮಾಂಕದ ಬ್ಯಾಟರ್‌ ಸಿದ್ಧೇಶ್‌ ಲಾಡ್‌ಗೆ ತಂಡ ಮುನ್ನಡೆಸುವ ಹೊಣೆ ನೀಡಲಾಗಿದೆ. ಕಳೆದ ವರ್ಷ ರಣಜಿ ವೇಳೆ ಅಜಿಂಕ್ಯ ರಹಾನೆಯನ್ನು ಕೆಳಗಿಳಿಸಿ ಶಾರ್ದೂಲ್‌ಗೆ ನಾಯಕತ್ವ ನೀಡಲಾಗಿತ್ತು. ಈಗ ಶಾರ್ದೂಲ್‌ರಿಂದ ನಾಯಕತ್ವವನ್ನು ಹಿಂಪಡೆಯಲಾಗಿದೆ. ಈ ಬಾರಿ ರಣಜಿ ಅ.11ರಿಂದ ಆರಂಭಗೊಳ್ಳಲಿದ್ದು, ಮುಂಬೈ ತಂಡ ಮೊದಲ ಪಂದ್ಯದಲ್ಲಿ ಚಂಡೀಗಢ ವಿರುದ್ಧ ಆಡಲಿದೆ.