ಭಾರತ ನವೀಕರಿಸಬಹುದಾದ ಇಂಧನ (BRE) ಶೃಂಗಸಭೆ ಮತ್ತು ಎಕ್ಸ್‌ಪೋ 2026ರ ಭಾಗವಾಗಿ ಬೆಂಗಳೂರಿನಲ್ಲಿ ಐದನೇ ಪ್ರಾದೇಶಿಕ ರೋಡ್‌ಶೋ ನಡೆದಿದೆ. ಇಂಧನ ಸಾಮರ್ಥ್ಯ ಸೇರ್ಪಡೆ, ₹7.5 ಲಕ್ಷ ಕೋಟಿ ಹೂಡಿಕೆ ಮತ್ತು 20 ಲಕ್ಷ ಉದ್ಯೋಗ ಸೃಷ್ಟಿ ಗುರಿಯೊಂದಿಗೆ ಕರ್ನಾಟಕ ಹೆಜ್ಜೆ ಇಟ್ಟಿದೆ.

ಬೆಂಗಳೂರು (ಸೆ.08): ಭಾರತ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ (BRE Summit) ಕಾರ್ಯಕ್ರಮದ ಪ್ರಾದೇಶಿಕ ರೋಡ್‌ಶೋ ಹಾಗೂ ಎಕ್ಸ್‌ಪೋ ಈವೆಂಟ್ ಬೆಂಗಳೂರಿನಲ್ಲಿ ನಡೆದಿದೆ. ಜೈಪುರ, ಮುಂಬೈ, ಹೈದರಾಬಾದ್ ಮತ್ತು ಅಹಮದಾಬಾದ್‌ ಬಳಿಕ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆದಿದೆ. ಭಾರತೀಯ ಉದ್ಯಮ ಒಕ್ಕೂಟ (CII) ಹಾಗೂ ಅಂತಾರಾಷ್ಟ್ರೀಯ ಸೌರ ಒಕ್ಕೂಟ (ISA) ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮವು, ಕರ್ನಾಟಕದ ಶುದ್ಧ ಇಂಧನ ಸಾಮರ್ಥ್ಯ, ತಾಂತ್ರಿಕ ಆವಿಷ್ಕಾರ ಮತ್ತು ಕೈಗಾರಿಕಾ ನಾಯಕತ್ವವನ್ನು ರಾಷ್ಟ್ರೀಯ ಮಟ್ಟದಲ್ಲಿ ಮುನ್ನೆಲೆಗೆ ತಂದಿತು.

ಇಂಧನ ಭದ್ರತೆಯ ಪ್ರಮುಖ ಶಕ್ತಿ

ಭಾರತದ ನವೀಕರಿಸಬಹುದಾದ ಇಂಧನ ವಲಯದ ಪರಿವರ್ತನೆಯು ಕೇವಲ ಪರಿಸರ ಕಾಳಜಿಗೆ ಸೀಮಿತವಾಗದೆ, ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಇಂಧನ ಭದ್ರತೆಯ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಜಾರ್ಜ್, ದೇಶವು 300 ಗಿಗಾವ್ಯಾಟ್ ಪಳೆಯುಳಿಕೆಯೇತರ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ದಾಟಿ, 2030ರ ವೇಳೆಗೆ 500 ಗಿಗಾವ್ಯಾಟ್ ಗುರಿಯತ್ತ ಸಾಗುತ್ತಿರುವ ಈ ಸಂದರ್ಭದಲ್ಲಿ ಕರ್ನಾಟಕವು ಪ್ರಮುಖ ಪಾಲುದಾರನಾಗಿದೆ ಎಂದಿದ್ದಾರೆ.

7.5 ಲಕ್ಷ ಕೋಟಿ ರೂಪಾಯಿ ಹೂಡಿಕೆ

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಇಂಧನ ಇಲಾಖೆ ಕಾರ್ಯದರ್ಶಿ ಗೌರವ್ ಗುಪ್ತಾ, ಅಂಕಿ ಅಂಶಗಳ ಮೂಲಕ ಮಾಹಿತಿ ನೀಡಿದರು. ಸಂಯೋಜಿತ ನವೀಕರಿಸಬಹುದಾದ ಇಂಧನ ನೀತಿ 2025ರ ಅಡಿಯಲ್ಲಿ ರಾಜ್ಯದ 155 ಗಿಗಾವ್ಯಾಟ್ ಸಾಮರ್ಥ್ಯವನ್ನು ಬಳಸಿಕೊಂಡು, 2027ರ ವೇಳೆಗೆ ಹೆಚ್ಚುವರಿಯಾಗಿ 10 ಗಿಗಾವ್ಯಾಟ್ ಇಂಧನ ಸಾಮರ್ಥ್ಯವನ್ನು ಸೇರ್ಪಡೆಗೊಳಿಸುವ ಗುರಿ ಹೊಂದಲಾಗಿದೆ ಎಂದಿದ್ದಾರೆ. ಇದಲ್ಲದೆ, ಪಿಪಿಪಿ (PPP) ಮಾದರಿಯಲ್ಲಿ ಗ್ರೀನ್ ಎನರ್ಜಿ ಕಾರಿಡಾರ್‌ಗಳು ಮತ್ತು 'ಕೈಗಾರಿಕಾ ನೀತಿ 2025-30'ರ ಅಡಿಯಲ್ಲಿ 7.5 ಲಕ್ಷ ಕೋಟಿ ರೂಪಾಯಿ ಹೂಡಿಕೆ ಹಾಗೂ 20 ಲಕ್ಷ ಉದ್ಯೋಗ ಸೃಷ್ಟಿಯ ಗುರಿಯನ್ನು ರಾಜ್ಯ ಹೊಂದಿದೆ. 'ಇಂಧನ ಸಂರಕ್ಷಣಾ ನೀತಿ'ಯಡಿ ಹಣಕಾಸು ವರ್ಷ 2027ರ ವೇಳೆಗೆ 744 MU ಇಂಧನ ಉಳಿತಾಯ ಮತ್ತು 'ಕ್ಲೀನ್ ಮೊಬಿಲಿಟಿ ನೀತಿ 2025-30'ರ ಅಡಿಯಲ್ಲಿ ಸುಮಾರು ₹50,000 ಕೋಟಿ ಹೂಡಿಕೆಯನ್ನು ಆಕರ್ಷಿಸಲು ಉದ್ದೇಶಿಸಲಾಗಿದೆ ಎಂದರು.

ಭಾರತ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ 2026' ನವದೆಹಲಿಯ ಭಾರತ ಮಂಟಪದಲ್ಲಿ 2026ರ ನವೆಂಬರ್ 2 ರಿಂದ 5 ರವರೆಗೆ ನಡೆಯಲಿದೆ. ಹೂಡಿಕೆ, ನಾವೀನ್ಯತೆ ಮತ್ತು ಪ್ರೇರಣೆ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯಲಿರುವ ಈ ಜಾಗತಿಕ ಕಾರ್ಯಕ್ರಮದಲ್ಲಿ 75ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, 400ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಳ್ಳಲಿದ್ದಾರೆ. ಬೆಂಗಳೂರಿನ ರೋಡ್‌ಶೋ ನಂತರ, ಈ ರಾಷ್ಟ್ರವ್ಯಾಪಿ ಅಭಿಯಾನವು ಮುಂಬರುವ ವಾರಗಳಲ್ಲಿ ಲಕ್ನೋ ಮತ್ತು ಕೋಲ್ಕತ್ತಾದಲ್ಲಿ ನಡೆಯಲಿದೆ.