ಗಣೇಶ ವಿಸರ್ಜನೆಯ ನಂತರ ಹಿಂದೆ ತಿರುಗಿ ನೋಡಬಾರದು ಎಂಬ ನಿಯಮದ ಹಿಂದೆ ಹಲವು ನಂಬಿಕೆಗಳಿವೆ. ಈ ಆಚರಣೆಯು, ಗಣಪತಿಯೊಂದಿಗೆ ಮನೆಯ ಕಷ್ಟ-ಕಾರ್ಪಣ್ಯಗಳನ್ನು ಕಳುಹಿಸಿಕೊಡುವುದನ್ನು ಮತ್ತು ವ್ಯಾಮೋಹದಿಂದ ಮುಕ್ತರಾಗಿ ಹೊಸ ಭರವಸೆಯೊಂದಿಗೆ ಮುಂದುವರಿಯುವುದನ್ನು ಸಂಕೇತಿಸುತ್ತದೆ.

ಣೇಶ ಚತುರ್ಥಿಯ ಸಂದರ್ಭದಲ್ಲಿ ವಿಘ್ನನಿವಾರಕ ಗಣಪತಿಯನ್ನು ಮನೆಗೆ ಬರಮಾಡಿಕೊಳ್ಳುವಾಗ ಎಷ್ಟು ಉತ್ಸಾಹ ಮತ್ತು ವಿಜೃಂಭಣೆ ಇರುತ್ತದೆಯೋ, ಅಷ್ಟೇ ಭಾವನಾತ್ಮಕವಾದ ಕ್ಷಣ ಎಂದರೆ ಅದು ಗಣೇಶನ ವಿಸರ್ಜನೆಯ ಸಮಯ. ಒಂದೂವರೆ ದಿನ, ಮೂರು, ಐದು, ಏಳು ಅಥವಾ ಹತ್ತು ದಿನಗಳ ಕಾಲ ಮನೆಯಲ್ಲಿ ನೆಲೆಸಿ ಪೂಜೆಗೊಳ್ಳುವ ಗಣಪತಿಗೆ ಬೀಳ್ಕೊಡುಗೆ ನೀಡುವಾಗ ಪ್ರತಿಯೊಂದು ಕುಟುಂಬವೂ ತನ್ನದೇ ಆದ ಸಂಪ್ರದಾಯ ಮತ್ತು ಪದ್ಧತಿಯನ್ನು ಅನುಸರಿಸುತ್ತದೆ. ಉತ್ತರಪೂಜೆ, ಮಂಗಳಾರತಿ, ಅಕ್ಷತೆ ಹಾಕುವುದು, ನೈವೇದ್ಯ ಅರ್ಪಿಸುವುದು, ವಿಸರ್ಜನೆ ಮಂತ್ರಗಳನ್ನು ಪಠಿಸುವುದು, ಜಯಘೋಷಗಳನ್ನು ಕೂಗುವುದು ಹಾಗೂ ತಲೆತಲಾಂತರದಿಂದ ನಡೆದುಕೊಂಡು ಬಂದಿರುವ ವಿವಿಧ ಧಾರ್ಮಿಕ ಆಚರಣೆಗಳು ಈ ಬೀಳ್ಕೊಡುಗೆಯ ಪ್ರಮುಖ ಭಾಗವಾಗಿವೆ.

ಆದರೆ ಈ ಎಲ್ಲಾ ಆಚರಣೆಗಳ ನಡುವೆ ಒಂದು ವಿಷಯ ಯಾವಾಗಲೂ ಭಾರಿ ಚರ್ಚೆಗೆ ಗ್ರಾಸವಾಗುತ್ತದೆ; ಅದೇನೆಂದರೆ 'ಗಣಪತಿಯನ್ನು ನೀರಿಗೆ ವಿಸರ್ಜನೆ ಮಾಡಿದ ನಂತರ ಯಾವುದೇ ಕಾರಣಕ್ಕೂ ಹಿಂದೆ ತಿರುಗಿ ನೋಡಬಾರದು' ಎಂಬ ನಿಯಮ. ಕೆಲವರು ಇದನ್ನು ಧರ್ಮಶಾಸ್ತ್ರದ ನಿಯಮ ಎಂದು ನಂಬಿದರೆ, ಇನ್ನು ಕೆಲವರು ಇದನ್ನು ಕೇವಲ ಜನರ ಮೂಢನಂಬಿಕೆ ಅಥವಾ ನಂಬಿಕೆಯ ಭಾಗವೆಂದು ಭಾವಿಸುತ್ತಾರೆ.

ಏಕೆ ಬಂತು ಈ ಆಚರಣೆ? ಇದರ ಹಿಂದಿರುವ ನಂಬಿಕೆಯೇನು?

ಗಣಪತಿ ವಿಸರ್ಜನೆಯ ಸಮಯದಲ್ಲಿ ಸಾರ್ವಜನಿಕರಲ್ಲಿ ಹಾಗೂ ಭಕ್ತರಲ್ಲಿ ಹೆಚ್ಚಾಗಿ ಮೂಡುವ ಪ್ರಶ್ನೆ ಎಂದರೆ, 'ವಿಸರ್ಜನೆಯ ನಂತರ ನಿಜವಾಗಿಯೂ ಹಿಂದೆ ತಿರುಗಿ ನೋಡಬಾರದೇ?' ಎಂಬುದು. ಈ ನಂಬಿಕೆಯ ಹಿಂದೆ ಹಲವು ಸುದೀರ್ಘ ನಂಬಿಕೆಗಳು ಹಾಗೂ ಧಾರ್ಮಿಕ ಭಾವನೆಗಳಿವೆ.

ಮೋಹ ಮತ್ತು ಆಕರ್ಷಣೆಯಿಂದ ಮುಕ್ತಿ: ಧಾರ್ಮಿಕ ನಂಬಿಕೆಗಳ ಪ್ರಕಾರ, ಗಣಪತಿಯನ್ನು ನೀರಿಗೆ ಅರ್ಪಿಸಿದ ನಂತರ ಮತ್ತೆ ಹಿಂದೆ ತಿರುಗಿ ನೋಡಿದರೆ, ಗಣಪತಿಯನ್ನು ಬೀಳ್ಕೊಡುವಾಗ ಮನಸ್ಸಿನಲ್ಲಿ ವ್ಯಾಮೋಹ, ಆಸಕ್ತಿ ಹಾಗೂ ದುಃಖ ಮುಂದುವರಿಯುತ್ತದೆ. ದೇವರನ್ನು ಪೂರ್ಣಮನಸ್ಸಿನಿಂದ ವಿಸರ್ಜಿಸಿ ಕಳುಹಿಸುವ ಬದಲು ಭೌತಿಕ ಆಕರ್ಷಣೆಯಲ್ಲೇ ಮನಸ್ಸು ಉಳಿದುಬಿಡುತ್ತದೆ ಎಂಬುದು ಒಂದು ಕಾರಣ.

ಕಷ್ಟ-ಕಾರ್ಪಣ್ಯಗಳ ವಿಸರ್ಜನೆ: ಗಣೇಶನು ಮನೆಯಿಂದ ನಿರ್ಗಮಿಸುವಾಗ ಮನೆಯಲ್ಲಿರುವ ಎಲ್ಲಾ ಕಷ್ಟಗಳು, ತೊಂದರೆಗಳು, ನಕಾರಾತ್ಮಕ ಶಕ್ತಿಗಳು ಮತ್ತು ವಿಘ್ನಗಳನ್ನು ತನ್ನೊಂದಿಗೆ ಕೊಂಡೊಯ್ಯುತ್ತಾನೆ ಎಂಬ ನಂಬಿಕೆಯಿದೆ. ಹೀಗಾಗಿ ಆತ ನಿರ್ಗಮಿಸಿದ ನಂತರ ಹಿಂತಿರುಗಿ ನೋಡದೆ, ಭಕ್ತರು ಹೊಸ ಭರವಸೆ, ಹೊಸ ಉತ್ಸಾಹ ಹಾಗೂ ಸಕಾರಾತ್ಮಕ ಚಿಂತನೆಗಳೊಂದಿಗೆ ತಮ್ಮ ಮನೆಗಳಿಗೆ ಮರಳಬೇಕು ಎಂಬ ಉದ್ದೇಶದಿಂದ ಈ ಸಂಪ್ರದಾಯ ಜಾರಿಯಲ್ಲಿದೆ.

ಪೂಜಿಸಿದ ದೈವವನ್ನು ಕಳುಹಿಸಿಕೊಡುವಾಗ ಮನಸ್ಸಿನಲ್ಲಿ ವೈರಾಗ್ಯ ಮತ್ತು ಸಮರ್ಪಣಾ ಭಾವವಿರಬೇಕು ಹೊರತು ಸಂಸಾರಿಕ ಬಂಧನದ ವ್ಯಾಮೋಹವಿರಬಾರದು ಎಂಬುದೇ ಈ ಆಚರಣೆಯ ಹಿಂದಿನ ಪ್ರಮುಖ ಸಾರವಾಗಿದೆ.