ಹೊಸಕೋಟೆಯ ಪ್ರಸಿದ್ಧ ಬಿರಿಯಾನಿ ಮಾರಾಟದ ಸಮಯವನ್ನು ಬದಲಾಯಿಸಲಾಗಿದೆ. ಬೆಳಗಿನ ಜಾವ ಉಂಟಾಗುತ್ತಿದ್ದ ಟ್ರಾಫಿಕ್ ಸಮಸ್ಯೆ, ಅಪಘಾತಗಳು ಮತ್ತು ಅಕ್ರಮ ಚಟುವಟಿಕೆಗಳನ್ನು ತಡೆಯಲು ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಹೊಸಕೋಟೆ ಬಿರಿಯಾನಿ ಸಮಯ ಈ ಕೆಳಗಿನಂತಿದೆ.
ಬೆಂಗಳೂರು: ತುಂಬಾ ಪ್ರಸಿದ್ಧವಾದ ಹೊಸಕೋಟೆಯ ಬಿರಿಯಾನಿ ಸೇವಿಸಲು ಬೆಳ್ಳಂಬೆಳಗ್ಗೆ 4 ಗಂಟೆಗೆ ಹೋಟೆಲ್ ಮುಂದೆ ನೂರಾರು ಜನ ಸರದಿಯಲ್ಲಿ ನಿಲ್ಲುತ್ತಿದ್ದು, ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಹಾಗಾಗಿ ಇನ್ನು ಮುಂದೆ ಬೆಳಗ್ಗೆ 6 ಗಂಟೆ ನಂತರವೇ ಬಿರಿಯಾನಿ ಮಾರಾಟ ಮಾಡಬೇಕು ಎಂದು ಹೊಸಕೋಟೆ ಠಾಣಾ ನಿರೀಕ್ಷಕ ಬಿ.ಟಿ.ಗೋವಿಂದ್ ತಿಳಿಸಿದ್ದಾರೆ.
ನಗರದ ಪೊಲೀಸ್ ಠಾಣೆಯಲ್ಲಿ ಬಿರಿಯಾನಿ ಹೋಟಲ್ ಮಾಲೀಕರು ಹಾಗೂ ಹೆದ್ದಾರಿ ರಸ್ತೆ ಬದಿ ವ್ಯಾಪಾರಿಗಳ ಸಭೆಯಲ್ಲಿ ಖಡಕ್ ಸೂಚನೆ ನೀಡಿದ ನೀಡಿದ ಅವರು, ಬಿರಿಯಾನಿ ಪ್ರಿಯರು ಮುಂಜಾನೆ 4 ಗಂಟೆಗೆ ಬಿರಿಯಾನಿ ಹೋಟಲ್ಗಳ ಮುಂದೆ ಸರದಿಯಲ್ಲಿ ನಿಲ್ಲುವ ಭರದಲ್ಲಿ ತಮ್ಮ ವಾಹನಗಳನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿರುವ ಕಾರಣ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ತಿಂದು ಹೋಗುವ ಸಂದರ್ಭದಲ್ಲಿಯೂ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಇನ್ನೂ ಕೆಲವರಿಗೆ ಕೈ ಕಾಲು ಮುರಿದು ಅಂಗವಿಕಲರಾಗಿದ್ದಾರೆ. ಮದ್ಯಸೇವಿಸಿ ಹಲವು ಬಾರಿ ಗಲಾಟೆಗಳೂ ನಡೆದಿರುವ ವರದಿಯಾಗಿದೆ.
ನಿಯಮಗಳ ಪಾಲನೆ ಕಡ್ಡಾಯ
ಈ ಅಪರಾಧ ಪ್ರಕರಣಗಳನ್ನು ತಪ್ಪಿಸುವುದಕ್ಕಾಗಿ ಈ ಕ್ರಮ ಕೈಗೊಂಡಿದ್ದು, ಹೋಟೆಲ್ ಮಾಲೀಕರು ಸಹಕರಿಸಬೇಕು. ಹೆದ್ದಾರಿ ಬದಿ ಚಿಲ್ಲರೆ ಅಂಗಡಿಯವರೂ ಸಹ ರಾತ್ರಿವೇಳೆ ಹೆಚ್ಚಿನ ದರಕ್ಕೆ ಪದಾರ್ಥಗಳನ್ನು ಮಾರುವಂತಿಲ್ಲ. ಹಾಗೂ ರಾತ್ರಿ 11 ಗಂಟೆಗೆ ಅಂಗಡಿಗಳನ್ನು ಮುಚ್ಚಬೇಕು ಎಂದು ಸೂಚಿಸಿದರು.
ತಡರಾತ್ರಿವರೆಗೆ ಪಾರ್ಟಿ
ದೂರದೂರುಗಳಿಂದ ಬರುವವರು ತಡರಾತ್ರಿವರೆಗೆ ಪಾರ್ಟಿ ಮಾಡಿ ಮುಂಜಾನೆ 4 ಗಂಟೆಗೆ ಹೊಸಕೋಟೆಯಲ್ಲಿ ಬಿರಿಯಾನಿ ಅಂಗಡಿಗಳಿಗೆ ಬರುವುದು ಸಾಮಾನ್ಯವಾಗಿತ್ತು. ಬಿರಿಯಾನಿ ಪಾರ್ಸಲ್ ಪಡೆದು ಅವರ ಕಾರುಗಳಲ್ಲೇ ಮದ್ಯ ಸೇವನೆ, ಗಾಂಜಾ ಸೇವಿಸುವ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದು ಇದಕ್ಕೆಲ್ಲಾ ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹೋಟಲ್ಗಳಲ್ಲಿ6 ಗಂಟೆ ನಂತರ ಮಾತ್ರ ಬಿರಿಯಾನಿ
ಇನ್ನು ಮುಂದೆ ಹೊಸಕೋಟೆಯಲ್ಲಿ ಬಿರಿಯಾನಿ ಹೋಟಲ್ಗಳಲ್ಲಿ6 ಗಂಟೆ ನಂತರ ಮಾತ್ರ ಬಿರಿಯಾನಿ ದೊರೆಯಲಿದೆ ಎಂದು ಸೂಚನಾ ಫಲಕಗಳನ್ನು ಕಡ್ಡಾಯವಾಗಿ ನಮೂದಿಸಿರಬೇಕು. ಹಾಗೂ ಬಿರಿಯಾನಿ ತಿನ್ನುವವರು ಕಾರುಗಳಲ್ಲಿ ಕುಳಿತು ಮದ್ಯ ಸೇವಿಸಿದರೆ ಕೂಡಲೆ ಪೊಲೀಸರಿಗೆ ತಿಳಿಸಲಾಗುವುದು ಎಂಬ ಮಾಹಿತಿ ಇರಬೇಕು. ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಿರಬೇಕು, ಸೆಕ್ಯುರಿಟಿ ಗಾರ್ಡ್ಗಳ ನೇಮಕ ಆಗಿರಬೇಕು, ರಸ್ತೆ ವಾಹನ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಇದನ್ನೂ ಓದಿ: Bengaluru: ಹೊಸಕೋಟೆ ಬಿರಿಯಾನಿ ತಿನ್ನಲು ಹೋಗ್ತಿದ್ದ ಬಿಬಿಎ ವಿದ್ಯಾರ್ಥಿಗೆ ಚಾಕು ಇರಿತ


