Bhel Puri viral photo: ಭಾರತದಲ್ಲಿ ಬೀದಿ ಬದಿಯ ವ್ಯಾಪಾರಿಯೊಬ್ಬ 20 ರೂಪಾಯಿ ಭೇಲ್ ಪುರಿಯನ್ನು, ಗ್ರಾಹಕರೊಬ್ಬರ ವೈಯಕ್ತಿಕ ಹಾಗೂ ಹಣಕಾಸಿನ ವಿವರಗಳಿದ್ದ ಬ್ಯಾಂಕ್ ಸ್ಟೇಟ್ಮೆಂಟ್ನಲ್ಲಿ ಕಟ್ಟಿಕೊಟ್ಟ ಘಟನೆ ನಡೆದಿದೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಡೇಟಾ ಪ್ರೈವೆಸಿ ಮತ್ತು ಆಹಾರದ ಶುಚಿತ್ವದ ಬಗ್ಗೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.
ಬೀದಿ ಬದಿಯಲ್ಲಿ ಸಿಗೋ ತಿಂಡಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಆದ್ರೆ, ಹೀಗೆ 20 ರೂಪಾಯಿ ಕೊಟ್ಟು ಭೇಲ್ ಪುರಿ ತಿಂದ ವ್ಯಕ್ತಿಯೊಬ್ಬರಿಗೆ ಶಾಕ್ ಕಾದಿತ್ತು. ಯಾಕಂದ್ರೆ, ಅವರಿಗೆ ಭೇಲ್ ಪುರಿ ಕಟ್ಟಿಕೊಟ್ಟಿದ್ದು ಬೇರೊಬ್ಬರ ಬ್ಯಾಂಕ್ ಸ್ಟೇಟ್ಮೆಂಟ್ನಲ್ಲಿದ್ದ ಪೇಪರ್ನಲ್ಲಿ! ಈ ಘಟನೆಯ ಫೋಟೋ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ (X) ವೈರಲ್ ಆಗಿದ್ದು, ಭಾರತದಲ್ಲಿ ಡೇಟಾ ಪ್ರೈವೆಸಿ (ಮಾಹಿತಿ ಸೋರಿಕೆ) ಮತ್ತು ಆಹಾರದ ಶುಚಿತ್ವದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಕೇಳಿದ್ದೇನು, ಸಿಕ್ಕಿದ್ದೇನು?
ಎಕ್ಸ್ ಬಳಕೆದಾರ ಸುಧಾಂಶು ಅಂಬೋರ್ ಈ ವೈರಲ್ ಪೋಸ್ಟ್ ಶೇರ್ ಮಾಡಿದ್ದಾರೆ. ತಾವು ಖರೀದಿಸಿದ ಭೇಲ್ ಪುರಿಯನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎರಡು ಪುಟಗಳ ಅಕೌಂಟ್ ಸ್ಟೇಟ್ಮೆಂಟ್ನಲ್ಲಿ ಸುತ್ತಿಕೊಟ್ಟಿದ್ದ ಫೋಟೋವನ್ನು ಅವರು ಅಪ್ಲೋಡ್ ಮಾಡಿದ್ದಾರೆ. ಈ ಡಾಕ್ಯುಮೆಂಟ್ನಲ್ಲಿ ಖಾತೆದಾರರ ಹೆಸರು, ಅಕೌಂಟ್ ನಂಬರ್ ಮತ್ತು ಎಲ್ಲಾ ವ್ಯವಹಾರಗಳ ವಿವರಗಳು ಇದ್ದವು ಎಂದು ವರದಿಯಾಗಿದೆ. ಫೋಟೋ ಶೇರ್ ಮಾಡಿ, "ಬೀದಿ ಬದಿಯ ವ್ಯಾಪಾರಿಯಿಂದ 20 ರೂಪಾಯಿಗೆ ಭೇಲ್ ಪುರಿ ಖರೀದಿಸಿದೆ. ಅದನ್ನು ಬೇರೊಬ್ಬರ 2 ಪುಟಗಳ ಬ್ಯಾಂಕ್ ಸ್ಟೇಟ್ಮೆಂಟ್ನಲ್ಲಿ ಸುತ್ತಿಕೊಟ್ಟಿದ್ದರು. ಹೆಸರು, ಅಕೌಂಟ್ ನಂಬರ್, ಟ್ರಾನ್ಸಾಕ್ಷನ್... ಎಲ್ಲವೂ ಬಹಿರಂಗವಾಗಿದೆ. ಭಾರತದಲ್ಲಿ ಪ್ರೈವೆಸಿ ಅನ್ನೋದು ನಿಜಕ್ಕೂ ತಮಾಷೆಯಾಗಿದೆ," ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಹಿರಿಯ ಮಗನ ಜವಾಬ್ದಾರಿ ಪ್ರಧಾನ ಮಂತ್ರಿಗಿಂತಲೂ ಹೆಚ್ಚಾ? ಸೋಶಿಯಲ್ ಮೀಡಿಯಾದಲ್ಲಿ ಯುವತಿಯ ಹೇಳಿಕೆ ವೈರಲ್
ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿ, ಸೋಷಿಯಲ್ ಮೀಡಿಯಾ ಬಳಕೆದಾರರಿಂದ ವ್ಯಾಪಕ ಟೀಕೆ ಮತ್ತು ಆತಂಕಕ್ಕೆ ಕಾರಣವಾಯಿತು. ಹಲವರು ಬ್ಯಾಂಕಿಂಗ್ನ ಗೌಪ್ಯ ಮಾಹಿತಿ ಸೋರಿಕೆಯಾಗಿದ್ದಕ್ಕೆ ಆಘಾತ ವ್ಯಕ್ತಪಡಿಸಿದರೆ, ಇನ್ನು ಕೆಲವರು ರಾಸಾಯನಿಕ ಇಂಕ್ ಇರುವ ಇಂತಹ ಹಳೆ ಪೇಪರ್ಗಳಲ್ಲಿ ಆಹಾರ ನೀಡುವುದರಿಂದ ಆಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಾರೆ.
ಒರ್ವ ಬಳಕೆದಾರರು, "ಪ್ರೈವೆಸಿ ಮಾತ್ರವಲ್ಲ, ಶುಚಿತ್ವವೂ ಇಲ್ಲಿ ತಮಾಷೆಯಾಗಿದೆ," ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, "ಆ ಇಂಕ್ ಇರುವ ಕಸದ ಪೇಪರ್ನಲ್ಲಿ ತಿನ್ನುವುದು ಇನ್ನೂ ಅಪಾಯಕಾರಿ," ಎಂದು ಎಚ್ಚರಿಸಿದ್ದಾರೆ. ಹಾಗೆಯೇ "ಈ ಪೇಪರ್ಗಳು ಧೂಳು ತುಂಬಿದ ಮೂಲೆಯಲ್ಲಿ ಬಿದ್ದಿರುತ್ತವೆ, ಅದರ ಮೇಲೆ ಇಲಿಗಳು ಓಡಾಡಿರಬಹುದು," ಎಂದು ಕಸದ ಕಾಗದವನ್ನು ಬಳಸುವುದರ ಅಪಾಯವನ್ನು ವಿವರಿಸಿದ್ದಾರೆ.
ಹೀಗೆ ಅನೇಕ ಬಳಕೆದಾರರು, ಸೂಕ್ಷ್ಮ ದಾಖಲೆಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವ ಬಗ್ಗೆ ಜನರಲ್ಲಿ ಜಾಗೃತಿ ಇಲ್ಲದಿರುವುದೇ ಇಂತಹ ಘಟನೆಗಳಿಗೆ ಕಾರಣ ಎಂದು ಹೇಳಿದ್ದಾರೆ. "ಬ್ಯಾಂಕ್ಗೆ ಸಂಬಂಧಿಸಿದ ಪೇಪರ್ಗಳನ್ನು ಬಿಸಾಡುವ ಮೊದಲು ಹರಿದು ಹಾಕಬೇಕು ಅಥವಾ ಶ್ರೆಡ್ ಮಾಡಬೇಕು, ಆಗ ವೈಯಕ್ತಿಕ ಡೇಟಾ ದುರ್ಬಳಕೆಯಾಗುವುದನ್ನು ತಡೆಯಬಹುದು," ಎಂದು ಸಲಹೆ ಸಹ ನೀಡಿದ್ದಾರೆ. ಇದು ಅಸಡ್ಡೆಯಿಂದ ಕೂಡಿದ ಕಸ ವಿಲೇವಾರಿ ಮತ್ತು ಡೇಟಾ ಸಂರಕ್ಷಣೆ ಬಗ್ಗೆ ಇರುವ ಅರಿವಿನ ಕೊರತೆಯನ್ನು ತೋರಿಸುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿದೆ ನೋಡಿ ವೈರಲ್ ಫೋಟೋ
ಈ ವೈರಲ್ ಘಟನೆಯು ಗ್ರಾಹಕರ ಸುರಕ್ಷತೆ, ಗೌಪ್ಯ ದಾಖಲೆಗಳ ಜವಾಬ್ದಾರಿಯುತ ವಿಲೇವಾರಿ ಮತ್ತು ಅನೇಕ ಭಾರತೀಯರು ಪ್ರತಿದಿನ ಎದುರಿಸುತ್ತಿರುವ ಪ್ರೈವೆಸಿ ಅಪಾಯಗಳ ಬಗ್ಗೆ ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿದೆ.