ಗುಜರಾತ್‌ನಲ್ಲಿ ರೈಲೊಂದು ರದ್ದಾದ ನಂತರ ರೈಲ್ವೆ ಇಲಾಖೆ ವಿದ್ಯಾರ್ಥಿಗೆ ಕ್ಯಾಬ್ ಬುಕ್ ಮಾಡಿದ್ದು, ರೈಲ್ವೆ ಇಲಾಖೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ರೈಲ್ವೆಯ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಅಹ್ಮದಾಬಾದ್‌: ಗುಜರಾತ್‌ನಲ್ಲಿ ರೈಲೊಂದು ರದ್ದಾದ ನಂತರ ರೈಲ್ವೆ ಇಲಾಖೆ ವಿದ್ಯಾರ್ಥಿಗೆ ಕ್ಯಾಬ್ ಬುಕ್ ಮಾಡಿದ್ದು, ರೈಲ್ವೆ ಇಲಾಖೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ರೈಲ್ವೆಯ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿ ಸತ್ಯಂ ಗಧ್ವಿ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಮದ್ರಾಸ್‌ನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದರು. ರಜೆಗೆ ಮನೆಗೆ ಬಂದಿದ್ದ ಅವರು ಮರಳಿ ಚೆನ್ನೈಗೆ ತೆರಳಲು ಯೋಜಿಸಿದ್ದರು. ಚೆನ್ನೈಗೆ ತೆರಳುವ ಸಲುವಾಗಿ ಗುಜರಾತಿನ ನಿವಾಸಿಯಾಗಿರುವ ಗಧ್ವಿ ಅವರು ನರ್ಮದಾ ಜಿಲ್ಲೆಯ ಏಕ್ತಾ ನಗರದಿಂದ ವಡೋದರಾಕ್ಕೆ ರೈಲ್ವೇ ಟಿಕೆಟ್ ಬುಕ್ ಮಾಡಿದ್ದರು. ಅಲ್ಲಿಂದ ಅವರು ತಾವು ತಲುಪಬೇಕಾಗಿದ್ದ ಚೆನ್ನೈಗೆ ತೆರಳಬೇಕಿತ್ತು. 

Add Asianetnews Kannada as a Preferred SourcegooglePreferred

ಆದಾಗ್ಯೂ, ಗುಜರಾತ್‌ನಲ್ಲಿ ಭಾರೀ ಮಳೆಯಿಂದಾಗಿ, ಏಕತಾ ನಗರ ರೈಲು ನಿಲ್ದಾಣದಿಂದ ವಡೋದರಾಗೆ ಹೋಗಬೇಕಾದ ಮಾರ್ಗದ ರೈಲು ಹಳಿಗಳು ನೀರಿನಲ್ಲಿ ಕೊಚ್ಚಿಹೋದ ಪರಿಣಾಮ ಆ ಮಾರ್ಗದ ರೈಲುಗಳನ್ನು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ವಿದ್ಯಾರ್ಥಿ ಸತ್ಯಂ ಗಧ್ವಿ ಅವರಿಗೆ ವಡೋದರಾಕ್ಕೆ ತೆರಳಲು ಸಾಧ್ಯವಾಗದೇ ಆತಂಕದಲ್ಲಿದ್ದರು. ಆದರೆ ಏಕ್ತಾ ನಗರದ ರೈಲ್ವೆ ಸಿಬ್ಬಂದಿಯವರು ವಡೋದರಾದಿಂದ ಚೆನ್ನೈಗೆ ರೈಲು ಹಿಡಿಯಲು ಸಹಾಯವಾಗುವಂತೆ ಕ್ಯಾಬ್ ಅನ್ನು ಬಾಡಿಗೆಗೆ ಪಡೆದು ವಿದ್ಯಾರ್ಥಿ ಸತ್ಯಂ ಗಧ್ವಿ ಅವರಿಗೆ ನೀಡಿದರು.

Scroll to load tweet…

ಈ ಬಗ್ಗೆ ವಿದ್ಯಾರ್ಥಿ ವಿಡಿಯೋವೊಂದನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಕ್ಯಾಬ್‌ ಒದಗಿಸಿದ ರೈಲ್ವೆ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ. ಈ ವಿಡಿಯೋವನ್ನು ಡಿಆರ್‌ಎಂ ವಡೋದರಾ ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. ಇಂದು, ನನ್ನ ಪ್ರಯಾಣವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಏಕತಾ ನಗರ ಮತ್ತು ವಡೋದರದ ಇಡೀ ರೈಲ್ವೆ ಇಲಾಖೆಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಾನು ಬುಕ್ ಮಾಡಿದ ರೈಲು ಏಕತಾನಗರದಿಂದ 9:15 ಕ್ಕೆ ಹೊರಡಬೇಕಿತ್ತು. ಆದರೆ ಮಳೆಯಿಂದಾಗಿ ಹಳಿಗಳು ಕೊಚ್ಚಿ ಹೋದ ಕಾರಣ ಕೊನೆ ಕ್ಷಣದಲ್ಲಿ ರೈಲನ್ನು ರದ್ದುಗೊಳಿಸಲಾಯಿತು ಎಂದು ಸತ್ಯಂ ಗಧ್ವಿ ವಿಡಿಯೋದಲ್ಲಿ ಹೇಳಿದ್ದಾರೆ.

ವಾರದಲ್ಲಿ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಸಮಸ್ಯೆ ಪರಿಹಾರ: ಸಿಎಂ ಬೊಮ್ಮಾಯಿ

"ಆದರೆ ಏಕತಾ ನಗರದ ರೈಲ್ವೆ ಸಿಬ್ಬಂದಿಯ ಸಹಾಯದಿಂದಾಗಿ ನನಗೆ ಚೆನ್ನೈಗೆ ರೈಲು ಹಿಡಿಯಲು ಸಾಧ್ಯವಾಯಿತು. ಅವರು ನನಗೆ ಕಾರನ್ನು ಬಾಡಿಗೆಗೆ ನೀಡಿದರು. ರೈಲ್ವೆ ಸಿಬ್ಬಂದಿ ಪ್ರತಿಯೊಬ್ಬ ಪ್ರಯಾಣಿಕರಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೆ ಎಂಬುದನ್ನು ಅವರು ತೋರಿಸಿದರು. ಕ್ಯಾಬ್‌ ಡ್ರೈವರ್ ಕೂಡ ಒಳ್ಳೆಯವನಾಗಿದ್ದ. ಅವನು ವಡೋದರಾದಿಂದ ಚೆನ್ನೈಗೆ ಹೊರಡುವ ರೈಲು ಹಿಡಿಯುವುದನ್ನು ಸವಾಲಾಗಿ ತೆಗೆದುಕೊಂಡ ಎಂದು ಅವರು ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಹಳಿ ದಾಟುವಾಗ ಜಾರಿ ಬಿದ್ದ ವ್ಯಕ್ತಿಯ ಜೀವ ಕಾಪಾಡಿದ ಪೊಲೀಸ್, ವಿಡಿಯೋ ವೈರಲ್!

ರೈಲ್ವೇ ಸಿಬ್ಬಂದಿಯ ಈ ಒಳ್ಳೆಯ ಕಾರ್ಯಕ್ಕೆ ಬಳಕೆದಾರರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಭಾರತೀಯ ರೈಲ್ವೆಯ ಅದ್ಭುತ ಕಾರ್ಯ ಎಂದು ಕಾಮೆಂಟ್ ಮಾಡಿದ್ದಾರೆ. ವಾವ್ ಇದು ಉತ್ತಮ ಸುದ್ದಿ. ಭಾರತೀಯ ರೈಲ್ವೆಗೆ ಅಭಿನಂದನೆಗಳು ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಇದು ಪ್ರಶಂಸಿಸಬೇಕಾದ ಕಾರ್ಯ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.