- Home
- Karnataka Districts
- Bengaluru Urban
- ದಕ್ಷಿಣ ಭಾರತದಲ್ಲೇ ಮೊದಲು: ಬೆಂಗಳೂರು ಉದ್ಯಮಿಗಳಿಗೆ ಸೋಮಣ್ಣ ಕೊಟ್ಟ ಭರ್ಜರಿ ಕೊಡುಗೆ!
ದಕ್ಷಿಣ ಭಾರತದಲ್ಲೇ ಮೊದಲು: ಬೆಂಗಳೂರು ಉದ್ಯಮಿಗಳಿಗೆ ಸೋಮಣ್ಣ ಕೊಟ್ಟ ಭರ್ಜರಿ ಕೊಡುಗೆ!
ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಅವರು ಬೆಂಗಳೂರಿನ ವೈಟ್ಫೀಲ್ಡ್ನಿಂದ ನವದೆಹಲಿಯ ತುಘಲಕಾಬಾದ್ಗೆ ಕಂಟೇನರ್ ರೈಲು ಸೇವೆಗೆ ಚಾಲನೆ ನೀಡಿದರು. ದಕ್ಷಿಣ ಭಾರತದಲ್ಲೇ ಮೊದಲಾದ ಈ ಉಪಕ್ರಮವು, ದಕ್ಷಿಣ ಮತ್ತು ಉತ್ತರ ಭಾರತದ ಮಾರುಕಟ್ಟೆಗಳಿಗೆ ಸೇತುವೆಯಾಗಲಿದ್ದು, ಕೈಗಾರಿಕೆಗಳಿಗೆ ವರದಾನವಾಗಲಿದೆ.

ದೇಶೀಯ ಸರಕು ಸಾಗಣೆ ಸಂಪರ್ಕಕ್ಕೆ ಉತ್ತೇಜನ
ದೇಶೀಯ ಸರಕು ಸಾಗಣೆಯನ್ನು ಬಲಪಡಿಸುವ ಉದ್ದೇಶದಿಂದ ಬೆಂಗಳೂರಿನ ವೈಟ್ಫೀಲ್ಡ್ ರೈಲು ನಿಲ್ದಾಣದಲ್ಲಿಂದು ವೈಟ್ಫೀಲ್ಡ್ನಿಂದ ನವದೆಹಲಿಯ ತುಘಲಕಾಬಾದ್ಗೆ ಕಂಟೇನರ್ ರೈಲು ಸೇವೆಗೆ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು. ದಕ್ಷಿಣ ಮತ್ತು ಉತ್ತರ ಭಾರತದ ಮಾರುಕಟ್ಟೆಗೆ ಈ ಸೇವೆ ಸೇತುವೆಯಾಗಲಿದೆ.
ದಕ್ಷಿಣ ಭಾರತದಲ್ಲೇ ಮೊದಲು
ದಕ್ಷಿಣ ಭಾರತದಲ್ಲಿ ಇದು ಮೊಟ್ಟ ಮೊದಲ ಉಪಕ್ರಮವಾಗಿದ್ದು, ಬೆಂಗಳೂರು, ತುಮಕೂರು, ಹೊಸೂರು, ಕೋಲಾರ, ಕೃಷ್ಣಗಿರಿ ಮತ್ತು ಸುತ್ತಮುತ್ತಲಿನ ಸ್ಥಳಗಳ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳು ಹಾಗೂ ಸಿದ್ಧಪಡಿಸಿದ ಸರಕುಗಳ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಸಮಯಕ್ಕೆ ಅನುಗುಣವಾಗಿ ಸಾಗಣೆ ಹಾಗೂ ದೊಡ್ಡ ಮಾರುಕಟ್ಟೆಗಳಿಗೆ ಪ್ರವೇಶಕ್ಕಾಗಿ ಇದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಇದು ಖಚಿತವಾದ ಸಾರಿಗೆ ಸಮಯವನ್ನು ನೀಡುತ್ತದೆ. ಅಲ್ಲದೇ, ಉದ್ಯಮಕ್ಕೆ ವರದಾನವಾಗಲಿದೆ ಎಂದು ವಿ.ಸೋಮಣ್ಣ ಹೇಳಿದರು.
ಪರಿಸರ ಸ್ನೇಹಿ ಆಯ್ಕೆ
ಇದು ಸಾರಿಗೆಯಲ್ಲಿ ರೈಲ್ವೆಯ ಮಾದರಿ ಪಾಲನ್ನು ಹೆಚ್ಚಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ ಮತ್ತು ರಸ್ತೆ ಅಥವಾ ವಾಯು ಸರಕು ಸಾಗಣೆಗೆ ಹೋಲಿಸಿದರೆ ಇದು ಪರಿಸರ ಸ್ನೇಹಿ ಆಯ್ಕೆಯನ್ನು ನೀಡುತ್ತದೆ. ಇದು ದಕ್ಷಿಣ ಭಾರತದ ಮೊದಲ ಗೂಡ್ಸ್ ಮೆಗಾ ಪ್ರೊಜೆಕ್ಟ್ ಆಗಲಿದೆ.
ಮಂಗಳೂರು ರೈಲ್ವೆ ಜಾಲ
ಮಂಗಳೂರು ರೈಲ್ವೆ ಜಾಲವನ್ನು ಕೇರಳದ ಪಾಲಕ್ಕಾಡ್ನಿಂದ ಮೈಸೂರು ವಲಯಕ್ಕೆ ಸೇರ್ಪಡೆಗೊಳಿಸಿದ್ದಕ್ಕೆ ಮಾಜಿ ಸಚಿವರು, ಕರಾವಳಿ ಭಾಗದ ಪ್ರಮುಖ ನಾಯಕರಾದ ಶ್ರೀ ಪ್ರಮೋದ್ ಮಧ್ವರಾಜ್ ಅವರು ವಿ ಸೋಮಣ್ಣ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಈ ಪ್ರಕ್ರಿಯೆಯಲ್ಲಿ ಬೆಂಬಲವಾಗಿ ನಿಂತ ಶ್ರೀ ಪ್ರಮೋದ್ ಮಧ್ವರಾಜ್ ಆದಿಯಾಗಿ ಈ ಭಾಗದ ಎಲ್ಲಾ ಸಂಸದರು, ಶಾಸಕರುಗಳು ಹಾಗೂ ಮುಖಂಡರುಗಳಿಗೆ ವಿ.ಸೋಮಣ್ಣ ಧನ್ಯವಾದ ಸಲ್ಲಿಸಿದರು.

