'ಕರಾವಳಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಸಂಭಾವನೆ ವಿಚಾರವಾಗಿ ನಾಯಕ ಪ್ರಜ್ವಲ್ ದೇವರಾಜ್ ಮತ್ತು ನಿರ್ಮಾಪಕರ ನಡುವೆ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ. ಈ ಒಳಜಗಳವು ಚಿತ್ರದ ಡಬ್ಬಿಂಗ್ ಮತ್ತು ನಿಗದಿತ ಬಿಡುಗಡೆಯ ಮೇಲೆ ಪರಿಣಾಮ ಬೀರಿದ್ದು, ಚಿತ್ರದ ಭವಿಷ್ಯವನ್ನು ಅನಿಶ್ಚಿತತೆಗೆ ತಳ್ಳಿದೆ.
ಬೆಂಗಳೂರು (ಜು.7): ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದಾದ ‘ಕರಾವಳಿ’ ಜುಲೈ 24 ರಂದು ತೆರೆಗೆ ಬರಲು ಸಜ್ಜಾಗಿದೆ. ಆದರೆ, ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗ ಚಿತ್ರತಂಡದ ಒಳಜಗಳ ಗಾಂಧಿನಗರದ ಬೀದಿಗೆ ಬಂದು ನಿಂತಿದೆ. ಇತ್ತೀಚೆಗೆ ನಡೆದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಹೀರೊ ಪ್ರಜ್ವಲ್ ದೇವರಾಜ್ ಗೈರಾಗಿದ್ದು, ಸಿನಿಮಾದ ಟ್ರೇಲರ್ನಲ್ಲಿ ಅವರ ಧ್ವನಿಯೂ ಇಲ್ಲದ ಕಾರಣ ಕೆರಳಿದ ಅಭಿಮಾನಿಗಳು ಚಿತ್ರತಂಡದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಮೂಲಕ ಸಿನಿಮಾದ ಒಳಗಿನ ದೊಡ್ಡ ವಿವಾದವೊಂದು ಅಧಿಕೃತವಾಗಿ ಸ್ಫೋಟಗೊಂಡಿದೆ.
ಈ ಮುನಿಸಿಗೆ ಪ್ರಮುಖ ಕಾರಣ ಸಂಭಾವನೆ ಹಾಗೂ ಸಹಾಯಕರ ಭತ್ಯೆಯ ವಿಚಾರ ಅನ್ನೋದು ಗಾಂಧಿನಗರದ ಗಲ್ಲಿಗಳ ಮಾತು. ವಿವಿಧ ಮೂಲಗಳ ಪ್ರಕಾರ, ನಿರ್ದೇಶಕ ಹಾಗೂ ನಿರ್ಮಾಪಕ ಗುರುದತ್ ಗಾಣಿಗ ಅವರು ಪ್ರಜ್ವಲ್ಗೆ 1.25 ಕೋಟಿ ರೂ. ಸಂಭಾವನೆ ನಿಗದಿಪಡಿಸಿ, ಈಗಾಗಲೇ 1 ಕೋಟಿ ರೂಪಾಯಿ ಹಣವನ್ನು ಪಾವಿತಿಯೂ ಮಾಡಿದ್ದಾರೆ. ಉಳಿದ 25 ಲಕ್ಷ ರೂ.ಗಳನ್ನು ಡಬ್ಬಿಂಗ್ ಮುಗಿದ ನಂತರ ನೀಡುವುದಾಗಿ ಗಾಣಿಗ ಹೇಳಿದ್ದಾರೆ. ಆದರೆ, ಪ್ರಜ್ವಲ್ ತಮ್ಮ ಸಹಾಯಕರಿಗಾಗಿ ಹೆಚ್ಚುವರಿಯಾಗಿ 20 ಲಕ್ಷ ರೂ. ಭತ್ಯೆ ಮತ್ತು ಜಿಎಸ್ಟಿ ಮೊತ್ತವನ್ನು ಕೇಳುತ್ತಿದ್ದಾರೆ. ಇದಕ್ಕೆ ನಿರ್ಮಾಪಕರು ಒಪ್ಪದ ಕಾರಣ ಇಬ್ಬರ ನಡುವೆ ಹಣಕಾಸಿನ ದೊಡ್ಡ ಕಂದಕ ಸೃಷ್ಟಿಯಾಗಿದೆ ಎಂದು ಹೇಳಲಾಗಿದ.ೆ
ಮತ್ತೊಂದೆಡೆ, ಸಿನಿಮಾದ ಸ್ಟಾರ್ ಕಾಸ್ಟಿಂಗ್ ವಿಚಾರದಲ್ಲೂ ಅಸಮಾಧಾನದ ಹೊಗೆಯಾಡುತ್ತಿದೆ. ಚಿತ್ರದ ಕಥೆ ಒಪ್ಪಿಸುವಾಗ ಗುರುದತ್ ಗಾಣಿಗ ಅವರು ಬೇರೊಬ್ಬ ಪ್ರಮುಖ ಸ್ಟಾರ್ ನಟನನ್ನು ಕರೆತರುವುದಾಗಿ ಪ್ರಜ್ವಲ್ಗೆ ಭರವಸೆ ನೀಡಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಆ ನಟನ ಬದಲಿಗೆ ರಾಜ್ ಬಿ. ಶೆಟ್ಟಿ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು. ಈ ದಿಢೀರ್ ಬದಲಾವಣೆ ಪ್ರಜ್ವಲ್ಗೆ ಇಷ್ಟವಿರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ, ಮಾಧ್ಯಮಗಳ ಮುಂದೆ ಪ್ರಜ್ವಲ್ ಇದನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಕರಾವಳಿ ಸಿನಿಮಾದಲ್ಲಿ ರಾಜ್ ಬಿ. ಶೆಟ್ ನಟಿಸಿರುವುದರ ಟಿ ವಿರುದ್ಧ ತಮಗೆ ಯಾವುದೇ ಸಮಸ್ಯೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಿಲೀಸ್ ಡೇಟ್ ಫಿಕ್ಸ್; ಆದರೆ ಡಬ್ಬಿಂಗ್ ಸಸ್ಪೆನ್ಸ್!
ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ (KVN Productions) ಈ ಚಿತ್ರದ ವಿತರಣೆ ಜವಾಬ್ದಾರಿ ಹೊತ್ತಿರುವುದರಿಂದ ನಿಗದಿತ ದಿನದಂದೇ ಸಿನಿಮಾ ತರಲು ಪ್ರಯತ್ನಗಳು ನಡೆಯುತ್ತಿವೆ. ಆದರೆ, ಬಾಕಿ ಹಣ ಸಿಗುವವರೆಗೂ ಪ್ರಜ್ವಲ್ ಡಬ್ಬಿಂಗ್ ಮಾಡುವ ಸಾಧ್ಯತೆ ಕಡಿಮೆ. ಒಂದು ವೇಳೆ ಅವರ ಧ್ವನಿ ಇಲ್ಲದೆ ಬೇರೆಯವರಿಂದ ಡಬ್ ಮಾಡಿಸಿ ಸಿನಿಮಾ ರಿಲೀಸ್ ಮಾಡಲು ರೆಡಿಯಾಗಿದೆ. ಹಾಗೇನಾದರೂ ಪ್ರಜ್ವಲ್ ಕಾನೂನಾತ್ಮಕವಾಗಿ ಒಪ್ಪಿಗೆ ನೀಡದಿದ್ದರೆ, ಜುಲೈ 24 ರ ಬಿಡುಗಡೆ ಭಾಗ್ಯ ಅನುಮಾನ ಎನ್ನಲಾಗುತ್ತಿದೆ. ನಿರ್ದೇಶಕ ಗುರುದತ್ ಗಾಣಿಗ ಈ ಬಿಕ್ಕಟ್ಟನ್ನು ಹೇಗೆ ಬಗೆಹರಿಸುತ್ತಾರೆ ಎಂಬುದರ ಮೇಲೆ ಚಿತ್ರದ ಭವಿಷ್ಯ ನಿರ್ಧಾರವಾಗಲಿದೆ.


