'ಕಾಂತಾರ' ಖ್ಯಾತಿಯ ರಿಷಬ್ ಶೆಟ್ಟಿ ಅವರು ಹೊಂಬಾಳೆ ಫಿಲ್ಮ್ಸ್ ನಂತರ ತಮ್ಮ ಆಪ್ತ ಗೆಳೆಯ ರಾಜ್ ಬಿ. ಶೆಟ್ಟಿ ಮತ್ತು ನಟಿ ರುಕ್ಮಿಣಿ ವಸಂತ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿರುವುದು ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ. 

ಬೆಂಗಳೂರು (ಮಾ.27): ಕನ್ನಡ ಚಿತ್ರರಂಗದಲ್ಲಿ ಏನಾಗ್ತಿದೆ? ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ವದಂತಿಗಳ ಬೆನ್ನಲ್ಲೇ, ಸ್ಯಾಂಡಲ್‌ವುಡ್‌ನ 'ಡಿವೈನ್ ಸ್ಟಾರ್' ಇದೀಗ ತಮ್ಮ ಆಪ್ತ ಗೆಳೆಯ ರಾಜ್ ಬಿ. ಶೆಟ್ಟಿ ಹಾಗೂ ನಟಿ ರುಕ್ಮಿಣಿ ವಸಂತ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿರುವುದು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.

ಕಳೆದ ಕೆಲವು ದಿನಗಳಿಂದ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಚರ್ಚೆ ಜೋರಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ರಿಷಬ್ ಮೊದಲು 'ಹೊಂಬಾಳೆ ಫಿಲ್ಮ್ಸ್' ಮತ್ತು 'ಕಾಂತಾರ' ಅಧಿಕೃತ ಖಾತೆಗಳನ್ನು ಅನ್‌ಫಾಲೋ ಮಾಡಿದ್ದರು. ಈಗ ಅಚ್ಚರಿ ಎಂಬಂತೆ, ತಮ್ಮ ಆತ್ಮೀಯ ಗೆಳೆಯ ರಾಜ್ ಬಿ. ಶೆಟ್ಟಿ ಮತ್ತು 'ಕಾಂತಾರ-1' ನಾಯಕಿ ರುಕ್ಮಿಣಿ ವಸಂತ್ ಅವರನ್ನೂ ಅನ್‌ಫಾಲೋ ಮಾಡಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಅಕೌಂಟ್‌ಗಳನ್ನು ರಿಷಬ್ ಪಟ್ಟಿಯಿಂದ ತೆಗೆದುಹಾಕಿದ್ದಾರೆ ಎನ್ನಲಾಗಿದೆ.

ಮನಸ್ತಾಪದ ಊಹಾಪೋಹಗಳು

ರಿಷಬ್ ಮತ್ತು ರಾಜ್ ಬಿ. ಶೆಟ್ಟಿ ನಡುವೆ ಬಿರುಕು ಮೂಡಿದೆ ಎಂಬ ಸುದ್ದಿ ಹಳೆಯದಾದರೂ, ಇತ್ತೀಚೆಗೆ ರಾಜ್ ಈ ಬಗ್ಗೆ ಸ್ಪಷ್ಟನೆ ನೀಡಿ "ನಮ್ಮ ನಡುವೆ ಯಾವುದೇ ಸಮಸ್ಯೆಯಿಲ್ಲ" ಎಂದಿದ್ದರು. ಆದರೆ ರಿಷಬ್ ಅವರ ಈ ಸಡನ್ ಅನ್‌ಫಾಲೋ ನಡೆ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿಶೇಷವೆಂದರೆ, ರಾಜ್ ಮತ್ತು ರುಕ್ಮಿಣಿ ಇಬ್ಬರೂ ಇಂದಿಗೂ ರಿಷಬ್ ಅವರನ್ನು ಫಾಲೋ ಮಾಡುತ್ತಿದ್ದಾರೆ.

ಹೊಸ ಸಿನಿಮಾದ ಸುಳಿವು

ಯುಗಾದಿ ಹಬ್ಬದಂದು ರಿಷಬ್ "೨ನೇ ಅಧ್ಯಾಯ ಆರಂಭ" ಎಂದು ಪೋಸ್ಟರ್ ಹಂಚಿಕೊಂಡಿದ್ದರು. ಇದು 'ಕಾಂತಾರ' ಸರಣಿಯದ್ದೇ ಅಥವಾ 'ಸರಕಾರಿ ಹಿರಿಯ ಪ್ರಾಥಮಿಕ ಶಾಲೆ' ಚಿತ್ರದ ಮುಂದುವರಿದ ಭಾಗವೇ ಎಂಬ ಗೊಂದಲ ಮುಂದುವರಿದಿದೆ. ಹೊಂಬಾಳೆ ಬ್ಯಾನರ್ ಬದಲಿಗೆ ರಿಷಬ್ ತಮ್ಮದೇ ಸ್ವಂತ ಬ್ಯಾನರ್ ಅಡಿಯಲ್ಲಿ ಈ ಹೊಸ ಸಿನಿಮಾವನ್ನು ಘೋಷಿಸಿರುವುದು ಭಿನ್ನಾಭಿಪ್ರಾಯದ ವದಂತಿಗಳಿಗೆ ಮತ್ತಷ್ಟು ಬಲ ನೀಡಿದೆ.

ಸದ್ಯ ರಿಷಬ್ ಶೆಟ್ಟಿ 'ಜೈ ಹನುಮಾನ್' ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅತ್ತ ರುಕ್ಮಿಣಿ ವಸಂತ್ ಅವರು ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ಜ್ಯೂ. ಎನ್‌ಟಿಆರ್ ಜೋಡಿಯಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ. ಒಟ್ಟಿನಲ್ಲಿ 'ಕಾಂತಾರ' ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ತಮ್ಮ ಆಪ್ತ ಬಳಗದಿಂದ ದೂರವಾಗುತ್ತಿದ್ದಾರಾ ಅಥವಾ ಇದು ಕೇವಲ ಅವರ ಟೀಮ್ ಮಾಡುತ್ತಿರುವ ಬದಲಾವಣೆಯೇ ಎಂಬುದು ಕಾಲವೇ ಉತ್ತರಿಸಬೇಕಿದೆ.