ಎಮ್ಮೆಯೊಂದರ ಮಾಲೀಕತ್ವಕ್ಕಾಗಿ ಇಬ್ಬರ ನಡುವೆ ವಿವಾದ ಉಂಟಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಪೊಲೀಸರು ಎಮ್ಮೆಗೆ ಡಿಎನ್‌ಎ ಪರೀಕ್ಷೆ ನಡೆಸಲು ನಿರ್ಧರಿಸಿದ್ದು, ತಾಯಿಯ ಜೀನ್ಸ್‌ನೊಂದಿಗೆ ಹೋಲಿಕೆ ಮಾಡಿ ನಿಜವಾದ ಮಾಲೀಕರನ್ನು ಪತ್ತೆಹಚ್ಚಲಿದ್ದಾರೆ.

ಇದುವರೆಗೂ ಮನುಷ್ಯರಿಗೆ ಡಿಎನ್‌ಎ ಪರೀಕ್ಷೆ ಮಾಡುವುದನ್ನು ನಾವು ಹಲವು ಬಾರಿ ಕೇಳಿದ್ದೇವೆ. ಕೊಳೆತು ಹೋಗಿರುವ ಮೃತದೇಹಗಳು, ಸುಟ್ಟು ಹೋಗಿರುವವರ ಗುರುತ ಹಿಡಿಯಲು ಡಿಎನ್‌ಎ ಪರೀಕ್ಷೆ ಮಾಡುವುದು ಸಾಮಾನ್ಯ ಸಂಗತಿ. ಇತ್ತೀಚೆಗೆ ದಂಪತಿಗಳ ನಡುವೆ ಮಗು ಯಾರದ್ದು ಎಂಬ ಅನುಮಾನ ಎದುರಾದಾಗ ಹಲವರು ಡಿಎನ್‌ಎ ಪರೀಕ್ಷೆಗಾಗಿ ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿರುವುದನ್ನು ನೋಡಿದ್ದೇವೆ. ಆದರೆ ಈಗ ನಾವು ಒಂದು ಎಮ್ಮೆಗೆ ಡಿಎನ್‌ಎ ಪರೀಕ್ಷೆ ನಡೆಸುತ್ತಿರುವ ವಿಚಿತ್ರ ಸ್ಟೋರಿಯನ್ನು ನಿಮ್ಮ ಮುಂದೆ ತಂದಿದ್ದೇವೆ. ಎಮ್ಮೆಯ ಮಾಲೀಕ ಯಾರು ಎಂದು ತಿಳಿದುಕೊಳ್ಳಲು ಪೊಲೀಸರು ಈ ಹೊಸ ಉಪಾಯವನ್ನು ಮಾಡಿದ್ದಾರೆ.

ಎಮ್ಮೆ ನಾಪತ್ತೆ, ವಿವಾದ ಶುರು!

ಬಿಹಾರದ ಗಯಾ ಜಿಲ್ಲೆಯ ಅತರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸೂರಜ್ ಯಾದವ್ ಎಂಬಾತ ತನ್ನ ಎಮ್ಮೆ ಕೆಲವು ದಿನಗಳಿಂದ ನಾಪತ್ತೆಯಾಗಿದೆ, ಹಲವು ದಿನ ಹುಡುಕಾಟ ನಡೆಸಿದರು ಪತ್ತೆಯಾಗಿಲ್ಲ ಎಂದು ದೂರು ನೀಡಿದ್ದರು. ಇದರ ನಡುವೆಯೇ ನೌರಂಗಾ ಟೋಲಿ ನಿವಾಸಿ ಪ್ರಕಾಶ ಮಾಂಝಿ ನಿವಾಸದಲ್ಲಿ ಎಮ್ಮೆಯನ್ನ ಕಟ್ಟಿ ಹಾಕಿದ್ದರೆ ಎಂಬ ಸುದ್ದಿ ಆತನಿಗೆ ಸಿಕ್ಕಿತ್ತು.

ಎಮ್ಮೆಗಾಗಿ ನಡೆದ ವಿಚಿತ್ರ ಪರೀಕ್ಷೆ: ಏನಿದು ಅಚ್ಚರಿಯ ಕಥೆ?

ಇದರೊಂದಿಗೆ ಪ್ರಕಾಶ್ ನಿವಾಸಕ್ಕೆ ತೆರಳಿದ್ದ ಸೂರಜ್, ಇದು ತಮ್ಮ ಎಮ್ಮೆ.. ಅದನ್ನು ವಾಪಸ್ ಕೊಡಿ ಎಂದು ಮನವಿ ಮಾಡಿದ್ದರು. ಆದರೆ ಇದಕ್ಕೆ ಪ್ರಕಾಶ್ ಒಪ್ಪದೆ, ಇದು ನಮ್ಮ ಎಮ್ಮೆ, ಹಲವು ವರ್ಷಗಳಿಂದ ಈ ಎಮ್ಮೆ ಸಾಕುತ್ತಿರುವುದಾಗಿ ಹೇಳಿದ್ದ. ಈ ವಿಚಾರದಲ್ಲಿ ಇಬ್ಬರ ನಡುವೆ ಜಗಳ ಆರಂಭವಾಗಿತ್ತು.

ಪೊಲೀಸ್ ಠಾಣೆ ಮೆಟ್ಟಿಲೇರಿದ ವಿವಾದ

ಈ ಜಗಳನ್ನು ಬಿಡಿಸಲು ಗ್ರಾಮಸ್ಥರು ಪ್ರಯತ್ನಿಸಿದರೂ ಫಲ ನೀಡಿರಲಿಲ್ಲ. ಇದರೊಂದಿಗೆ ಇಬ್ಬರು ಪೊಲೀಸರ ಮೊರೆ ಹೋಗಿದ್ದರು. ಪೊಲೀಸ್ ಠಾಣೆಯಲ್ಲಿ ಇಬ್ಬರ ವಾದ ಕೇಳಿದ ಪೊಲೀಸರು, ಸಮಸ್ಯೆಯನ್ನು ಬಗೆಹರಿಸಲು ದಾರಿ ಕಾಣದೆ ಚಿಂತೆಗೆ ಬಿದ್ದಿದ್ದರು. ಇಬ್ಬರು ಈ ಎಮ್ಮೆ ತಮ್ಮದೇ ಅಂತ ನಿರೂಪಿಸಲು ಆಧಾರಗಳನ್ನು ನೀಡುತ್ತಾ ಬಂದಿದ್ದರಂತೆ. ಇದರೊಂದಿಗೆ ಸಮಸ್ಯೆ ಪರಿಷ್ಕಾರಕ್ಕೆ ಮಗಧ್ ರೇಂಜ್ ಐಜಿ ವಿಕಾಶ್ ವೈಭವ್ ಈ ಪ್ರಕರಣದ ಮೇಲ್ವಿಚಾರಣೆ ನಡೆಸಿದ್ದರು.

ವೈಜ್ಞಾನಿಕವಾಗಿ ಈ ವಿವಾದನ್ನು ಬಗೆಹರಿಸಲು ಮುಂದಾದ ಐಜಿ, ಎಮ್ಮೆ ಡಿಎನ್‌ಎ ಪರೀಕ್ಷೆ ಮಾಡಲು ಸೂಚನೆ ನೀಡಿದ್ದರು. ಡಿಎನ್‌ಎ ರಿಪೋಟ್ ಬರುವವರೆಗೂ ಎಮ್ಮೆ ಪೊಲೀಸರ ವಶದಲ್ಲಿ ಇರುತ್ತದೆ. ಎಮ್ಮೆಯ ತಾಯಿಯ ಜಿನ್ಸ್ ನೊಂದಿಗೆ ಹೋಲಿಕೆ ಮಾಡಿ ಡಿಎನ್‌ಎ ಪರೀಕ್ಷೆ ನಡೆಸಿ ಎಮ್ಮೆಯ ಮಾಲೀಕರ ಯಾರು ಎಂದು ಗುರುತಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಸದ್ಯ ಈ ಎಮ್ಮೆಗೆ ಡಿಎನ್ಎ ಪರೀಕ್ಷೆ ನಡೆಸುತ್ತಿರುವ ವಿವಾದ ದೇಶದಾದ್ಯಂತ ವೈರಲ್ ಆಗುತ್ತಿದೆ.

ಕರ್ನಾಟಕದಲ್ಲೂ ನಡೆದಿದ್ದು ಇಂತಹದ್ದೇ ಘಟನೆ

2019ರಲ್ಲಿ ಇಂತಹ ಘಟನೆ ಕರ್ನಾಟಕದ ಶಿವಮೊಗ್ಗದಲ್ಲೂ ನಡೆದಿತ್ತು. ದೇವರಿಗೆ ಬಿಟ್ಟಿದ್ದ ಕೋಣದ ವಿಚಾರವಾಗಿ ಶಿವಮೊಗ್ಗ ಜಿಲ್ಲೆ ಹಾರನಹಳ್ಳಿ ಮತ್ತು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮಸ್ಥರ ನಡುವಿನ ತಿಕ್ಕಾಟದಿಂದ ಅಂತಿಮವಾಗಿ ಡಿಎನ್‌ಎ ಪರೀಕ್ಷೆ ನಡೆಸಲಾಗಿತ್ತು. ವಿವಿಧ ಬಗೆಹರಿಯುವ ವರೆಗೂ ಕೋಣವನ್ನು ಶಿವಮೊಗ್ಗದ ಮಹಾವೀರ ಗೋ ಶಾಲೆಯ ಸುರ್ಪದಿಗೆ ಪೊಲೀಸರು ನೀಡಿದ್ದರು.