ಆರೆಕ್ಸ್‌ ಬೈಕಿನ ಸುತ್ತ ನಡೆಯುವ ಕಥೆಯ ಜೊತೆಗೆ ಹಾರರ್‌ ಕಥಾಹಂದರ ಕೂಡಾ ಇದರೊಟ್ಟಿಗೆ ಬೆಸೆದುಕೊಂಡಿದೆ. ಹಾಗಂತ ಬೆನ್ನುಬೀಳುವ ದೆವ್ವ, ಪ್ರೇತಕಾಟ, ರೆಗ್ಯುಲರ್‌ ಎನ್ನಿಸುವ ಭಯಾನಕ ದೃಶ್ಯಗಳು ಯಾವುವೂ ಇಲ್ಲಿರೋದಿಲ್ಲ. ಬದಲಿಗೆ, ಬದುಕಿನ ತಳಮಳಗಳು, ಹೆತ್ತವಳ ಸಂಕಟ, ಪ್ರೀತಿಯ ಉತ್ಕಟತೆಗಳೆಲ್ಲಾ ಇಲ್ಲಿ ಪಾತ್ರಗಳಾಗಿ ಹೊರಹೊಮ್ಮಲಿವೆ.

ನಟ, ಪತ್ರಕರ್ತ, ಹೋರಾಟಗಾರ – ಹೀಗೆ ನಾನಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದ ಯತಿರಾಜ್‌ ಇತ್ತೀಚಿನ ವರ್ಷಗಳಲ್ಲಿ ನಿರ್ದೇಶಕರಾಗಿಯೂ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಈ ಸಲ ಯತಿರಾಜ್‌ ನಿರ್ದೇಶನದಲ್ಲಿ ಹೊಸ ಸಾಧ್ಯತೆಯೊಂದನ್ನು ಹುಡುಕ ಹೊರಟಿದ್ದಾರೆ. ಯತಿರಾಜ್‌ ನಿರ್ದೇಶಿಸಲಿರುವ "ರಾ..ರಾ.. ಆರೆಕ್ಸ್‌" ಎನ್ನುವ ಹೊಸ ಚಿತ್ರವೊಂದು ಸೆಟ್ಟೇರಿದೆ. ಈ ಸಲ ತೀರಾ ಭಿನ್ನವಾದ ಕಥಾವಸ್ತುವೊಂದನ್ನು ಯತಿ ಕೈಗೆತ್ತಿಕೊಂಡಿದ್ದಾರೆ. ಸಿನಿಮಾದ ಶೀರ್ಷಿಕೆ ನೋಡಿದರೇನೆ ಅದು ಖಾತ್ರಿಯಾಗುತ್ತಿದೆ. ಏನಿದು ʻರಾರಾ ಆರೆಕ್ಸ್‌?ʼ ಅಂತಾ ಎಲ್ಲರೂ ಪ್ರಶ್ನಿಸುವಂತಿದೆ.

ಆರೆಕ್ಸ್‌ ಬೈಕ್‌ ಈ ಸಿನಿಮಾದ ಕೇಂದ್ರಬಿಂದು ಅನ್ನೋದನ್ನು ಶೀರ್ಷಿಕೆಯೇ ಹೇಳುತ್ತಿದೆ. ಸ್ವತಃ ಯತಿರಾಜ್‌ ಬರೆದಿರುವ ಈ ಭಾವಗೀತೆ ಎನ್ನುವ ಕಾದಂಬರಿಯನ್ನು ಸಿನಿಮಾ ರೂಪಕ್ಕೆ ತರುತ್ತಿದ್ದಾರೆ. ಆರ್‌ ಎಕ್ಸ್‌ ಬೈಕು ಪ್ರಧಾನ ಪಾತ್ರ ವಹಿಸುತ್ತದಾದರೂ ಈ ಚಿತ್ರಕ್ಕೆ ಹೀರೋ ಯಾರು ಎನ್ನುವ ಪ್ರಶ್ನೆ ಮೂಡುತ್ತದೆ. ಹಾಗೆ ನೋಡಿದರೆ, ಇಲ್ಲಿ ಇಬ್ಬರು ಹುಡುಗರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ತಾಯಿಯ ಪಾತ್ರ ಕೂಡಾ ಅತೀಮುಖ್ಯವಾಗುತ್ತದೆ. ಒಟ್ಟಾರೆ ನೋಡಿದರೆ, ಈ ಚಿತ್ರದ ಕಥೆಯೇ ಇಲ್ಲಿ ಹೀರೋ ಅನ್ನೋದು ನಿರ್ದೇಶಕ ಯತಿರಾಜ್‌ ಅವರ ಅಭಿಪ್ರಾಯ.

ಆರೆಕ್ಸ್‌ ಬೈಕಿನ ಸುತ್ತ ನಡೆಯುವ ಕಥೆಯ ಜೊತೆಗೆ ಹಾರರ್‌ ಕಥಾಹಂದರ ಕೂಡಾ ಇದರೊಟ್ಟಿಗೆ ಬೆಸೆದುಕೊಂಡಿದೆ. ಹಾಗಂತ ಬೆನ್ನುಬೀಳುವ ದೆವ್ವ, ಪ್ರೇತಕಾಟ, ರೆಗ್ಯುಲರ್‌ ಎನ್ನಿಸುವ ಭಯಾನಕ ದೃಶ್ಯಗಳು ಯಾವುವೂ ಇಲ್ಲಿರೋದಿಲ್ಲ. ಬದಲಿಗೆ, ಬದುಕಿನ ತಳಮಳಗಳು, ಹೆತ್ತವಳ ಸಂಕಟ, ಪ್ರೀತಿಯ ಉತ್ಕಟತೆಗಳೆಲ್ಲಾ ಇಲ್ಲಿ ಪಾತ್ರಗಳಾಗಿ ಹೊರಹೊಮ್ಮಲಿವೆ. 

ಈ ಕಾಲದ ಹುಡುಗರ ಲೈಫ್‌ ಸ್ಟೈಲು, ವ್ಯಾಮೋಹಗಳು ಬದುಕನ್ನು ಹೇಗೆಲ್ಲಾ ಅಪೋಶನ ತೆಗೆದುಕೊಳ್ಳುತ್ತದೆನ್ನುವ ವಿಚಾರಗಳು ಕಣ್ಣಿಗೆ ಕಟ್ಟುವಂತೆ ತೆರೆದುಕೊಳ್ಳಲಿವೆ. ಸಿನಿಮಾ ನೋಡಿದ ಮೇಲೆ ಇದೊಂದು ಹಾರರ್‌ ಸಿನಿಮಾ ಅನ್ನೋದನ್ನು ಮರೆತು, ಹಾರ್ಟ್‌ ಟಚ್‌ ಆಗುವ ವಿಷಯಗಳು ಮನಸ್ಸಿನಲ್ಲುಳಿಯುತ್ತವೆ. ಇದು ನಮ್ಮದೇ ಮನೆಯ ಕಥೆಯಾ ಎನ್ನುವಷ್ಟು ಆಪ್ತವಾಗುತ್ತವೆ ಎನ್ನುವ ನಂಬಿಕೆಯಲ್ಲಿ ಇಡೀ ಚಿತ್ರತಂಡವಿದೆ.

ರಾ ರಾ ಆರೆಕ್ಸ್‌ ಸಿನಿಮಾದಲ್ಲಿ ಅನೂಪ್‌ ಬೆಳ್ಳಾವಿ, ಭರತ್‌, ಕೀರ್ತಿ ಸೋಮೇಶ್, ಐಶ್ವರ್ಯ‌ ನಾಗರಾಜ್, ತಾಯಂದಿರಾಗಿ ಚಂಡೆ ಖ್ಯಾತಿಯ ದಿವ್ಯಶ್ರೀ ಮತ್ತು ಸಹನಾಶ್ರೀ ಪಾತ್ರ ನಿಭಾಯಿಸುತ್ತಿದ್ದಾರೆ.

"ರಾ..ರಾ ಆರೆಕ್ಸ್‌" ಚಿತ್ರವನ್ನು ಕಾರ್ತಿಕೇಯ ಎಂಟರ್‌ ಪ್ರೈಸಸ್ ಲಾಂಛನದಲ್ಲಿ ವೃದ್ಧಿ ಸುನಿಲ್‌, ಚೇತನ್‌ ಟಿ.ಆರ್.‌, ಚಂದ್ರಶೇಖರ್‌ ಎಸ್‌ ಎಂ ನಿರ್ಮಿಸುತ್ತಿದ್ದಾರೆ. ಯತಿರಾಜ್‌ ಕಥೆ, ಚಿತ್ರಕತೆ, ವಿಜಯ್‌ ಹರಿತ್ಸ ಸಂಗೀತ ನಿರ್ದೇಶನ, ಅಲೋಕ್‌ ಕಾರ್ಯಕಾರಿ ನಿರ್ಮಾಣ, ದೀಪಕ್‌ ಕುಮಾರ್‌ ಜೆ.ಕೆ. ಛಾಯಾಗ್ರಹಣ, ಅನಿಲ್‌ ಕಬೀರ್‌ ಕಲಾ ನಿರ್ದೇಶನ, ಅರುಣೋದಯ ಮತ್ತು ಯತಿರಾಜ್‌ ಸಂಭಾಷಣೆ, ಅನಿಲ್‌ ಕುಮಾರ್‌ ಸಂಕಲನ, ಅರುಣ್‌ ಕುಮಾರ್‌, ನವೀನ್‌ ಮತ್ತು ಸೋನು ಸಾಗರ ಸಹ ನಿರ್ದೇಶನ ಈ ಚಿತ್ರಕ್ಕಿದೆ. ಮದ್ದೂರಿನ ಸುತ್ತಮುತ್ತ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ…