ವಿದೇಶದಲ್ಲಿ (ಉದಾ: ನೇಪಾಳ) ಭಾರತೀಯ ಪ್ರವಾಸಿಗರು ಮೃತಪಟ್ಟರೆ, ಅವರ ಟರ್ಮ್ ಇನ್ಶುರೆನ್ಸ್ ಹಣವನ್ನು ಕ್ಲೈಮ್ ಮಾಡಬಹುದು. ಮೃತದೇಹ ಸಿಗದಿದ್ದರೂ, ನೈಸರ್ಗಿಕ ವಿಕೋಪದಂತಹ ಸಂದರ್ಭಗಳಲ್ಲಿ ಸರ್ಕಾರದ ವಿಶೇಷ ಮಾರ್ಗಸೂಚಿಗಳ ಅಡಿಯಲ್ಲಿ ಕ್ಲೈಮ್ ಇತ್ಯರ್ಥಪಡಿಸಲು ಅವಕಾಶವಿದೆ.

ನೇಪಾಳದಲ್ಲಿ ಸಂಭವಿಸುವ ಹಠಾತ್ ಪ್ರವಾಹ ಅಥವಾ ನೈಸರ್ಗಿಕ ವಿಕೋಪಗಳಂತಹ ಕಷ್ಟಕರ ಸನ್ನಿವೇಶಗಳಲ್ಲಿ ಭಾರತೀಯ ಪ್ರವಾಸಿಗರು ಸಿಲುಕಿಕೊಂಡಾಗ, ಅವರ ಕುಟುಂಬಗಳಿಗೆ ಆರ್ಥಿಕ ಹಾಗೂ ಕಾನೂನಾತ್ಮಕ ಭದ್ರತೆಯ ಕುರಿತು ಹಲವು ಅನುಮಾನಗಳು ಮೂಡುವುದು ಸಹಜ. ವಿದೇಶಿ ನೆಲದಲ್ಲಿ ದುರಂತ ಸಂಭವಿಸಿದರೆ ಭಾರತದಲ್ಲಿ ಪಡೆದ ಟರ್ಮ್ ಇನ್ಶುರೆನ್ಸ್ (Term Insurance) ವಿಮೆ ಸಿಗುತ್ತದೆಯೇ, ದೇಹ ಸಿಗದಿದ್ದರೆ ಕ್ಲೈಮ್ ಮಾಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ಸರಳವಾಗಿ ಕೆಳಗೆ ವಿವರಿಸಲಾಗಿದೆ.

ವಿದೇಶದಲ್ಲಿ ಸಾವು ಸಂಭವಿಸಿದರೆ ವಿಮೆ ಸಿಗುತ್ತದೆಯೇ?

ಹೌದು, ಸಿಗುತ್ತದೆ. ಭಾರತದ ಹೊರಗೆ ಸಾವು ಸಂಭವಿಸಿದೆ ಎಂಬ ಒಂದೇ ಕಾರಣಕ್ಕೆ ವಿಮಾ ಕಂಪನಿಯು ಕ್ಲೈಮ್ ಅನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲು ಬರುವುದಿಲ್ಲ. ಅದು ಮರಣ ಹೊಂದಿದ ವ್ಯಕ್ತಿಯ ಟರ್ಮ್ ಇನ್ಶುರೆನ್ಸ್ ಪಾಲಿಸಿಯು ಆ ಸಮಯದಲ್ಲಿ ಚಾಲ್ತಿಯಲ್ಲಿರಬೇಕು (ಸಕ್ರಿಯವಾಗಿರಬೇಕು). ವಿದೇಶದಲ್ಲಿ ಸಾವು ಸಂಭವಿಸಿರುವುದರಿಂದ, ವಿಮಾ ಕಂಪನಿಯು ಘಟನೆಯ ದೃಢೀಕರಣಕ್ಕಾಗಿ ಕೆಲವು ಹೆಚ್ಚುವರಿ ಅಧಿಕೃತ ದಾಖಲೆಗಳನ್ನು ಕೇಳಬಹುದು.

ಕ್ಲೈಮ್‌ಗೆ ಅಗತ್ಯವಿರುವ ಮುಖ್ಯ ದಾಖಲೆಗಳು!

ನೇಪಾಳ ಅಥವಾ ಯಾವುದೇ ವಿದೇಶದಲ್ಲಿ ಸಾವು ಸಂಭವಿಸಿದಾಗ ನಾಮಿನಿಯು (Nominee) ವಿಮಾ ಕಂಪನಿಗೆ ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ!

1. ಸ್ಥಳೀಯ ಮರಣ ಪ್ರಮಾಣಪತ್ರ; ನೇಪಾಳದ ಸ್ಥಳೀಯ ಪ್ರಾಧಿಕಾರ ನೀಡಿದ ಅಧಿಕೃತ ಡೆತ್ ಸರ್ಟಿಫಿಕೇಟ್ (Death Certificate).

2. ಪೋಲಿಸ್ ವರದಿ; ಸಾವಿನ ಸರಿಯಾದ ಕಾರಣವನ್ನು ದೃಢೀಕರಿಸಲು ಸ್ಥಳೀಯ ಪೊಲೀಸ್ ವರದಿ.

3. ವೈಯಕ್ತಿಕ ದಾಖಲೆಗಳು; ಮೃತರ ಪಾಸ್‌ಪೋರ್ಟ್, ಪಾಲಿಸಿ ದಾಖಲೆಗಳು, ಗುರುತಿನ ಚೀಟಿ ಮತ್ತು ಬ್ಯಾಂಕ್ ಖಾತೆ ವಿವರಗಳು.

4. ನಾಮಿನಿ ಗುರುತಿನ ಚೀಟಿ; ವಿಮೆ ಹಣ ಪಡೆಯುವ ನಾಮಿನಿಯ ಆಧಾರ್/ಪಾಸ್‌ಪೋರ್ಟ್ ವಿವರಗಳು.

ಮೃತದೇಹ ಸಿಗದಿದ್ದರೆ (ಕಾಣೆಯಾಗಿದ್ದರೆ) ಏನು ಮಾಡಬೇಕು?

ಪ್ರವಾಹದಂತಹ ನೈಸರ್ಗಿಕ ವಿಕೋಪಗಳಲ್ಲಿ ಜನರು ಕಾಣೆಯಾಗಿ, ಅವರ ಶವಗಳು ಪತ್ತೆಯಾಗದಿರುವ ಸಾಧ್ಯತೆ ಹೆಚ್ಚಿರುತ್ತದೆ. ಅಂತಹ ಸಂದರ್ಭಗಳಲ್ಲಿ ವಿಮಾ ನಿಯಮಗಳು ಹೀಗಿರುತ್ತವೆ:

ಸಾಮಾನ್ಯ ನಿಯಮ (7 ವರ್ಷಗಳ ಕಾಯುವಿಕೆ); ಭಾರತೀಯ ಕಾನೂನಿನ ಪ್ರಕಾರ, ಕಾಣೆಯಾದ ವ್ಯಕ್ತಿಯನ್ನು ಕಾನೂನುಬದ್ಧವಾಗಿ 'ಸತ್ತಿದ್ದಾರೆ' ಎಂದು ಘೋಷಿಸಲು ಸಾಮಾನ್ಯವಾಗಿ 7 ವರ್ಷಗಳ ಕಾಲ ಕಾಯಬೇಕಾಗುತ್ತದೆ.

ವಿಶೇಷ ನಿಯಮ (ವಿಪತ್ತುಗಳ ಸಂದರ್ಭದಲ್ಲಿ); ಪ್ರಮುಖ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಸರ್ಕಾರ ಅಥವಾ ವಿಮಾ ನಿಯಂತ್ರಣ ಪ್ರಾಧಿಕಾರ (IRDAI) ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸುತ್ತದೆ. ಸರ್ಕಾರ ಬಿಡುಗಡೆ ಮಾಡುವ 'ಅಧಿಕೃತ ಕಾಣೆಯಾದವರ ಪಟ್ಟಿ' ಹಾಗೂ ಆಡಳಿತಾತ್ಮಕ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು, 7 ವರ್ಷ ಕಾಯುವ ಅಗತ್ಯವಿಲ್ಲದೇ ಕ್ಲೈಮ್ ಅನ್ನು ಬೇಗನೇ ಇತ್ಯರ್ಥಪಡಿಸಲು ಅವಕಾಶವಿರುತ್ತದೆ.

ದುರಂತ ಸಂಭವಿಸಿದ ತಕ್ಷಣ ನಾಮಿನಿ ಮಾಡಬೇಕಾದ ಕಾರ್ಯಗಳು!

ವ್ಯಕ್ತಿ ಕಾಣೆಯಾದರೆ ಅಥವಾ ಮೃತಪಟ್ಟರೆ ಅವರ ಕುಟುಂಬಸ್ಥರು ತಕ್ಷಣವೇ ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬೇಕು!

1. ಪೋಲಿಸ್ ದೂರು; ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತಕ್ಷಣವೇ 'ಕಾಣೆಯಾದ ವ್ಯಕ್ತಿಯ ವರದಿ' (FIR) ದಾಖಲಿಸಬೇಕು.

2. ರಾಯಭಾರ ಕಚೇರಿ ಸಂಪರ್ಕ; ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು (Indian Embassy) ಸಂಪರ್ಕಿಸಿ ಸಹಾಯ ಕೋರಬೇಕು.

3. ವಿಮಾ ಕಂಪನಿಗೆ ಮಾಹಿತಿ; ತಕ್ಷಣವೇ ವಿಮಾ ಕಂಪನಿಗೆ ಘಟನೆಯ ಕುರಿತು ಮಾಹಿತಿ ನೀಡಿ, FIR, ಪಾಸ್‌ಪೋರ್ಟ್ ಹಾಗೂ ಲಭ್ಯವಿರುವ ದಾಖಲೆಗಳನ್ನು ಸಲ್ಲಿಸಿ ಕ್ಲೈಮ್ ಪ್ರಕ್ರಿಯೆ ಆರಂಭಿಸಬೇಕು.

ಕ್ಲೈಮ್ ತಿರಸ್ಕರವಾಗಲು ಕಾರಣವೇನು?

ಪ್ರೀಮಿಯಂ ಪಾವತಿಸದಿರುವುದು; ಪ್ರೀಮಿಯಂ ಕಟ್ಟಿ ಪಾಲಿಸಿಯನ್ನು ಸಕ್ರಿಯವಾಗಿ ಇಟ್ಟುಕೊಳ್ಳದಿದ್ದರೆ (Lapse ಆಗಿದ್ದರೆ) ಹಣ ಸಿಗುವುದಿಲ್ಲ.

ತಪ್ಪು ಮಾಹಿತಿ ನೀಡಿರುವುದು; ಪಾಲಿಸಿ ತಗೆದುಕೊಳ್ಳುವಾಗ ಆರೋಗ್ಯ ಅಥವಾ ಇತರ ವಿಷಯಗಳ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದರೆ ಕಂಪನಿಯು ತನಿಖೆ ನಡೆಸಿ ಕ್ಲೈಮ್ ತಡೆಹಿಡಿಯಬಹುದು. ಆದ್ದರಿಂದ, ಇಂತಹ ತುರ್ತು ಸಂದರ್ಭಗಳಲ್ಲಿ ಧೈರ್ಯಗೆಡದೆ ಎಲ್ಲಾ ಅಧಿಕೃತ ದಾಖಲೆಗಳನ್ನು ಭದ್ರವಾಗಿಟ್ಟುಕೊಂಡು, ಸರ್ಕಾರ ಮತ್ತು ವಿಮಾ ಕಂಪನಿಯ ಮಾರ್ಗಸೂಚಿಗಳಂತೆ ಕ್ಲೈಮ್ ಸಲ್ಲಿಸುವುದು ಸೂಕ್ತ.