ಚೀನಾ-ನೇಪಾಳ ಗಡಿಯ ಸಮೀಪ ಟಿಬೆಟ್‌ನಲ್ಲಿ ಸಂಭವಿಸಿದ ಭೂಕಂಪ ಮತ್ತು ಹಿಮಪಾತದಿಂದಾಗಿ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಭಾರತೀಯ ಯಾತ್ರಿಕರು ಪ್ರವಾಹದಲ್ಲಿ ಸಿಲುಕಿದ್ದಾರೆ. ಉಸಿರಾಟದ ತೊಂದರೆ, ಆಹಾರ-ನೀರಿನ ಕೊರತೆಯಿಂದ ಬಳಲುತ್ತಿರುವ ಯಾತ್ರಿಕರು, ತಮ್ಮನ್ನು ರಕ್ಷಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.

ಬೆಜಿಂಗ್; ಚೀನಾ-ನೇಪಾಳ ಗಡಿಯ ಸಮೀಪವಿರುವ ಟಿಬೆಟ್‌ನಲ್ಲಿ ಸಂಭವಿಸಿದ ಭಾರಿ ಭೂಕಂಪ ಹಾಗೂ ಹಿಮಪಾತದ ಪರಿಣಾಮವಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಸದ್ಯ ಭಾರತೀಯ ಯಾತ್ರಿಕರು ಸಾವು-ಬದುಕಿನ ನಡುವೆ ಕಠಿಣ ಹೋರಾಟ ನಡೆಸುತ್ತಿದ್ದಾರೆ. ಪವಿತ್ರ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಅನೇಕ ಭಾರತೀಯ ಪ್ರವಾಸಿಗರು ಈ ವಿನಾಶಕಾರಿ ದುರಂತದಲ್ಲಿ ಸಿಲುಕಿಕೊಂಡಿದ್ದು, ಅವರ ಸುರಕ್ಷತೆ ಕುರಿತು ತೀವ್ರ ಆತಂಕ ಎದುರಾಗಿದೆ.

ಹೃದಯವಿದ್ರಾವಕ ವೀಡಿಯೊ!

ಟಿಬೆಟ್‌ನ ನ್ಯಾಲಮ್ ಕೌಂಟಿಯಲ್ಲಿರುವ ‘ಜಿಯಾಂಗ್ಡಕಾಂಗ್ ಹೋಟೆಲ್’ನಲ್ಲಿ ಬಂಧಿಯಾಗಿರುವ ಭಾರತೀಯ ಯಾತ್ರಿಕಿ ಸುನೀತಾ ಆಹುಜಾ ಅವರು ಹೃದಯವಿದ್ರಾವಕ ವೀಡಿಯೊ ಸಂದೇಶವೊಂದನ್ನು ಬಿಡುಗಡೆ ಮಾಡುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ. ತೀವ್ರ ಉಸಿರಾಟದ ತೊಂದರೆ ಮತ್ತು ಹದಗೆಡುತ್ತಿರುವ ಆರೋಗ್ಯದ ನಡುವೆಯೂ ಅವರು ನೇರವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ರಕ್ಷಣೆಗಾಗಿ ಮೊರೆ ಹೋಗಿದ್ದಾರೆ. ತಮ್ಮ ಸಂದೇಶದಲ್ಲಿ ಅವರು, "ಮೋದಿ ಜಿ, ನಾವು ನಮ್ಮ ದೇಶದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿ ಅಪಾಯಕಾರಿ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದೇವೆ. ದಯವಿಟ್ಟು ಚೀನಾ ಸರ್ಕಾರದೊಂದಿಗೆ ತಕ್ಷಣ ಮಾತನಾಡಿ ನಮ್ಮನ್ನು ಇಲ್ಲಿಂದ ಸುರಕ್ಷಿತವಾಗಿ ರಕ್ಷಿಸಿ" ಎಂದು ಕಣ್ಣೀರಿಡುತ್ತಾ ವಿನಂತಿಸಿದ್ದಾರೆ.

ಪ್ರವಾಹದಲ್ಲಿ ಸಿಲುಕಿದ ಭಾರತೀಯರು!

ಸುನೀತಾ ಅವರು ತಮ್ಮ ಪತಿ ದೀಪಕ್ ಆಹುಜಾ ಅವರೊಂದಿಗೆ ಚಾರಣಕ್ಕೆ ತೆರಳಿದ್ದರು. ಅನಾರೋಗ್ಯದ ಕಾರಣದಿಂದ ಮೂರು ದಿನಗಳ ಹಿಂದೆ ಪರ್ವತದಿಂದ ಕೆಳಗಿಳಿದ ಅವರಿಗೆ, ಹಠಾತ್ ಬಂದ ಪ್ರವಾಹದಿಂದಾಗಿ ಮುಂದೆ ಸಾಗಲು ಸಾಧ್ಯವಾಗಲಿಲ್ಲ. ಸದ್ಯ ಜಿಯಾಂಗ್ಡಕಾಂಗ್ ಹೋಟೆಲ್‌ನಲ್ಲಿ ಹಲವು ಭಾರತೀಯ ಯಾತ್ರಿಕರು ಸಿಲುಕಿದ್ದು, ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಅತಿಯಾದ ಎತ್ತರದ ಪ್ರದೇಶ ಮತ್ತು ತೀವ್ರ ಶೀತದ ಹವಾಮಾನದಿಂದಾಗಿ ಸುನೀತಾ ಸೇರಿದಂತೆ ಹಲವು ಯಾತ್ರಿಕರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಇದರೊಂದಿಗೆ ಹೋಟೆಲ್‌ನಲ್ಲಿರುವ ಶುದ್ಧ ನೀರು ಮತ್ತು ಆಹಾರದ ಪಡಿತರ ಕೊರತೆ ಎದುರಾಗಿದ್ದು, ಲಭ್ಯವಿರುವ ದಾಸ್ತಾನು ವೇಗವಾಗಿ ಖಾಲಿಯಾಗುತ್ತಿದೆ. ಸ್ಥಳೀಯ ಆಡಳಿತದಿಂದ ಯಾವುದೇ ಸ್ಪಷ್ಟ ಮಾರ್ಗದರ್ಶನ ಸಿಗುತ್ತಿಲ್ಲ ಹಾಗೂ ಹೋಟೆಲ್‌ಗೆ ಇನ್ನಷ್ಟು ಪ್ರಯಾಣಿಕರು ಬಂದು ಸೇರುತ್ತಿರುವುದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಪ್ರಧಾನಿ ಮೋದಿಗೆ ಮನವಿ!

ಪ್ರಸ್ತುತ ಚೀನಾ ಅಧಿಕಾರಿಗಳು ಭಾರತೀಯ ಯಾತ್ರಿಕರು ಮುಂದೆ ಸಾಗಲು ಅಥವಾ ಭಾರತಕ್ಕೆ ಮರಳಲು ಅಗತ್ಯವಿರುವ 'ನಿರ್ಗಮನ ಪರವಾನಗಿ' ನೀಡುತ್ತಿಲ್ಲ. ಒಂದು ವೇಳೆ ತಕ್ಷಣಕ್ಕೆ ವಿಮಾನ ಅಥವಾ ರಕ್ಷಣಾ ತಂಡಗಳನ್ನು ಕಳುಹಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ರಾಜತಾಂತ್ರಿಕ ಮಾರ್ಗಗಳ ಮೂಲಕ ಚೀನಾ ಸರ್ಕಾರದ ಮೇಲೆ ಒತ್ತಡ ಹೇರಿ ನಮಗೆ ಎಕ್ಸಿಟ್ ಪರ್ಮಿಟ್ ಕೊಡಿಸಿ, ಇದರಿಂದ ನಾವು ಸ್ವತಃ ಗಡಿ ದಾಟಿ ಭಾರತಕ್ಕೆ ಸುರಕ್ಷಿತವಾಗಿ ಮರಳಲು ಸಾಧ್ಯವಾಗುತ್ತದೆ ಎಂದು ಸುನೀತಾ ಭಾರತ ಸರ್ಕಾರಕ್ಕೆ ಆಕುಲ ಮನವಿ ಮಾಡಿದ್ದಾರೆ. ಈ ವಿನಾಶಕಾರಿ ದುರಂತದಲ್ಲಿ ಹಲವು ಸ್ಥಳೀಯರು ಪ್ರಾಣ ಕಳೆದುಕೊಂಡಿದ್ದು, ಹಲವು ಭಾರತೀಯರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಕೇಂದ್ರ ಸರ್ಕಾರವು ತಕ್ಷಣವೇ ಚೀನಾ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಸಿಲುಕಿರುವ ನಾಗರಿಕರನ್ನು ತಾಯ್ನಾಡಿಗೆ ಕರೆತರಬೇಕೆಂಬ ಒತ್ತಾಯ ತೀವ್ರಗೊಂಡಿದೆ.