ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಸಾಮ್ರಾಟ್ ಹೋಟೆಲ್ನಲ್ಲಿ ತಂಗಿದ್ದ ಯುವತಿಯೊಬ್ಬರು ತಮ್ಮ ಚಿನ್ನದ ಸರ ಕಳ್ಳತನವಾಗಿದೆ ಎಂದು ಸಿಬ್ಬಂದಿ ವಿರುದ್ಧ ಆರೋಪಿಸಿದ್ದಾರೆ. ಆದರೆ, ಹೋಟೆಲ್ ಆಡಳಿತ ಮಂಡಳಿ ಈ ಆರೋಪವನ್ನು ನಿರಾಕರಿಸಿದ್ದು, ಆರೋಪದ ಹಿಂದಿನ ಕಥೆಯನ್ನ ರಿವೀಲ್ ಮಾಡಿದ್ದಾರೆ.
ಬೆಂಗಳೂರು (ಫೆ23): ಸಿಲಿಕಾನ್ ಸಿಟಿ ಬೆಂಗಳೂರಿಗೆ ಉದ್ಯೋಗ ಅಥವಾ ವ್ಯವಹಾರದ ನಿಮಿತ್ತ ಬರುವ ಪ್ರವಾಸಿಗರು ತಂಗುವ ಹೋಟೆಲ್ಗಳು ಎಷ್ಟರಮಟ್ಟಿಗೆ ಸುರಕ್ಷಿತ ಎಂಬ ಪ್ರಶ್ನೆಯೊಂದು ಈಗ ಕಾಡಲಾರಂಭಿಸಿದೆ. ನಗರದ ಶೇಷಾದ್ರಿಪುರಂನಲ್ಲಿರುವ ಹಳೆಯ ಹಾಗೂ ಪ್ರತಿಷ್ಠಿತ ಹೋಟೆಲ್ಗಳಲ್ಲಿ ಒಂದಾದ 'ಸಾಮ್ರಾಟ್ ಹೋಟೆಲ್' (Hotel Samrat) ಸಿಬ್ಬಂದಿ ವಿರುದ್ಧ ಯುವತಿಯೊಬ್ಬರು ಚಿನ್ನದ ಸರ ಕಳ್ಳತನ ಮಾಡಿರುವ ಗಂಭೀರ ಆರೋಪ ಹೊರಿಸಿದ್ದಾರೆ. ಈ ಸಂಬಂಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಘಟನೆಯ ವಿವರ:
ಬಾಲ್ ಪ್ರೀತ್ ಕೌರ್ ಎಂಬ ಯುವತಿ ವ್ಯವಹಾರದ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದರು. ವಾಸ್ತವ್ಯಕ್ಕಾಗಿ ಅವರು ಶೇಷಾದ್ರಿಪುರಂನಲ್ಲಿರುವ ಸಾಮ್ರಾಟ್ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿದ್ದರು. ಆದರೆ, ತಾವು ಕೆಲಸದ ಮೇಲೆ ಹೊರಗೆ ಹೋಗಿ ಮರಳಿ ಬಂದಾಗ ರೂಮಿನಲ್ಲಿದ್ದ ತಮ್ಮ 5 ಗ್ರಾಂ ಚಿನ್ನದ ಸರ ನಾಪತ್ತೆಯಾಗಿರುವುದನ್ನು ಕಂಡು ಅವರು ದಂಗಾಗಿದ್ದಾರೆ. ಹೋಟೆಲ್ ಸಿಬ್ಬಂದಿಯೇ ತಾವು ಇಲ್ಲದ ಸಮಯದಲ್ಲಿ ರೂಮಿನೊಳಗೆ ಪ್ರವೇಶಿಸಿ ಈ ಕೃತ್ಯ ಎಸಗಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಯುವತಿಯ ಆರೋಪವೇನು?
'ನಾನು ಬಿಸಿನೆಸ್ ಕೆಲಸಕ್ಕಾಗಿ ಹೋಟೆಲ್ ರೂಮಿನಿಂದ ಹೊರಗೆ ಹೋಗಿದ್ದೆ. ಮರಳಿ ಬಂದು ನೋಡಿದಾಗ ನನ್ನ ಬೆಲೆಬಾಳುವ ಚಿನ್ನದ ಸರ ಕಾಣೆಯಾಗಿತ್ತು. ಹೋಟೆಲ್ ಸಿಬ್ಬಂದಿ ಬಿಟ್ಟರೆ ಬೇರೆ ಯಾರಿಗೂ ರೂಮಿನ ಕೀ ಪಡೆಯಲು ಅಥವಾ ಒಳಗೆ ಬರಲು ಸಾಧ್ಯವಿಲ್ಲ. ಹೀಗಾಗಿ ಸಿಬ್ಬಂದಿಯೇ ಈ ಕೆಲಸ ಮಾಡಿದ್ದಾರೆ' ಎಂದು ಬಾಲ್ ಪ್ರೀತ್ ಕೌರ್ ಆರೋಪಿಸಿದ್ದಾರೆ. ಸರ ಕಾಣೆಯಾದ ಬಗ್ಗೆ ಮೊದಲು ಹೋಟೆಲ್ ಮ್ಯಾನೇಜರ್ ಬಳಿ ಪ್ರಶ್ನಿಸಿದರೂ ಸರಿಯಾದ ಉತ್ತರ ಸಿಗದ ಕಾರಣ ಅವರು ಪೊಲೀಸ್ ಮೊರೆ ಹೋಗಿದ್ದಾರೆ.
ಹೋಟೆಲ್ ಮ್ಯಾನೇಜರ್ ಹೇಳುವುದೇ ಬೇರೆ!
ಈ ಕಳ್ಳತನದ ಆರೋಪವನ್ನು ಹೋಟೆಲ್ ಮ್ಯಾನೇಜರ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. 'ಯುವತಿ ನಾನ್-ಎಸಿ ರೂಮ್ ಬುಕ್ ಮಾಡಿದ್ದರು. ಆದರೆ ನಾವು ಅವರಿಗೆ ಎಸಿ ರೂಮ್ ನೀಡಿ ಸೌಕರ್ಯ ಒದಗಿಸಿದ್ದೆವು. ಇದೇ ವಿಚಾರಕ್ಕೆ ಏನೋ ಮನಸ್ತಾಪ ಮಾಡಿಕೊಂಡು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಮ್ಮ ಹೋಟೆಲ್ನಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ. ಪೊಲೀಸರು ತನಿಖೆಗೆ ಬಂದಾಗ ನಾವು ಪೂರ್ಣ ಸಹಕಾರ ನೀಡಿದ್ದೇವೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸಿದ್ದೇವೆ' ಎಂದು ಮ್ಯಾನೇಜರ್ ಸಮರ್ಥಿಸಿಕೊಂಡಿದ್ದಾರೆ.
ಪೊಲೀಸ್ ತನಿಖೆ ಚುರುಕು:
ಸದ್ಯ ಶೇಷಾದ್ರಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಹೋಟೆಲ್ನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದ್ದು, ಯುವತಿ ಹೋದ ನಂತರ ಯಾರಾದರೂ ರೂಮಿಗೆ ಪ್ರವೇಶಿಸಿದ್ದಾರೆಯೇ ಎಂಬ ಬಗ್ಗೆ ತಾಂತ್ರಿಕ ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ. ಪ್ರತಿಷ್ಠಿತ ಹೋಟೆಲ್ನಲ್ಲೇ ಇಂತಹ ಘಟನೆ ನಡೆದಿರುವುದು ಇತರ ಗ್ರಾಹಕರಲ್ಲಿ ಆತಂಕ ಮೂಡಿಸಿದೆ.


