ಧರ್ಮಸ್ಥಳ, ಕುಕ್ಕೆಗೆ ನಟ ಯಶ್ ಭೇಟಿ: ಕೆಜಿಎಫ್ ರಿಲೀಸ್ಗೂ ಮುನ್ನ ಟೆಂಪಲ್ ರನ್!
'ಕೆಜಿಎಫ್ 2' ಬಿಡುಗಡೆಗೂ ಮುನ್ನ ರಾಕಿಂಗ್ ಸ್ಟಾರ್ ಯಶ್ ಚಿತ್ರತಂಡದ ಜೊತೆ ಟೆಂಪಲ್ ರನ್ಗೆ ಮುಂದಾಗಿದ್ದಾರೆ. ಕರಾವಳಿಯ ಇತಿಹಾಸ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು (ಏ.10): 'ಕೆಜಿಎಫ್ 2' (KGF Chapter 2) ಬಿಡುಗಡೆಗೂ ಮುನ್ನ ರಾಕಿಂಗ್ ಸ್ಟಾರ್ ಯಶ್ (Yash) ಚಿತ್ರತಂಡದ ಜೊತೆ ಟೆಂಪಲ್ ರನ್ಗೆ ಮುಂದಾಗಿದ್ದಾರೆ. ಕರಾವಳಿಯ ಇತಿಹಾಸ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ (Kukke Subramanya) ಮತ್ತು ಧರ್ಮಸ್ಥಳಕ್ಕೆ (Dharmasthala) ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಇಂದು ಬೆಳಿಗ್ಗೆ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ಆಗಮಿಸಿದ ನಟ ಯಶ್ ಬಳಿಕ ನೇರವಾಗಿ ರಸ್ತೆ ಮಾರ್ಗವಾಗಿ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿದ್ದಾರೆ. ಕೆ.ಜಿ.ಎಫ್ ನಿರ್ಮಾಪಕ ವಿಜಯ್ ಕಿರಂಗದೂರು (Vijay Kiragandur) ಜೊತೆ ಭೇಟಿ ನೀಡಿದ ನಟ ಯಶ್, ಸುಬ್ರಹ್ಮಣ್ಯ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮಂಜುನಾಥನ ದರ್ಶನ, ಹೆಗ್ಗಡೆ ಆಶೀರ್ವಾದ: ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ಬಳಿಕ ನಟ ಯಶ್ ನೇರವಾಗಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ್ದಾರೆ. ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥ ಸ್ವಾಮಿಯ ದರ್ಶನ ಪಡೆದ ನಟ ಯಶ್ ಮತ್ತು ನಿರ್ಮಾಪಕ ವಿಜಯ್ ಕಿರಂಗದೂರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ (Dr Veerendra Geggade) ಭೇಟಿ ಮಾಡಿದ ನಟ ಯಶ್ ಹೆಗ್ಗಡೆಯವರ ಆಶೀರ್ವಾದ ಪಡೆದರು. ಹೆಗ್ಗಡೆಯವರು ಯಶ್ ಗೆ ಸಾಲು ಹೊದಿಸಿ ಗೌರವಿಸಿದರು.
KGF 2 : ಮಾತೃಪ್ರೇಮದ ಗಗನ ನೀ ಹಾಡಿಗೆ 2.6 ಮಿಲಿಯನ್ಗೂ ಅಧಿಕ ವೀಕ್ಷಣೆ
ನಟ ಯಶ್ ನೋಡಲು ಮುಗಿಬಿದ್ದ ಅಭಿಮಾನಿಗಳು: ಇನ್ನು ಕೆಜಿಎಫ್ 2 ಬಿಡುಗಡೆಯ ನಡುವೆಯೇ ದಿಢೀರ್ ಆಗಿ ಯಶ್ ಟೆಂಪಲ್ ರನ್ ಕೈಗೊಂಡಿದ್ದಾರೆ. ಅದರಲ್ಲೂ ಭಾನುವಾರವಾದ ಕಾರಣ ಧರ್ಮಸ್ಥಳ ಮತ್ತು ಕುಕ್ಕೆಯಲ್ಲಿ ಭಕ್ತರ ಸಂಖ್ಯೆ ಕೂಡ ಹೆಚ್ಚಾಗಿತ್ತು. ಹೀಗಾಗಿ ನಟ ಯಶ್ ನೋಡಲು ಅಭಿಮಾನಿಗಳು ಮುಗಿ ಬಿದ್ದರು. ಅಂದಹಾಗೆ ಯಶ್ ಮತ್ತು ವಿಜಯ್ ಕಿರಗಂದೂರು ಬಿಳಿ ಪಂಚೆ ಮತ್ತು ಶರ್ಟ್ ಧರಿಸಿದ್ದಾರೆ. ಯಶ್ ಲುಕ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಸ್ಟೈಲಿಶ್ ಲುಕ್ ನಲ್ಲಿ ಸಿನಿಮಾ ಪ್ರಚಾರ ಮಾಡುತ್ತಿದ್ದ ಯಶ್ ದೇವರ ದರ್ಶನಕ್ಕೆ ಹೋಗುವಾಗ ಸಾಂಪ್ರದಾಯಿಕ ಧರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ.
ಕೆಜಿಎಫ್-2 ಬಿಡುಗಡೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಏಪ್ರಿಲ್ 14ರಂದು ಸಿನಿಮಾ ದೇಶದಾದ್ಯಂತ ತೆರೆಗೆ ಬರಲಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಅಭಿಮಾನಿಗಳ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಿಸಿರುವ ಸಿನಿಮಾವನ್ನು ದೊಡ್ಡ ಪರದೆ ಮೇಲೆ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಕೆಜಿಎಫ್ ಮೊದಲ ಭಾಗಕ್ಕಿಂತ 2ನೇ ಭಾಗ ಮತ್ತಷ್ಟು ರೋಚಕವಾಗಿದ್ದು ರಾಕಿ ಭಾಯ್ ಅನ್ನು ಕಣ್ತುಂಬಿಕೊಳ್ಳಲು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್, ನಟಿ ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಸಂಜಯ್ ದತ್ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಧೀರಾ ಎನ್ನುವ ಭಯಾನಕ ಪಾತ್ರ ನಿರ್ವಾಹಿಸಿರುವ ಸಂಜಯ್ ದತ್ ಅವರನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
RRR ಮತ್ತು ಕಾಶ್ಮೀರ್ ಫೈಲ್ಸ್ ನೋಡಿದ್ರಾ ಯಶ್?, ರಾಕಿಂಗ್ ಸ್ಟಾರ್ ಉತ್ತರವೇನು?
ಸದ್ಯ ಕೇರಳ, ತಮಿಳುನಾಡು ಹಾಗೂ ಉತ್ತರ ಭಾರತದಲ್ಲಿ ಮಾತ್ರ ಕೆಜಿಎಫ್-2 ಬುಕ್ಕಿಂಗ್ ಆರಂಭ ಮಾಡಲಾಗಿದೆ. ಬುಕ್ ಮೈ ಶೋ ಮತ್ತು ಪೇಟಿಎಂ ಮೂಲಕ ಟಿಕೆಟ್ ಬುಕ್ ಮಾಡಬಹುದು. ವಿಶ್ವದಾದ್ಯಂತ ತೆರೆಗೆ ಬರುತ್ತಿರುವ ಕೆಜಿಎಫ್-2 ಸಿನಿಮಾ ನೋಡಲು ಕೋಟ್ಯಂತರ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ಕೆಜಿಎಫ್ ಮೊದಲ ಭಾಗಕ್ಕಿಂತ 2ನೇ ಭಾಗ ಮತ್ತಷ್ಟು ರೋಚಕವಾಗಿದ್ದು ರಾಕಿ ಭಾಯ್ ಅನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಏಪ್ರಿಲ್ 14ರಂದು ಎಲ್ಲಾ ಕುತೂಹಲ, ನಿರೀಕ್ಷೆಗಳಿಗೆ ತೆರೆ ಬೀಳಲಿದೆ.
"