ಉತ್ತರ ಪ್ರದೇಶದ ರಾಂಪುರದಲ್ಲಿ, ಇಬ್ಬರು ಹೆಂಡತಿಯರ ನಿತ್ಯದ ಜಗಳಕ್ಕೆ ಅಂತ್ಯ ಹಾಡಲು ಗ್ರಾಮ ಪಂಚಾಯ್ತಿಯು ವಿಚಿತ್ರ ತೀರ್ಪೊಂದನ್ನು ನೀಡಿದೆ. ಗಂಡನ ಸಮಯವನ್ನು ಇಬ್ಬರು ಪತ್ನಿಯರ ನಡುವೆ ಸಮನಾಗಿ ಹಂಚಿ, ಭಾನುವಾರ ಗಂಡನಿಗೆ ಸ್ವಾತಂತ್ರ ನೀಡಲಾಗಿದೆ...

ಇಬ್ಬರು ಹೆಂಡಿರ ಜಗಳ: ಸಮಸ್ಯೆ ಬಗೆಹರಿಸಲು ಗಂಡನನ್ನೇ ಪಾಲು ಮಾಡಿದ ಮುಖಂಡರು

ರಾಂಪುರ: ಸಿನಿಮಾ ಶೈಲಿಯ ಘಟನೆಯೊಂದು ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಎರಡು ಮದುವೆಯಾಗಿದ್ದು, ಆತನ ಜೊತೆ ಸಮಯ ಕಳೆಯುವುದಕ್ಕಾಗಿ ಇಬ್ಬರು ಹೆಂಡಿರ ಮಧ್ಯೆ ಪ್ರತಿದಿನವೂ ಗಲಾಟೆ ನಡೆಯುತ್ತಿತ್ತು. ಈ ಇಬ್ಬರು ಹೆಂಡಿರ ಮುದ್ದಿನ ಗಂಡನ ಸಂಸಾರದ ಗಲಾಟೆಯಿಂದ ಬೇಸತ್ತು ಹೋದ ಗ್ರಾಮಸ್ಥರು ಈ ಸಮಸ್ಯೆಗೊಂದು ಮುಕ್ತಿ ಕಾಣಿಸಬೇಕು ಎಂದು ಪಂಚಾಯ್ತಿ ನಡೆಸಿದ್ದು, ವಿಲಕ್ಷಣವಾದ ನಿರ್ಧಾರ ಕೈಗೊಂಡಿದ್ದಾರೆ. ಇಬ್ಬರು ಹೆಂಡಿರಿಗಾಗಿ ಗಂಡನ ಆಸ್ತಿ ಪಾಲು ಮಾಡುವ ಬದಲು ಗ್ರಾಮದ ಮುಖಂಡರು ಗಂಡನನ್ನೇ ಪಾಲು ಮಾಡಿದ್ದಾರೆ. ಹೌದು ಅಚ್ಚರಿ ಎನಿಸಿದರು ಸತ್ಯ ಗಂಡ ಇಬ್ಬರಿಗೂ ಸಮವಾಗಿ ಸಮಯ ನೀಡಬೇಕು ಎಂಬ ಉದ್ದೇಶದಿಂದ ಹಾಗೂ ಹೆಚ್ಚು ಕಡಿಮೆ ಎಂದು ಹೆಂಡತಿಯರು ಜಗಳ ಮಾಡಬಾರದು ಎಂದು ಗ್ರಾಮದ ಮುಖ್ಯಸ್ಥರು ಗಂಡನನ್ನು ಎರಡು ಪಾಲುಗಳಾಗಿ ವಿಂಗಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಅಜಿಮ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಗ್ಲಿಯಾ ಅಖಿಲ್‌ ಗ್ರಾಮದಲ್ಲಿಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಎರಡು ಮದುವೆಯಾಗಿದ್ದ. ಮೊದಲನೇಯದ್ದು ಕುಟುಂಬವೇ ನಿಶ್ಚಯಿಸಿದ ವಿವಾಹವಾಗಿದ್ದರೆ, ಮತ್ತೊಂದು ಪ್ರೇಮ ವಿವಾಹವಾಗಿತ್ತು. ಇಬ್ಬರು ಮಹಿಳೆಯರು ಗಂಡನ ಮೇಲಿನ ತಮ್ಮ ಹಕ್ಕಿಗಾಗಿ ಗಲಾಟೆ ಮಾಡುತ್ತಿದ್ದರು. ಹೀಗಾಗಿ ಇಬ್ಬರ ನಡುವೆ ಸಿಲುಕಿ ಗಂಡ ನಲುಗಿ ಹೋಗಿದ್ದ. ಪ್ರತಿದಿನವೂ ಮನೆಯಲ್ಲಿ ದೊಡ್ಡ ಗಲಾಟೆ ನಡೆದಿತ್ತು. ಹೀಗಾಗಿ ನೆರೆಹೊರೆಯ ಮನೆಯವರಿಗೆ ಇದೊಂದು ಬಿಟ್ಟಿ ಮನೋರಂಜನೆಯಾಗಿತ್ತು. ನೆರೆಹೊರೆಯವರಿಗೆ ಸಂಜೆಯ ಮನರಂಜನೆಗಾಗಿ ಟಿವಿ ಅಗತ್ಯವಿಲ್ಲದಂತಾಯಿತು ಎಂದು ನಿವಾಸಿಗಳು ಹೇಳುತ್ತಾರೆ. ಪ್ರತಿದಿನವೂ ಗಲಾಟೆ ನಡೆಯಲು ಶುರುವಾದಾಗ ಇಬ್ಬರು ಪತ್ನಿಯರು ಪತಿಯನ್ನು ಎಳೆದುಕೊಂಡು ಅಜೀಮ್ ನಗರ ಪೊಲೀಸ್ ಠಾಣೆಗೆ ಮೆರವಣಿಗೆ ನಡೆಸಿ, ತಮ್ಮ ಕಸ್ಟಡಿಗೆ ನೀಡುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮೊದಲ ರಾತ್ರಿಗೂ ಮೊದಲೇ ಮಗುವಿಗೆ ಜನ್ಮ ನೀಡಿದ ವಧು

ಯಾವುದೇ ರೂಲ್ಸ್‌ ಬುಕ್‌ನಲ್ಲಿ ಇರದ ಈ ಸಮಸ್ಯೆಯನ್ನು ಕಂಡ ಪೊಲೀಸರು ಈ ವಿಚಾರವನ್ನು ಗ್ರಾಮಸ್ಥರಿಗೆ ಬಿಡುವುದು ಉತ್ತಮ ಎಂದು ನಿರ್ಧಾರ ಮಾಡಿದರು. ನಂತರ ಇಬ್ಬರೂ ಪತ್ನಿಯರು ಮತ್ತು ಅವರ ಕುಟುಂಬಗಳ ಸಮ್ಮುಖದಲ್ಲಿ ಗ್ರಾಮಸ್ಥರು ಪಂಚಾಯ್ತಿ ಮಾಡಿದ್ದು, ಇವರ ಸಮಸ್ಯೆ ಬಗೆಹರಿಸುವುದಕ್ಕಾಗಿ ಗ್ರಾಮದ ಮುಖಂಡರು ವಿಚಿತ್ರವೆನಿಸುವ ನಿರ್ಧಾರವನ್ನು ಕೈಗೊಂಡರು.

ಇದನ್ನೂ ಓದಿ: ದಿನದಿಂದ ದಿನಕ್ಕೆ ಏರುತ್ತಲೇ ಇದೆ ಚಿನ್ನದ ದರ: ಏಮ್ಸ್ ಆಸ್ಪತ್ರೆಯ ಲಿಫ್ಟ್‌ನಲ್ಲೇ ಮಹಿಳೆಯ ಚಿನ್ನದ ಕರಿಮಣಿ ಕಸಿದ ಕಳ್ಳ: ವೀಡಿಯೋ

ಗ್ರಾಮದ ಮುಖಂಡರು ಮಾಡಿದ ಬರಹ ರೂಪದ ನಿಯಮದ ಪ್ರಕಾರ ಆ ವ್ಯಕ್ತಿ ತನ್ನ ಮೊದಲ ಹೆಂಡತಿ ಬಳಿ ಸೋಮವಾರ, ಮಂಗಳವಾರ, ಬುಧವಾರ ಇದ್ದಾರೆ. ಗುರುವಾರ ಶುಕ್ರವಾರ ಶನಿವಾರ 2ನೇ ಪತ್ನಿ ಜೊತೆ ಇರಬೇಕು. ಹಾಗೂ ಭಾನುವಾರ ಆತನಿಗೆ ಇಷ್ಟಬಂದಂತೆ ಇರಬಹುದು, ಭಾನುವಾರ ಆತನಿಗೆ ಸ್ವಾತಂತ್ರ ದಿನ. ಆದರೆ ಉಳಿದ ಆರು ದಿನಗಳನ್ನು ಆತ ಗ್ರಾಮದ ಮುಖಂಡರು ಮಾಡಿದ ನಿರ್ಧಾರದಂತೆ ಕೈಗೊಳ್ಳಬೇಕು ಎಂದು ಘೋಷಣೆ ಮಾಡಿದರು.

ನಂತರ ಈ ಒಪ್ಪಂದವನ್ನು ಕಾಗದದ ಮೇಲೆ ಬರೆದು ಆ ವ್ಯಕ್ತಿ ಮತ್ತು ಇಬ್ಬರೂ ಪತ್ನಿಯರು ಸಹಿ ಹಾಕಿದರು. ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದನ್ನು ಅತ್ಯಂತ ಸೃಜನಶೀಲ ನಿರ್ಧಾರ ಎಂದು ನೆಟ್ಟಿಗರು ಕರೆದಿದ್ದಾರೆ. ಈ ವಿಚಾರವೀಗ ಟಾಕ್ ಆಫ್ ದಿ ಟೌನ್ ಆಗಿದ್ದು, ಜನ ವಿವಿಧ ರೀತಿಯ ಕಾಮೆಂಟ್ ಮಾಡ್ತಿದ್ದಾರೆ. ಹೀಗಿದ್ದುಇದು ಅನೇಕರ ಕನಸು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಮದುವೆಯ ಗೋಜಿಗೆ ಹೋಗಬೇಡಿ ಸಿಂಗಲ್ ಆಗಿರಿ ಸುಖವಾಗಿರಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅವರಿಗೆ ವೀಕಾಫ್ ಕೂಡ ಕೊಡಲಾಗಿದೆ ಎಂದು ಒಬ್ಬರು ಹಾಸ್ಯಮಯವಾಗಿ ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಶಿವ ಪಾರ್ವತಿಯ ಮದುವೆಯಾದ ತ್ರಿಯುಗಿನಾರಾಯಣ ದೇಗುಲದಲ್ಲಿ ಹಿಮಪಾತದ ನಡುವೆಯೂ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ