ಸೀತೆಯ ಜೀವನ ವಿಚ್ಛೇದಿತೆಯ ಜೀವನ ಇದ್ದಂತಿತ್ತು: ಬಿಜೆಪಿ ಸಚಿವ
ಅಂದು ಸೀತಾಮಾತೆಯ ಜೀವನ ಇಂದಿನ ವಿಚ್ಛೇದಿತ ಮಹಿಳೆಯ ಜೀವನದ ಹಾಗಿತ್ತು ಎಂದು ಮಧ್ಯ ಪ್ರದೇಶದ ಉನ್ನತ ಶಿಕ್ಷಣ ಸಚಿವ ಡಾ. ಮೋಹನ್ ಯಾದವ್ ವಿವಾದಿತ ಹೇಳಿಕೆ ನೀಡಿದ್ದಾರೆ.
ಭೋಪಾಲ್: ಅಂದು ಸೀತಾಮಾತೆಯ ಜೀವನ ಇಂದಿನ ವಿಚ್ಛೇದಿತ ಮಹಿಳೆಯ ಜೀವನದ ಹಾಗಿತ್ತು ಎಂದು ಮಧ್ಯ ಪ್ರದೇಶದ ಉನ್ನತ ಶಿಕ್ಷಣ ಸಚಿವ ಡಾ. ಮೋಹನ್ ಯಾದವ್ ವಿವಾದಿತ ಹೇಳಿಕೆ ನೀಡಿದ್ದಾರೆ. ಉಜ್ಜಯಿನಿಯ ನಗ್ಡಾದಲ್ಲಿ ಭಾನುವಾರ ನಡೆದ ಕರಸೇವಕ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಜ್ಯಕ್ಕಾಗಿ ಶ್ರೀರಾಮ ಬಹಳಷ್ಟು ಕಷ್ಟಪಟ್ಟಿದ್ದಾನೆ ಎಂದು ಹೇಳುತ್ತ ಈ ಮಾತು ಹೇಳಿದರು. ‘ರಾಜ್ಯದ ಗೌರವಕ್ಕಾಗಿ ಗರ್ಭಿಣಿಯಾಗಿದ್ದರೂ ಸೀತೆಯನ್ನು ಶ್ರೀರಾಮ ಬಿಡಬೇಕಾಯಿತು. ಕಾಡಿನಲ್ಲಿ ಮಕ್ಕಳಿಗೆ ಜನ್ಮವಿತ್ತ ಸೀತಾಮಾತೆ, ತನ್ನ ಕಷ್ಟಗಳನ್ನೆಲ್ಲ ಮರೆತು ಶ್ರೀರಾಮನಿಗಾಗಿ ಪ್ರಾರ್ಥಿಸುತ್ತಿದ್ದಳು. ಇಂದಿನ ಕಾಲಕ್ಕೆ ಸೀತೆಯ ಜೀವನ ವಿಚ್ಛೇದನದ ನಂತರದ ಜೀವನವಾಗಿತ್ತು ಎಂದರು. ಅಲ್ಲದೇ ‘ಶ್ರೀರಾಮನು ರಾಮರಾಜ್ಯಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ. ಇದು ಕರಸೇವಕರ ತ್ಯಾಗವನ್ನು ಗೌರವಿಸುವ ಕಾರ್ಯಕ್ರಮವಾಗಿದೆ. ಹಾಗಾಗಿ ನಾನು ರಾಮರಾಜ್ಯದ ಕುರಿತು ಹೇಳುತ್ತಿದ್ದೇನೆ. ರಾಮ ಮತ್ತು ಸೀತೆಯ ತ್ಯಾಗದ ಹಿಂದೆ ಪ್ರೀತಿ ಇತ್ತು. ರಾಮ ರಾಜ್ಯಕ್ಕಾಗಿ ಕಷ್ಟಗಳನ್ನು ಅನುಭವಿಸಬೇಕಾಗಿತ್ತು’ ಎಂದರು.
ರಾಮನ ತ್ಯಾಗ, ಸೀತೆಯ ಬಾಳನ್ನು ಉಲ್ಲೇಖಿಸುವಾಗ ಬಿಜೆಪಿ ಸಚಿವ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು. ರಾಜ್ಯದ ಗೌರವಕ್ಕಾಗಿ ರಾಮ, ತನ್ನ ಧರ್ಮಪತ್ನಿ ಸೀತೆಯನ್ನು ಬಿಡ ಬೇಕಾಗಿ ಬಂತು ಎಂದಿದ್ದಾರೆ. 'ಭೂಮಿ ಬಾಯಿ ತೆರೆದು ಸೀತೆಯನ್ನು ಭೂ ತಾಯಿ ತನ್ನ ತೆಕ್ಕೆಗೆ ಕರೆದುಕೊಂಡಳು. ಈ ಆಧುನಿಕ ಯುಗದಲ್ಲಿ ಅದನ್ನು ಆತ್ಮಹತ್ಯೆ ಸಮಾನ. ಸೀತೆಯನ್ನು ಬಿಟ್ಟಿರಲು ಕಷ್ಟ ಪಡುತ್ತಿದ್ದ ರಾಮನಿಗೆ ಜೀವನದಲ್ಲಿ ಬರಬಾರದ ಕಷ್ಟಗಳು ಬಂದವು. ಆದರೆ, ಎಲ್ಲವನ್ನೂ ಅನುಭವಿಸಿದ್ದು ರಾಮ ರಾಜ್ಯದ ಕನಸನ್ನು ಈಡೇರಿಸುವ ಸಲುವಾಗಿ,' ಎಂದಿದ್ದಾರೆ. ತಮ್ಮ ಮಾತಿಗೆ ತಾವೇ ಸಮರ್ಥಿಸಿಕೊಂಡ ಯಾದವ್, ದೇಶದ ಸಲುವಾಗಿ ರಾಮ ತನ್ನ ಪ್ರೀತಿಯ ಪತ್ನಿ ಸೀತೆಯನ್ನೂ ಕಷ್ಟಕ್ಕೆ ತಳ್ಳಬೇಕಾಗಿ ಬಂತು, ಎಂದಿದ್ದಾರೆ.
ವಿಭಜನೆ ಬಳಿಕ ಸನಾತನ ಧರ್ಮದವರಷ್ಟೇ ದೇಶದಲ್ಲುಳಿಯಬೇಕಿತ್ತು : ಸಚಿವ
ಈ ಕಾರ್ಯಕ್ರಮವನ್ನು ಕರಸೇವಕರ ತ್ಯಾಗವನ್ನು ಸ್ಮರಿಸಲು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಯಾದವ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವಂದೇ ಮಾತರಂ ಸಂಘಟನೆಯ ಪರವಾಗಿ ಸುಮಾರು 94 ಕರ ಸೇವಕರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಹಲವು ಮುಖಂಡರು ಮತ್ತು ಕೇಸರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವಾಲ್ಮೀಕಿ ಬರೆದ ರಾಮಾಯಣದಲ್ಲಿ ರಾವಣನ ಕೈ ವಶದಿಂದ ಬಂದ ಸೀತೆಯ ನಡೆ ಬಗ್ಗೆ ಅಗ್ನಿ ಪರೀಕ್ಷೆಗೆ ಒಳಪಡಿಸಿದ್ದು ಸಾಲದಾಗದೇ, ಯಾರೋ ಅಗಸ ಹೇಳಿದ ಎಂಬ ಕಾರಣಕ್ಕೆ ಗರ್ಭಿಣಿ ಸೀತೆಯನ್ನು ರಾಮ ಕಾಡಿಗೆ ಅಟ್ಟಿದ್ದ. ಋುಷಿಗಳ ಆಶ್ರಯದಲ್ಲಿದ್ದ ರಾಮನ ಹೆಂಡತಿ ಲವ-ಕುಶ ಎಂಬ ಅವಳಿ ಮಕ್ಕಳಿಗೆ ಜನ್ಮ ನೀಡಿ, ಪಡಬಾರದ ಕಷ್ಟ ಪಟ್ಟಿದ್ದು ಎಲ್ಲರಿಗೂ ಗೊತ್ತಿರುವ ಕಥೆ. ಆಧುನಿಕ ಮಹಿಳಾವಾದಿಗಳು ಈ ಕಥೆಗೆ ತಮ್ಮದೇ ಆದ ವಿಶ್ಲೇಷಣೆ ನೀಡುತ್ತಿದ್ದು,ಕೆಲವರು ರಾಮನ ವರ್ತನೆಗೆ ಕೆಂಡ ಕಾರುವುದೂ ಇದೆ. ದೇಶದ ಹಿತದೃಷ್ಟಿಯಷ್ಟೇ ಹೆಂಡತಿಯನ್ನು ಗೌರವಿಸುವುದು ಗಂಡನಾದವನ ಕರ್ತವ್ಯವೆಂದು ವಾದಿಸುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಆಧುನಿಕ ಸಾಹಿತಿಗಳು ತಮ್ಮದೇ ಆದ ಶೈಲಿಯಲ್ಲಿ ಸೀತೆಯ ನೋವನ್ನು ವಿವಿಧ ಕತೆಗಳ ರೂಪದಲ್ಲಿ ಅಭಿವ್ಯಕ್ತ ಪಡಿಸಿದ್ದು, ಹೆಂಡತಿಯನ್ನು ಗೌರವಿಸದ ರಾಮ ಅದು ಹೇಗೆ ಮರ್ಯಾದಾ ಪುರುಷೋತ್ತಮನಾಗುತ್ತೆಂದೂ ವಾದಿಸುತ್ತಾರೆ. ಒಟ್ಟಿನಲ್ಲಿ ಸೀತೆಯ ಕಷ್ಟ ಕಾರ್ಪಣ್ಯಗಳ ಬಗ್ಗೆ ಆಗಾಗ ಪರ ವಿರೋದ ಚರ್ಚೆಗಳು ನಡೆಯುತ್ತಲೇ ಇರುತ್ತವೆ.
ಹಿಂದೂಗಳು ಲವ್ ಜಿಹಾದ್ ಮಾಡಿ ನಿಮ್ಮ ತಾಕತ್ತೇನು ನೋಡುತ್ತೇವೆ ಎಂದ ಸಂಸದ
ಮಹಿಳೆಯರೂ ಏನೂ ಧರಿಸದಿದ್ದರೂ ಚಂದ ಕಾಣ್ತಾರೆ, ವಿವಾದಿತ ಹೇಳಿಕೆ ನೀಡಿದ ಬಾಬಾ ರಾಮ್ದೇವ್!