Asianet Suvarna News Asianet Suvarna News

ವರ್ಷದೊಳಗಾಗಿ ತುಂಗಭದ್ರಾ ಜಲಾಶಯಕ್ಕೆ ನೂತನ ಕ್ರಸ್ಟ್ ಗೇಟ್ ಅಳವಡಿಕೆ: ಡಿ.ಕೆ.ಶಿವಕುಮಾರ್

ತುಂಗಭದ್ರಾ ಜಲಾಶಯಕ್ಕೆ ನೂತನ ಕ್ರಸ್ಚ್ ಗೇಟ್ ಅಳಡಿಸಲು ತಜ್ಞರ ಸಮಿತಿ ಶಿಫಾರಸು ಮಾಡಿರುವ ಹಿನ್ನೆಲೆ ವರ್ಷದೊಳಗಾಗಿಯೇ ಅಳವಡಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ ಹೇಳಿದ್ದಾರೆ. 

Installation of new crust gate for Tungabhadra reservoir within the year Says DK Shivakumar gvd
Author
First Published Sep 23, 2024, 5:40 PM IST | Last Updated Sep 23, 2024, 5:40 PM IST

ಕೊಪ್ಪಳ (ಸೆ.22): ತುಂಗಭದ್ರಾ ಜಲಾಶಯಕ್ಕೆ ನೂತನ ಕ್ರಸ್ಚ್ ಗೇಟ್ ಅಳಡಿಸಲು ತಜ್ಞರ ಸಮಿತಿ ಶಿಫಾರಸು ಮಾಡಿರುವ ಹಿನ್ನೆಲೆ ವರ್ಷದೊಳಗಾಗಿಯೇ ಅಳವಡಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ ಹೇಳಿದ್ದಾರೆ. ತಾಲೂಕಿನ ಮುನಿರಾಬಾದ್‌ನಲ್ಲಿ ನೀರಾವರಿ ಇಲಾಖೆ ಹಮ್ಮಿಕೊಂಡಿದ್ದ ಕ್ರಸ್ಟ್ ಗೇಟ್ ದುರಸ್ತಿಗೆ ಶ್ರಮಿಸಿದವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೂತನ ಗೇಟ್ ಅಳವಡಿಸುವ ಕುರಿತು ಈಗಾಗಲೇ ಆಂಧ್ರ, ತೆಲಂಗಾಣ ಮುಖ್ಯಮಂತ್ರಿ ಜತೆ ಮಾತುಕತೆಯೂ ಆಗಿದೆ. 

ಅಳವಡಿಸಲು ಕ್ರಮವಹಿಸುವುದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ಸಿಕ್ಕಿದೆ. ನೀರು ಖಾಲಿಯಾಗುತ್ತಿದ್ದಂತೆ ಬೇಸಿಗೆಯಲ್ಲಿಯೇ ಕ್ರಸ್ಟ್ ಗೇಟ್ ಅಳವಡಿಸಲಾಗುವುದು ಎಂದರು. ತುಂಗಭದ್ರಾ ಬೋರ್ಡ್ ಜತೆಗೂ ಚರ್ಚೆ ಮಾಡಲಾಗುವುದು. ತಜ್ಞರ ಸಮಿತಿ ನೀಡಿದ ವರದಿ ಗಮನಿಸಿ, ಅಗತ್ಯ ಕ್ರಮಕೈಗೊಳ್ಳುವ ಮೂಲಕ ತುಂಗಭದ್ರಾ ಜಲಾಶಯ ಭದ್ರ ಮಾಡಲಾಗುವುದು ಎಂದರು. ಆ. 10ರಂದು ಕ್ರಸ್ಟ್ ಗೇಟ್ ಮುರಿದು ಹೋಗಿದ್ದನ್ನು ರಾತ್ರಿಯೇ ಸಚಿವ ಶಿವರಾಜ ತಂಗಡಗಿ ಹಾಗೂ ಎಂಡಿ ಗಮನಕ್ಕೆ ತಂದಾಗ ನಾವು ನೀರು ಖಾಲಿಯಾದರೂ ಪರವಾಗಿಲ್ಲ ಜಲಾಶಯವನ್ನು ಕಾಪಾಡಿಕೊಳ್ಳಬೇಕು ಎಂದು ಚಿಂತೆಸಿದ್ದೆವು. 

ಚನ್ನಪಟ್ಟಣದಲ್ಲಿ ಅಭಿವೃದ್ಧಿಯ ದೀಪ ಹಚ್ಚಿದ್ದೇವೆ: ಡಿಸಿಎಂ ಡಿ.ಕೆ.ಶಿವಕುಮಾರ್

ಆದರೆ, ಮರುದಿನವೇ ಸ್ಥಳಕ್ಕೆ ಭೇಟಿ ನೀಡಿ, ಎಂಜಿನಿಯರ್ ಅವರೊಂದಿಗೆ ಚರ್ಚೆ ಮಾಡಿ, ದುರಸ್ತಿ ಕಾರ್ಯವನ್ನು ವಾರದೊಳಗೆ ಪೂರ್ಣಗೊಳಿಸಿದೆವು. ವಿರೋಧ ಪಕ್ಷದವರು ಮಾಡಿದ ಟೀಕೆಗಳು ಕೊಚ್ಚಿಕೊಂಡು ಹೋದರೆ ನಾವು ಮಾಡಿದ ಕೆಲಸ ಉಳಿಯಿತು ಎಂದು ಬಿಜೆಪಿ ನಾಯಕರನ್ನು ತಿವಿದರು. ಕ್ರಸ್ಟ್ ಗೇಟ್ ಮುರಿದಾಗ ನಾವು ಕನ್ನಯ್ಯ ನಾಯ್ಡು ಅವರನ್ನು ಸಂಪರ್ಕ ಮಾಡಿ, ಅವರನ್ನು ಕರೆಯಿಸಿದೆವು. ಅವರು ಆಗಮಿಸಿ, ಹಗಲು, ರಾತ್ರಿ ಶ್ರಮಿಸಿದರು ಎಂದು ಕನ್ಯಯ್ಯ ಅವರನ್ನು ಗುಣಗಾನ ಮಾಡಿದರು.

ನವಲಿ ಸಮಾನಾಂತರ ಜಲಾಶಯ: ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿದ್ದರಿಂದ ಹೆಚ್ಚುವರಿ ನೀರು ಪೋಲಾಗುತ್ತಿದೆ. ಜಲಾಶಯದಲ್ಲಿಯೂ ನೀರು ಸಂಗ್ರಹಣಾ ಸಾಮರ್ಥ್ಯ ಕುಸಿದಿದೆ. ಹೀಗಾಗಿ, ಇದಕ್ಕೆ ಪರ್ಯಾಯವಾಗಿ ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಈಗಾಗಲೇ ಈ ಕುರಿತು ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಹಿಂದೆ ಡಿಪಿಆರ್ ಆಗಿದ್ದರೂ ಜಾರಿಯಾಗುವಂತಹ ಪ್ರಕ್ರಿಯೆ ನಡೆದಿಲ್ಲ. ಈಗ ಆಂಧ್ರ, ತೆಲಂಗಾಣ ಸಿಎಂ ಅವರೊಂದಿಗೆ ಮಾತುಕತೆಯಾಗಿದ್ದು, ಜಾರಿಗೆ ಸರ್ಕಾರ ಬದ್ಧವಾಗಿದೆ ಎಂದರು.

ಗಂಗಾ ಸ್ನಾನ, ತುಂಗ ಪಾನ ಎನ್ನುವ ನಾಣ್ಣುಡಿ ಇದೆ. ಇದುವೇ ಹೇಳುತ್ತದೆ. ತುಂಗಾ ನೀರು ಎಷ್ಟು ಪವಿತ್ರ ಎಂದು. ತುಂಗಭದ್ರಾ ಜಲಾಶಯ ಕಾಂಗ್ರೆಸ್ ಸರ್ಕಾರದ ಕೊಡುಗೆಯಾಗಿದೆ. ಆಗಿನ ಪ್ರಧಾನಿ ಜವಾಹರಲಾಲ ನೆಹರು ಅವರು ಅಣೆಕಟ್ಟುಗಳನ್ನು ಆಧುನಿಕ ದೇವಾಲಯಗಳು ಎಂದು ಕರೆದಿದ್ದರು. ನಮ್ಮ ಸರ್ಕಾರದಲ್ಲಿ ಜಲಾಶಯ ನಿರ್ಮಾಣಕ್ಕೆ ಅಷ್ಟು ಆದ್ಯತೆ ನೀಡಲಾಗಿದೆ ಎಂದರು.

ಚನ್ನಪಟ್ಟಣ ಉಪಚುನಾವಣೆಯಲ್ಲಿ ಯಾರೇ ಸ್ಪರ್ಧಿಸಿದರೂ ನಾನೇ ಅಭ್ಯರ್ಥಿ: ಡಿ.ಕೆ.ಶಿವಕುಮಾರ್

10 ವರ್ಷ ನಮ್ಮದೇ ಸರ್ಕಾರ: ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಬೀಳಿಸಲು ಸಾಧ್ಯವೇ ಇಲ್ಲ. ಇನ್ನು ಹತ್ತು ವರ್ಷಗಳ ಕಾಲ ನಾವೇ ಅಧಿಕಾರದಲ್ಲಿ ಇರುತ್ತವೆ, ನಮ್ಮದೇ ಸರ್ಕಾರ ಇರುತ್ತದೆ. ಮುಂದೆಯೂ ನಾವೇ ಬಾಗಿನ ಅರ್ಪಿಸುತ್ತೇವೆ ಎಂದರು.

Latest Videos
Follow Us:
Download App:
  • android
  • ios