ಆಪ್ತರು, ಬಂಧುಗಳು ಮಂಟಪದಲ್ಲಿ ಕುಳಿತಿದ್ದಾರೆ. ಮುಹೂರ್ತ ಸಮಯ ಬಂದೇ ಬಿಡ್ತು. ಬ್ಯಾಂಡ್ ವಾದ್ಯಗಳೊಂದಿಗೆ ಹೀರೋ ರೀತಿ ವರ ಮಂಟಪಕ್ಕೆ ಎಂಟ್ರಿಕೊಟ್ಟಿದ್ದಾನೆ. ಹಾರ ಬದಲಾಸುವ ವೇಳೆ ಈ ಮದುವೆ ಬೇಡಾ ಎಂದು ಕಿರುಚಾಡಿ ರಂಪಾಟ ಮಾಡಿದ ಘಟನೆ ನಡೆದಿದೆ.

ಫಿರೋಜ್‌ಪುರ್ (ಆ.19) ಮದುವೆ ಮಂಟಪದಲ್ಲಿ ಹಲವು ಮದುವೆಗಳು ಮುರಿದು ಬಿದ್ದ ಘಟನೆಗಳು ನಡೆದಿದೆ. ಬಿರಿಯಾನಿ ಸಿಗಲಿಲ್ಲ, ಮಟನ್ ಕೊಟ್ಟಿಲ್ಲ ಹೀಗೆ ಕಾರಣಗಳು ಹಲವು. ಇದೀಗ ಮಧುಮಗಳು ಮಂಟಪದಲ್ಲಿ ಕುಳಿತಿದ್ದಾಳೆ. ಮುಹೂರ್ತ ಸಮಯ ಬಂದೇ ಬಿಟ್ಟಿತು. ವರ ಕೊಂಚ ಲೇಟಾಗಿ ಹೀರೋ ರೀತಿ ಎಂಟ್ರಿಕೊಟ್ಟಿದ್ದಾನೆ. ಭರ್ಜರಿ ಬ್ಯಾಂಡ್ ವಾದ್ಯ ಜೊತೆ ವರ ಆಗಮಿಸಿದ್ದಾನೆ. ವೇದಿಕೆಯಲ್ಲಿ ಕುಳಿತಿದ್ದ ವಧು ಕಣ್ಣೆತ್ತಿ ವರನ ನೋಡಿದ್ದಾಳೆ. ಮಂಟಪಕ್ಕೆ ಬಂದ ವರನ ಆರಂಭದಲ್ಲೇ ಮಾಲೆ ಬದಲಾಸುವ ಶಾಸ್ತ್ರ. ಈ ವೇಳೆ ನನಗೆ ಈ ಮದುವೆ ಬೇಡ ಎಂದು ವಧು ಕಿರುಚಾಡಿದ್ದಾಳೆ. ಸಂಬಂಧಿಕರು, ಆಪ್ತರು ಗಾಬರಿಗೊಂಡಿದ್ದಾರೆ. ಈ ಹುಡುಗಿಗೆ ಏನಾಗಿದೆ? ಯಾಕೆ ಮದುವೆ ಬೇಡಾ ಎಂದು ಕಿರುಚಾಡುತ್ತಿದ್ದಾಳೆ ಅನ್ನೋವಷ್ಟರಲ್ಲೇ ಮಂಟಪ ರಣಾಂಗಣವಾಗಿದೆ. ಗಲಾಟೆ ಜೋರಾಗಿದೆ. ಪೊಲೀಸರು ಮಧ್ಯಪ್ರವೇಶಿಸಿ ಮಾತುಕತೆ ಮೂಲಕ ಜಗಳ ಬಗೆಹರಿಸಿದ್ದಾರೆ. ಆದರೆ ಮದುವೆ ನಡೆಯಲಿಲ್ಲ.

ಮೆರವಣಿಗೆ ಮೂಲಕ ಬಂದ ವರ

ಪಂಜಾಬ್‌ನ ಫಿರೋಜ್‌ಪುರದಲ್ಲಿ ಮದುವೆ ಆಯೋಜನೆಗೊಂಡಿತ್ತು. ರಾಜಸ್ಥಾನದ ಚತರ್ಗಡದಿಂದ ವರನ ಕುಟುಂಬಸ್ಥರು ವಾಹನದಲ್ಲಿ ತೆರಳಿದ್ದಾಳೆ. ಮಂಟಪದಿಂದ ಕೆಲ ಕಿಲಮೀಟರ್ ದೂರದಿಂದ ಮೆರವಣಿಗೆ ಮೂಲಕ ವರ ಹಾಗೂ ಆತನ ಕುಟುಂಬಸ್ಥರು ಮಂಟಪಕ್ಕೆ ಹಾಜರಾಗಿದ್ದಾರೆ. ಮಂಟಪಕ್ಕೆ ಕೊಂಚ ಲೇಟ್ ಆಗಿ ಹಾಜರಾದ ವರ, ಬಳಿಕ ವೇದಿಕೆಗೆ ತೆರಳಿ ಆರಂಭದಲ್ಲಿ ಹಾರ ಬದಲಾಯಿಸಿ ಶಾಸ್ತ್ರೋಕ್ತವಾಗಿ ಮದುವೆಯಾಗಲು ಮುಂದಾಗಿದ್ದಾನೆ.

ಹಾರ ಬದಲಾಯಿಸುವಾಗ ಕಿರುಚಾಡಿದ ವಧು

ವರ ಹಾಗೂ ವಧು ವೇದಿಕೆಯಲ್ಲಿ ಎದುರು ಬದರು ನಿಂತಿದ್ದಾರೆ. ವಧು ಮೆಲ್ಲನೆ ಸೆರಗು ಸರಿಸಿ ವರನ ಮುಖ ನೋಡಿದ್ದಾಳೆ. ಮುಖ ನೋಡಿ ಆಘಾತಗೊಂಡಿದ್ದಾಳೆ. ನನಗೆ ಫೋಟೋದಲ್ಲಿ ತೋರಿಸಿದ ವರ ಈತನಲ್ಲ. ನನಗೆ ಹೇಳಿದ, ನಿಶ್ಚಯ ಮಾಡಿದ ವರ ಈತನಲ್ಲ. ನನಗೆ ಗೊತ್ತಿಲ್ಲದ ಯಾರೋ ಒಬ್ಬನ ಜೊತೆ ಮದುವೆಯಾಗಲು ನನಗೆ ಸಾಧ್ಯವಿಲ್ಲ. ನನಗೆ ಮೋಸ ಮಾಡಲಾಗಿದೆ ಎಂದು ವಧು ಕಿರುಚಾಡಿದ್ದಾಳೆ. ಪರಿಣಾಮ ಮಂಟಪದಲ್ಲಿ ಜಗಳ ಶುರುವಾಗಿದೆ. ನನಗೆ ತೋರಿಸಿದ ಫೋಟೋಗೂ ಈತನಿಗೂ ಯಾವುದೇ ಹೋಲಿಕೆ ಇಲ್ಲ. ನನಗೆ ಮದುವೆ ಬೇಡ ಎಂದು ಪಟ್ಟು ಹಿಡಿದಿದ್ದಾಳೆ.

ನನ್ನಲ್ಲಿ ಫೋಟೋ ಇದೆ. ಬೇಕಾದರೆ ತೋರಿಸುತ್ತೇನೆ. ನನ್ನ ಫೋನ್‌ನಲ್ಲಿದೆ. ನನಗೆ ತೋರಿಸಿದ ವರ ಈತನಲ್ಲ ಎಂದಿದ್ದಾಳೆ. ಇತ್ತ ವರನ ಕುಟುಂಬಸ್ಥರು ಆಗಿದ್ದು ಆಗೋಯ್ತು. ಈಗ ಮದುವೆ ಮಂಟಪದಲ್ಲಿ ಮದುವೆ ಬೇಡ ಎಂದರೆ ಹೇಗೆ? ಭವಿಷ್ಯದ ಪ್ರಶ್ನೆ, ಮತ್ತೆ ಯಾರು ಮದುವೆಯಾಗುತ್ತಾರೆ ಎಂದೆಲ್ಲಾ ಮಾತುಗಳನ್ನಾಡಿದ್ದಾರೆ. ಆದರೆ ವಧು ಮಾತ್ರ ಬೇಡವೇ ಬೇಡ ಎಂದಿದ್ದಾಳೆ. ಜಗಳ ಜೋರಾಗುತ್ತಿದ್ದಂತೆ ಪೊಲೀಸರು ಎಂಟ್ರಿಕೊಟ್ಟಿದ್ದಾರೆ. ಮಾತುಕತೆ ಮೂಲಕ ಪೊಲೀಸರು ಜಗಳ ಬಿಡಿಸಿದ್ದಾರೆ. ಆದರೆ ಮದುವೆ ನಡೆಯಲಿಲ್ಲ. ರಾಜಸ್ಥಾನದಿಂದ ಪಂಜಾಬ್‌ಗೆ ತೆರಳಿದ ವರ ಬರಿಗೈಯಲ್ಲಿ ವಾಪಾಸ್ಸಾಗಿದ್ದಾನೆ.