Asianet Suvarna News Asianet Suvarna News

ಯಪ್ಪಾ..ಅತ್ತೆ ಮನೇಲಿ ಸಿಕ್ಕಾಪಟ್ಟೆ ನೊಣದ ಕಾಟ, ತವರು ಮನೆಗೆ ನವ ವಧು ರಿಟರ್ನ್‌ !

ಮದುವೆ ಅನ್ನೋದು ಸುಂದರವಾದ ಸಂಬಂಧ ಅನ್ನೋದೇನೋ ನಿಜ. ಆದ್ರೆ ಮದುವೆಯಾಗಿ ಹೋಗೋ ಹುಡುಗಿ ಸಂಪೂರ್ಣವಾಗಿ ಅಪರಿಚಿತವಾಗಿರುವ ಸ್ಥಳಕ್ಕೆ, ಹೊಸ ಜನರಿಗೆ ಹೊಂದಿಕೊಳ್ಳಬೇಕಾಗುತ್ತದೆ. ಕೆಲವೊಬ್ಬರು ಹೀಗೆ ಹೊಸ ಸ್ಥಳ ಹೊಂದಾಣಿಕೆಯಾಗದ ಕಾರಣ ಹಿಂತಿರುಗಿ ಬರುತ್ತಾರೆ. ಹಾಗೇ ಇಲ್ಲೊಬ್ಬ ನವವಧು ತವರು ಮನೆಗೆ ಬಂದಿದ್ದಾಳೆ. ಆದ್ರೆ ಆಕೆ ಹಿಂತಿರುಗಿ ಬಂದಿರೋ ಕಾರಣ ಮಾತ್ರ ವಿಚಿತ್ರವಾಗಿದೆ.

Brides In UP Villages Desert Their Husbands And Return Home, Fed Up Of Flies Vin
Author
First Published Dec 7, 2022, 11:39 AM IST

ಮದುವೆ (Marriage)ಯಾದ ಬಳಿಕ ಹೆಣ್ಣು ಆ ನಂತರದ ಜೀವನವನ್ನು ಗಂಡನ ಮನೆಯಲ್ಲಿಯೂ ಕಳೆಯಬೇಕು ಅನ್ನೋದು ಸಾಮಾನ್ಯ ರೂಢಿ. ಆದ್ರೆ ಮದುವೆ ಅನ್ನೋದು ಎರಡು ಕುಟುಂಬಗಳ ನಡುವಿನ ಸಂಬಂಧ (Relationship)ವಾಗಿದ್ದರೂ ಹೆಣ್ಣು ಹೆಚ್ಚು ಹೊಸ ಮನೆಗೆ, ಹೊಸ ಸ್ಥಳಕ್ಕೆ ಹೊಂದಿಕೊಳ್ಳಬೇಕಾಗುತ್ತದೆ.  ಉಳಿದವರೆಲ್ಲರೂ ಬಂದು ಹೋಗುವ ಅತಿಥಿಗಳು. ಆಕೆ ಮಾತ್ರ ಹುಟ್ಟಿನಿಂದಲೇ ತನ್ನದು ಎಂದು ಅಂದುಕೊಂಡಿದ್ದ ಮನೆಯನ್ನು ಬಿಟ್ಟು ಗಂಡನ ಮನೆಯಲ್ಲಿ ಹೊಸ ಜೀವನ ನಡೆಸಬೇಕಾಗುತ್ತದೆ. ಹೊಸ ಜನರಿಗೆ ಹೊಂದಿಕೊಳ್ಳಬೇಕಾಗುತ್ತದೆ. ಹೀಗೆ ಹೊಂದಿಕೊಳ್ಳುವುದು ಎಲ್ಲರ ಪಾಲಿಗೆ ಸುಲಭವಲ್ಲ. ಆಗ ತಾನೇ ಪರಿಚಯವಾಗುತ್ತಿರುವ ಜನರ ಅಭಿರುಚಿ, ಕೋಪ, ಸಹನೆ ಎಲ್ಲದರ ಬಗ್ಗೆಯೂ ತಿಳಿದುಕೊಂಡಿರಬೇಕಾಗುತ್ತದೆ. 

ಉತ್ತರಪ್ರದೇಶದ ಬದೈಯಾನ್ ಗ್ರಾಮ ತೊರೆಯುತ್ತಿರುವ ವಧುಗಳು
ಇಂಥಾ ಸಂದರ್ಭದಲ್ಲಿಯೇ ಕೆಲವೊಬ್ಬರಿಗೆ ಅತ್ತೆಮನೆ ಅಡ್ಜೆಸ್ಟ್ ಆಗುವುದಿಲ್ಲ. ಕೆಲವೊಬ್ಬರು ಹೊಂದಾಣಿಕೆಯಾಗದಿದ್ದರೂ ಹಾಗೋ ಹೀಗೋ ಜೀವನ ಸಾಗಿಸುತ್ತಾರೆ. ಇನ್ನು ಕೆಲವರೊಬ್ಬರು ಗಂಡ (Husband)ನನ್ನು ಕರೆದುಕೊಂಡು ಅತ್ತೆ ಮನೆ ಬಿಟ್ಟು ಹೊರಗೆ ಬಂದು ಪ್ರತ್ಯೇಕ ಮನೆ ಬಿಡುತ್ತಾರೆ. ಮದುವೆಯಾಗಿ ಹೋಗುವ ಹುಡುಗಿಯರು ಅತ್ತೆ ಮನೆ ಬಿಟ್ಟು ಬರಲು ಹಲವಾರು ಕಾರಣಗಳು ಇರುತ್ತವೆ. ಕೆಲವೊಬ್ಬರು ಅತ್ತೆ-ಮಾವನ ಸೇವೆ ಮಾಡೋಕಾಗಲ್ಲ ಅಂತ ಹೊರಬರ್ತಾರೆ, ಇನ್ನು ಕೆಲವರು ಗಂಡನ ಮನೆ ಚಿಕ್ಕದಾಗಿದೆ ಅಂತ ಇಂಥಾ ನಿರ್ಧಾರ ತೆಗೆದುಕೊಳ್ತಾರೆ. ಹಳ್ಳಿಯ (Village) ಕಡೆ ಮದುವೆಯಾಗಿ ಹೋದವರು ಸಿಟಿ ಸಮೀಪವಿಲ್ಲ ಎಂಬ ಕಾರಣಕ್ಕೆ ಮನೆ ತೊರೆಯುತ್ತಾರೆ. ಹೀಗೆ ಒಬ್ಬೊಬ್ಬರಿಗೆ ಒಂದೊಂದು ಕಾರಣವಿರುತ್ತದೆ. ಆದ್ರೆ ಉತ್ತರಪ್ರದೇಶದಲ್ಲಿ ಮಾತ್ರ ನವವಧು (Bride) ಅತ್ತೆ ಮನೆ ಬಿಟ್ಟು ಬಂದಿರೋ ಕಾರಣ ವಿಚಿತ್ರವಾಗಿದೆ.

11 ಲಕ್ಷ ರೂ. ವರದಕ್ಷಿಣೆಯನ್ನು ವಧುವಿನ ಪೋಷಕರಿಗೇ ಹಿಂತಿರುಗಿಸಿದ ವರ !

ಅತ್ತೆ ಮನೆಯಲ್ಲಿ ನೊಣದ ಕಾಟವಂತೆ, ತವರಿಗೆ ಮರಳಿದ ವಧು !
ನಂಬೋಕೆ ಕಷ್ಟವೆನಿಸಿದರೂ ಇದು ನಿಜ. ಉತ್ತರಪ್ರದೇಶದ ಹರ್ದೋಯ್‌ನ ಅಹಿರೋರಿ ಬ್ಲಾಕ್‌ನ ಹಳ್ಳಿಗಳಲ್ಲಿ ಸೊಸೆಯರು ನೊಣಗಳಿಂದ (Flies) ಬೇಸತ್ತು ತಮ್ಮ ತವರು ಮನೆಗೆ ಮರಳುತ್ತಿದ್ದಾರೆ. ಬದೈಯಾನ್ ಪೂರ್ವ ಗ್ರಾಮದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಕನಿಷ್ಠ ಆರು ವಧುಗಳು  ತಮ್ಮ ತಾಯಿಯ ಮನೆಗೆ ಮರಳಿದ್ದಾರೆ. ಅವರ ಗಂಡಂದಿರು ಹಿಂತಿರುಗುವಂತೆ ಮನವೊಲಿಸಲು ಪ್ರಯತ್ನಿಸಿದರೂ ಆ ಶ್ರಮ ವ್ಯರ್ಥವಾಯಿತು. ವಧುಗಳು ತಮ್ಮ ಗಂಡಂದಿರನ್ನು ತಮ್ಮ ಹಳ್ಳಿಗಳನ್ನು ತೊರೆಯುವಂತೆ ಅಥವಾ ಅವರನ್ನು ಮರೆತುಬಿಡುವಂತೆ ಕೇಳಿಕೊಂಡರು.

ಬದಾಯಿಯನ್ ಪೂರ್ವಾ, ಕುಯಿಯಾನ್, ಪಟ್ಟಿ, ದಹೀ, ಸೇಲಂಪುರ್, ಫತೇಪುರ್, ಝಲ್ ಪೂರ್ವಾ, ನಯಾ ಗಾಂವ್, ದೇವರಿಯಾ ಮತ್ತು ಏಕಘರಾ ಗ್ರಾಮಗಳು ನೊಣಗಳಿಂದ ಮುತ್ತಿಕೊಂಡಿವೆ ಎಂದು ತಿಳಿದುಬಂದಿದೆ. ಹಳ್ಳಿಗಳಲ್ಲಿ ಒಂಟಿ ಪುರುಷರು (Men) ವಧುಗಳನ್ನು ಹುಡುಕಲು ಕಷ್ಟಪಡುತ್ತಿದ್ದಾರೆ. ಅಕ್ಕನ ಅಳಿಯಂದಿರು ಬಂದಾಗ ಅವರು ತಂದಿದ್ದ ಸಿಹಿತಿಂಡಿಗಳ ಮೇಲೆ ನೊಣಗಳು ದಾಳಿ ನಡೆಸಿವೆ ಎಂದು ಸ್ಥಳೀಯ ಧರ್ಮೇಂದ್ರ ಎಂಬುವರು ತಿಳಿಸಿದ್ದಾರೆ. ವರನ ಕಡೆಯವರು ತಮ್ಮ ಮಗನಿಗೆ ಮದುವೆ ಮಾಡಲು ನಿರಾಕರಿಸಿದರು. ಅಜಯ್ ವರ್ಮಾ ಮತ್ತು ರಾಮ್ಖಿಲಾವನ್ ಅವರ ಹೆಣ್ಣುಮಕ್ಕಳ ಮದುವೆಗಳು ನಿಶ್ಚಿತವಾಗಿತ್ತು. ಆದ್ರೆ ನೊಣದ ಕಾಣದಿಂದ ಇದನ್ನು ರದ್ದುಗೊಳಿಸಲಾಯಿತು.

ಬೆಟ್ ಕಟ್ಟಿ ಕಿಸ್ ಕೊಟ್ಟ ವರ, ಸಿಟ್ಟಿಗೆದ್ದ ವಧು ಪೊಲೀಸರನ್ನು ಕರೆದಾಗ ಬೆಪ್ಪಾದ !

ನೊಣದ ಕಾಟದಿಂದ ಮದುವೆಯೇ ನಡೆಯುತ್ತಿಲ್ಲ !
2014ರಲ್ಲಿ ಈ ಪ್ರದೇಶದಲ್ಲಿ ವಾಣಿಜ್ಯ ಕೋಳಿ ಸಾಕಣೆ ಕೇಂದ್ರವನ್ನು ತೆರೆದ ನಂತರ ಹಳ್ಳಿಗಳು ನೊಣಗಳ ಹಿಂಡುಗಳಾಗಿ ಮಾರ್ಪಟ್ಟಿವೆ. ಕಳೆದ ಮೂರು ವರ್ಷಗಳಲ್ಲಿ ನೊಣಗಳ ಸಂಖ್ಯೆ ಸಾವಿರಕ್ಕೆ ಏರಿದ್ದರಿಂದ ಪರಿಸ್ಥಿತಿ ಹದಗೆಟ್ಟಿದೆ. ಬದಾಯಿಯನ್ ಪುರವಾ ನಿವಾಸಿಗಳು ಗ್ರಾಮದ ಹೊರಗೆ ಸಮಸ್ಯೆಯ ವಿರುದ್ಧ ಪ್ರತಿಭಟನೆ (Protest) ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಲು ಮಹಿಳೆಯರು ಮಧ್ಯಾಹ್ನದ ವೇಳೆಗೆ ತಮ್ಮ ಮನೆಕೆಲಸಗಳನ್ನು ಮುಗಿಸುತ್ತಾರೆ ಎಂದು ತಿಳಿದುಬಂದಿದೆ.

ಗ್ರಾಮ ಪ್ರಧಾನ ವಿಕಾಸ್ ಕುಮಾರ್ ಮಾತನಾಡಿ, ನೊಣಗಳ ಕಾಟ ಎಷ್ಟು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದರೆ ಸಂಬಂಧದಲ್ಲಿ ಜಗಳಕ್ಕೆ ಕಾರಣವಾಗಿದೆ. ಕಳೆದ ವರ್ಷ ಮೂವರು ಗಂಡು, ನಾಲ್ವರು ಹುಡುಗಿಯರಿಗೆ ಹೇಗೋ ಮದುವೆ ಮಾಡಿಕೊಟ್ಟಿದ್ದರು. ಆದರೆ ಊರಿಗೆ ಬಂದ ಮೂವರು ವಧುಗಳು ತಮ್ಮ ತವರಿಗೆ ಮರಳಿದ್ದಾರೆ. ಮದುವೆಯ ನಂತರ ಊರು ಬಿಟ್ಟ ಹೆಣ್ಣುಮಕ್ಕಳು ಮತ್ತೆ ಮರಳಿ ಬರುತ್ತಿಲ್ಲ. ಈ ವರ್ಷ ಯಾವುದೇ ಮದುವೆ ನಡೆದಿಲ್ಲ ಎಂದು ತಿಳಿಸಿದ್ದಾರೆ. .

Follow Us:
Download App:
  • android
  • ios