ನಟ ದರ್ಶನ್ ಅವರಿಗೆ ಇರುವ ಅಭಿಮಾನಿ ಬಳಗದ ಕ್ರೇಜ್ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ದರ್ಶನ್ ಎಲ್ಲೇ ಕಾಣಿಸಿಕೊಂಡರೂ, ಅವರ ಹೆಸರು ಕೇಳಿದರೂ ಅಭಿಮಾನಿಗಳು ‘ಡಿ-ಬಾಸ್’ ಎಂದು ಜೈಕಾರ ಹಾಕುವುದು ಸಾಮಾನ್ಯ.
ನಟ ದರ್ಶನ್ ಅವರಿಗೆ ಇರುವ ಅಭಿಮಾನಿ ಬಳಗದ ಕ್ರೇಜ್ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ದರ್ಶನ್ ಎಲ್ಲೇ ಕಾಣಿಸಿಕೊಂಡರೂ, ಅವರ ಹೆಸರು ಕೇಳಿದರೂ ಅಭಿಮಾನಿಗಳು ‘ಡಿ-ಬಾಸ್’ ಎಂದು ಜೈಕಾರ ಹಾಕುವುದು ಸಾಮಾನ್ಯ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇಂತಹ ಘೋಷಣೆಗಳಿಂದ ದೂರವಿದ್ದು, ಶಾಂತವಾಗಿರುವಂತೆ ದರ್ಶನ್ ಕುಟುಂಬದವರು ಹಲವು ಬಾರಿ ಮನವಿ ಮಾಡಿದ್ದಾರೆ. ಇದೀಗ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಕೂಡ ಅಭಿಮಾನಿಗಳಿಗೆ ಪ್ರೀತಿಯಿಂದಲೇ ಕಿವಿಮಾತು ಹೇಳಿದ್ದಾರೆ.
ಮದುವೆ ಸಮಾರಂಭದಲ್ಲಿ ಶುರುವಾಯ್ತು ‘ಡಿ-ಬಾಸ್’ ಘೋಷಣೆ!
ದರ್ಶನ್ ಕುಟುಂಬಕ್ಕೆ ಆಪ್ತರಾಗಿರುವ ಅಭಿಮಾನಿ ಜೈಕಂಠ ಶೇಖರ್ ಅವರ ಮದುವೆ ಸಮಾರಂಭಕ್ಕೆ ವಿಜಯಲಕ್ಷ್ಮಿ ದರ್ಶನ್ ಆಗಮಿಸಿದ್ದರು. ನವದಂಪತಿಗೆ ಶುಭ ಹಾರೈಸಿ ಫೋಟೋ ತೆಗೆಸಿಕೊಳ್ಳುತ್ತಿದ್ದ ವೇಳೆ ಅಲ್ಲಿದ್ದ ಕೆಲ ಅಭಿಮಾನಿಗಳು ಜೋರಾಗಿ “ಡಿ-ಬಾಸ್ಗೆ ಜೈ” ಎಂದು ಘೋಷಣೆ ಕೂಗಿದ್ದಾರೆ. ಅಭಿಮಾನಿಗಳ ಈ ಘೋಷಣೆ ಕೇಳುತ್ತಿದ್ದಂತೆ ವಿಜಯಲಕ್ಷ್ಮಿ ಕೊಂಚ ಮುಜುಗರಕ್ಕೊಳಗಾಗಿದ್ದಾರೆ. ಬಳಿಕ ಯಾವುದೇ ಕೋಪವಿಲ್ಲದೆ, ನಗುಮುಖದಲ್ಲೇ ಅಭಿಮಾನಿಗಳಿಗೆ ಈ ರೀತಿ ಹೇಳಿದ್ದಾರೆ ಎನ್ನಲಾಗಿದೆ.
‘ಇದು ಮದುವೆ ಮನೆ, ಇಲ್ಲೂ ಬೇಕಾ?’
“ಇದು ಮದುವೆ ಮನೆ, ಇಲ್ಲೂ ಇದು ಬೇಕಾ? ಎಲ್ಲಾ ಕಡೆಯೂ ಇದೇ ತೊಂದರೆಯಾಗುತ್ತಿದೆ. ದಯವಿಟ್ಟು ಇದನ್ನು ನೀವು ನಿಲ್ಲಿಸಬೇಕು,” ಎಂದು ವಿಜಯಲಕ್ಷ್ಮಿ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ವಿಜಯಲಕ್ಷ್ಮಿ ಅವರ ಈ ಮಾತಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಭಿಮಾನಿಗಳ ವರ್ತನೆಗೆ ಕೋಪದಿಂದ ಪ್ರತಿಕ್ರಿಯಿಸುವ ಬದಲು, ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಪ್ರೀತಿಯಿಂದಲೇ ಎಚ್ಚರಿಕೆ ನೀಡಿರುವುದು ಹಲವರ ಗಮನ ಸೆಳೆದಿದೆ. ವಿಡಿಯೋಗೆ ಪ್ರತಿಕ್ರಿಯಿಸಿರುವ ಕೆಲ ಅಭಿಮಾನಿಗಳು, “ಅತ್ತಿಗೆ ಹೇಳಿದ್ದು ಸರಿಯಾಗಿದೆ. ಸದ್ಯಕ್ಕೆ ನಾವು ಶಾಂತವಾಗಿರಬೇಕು” ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಡಿಕೆಶಿ ಕೂಡ ಈ ಹಿಂದೆ ಎಚ್ಚರಿಸಿದ್ದರು
ಇತ್ತೀಚೆಗೆ ರಾಮನಗರದ ಕರಗ ಮಹೋತ್ಸವದ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾಷಣ ಮಾಡುತ್ತಿದ್ದ ವೇಳೆ ಕೆಲ ದರ್ಶನ್ ಅಭಿಮಾನಿಗಳು ‘ಡಿ-ಬಾಸ್’ ಎಂದು ಘೋಷಣೆ ಕೂಗಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಡಿಕೆಶಿ, ಅಭಿಮಾನಿಗಳ ಇಂತಹ ವರ್ತನೆಯಿಂದ ದರ್ಶನ್ಗೆ ಮತ್ತಷ್ಟು ಸಂಕಷ್ಟ ಎದುರಾಗಬಹುದು ಎಂದು ಎಚ್ಚರಿಕೆ ನೀಡಿದ್ದರು. ಇದೀಗ ಅದೇ ರೀತಿಯಲ್ಲಿ ವಿಜಯಲಕ್ಷ್ಮಿ ದರ್ಶನ್ ಕೂಡ ಅಭಿಮಾನಿಗಳಿಗೆ ಜೈಕಾರ, ಶೋ ಆಫ್ಗಿಂತ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಶಾಂತವಾಗಿರುವುದು ಮುಖ್ಯ ಎಂಬ ಸಂದೇಶ ನೀಡಿದ್ದಾರೆ. ಹೀಗಾಗಿ ಅವರ ಈ ಕಿವಿಮಾತು ಇದೀಗ ದರ್ಶನ್ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.


