ಕಲ್ಯಾಣ ಕರ್ನಾಟಕ ಉತ್ಸವದ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರು ಕಲಬುರಗಿಗೆ ಭೇಟಿ ನೀಡಲಿದ್ದು, 1500 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ. ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಅಪ್ಪಾ ಕೆರೆ ನವೀಕರಣವನ್ನು ಸಮರ್ಥಿಸಿಕೊಂಡಿದ್ದು, ಬರ ಘೋಷಣೆ ವಿಚಾರದಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿ

ಕಲಬುರಗಿ (ಸೆ.16): ನಾಳೆ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಹಿನ್ನೆಲೆ ಉತ್ಸವದಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಡಿಕೆ ಶಿವಕುಮಾರ ಆಗಮಿಸಲಿದ್ದಾರೆ. ಇಂದು ಸಂಜೆ 7 ಗಂಟೆಗೆ ವಿಶೇಷ ವಿಮಾನದಲ್ಲಿ ಕಲಬುರಗಿ ಏರ್‌ಪೋರ್ಟ್‌ಗೆ ಬಂದಿಳಿಯಲಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಕಲಬುರಗಿಗೆ ಸಿಎಂ

ಇಂದು ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವರು, ಕಲ್ಯಾಣ ಕರ್ನಾಟಕ ಉತ್ಸವ ದಿನ ಅಂಗವಾಗಿ ಸಿಎಂ ಡಿಕೆಶಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಸಂಜೆ ಕಲಬುರಗಿ ಸ್ಟ್ರಿಟ್ ಫೆಸ್ಟಿವಲ್ ‌ಗೆ ಚಾಲನೆ ನೀಡಲಿದ್ದು, ಇದೇ ವೇಳೆ ಅಪ್ಪಾ ಕೆರೆ ಸೇರಿದಂತೆ 1500 ಕೋಟಿ ರೂಪಾಯಿ ವೆಚ್ಚದ 801 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.

ನಾಳೆ ಸಿಎಂ ಡಿಕೆಶಿ ಗಾಣಗಾಪುರ ದತ್ತಾತ್ರೇಯ ದೇಗುಲಕ್ಕೆ ಭೇಟಿ:

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ತ ಕಲಬುರಗಿಗೆ ಆಗಮಿಸುತ್ತಿದ್ದು, ಇದೇ ವೇಳೆ ಮಧ್ಯಾಹ್ನ ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೂ ಭೇಟಿ ನೀಡಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ಅಪ್ಪಾ ಕೆರೆ ನವೀಕರಣಕ್ಕೆ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಹೌದು ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ನಾನೇ ಈ ಕೆರೆ ನವೀಕರಣ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದೆ. ಆದರೆ ಇಂದು ನನ್ನ ನೇತೃತ್ವದಲ್ಲಿ ಕೆರೆ ನವೀಕರಣ ಮಾಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಲಾಗಿತ್ತು. ಕೆರೆ ಪರಿಸರಕ್ಕೆ ಧಕ್ಕೆ ಆಗುವಂತಹ ಕಾಮಗಾರಿಗಳನ್ನ ಕೈಗೊಳ್ಳಲಾಗಿತ್ತು. ಹೀಗಾಗಿ ಅಂದು ನಾನು ವಿರೋಧಿಸಿದ್ದೆ. ಸದ್ಯ ಕೆರೆ ನವೀಕರಣ ಕಾರ್ಯಕ್ಕೆ ಪರಿಸರ ಮಂಡಳಿ ಗ್ರೀನ್ ಸಿಗ್ನಲ್ ನೀಡಿದೆ. ಈಗಿನ ಅಪ್ಪಾ ಕೆರೆಗೆ ದಡದ ಸುತ್ತಲು ನಾಲ್ಕು ಕಿಮೀ ಸುತ್ತಳತೆಯಲ್ಲಿ ವಾಕಿಂಗ್ ಟ್ರ್ಯಾಕ್ ನಿರ್ಮಿಸಲಾಗಿದೆ. ಬಿಜೆಪಿ ಮಾಡಿದ ತಪ್ಪುಗಳನ್ನು ನಾವು ತಿದ್ದೋ ಕೆಲಸ ಮಾಡುತ್ತಿದ್ದೇವೆ ಎಂದು ಅಪ್ಪಾ ಕೆರೆ ನವೀಕರಣ ಸಮರ್ಥಿಸಿಕೊಂಡರು

ಬರ ಘೋಷಣೆ ಮಾಡೋದು ಕೇಂದ್ರ ಸರ್ಕಾರ

ಇನ್ನು ಬರ ಘೋಷಣೆ ವಿಳಂಬ ಕುರಿತಂತೆ ಪ್ರತಿಕ್ರಿಯಿಸಿದ ಗೃಹಸಚಿವರು, ಬರ ಘೋಷಣೆ ಮಾಡಲಿ ಅಂತಾ ಬಿಜೆಪಿಯವರು ಪ್ರತಿಭಟನೆ ಮಾಡ್ತಿದ್ದಾರೆ. ಅವರಿಗೆ ಯಾರು ಬರ ಘೋಷಣೆ ಮಾಡ್ತಾರೆ ಅಂತಲೇ ತಿಳಿದಿಲ್ಲ. ಬರ ಘೋಷಣೆ ಮಾಡೋರು ಯಾರು? ನಾವಾ(ರಾಜ್ಯ ಸರ್ಕಾರ) ಅಥವಾ ಕೇಂದ್ರ ಸರ್ಕಾರವಾ? ಎಂದು ಪ್ರಶ್ನಿಸಿದರು.

ಉದ್ಯಮಿಗಳ ಸಾಲ ಮನ್ನಾ ಮಾಡೋ ಮೋದಿಗೆ ರೈತರ ಸಾಲ ಕಷ್ಟವಾ?

ಇನ್ನೂ ಮಳೆಗಾಲನೇ ಮುಗಿದಿಲ್ಲ. ರಾಜ್ಯದ ರೈತರ ಕೈಹಿಡಿದಿರುವುದು ನಾವೇ ಹೊರತು ಕೇಂದ್ರ ಬಿಜೆಪಿಯವರಲ್ಲ. ಈ ಹಿಂದೆ ರೈತರ ಸಾಲ ಮಾಡಿ ಅಂದ್ರೆ ನಮ್ಮಲ್ಲಿ ನೋಟ್ ಪ್ರಿಂಟ್ ಮಾಡೋ ಮಷಿನ್ ಇಲ್ಲ ಅಂದಿದ್ದು ಬಿಜೆಪಿಯವರು ನೆನಪಿದೆಯಾ? ದೊಡ್ಡ ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡೋ ಮೋದಿಗೆ ರೈತರ ಸಾಲ ಮನ್ನಾ ಮಾಡೋಕೆ ಆಗೋಲ್ವ? ಸ್ವತಃ ನಾನೇ ವರದಿ ಕೊಟ್ಟರೂ ಕೇಂದ್ರ ಸರ್ಕಾರ ಒಪ್ಪೋದಿಲ್ಲ. ಮೋದಿ ಗೈಡ್‌ಲೈನ್ಸ್ ಮೇಲೆ ಪರಿಹಾರ ಬಿಡುಗಡೆ ಆಗುತ್ತೆ. ರಾಜ್ಯ ಸರ್ಕಾರ ರೈತರಿಗೆ ಏನು ಪರಿಹಾರ ಕೊಡಬೇಕೋ ಅದು ಕೊಟ್ಟ ಕೊಡುತ್ತದೆ ಎಂದರು.