ತನ್ನ ತಾಯಿ ಮೆಟ್ಟಿಲುಗಳಿಂದ ಬಿದ್ದು ಐಸಿಯುನಲ್ಲಿದ್ದಾರೆ ಎಂದು ತಿಳಿದ ತಕ್ಷಣ, ಅಂಕಿತ್ ಪಾಂಡೆ ಎಂಬ ಗ್ರಾಹಕರು ಜೊಮ್ಯಾಟೊ ಡೆಲಿವರಿ ಬಾಯ್ಗೆ ₹4,000 ವೆಚ್ಚದ ತುರ್ತು ವಿಮಾನ ಟಿಕೆಟ್ ಬುಕ್ ಮಾಡಿ ಮಾನವೀಯತೆ ಮೆರೆದಿದ್ದಾರೆ. ತಾಯಿ ಗುಣಮುಖರಾದ ನಂತರ ಸವಾರ ಹಣವನ್ನು ಮರಳಿ ನೀಡಿದರೂ, ಅಂಕಿತ್ ಅದನ್ನು ನಿರಾಕರಿಸಿದ್ದಾರೆ. ಈ ಇಬ್ಬರ ಪ್ರಾಮಾಣಿಕತೆಯ ಕಥೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಕಾರ್ಪೊರೇಟ್ ಜಗತ್ತಿನ ಜಂಜಾಟಗಳ ನಡುವೆ ಕೇವಲ ಆರ್ಡರ್ ತಲುಪಿಸುವ 'ಡೆಲಿವರಿ ಬಾಯ್' ಮತ್ತು 'ಗ್ರಾಹಕ'ನ ನಡುವಿನ ಸಂಬಂಧ ಎಲ್ಲೆ ಮೀರಿ, ಮಾನವೀಯತೆಯ ಹೊಸ ಮೈಲಿಗಲ್ಲು ಸೃಷ್ಟಿಸಿದ ಅಪರೂಪದ ಘಟನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಂಕಿತ್ ಪಾಂಡೆ ಎಂಬ ಗ್ರಾಹಕ ಹಾಗೂ ಅವರ ಮನೆಗೆ ನಿಯಮಿತವಾಗಿ ಆಹಾರ ತಲುಪಿಸುತ್ತಿದ್ದ ಜೊಮ್ಯಾಟೊ ವಿತರಣಾ ಪಾಲುದಾರನ ನಡುವೆ ನಡೆದ ಈ ಕಥೆ ಪ್ರತಿಯೊಬ್ಬರ ಕಣ್ಣಾಲಿಗಳನ್ನು ಒದ್ದೆ ಮಾಡುತ್ತದೆ.
ಮಳೆಯಲ್ಲಿ ಬಂದ ರೈಡರ್ ಕಣ್ಣಲ್ಲಿ ನೀರು!
ಒಂದು ದಿನ ಭಾರಿ ಮಳೆ ಸುರಿಯುತ್ತಿದ್ದಾಗ ಜೊಮ್ಯಾಟೊ ರೈಡರ್ ಅಂಕಿತ್ ಅವರ ಮನೆಗೆ ಆರ್ಡರ್ ತಲುಪಿಸಲು ಬಂದಿದ್ದ. ಈಗಾಗಲೇ ಪರಿಚಿತನಾಗಿದ್ದ ಸವಾರನನ್ನು ಅಂಕಿತ್ ಮಳೆಯಿಂದ ತಪ್ಪಿಸಿಕೊಳ್ಳಲು ಒಳಗೆ ಕರೆದು ಒಂದು ಲೋಟ ನೀರು ನೀಡಿದರು. ಆದರೆ, ಆತನ ಕಣ್ಣುಗಳು ಕೆಂಪಾಗಿದ್ದವು ಮತ್ತು ಆತ ಸದ್ದಿಲ್ಲದೆ ಅಳುತ್ತಿದ್ದನ್ನು ಅಂಕಿತ್ ಗಮನಿಸಿದರು. ಏನಾಯಿತು ಎಂದು ಕೇಳಿದಾಗ, "ಕುಚ್ ಅಚ್ಛಾ ನಹಿ ಹೈ, ಭಯ್ಯಾ" (ಏನೂ ಸರಿಯಾಗಿಲ್ಲ ಅಣ್ಣ) ಎಂದು ಆತ ಅಳಲಾರಂಭಿಸಿದ.
30 ಗಂಟೆಗಳ ಪ್ರಯಾಣಕ್ಕೆ ಕಾದಿದ್ದ ಆತಂಕ:
ಅಂದು ಬೆಳಿಗ್ಗೆಯೇ ಆತನ ತಾಯಿ ಮೆಟ್ಟಿಲುಗಳಿಂದ ಬಿದ್ದು ತೀವ್ರ ನಿಗಾ ಘಟಕಕ್ಕೆ (ICU) ದಾಖಲಾಗಿದ್ದರು. ಆಕೆಯ ಸ್ಥಿತಿ ಗಂಭೀರವಾಗಿತ್ತು. ತನ್ನ ಊರಿಗೆ ಹೋಗಲು ರಾತ್ರಿ 11 ಗಂಟೆಗೆ ಕೇವಲ ಒಂದು ರೈಲಿತ್ತು, ಅದರಲ್ಲಿ ಹೋದರೆ ತಲುಪಲು ಬರೋಬ್ಬರಿ 30 ಗಂಟೆಗಳು ಬೇಕಾಗುತ್ತಿತ್ತು. "ನನ್ನ ತಾಯಿಯನ್ನು ಜೀವಂತವಾಗಿ ನೋಡಲು ಸಾಧ್ಯವಾಗುತ್ತದೋ ಇಲ್ಲವೋ ಗೊತ್ತಿಲ್ಲ" ಎಂದು ಸವಾರ ಕಣ್ಣೀರಿಟ್ಟಾಗ ಅಂಕಿತ್ ಮನಸ್ಸು ಕರಗಿತು. ಸವಾರ ಬೆಳಗಿನಿಂದ ಊಟವನ್ನೂ ಮಾಡಿರಲಿಲ್ಲ. ತಕ್ಷಣ ಅಂಕಿತ್ ತನ್ನ ಊಟವನ್ನು ಆತನೊಂದಿಗೆ ಹಂಚಿಕೊಂಡು, ಆನ್ಲೈನ್ನಲ್ಲಿ ಪರ್ಯಾಯ ಮಾರ್ಗ ಹುಡುಕಿದರು.
₹4,000 ವಿಮಾನ ಟಿಕೆಟ್ ಮತ್ತು ಮರುದಿನದ ಸರ್ಪ್ರೈಸ್!
ತಕ್ಷಣವೇ ಸುಮಾರು 4,000 ರೂಪಾಯಿ ವೆಚ್ಚದ ವಿಮಾನ ಟಿಕೆಟ್ ಅನ್ನು ಅಂಕಿತ್ ಬುಕ್ ಮಾಡಿದರು. ಆದರೆ, ಸವಾರ ತಾನು ಎಂದಿಗೂ ವಿಮಾನ ನಿಲ್ದಾಣಕ್ಕೆ ಹೋಗಿಲ್ಲ ಎಂದು ಆತಂಕ ವ್ಯಕ್ತಪಡಿಸಿದಾಗ, ಅಂಕಿತ್ ತನ್ನ ಸ್ನೇಹಿತನ ಸಹಾಯದಿಂದ ಆತನನ್ನು ವಿಮಾನ ಹತ್ತಿಸಿ ಕಳುಹಿಸಿಕೊಟ್ಟರು. ಕೆಲವು ಗಂಟೆಗಳಲ್ಲೇ ಸವಾರ ತನ್ನ ಊರು ತಲುಪಿ, ತಾಯಿಯನ್ನು ಭೇಟಿಯಾದ ಬಳಿಕ ಅಂಕಿತ್ಗೆ ಕರೆ ಮಾಡಿ ಧನ್ಯವಾದ ತಿಳಿಸಿದ. ಅದೃಷ್ಟವಶಾತ್ ಆತನ ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದರು.
ಆದರೆ ಕಥೆ ಇಲ್ಲಿಗೆ ಮುಗಿಯಲಿಲ್ಲ! ಮರುದಿನ ತಾಯಿ ಚೇತರಿಸಿಕೊಂಡ ತಕ್ಷಣ ಆ ಪ್ರಾಮಾಣಿಕ ಸವಾರ ತನಗೆ ಟಿಕೆಟ್ಗೆ ಖರ್ಚಾಗಿದ್ದ ಇಡೀ ₹4,000 ಹಣವನ್ನು ಅಂಕಿತ್ ಅವರಿಗೆ ಮರಳಿ ಕಳುಹಿಸಿಕೊಟ್ಟಿದ್ದ! ಆದರೆ ಅಂಕಿತ್ ತಕ್ಷಣವೇ ಆ ಹಣವನ್ನು ವಾಪಸ್ ನೀಡಿ, "ಈ ಸಹಾಯ ಎಂದಿಗೂ ಮರುಪಾವತಿಗಾಗಿ ಮಾಡಿದ್ದಲ್ಲ" ಎಂದು ಸಂದೇಶ ಕಳುಹಿಸಿದರು. ಇಬ್ಬರ ಪ್ರಾಮಾಣಿಕತೆ ಮತ್ತು ದಯೆಯನ್ನು ಕಂಡು ನೆಟ್ಟಿಗರು, "ನೀವಿಬ್ಬರೂ ಸಮಾಜದ ನಿಜವಾದ ರತ್ನಗಳು" ಎಂದು ಕೊಂಡಾಡುತ್ತಿದ್ದಾರೆ.

