Raja Ravi Varma: ರಾಜಾ ರವಿ ವರ್ಮನ ಚಿತ್ರಗಳ ಈ ಚೆಲುವೆಯರಿಗೆ ಯಾರು ಸ್ಫೂರ್ತಿ?

Synopsis
ರಾಜಾ ರವಿವರ್ಮ ಅವರ ವರ್ಣಚಿತ್ರಗಳಲ್ಲಿನ ಸುಂದರಿಯರು ಕೇರಳದಲ್ಲಿ ಮಾತ್ರ ಕಂಡುಬರುವಂಥ ಚೆಲುವೆಯರು. ಅವರ ಮುಗ್ಧ ಮುಖಗಳಿಗೂ ರವಿ ವರ್ಮರ ಜೀವನದಲ್ಲಿ ಬಂದ ಸುಂದರಿಗೂ ಸಾಮ್ಯತೆ ಇದೆಯಂತೆ. ಅದೇನು ಕತೆ?
ನಮ್ಮ ದೇಶದ ಜಗದ್ವಿಖ್ಯಾತ ಚಿತ್ರಕಲಾವಿದ, ಕೇರಳದಲ್ಲಿದ್ದ ರಾಜಾ ರವಿವರ್ಮ (Raja Ravi Varma) ಅವರ ವರ್ಣಚಿತ್ರಗಳು ಇಂದಿಗೂ ಪ್ರಭಾವಶಾಲಿ ಹಾಗೂ ಗಮನ ಸೆಳೆಯುವ ಕಲಾಕೃತಿಗಳು. ಜನಪ್ರಿಯವಾದವು ಕೂಡ. ಅವರು ಮಾಡಿದ ಮಹಾಭಾರತ, ರಾಮಾಯಣ ಮತ್ತಿತರ ಭಾರತೀಯ ಪೌರಾಣಿಕ ಪಾತ್ರಗಳ ಚಿತ್ರಣಗಳು ಮತ್ತು ಭಾರತೀಯ ಜೀವನ ವಿಧಾನದ ಚಿತ್ರಗಳು ಭಾರತದಾಚೆಗೂ ಪ್ರಸಿದ್ಧವಾಗಿದೆ. ಅವರ ಕೃತಿಗಳನ್ನು ಪ್ರಪಂಚದಾದ್ಯಂತದ ವಸ್ತುಸಂಗ್ರಹಾಲಯಗಳು ಮತ್ತು ಗ್ಯಾಲರಿಗಳಲ್ಲಿ ಪ್ರದರ್ಶಿಸಲಾಗುತ್ತದೆ. ಇದರ ಜೊತೆಗೆ ರಾಜಾ ರವಿವರ್ಮ ಕಲೆಯನ್ನು ಸಾಮಾಜಿಕ ಸುಧಾರಣೆಯ ಸಾಧನವಾಗಿ ಬಳಸುವಲ್ಲಿ, ಮಹಿಳೆಯರಿಗೆ ಶಿಕ್ಷಣವನ್ನು ಉತ್ತೇಜಿಸುವಲ್ಲಿ ಮತ್ತು ಬಾಲ್ಯ ವಿವಾಹದಂತಹ ಸಾಮಾಜಿಕ ದುಷ್ಕೃತ್ಯಗಳ ವಿರುದ್ಧ ತೊಡಗಿಕೊಳ್ಳುತ್ತಿದ್ದರು.
ಅದಿರಲಿ, ರವಿವರ್ಮರ ಚಿತ್ರಗಳನ್ನು ನೋಡಿದವರಿಗೆ ಅವರು ಚಿತ್ರಿಸಿದ ಈ ತರುಣಿಯರ, ಸ್ತ್ರೀಯರ ಪರಿಚಯವಿದ್ದೇ ಇರುತ್ತದೆ. ಬೆದರಿದ ಹರಿಣದಂಥ ಕಂಗಳ, ತುಸು ಜಾರುತ್ತಿರುವ ಮೇಲುದವನ್ನು ಮೇಲೆಳೆದುಕೊಂಡು ಎದೆಯ ಶ್ರೀಮಂತಿಕೆಯನ್ನು ಮುಚ್ಚಿಡಲು ಹವಣಿಸುತ್ತಿರುವ, ಸುಪುಷ್ಟ ತೋಳುಗಳ, ಕಪ್ಪಾದ ತುಂಬು ತಲೆಕೂದಲಿನ, ಕೇರಳದ ನಾರಿಯರಂತೆಯೇ ತುಸು ಎಣ್ಣೆಗಪ್ಪಾದ ಈ ಸ್ತ್ರೀಯರು ಎಷ್ಟು ಚೆಲುವೆಯರಲ್ಲವೇ? ರವಿವರ್ಮನ ಈ ಸೌಂದರ್ಯದ ಖನಿಗಳಂತಹ ಸುಂದರಿಯರ ಹಿಂದಿನ ಸ್ಫೂರ್ತಿ ಯಾರು?
ಹೌದು, ರಾಜಾ ರವಿ ವರ್ಮರ ಚಿತ್ರಗಳ ಚೆಲುವೆಯರ ಸ್ಫೂರ್ತಿ ಅವರ ಪತ್ನಿ ಎನ್ನಲಾಗುತ್ತದೆ. 1866ರಲ್ಲಿ, ತಮ್ಮ ಹದಿನೆಂಟು ವರ್ಷದ ಚಿಕ್ಕ ವಯಸ್ಸಿನಲ್ಲಿ, ರವಿವರ್ಮ ಮಧ್ಯ ತಿರುವಾಂಕೂರಿನ ಮಾವೆಲಿಕ್ಕರ ಅರಮನೆಯ ಪುರುರುತ್ತತಿ ತಿರುನಾಳ್ ಮಹಾಪ್ರಭಾ ತಂಪೂರಟ್ಟಿ ಅವರನ್ನು ವಿವಾಹವಾದರು. ರವಿ ವರ್ಮ ಕೂಡಾ ಕಿಳಿಮಾನೂರು ರಾಜಮನೆತನದ ರಾಜಕುಮಾರ ಆಗಿದ್ದವರು. ಈ ಶಾಖೆಯು ತಿರುವಾಂಕೂರಿನ ರಾಜ ಮನೆತನಕ್ಕೆ ನಿಕಟ ಸಂಬಂಧ ಹೊಂದಿತ್ತು. ರವಿವರ್ಮರ ಗೃಹಸ್ಥ ಜೀವನ ಹೆಚ್ಚು ಕಡಿಮೆ ಸುಗಮವಾಗಿತ್ತು. ಆದರೆ ಅವರ ಪತ್ನಿಯ ಅರಮನೆಯಿಂದ ಅವರು ದೀರ್ಘಕಾಲ ಹೊರಗೆ ಇರಬೇಕಾಗಿತ್ತು. ಯಾಕೆಂದರೆ ಮಹಾಪ್ರಭಾ ಅವರಿಗೆ ತಿರುವಾಂಕೂರು ಅರಮನೆಯ ಹೊಣೆ, ರವಿವರ್ಮರಿಗೆ ಕಿಳಿಮಾನೂರು ಅರಮನೆಯ ಹೊಣೆಗಳಿದ್ದವು.
ಇದರ ನಡುವೆ ಒಂದು ದುರಂತ ಸಂಭವಿಸಿತು. ವಿರಹ, ಮಾನಸಿಕ ಅಸ್ವಾಸ್ಥ್ಯ ಇತ್ಯಾದಿಗಳಿಂದ ಕುಗ್ಗಿ ಹೋಗಿದ್ದ ಮಹಾಪ್ರಭಾ ಆತ್ಮಹತ್ಯೆ ಮಾಡಿಕೊಂಡರು. ಇದರಿಂದ ರವಿವರ್ಮ ಕುಸಿದು ಹೋದರು. ತನ್ನ ಹೆಂಡತಿಯ ಮುಖವನ್ನು ಸದಾ ಕಾಲ ನೆನಪಿಟ್ಟುಕೊಳ್ಳಲು ಥೇಟ್ ಆಕೆಯ ಮುಖವನ್ನು ಹೋಲುವಂತಹ ಲಕ್ಮೀ, ಸರಸ್ವತಿ, ಶಕುಂತಲೆ, ಸೀತೆ ಇತ್ಯಾದಿ ನಾರಿಯರು, ಸ್ತ್ರೀ ದೇವತೆಗಳನ್ನು ಚಿತ್ರಿಸಿದರು. ಆ ಮೂಲಕ ತನ್ನ ಪ್ರೀತಿಯ ಹೆಂಡತಿಯ ಮುಖದ ಚಿತ್ರವನ್ನು ಶಾಶ್ವತವಾಗಿಟ್ಟರು ಎಂಬುದು ಭಾರತೀಯ ಚಿತ್ರಕಲೆಯ ಇತಿಹಾಸಕಾರರ ಅಭಿಪ್ರಾಯ. ಹೀಗಾಗಿ ಅವು ತುಂಬು ಜೀವಂತಿಕೆಯಿಂದ ನಳನಳಿಸುತ್ತವೆ. ಇದು ನಿಜವೇ ಅಥವಾ ಸುಳ್ಳೇ ಎಂದು ತಿಳಿಯಲು ಯಾವುದೇ ಆಧಾರಗಳಿಲ್ಲ.
ರಾಜಾ ರವಿವರ್ಮ 1848ರ ಏಪ್ರಿಲ್ 29ರಂದು ಕೇರಳದ ಕಿಳಿಮಾನೂರ್ ಎಂಬ ರಾಜ ಮನೆತನದಲ್ಲಿ ಜನಿಸಿದರು. ಅವರು ಸ್ವಯಂ-ಕಲಿತ ಕಲಾವಿದರಾಗಿದ್ದರು. ಯುರೋಪಿಯನ್ ಕಲಾವಿದರ ಕೃತಿಗಳನ್ನು ಗಮನಿಸುವ ಮೂಲಕ ಮತ್ತು ಕಲೆಯ ಪುಸ್ತಕಗಳನ್ನು ಅಧ್ಯಯನ ಮಾಡುವ ಮೂಲಕ ಚಿತ್ರಕಲೆಯನ್ನು ಕಲಿತರು. ಬ್ರಿಟಿಷರು ಭಾರತಕ್ಕೆ ತಂದ ತೈಲ ಬಣ್ಣಗಳನ್ನು ಬಳಸಿದ ಮೊದಲ ಭಾರತೀಯ ಕಲಾವಿದ ರಾಜಾ ರವಿವರ್ಮ.
ಆ ಊರಿನಲ್ಲಿ ಸ್ತ್ರೀಯರ ಎದೆಗಳ ಮೇಲೆ ತೆರಿಗೆ ವಿಧಿಸಲಾಗಿತ್ತು! ಅದಕ್ಕೆ ಅಂತ್ಯ ಹೇಗಾಯ್ತು ಗೊತ್ತಾ?
ಮಹಾಭಾರತದ ರಾಜ ನಳ ಮತ್ತು ದಮಯಂತಿ ಅವರ ಕಥೆಯನ್ನು ಚಿತ್ರಿಸುವ ಅವರ ಚಿತ್ರಕಲೆ "ಹಂಸ ದಮಯಂತಿ" 1873 ರಲ್ಲಿ ವಿಯೆನ್ನಾ ಪ್ರದರ್ಶನದಲ್ಲಿ ಮೊದಲ ಬಹುಮಾನವನ್ನು ಗೆದ್ದುಕೊಂಡಿತು. ಕಲೆಗೆ ನೀಡಿದ ಕೊಡುಗೆಗಾಗಿ 1904ರಲ್ಲಿ ಬ್ರಿಟಿಷ್ ಸರ್ಕಾರವು ಅವರಿಗೆ ಕೈಸರ್-ಇ-ಹಿಂದ್ ಚಿನ್ನದ ಪದಕವನ್ನು ನೀಡಿತು. ರಾಜಾ ರವಿವರ್ಮ ಅವರು ನುರಿತ ಛಾಯಾಗ್ರಾಹಕರಾಗಿದ್ದರು ಮತ್ತು ಮುಂಬೈನಲ್ಲಿ ಛಾಯಾಗ್ರಹಣ ಸ್ಟುಡಿಯೋವನ್ನು ಸ್ಥಾಪಿಸಿದರು. ಅವರು ಭಾರತೀಯ ಶಾಸ್ತ್ರೀಯ ಸಂಗೀತದ ಮಹಾನ್ ಪೋಷಕರಾಗಿದ್ದರು ಮತ್ತು ಪ್ರದರ್ಶನ ನೀಡಲು ಹಲವಾರು ಸಂಗೀತಗಾರರನ್ನು ತಮ್ಮ ಅರಮನೆಗೆ ಆಹ್ವಾನಿಸಿದರು. ಯುರೋಪಿನಲ್ಲಿ ತಮ್ಮ ಕೃತಿಗಳನ್ನು ಪ್ರದರ್ಶಿಸಿದ ಮೊದಲ ಭಾರತೀಯ ಕಲಾವಿದ, ಅಲ್ಲಿ ಅವರು ವ್ಯಾಪಕವಾಗಿ ಮೆಚ್ಚುಗೆ ಪಡೆದರು.
ರಾಜಾ ರವಿ ವರ್ಮರು ಭಾರತೀಯ ಮತ್ತು ಯುರೋಪಿಯನ್ ತಂತ್ರಗಳನ್ನು ಸಂಯೋಜಿಸುವ ಹೊಸ ಶೈಲಿಯ ಚಿತ್ರಕಲೆಯನ್ನು ರಚಿಸಿದರು, ಇದನ್ನು "ರವಿವರ್ಮ ಶೈಲಿ" ಎಂದು ಕರೆಯಲಾಯಿತು. ತಮ್ಮ ಜೀವಿತಾವಧಿಯಲ್ಲಿ 7,000 ಕ್ಕೂ ಹೆಚ್ಚು ವರ್ಣಚಿತ್ರಗಳನ್ನು ರಚಿಸಿದ್ದಾರೆ. ಅವರು ಲಂಡನ್ನ ರಾಯಲ್ ಅಕಾಡೆಮಿ ಆಫ್ ಆರ್ಟ್ಸ್ನ ಸದಸ್ಯರಾಗಿದ್ದರು, ಈ ಗೌರವವನ್ನು ಪಡೆದ ಮೊದಲ ಭಾರತೀಯ ಕಲಾವಿದರಾಗಿದ್ದರು.
Sai Pallavi: ನಟಿ ಸಾಯಿ ಪಲ್ಲವಿಯಿಂದ ಹೆಣ್ಣು ಮಕ್ಕಳು ಕಲಿಯಬೇಕಾದ ಜೀವನ ಪಾಠಗಳು