ಮಣಿಪುರ ವೈರಲ್ ವಿಡಿಯೋ ಪ್ರಕರಣವನ್ನು ಕೇಂದ್ರ ಸರ್ಕಾರ ಸಿಬಿಐಗೆ ಹಸ್ತಾಂತರಿಸಿದೆ. ಜೊತೆಗೆ ಸುಪ್ರೀಂ ಕೋರ್ಟ್ಗೆ ಅಫಿದವಿತ್ ಸಲ್ಲಿಸಿದ್ದು, ಈ ಪ್ರಕರಣದ ವಿಚಾರಣೆಯನ್ನು ಮಣಿಪುರದಿಂದ ಹೊರಗಡೆ ಮಾಡಬೇಕು ಎಂದು ಮನವಿ ಮಾಡಿದೆ.
ನವದೆಹಲಿ(ಜು.27) ಮಣಿಪುರ ಹಿಂಸಾಚಾರದಿಂದ ತತ್ತರಿಸಿದೆ. ಚುರಾಚಂದ್ಪುರ ಸೇರಿದಂತೆ ಕೆಲವು ಭಾಗದಲ್ಲಿ ಹಿಂಸಾಚಾರ ಮುಂದುವರಿದಿದೆ. ಮಣಿಪುರ ವಿಚಾರ ಲೋಕಸಭೆ, ರಾಜ್ಯಸಭೆಯಲ್ಲಿ ಭಾರಿ ಗದ್ದಲವನ್ನೇ ಸೃಷ್ಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಅಧಿಕೃತ ಹೇಳಿಕೆ ನೀಡಬೇಕು ಅನ್ನೋ ಆಗ್ರಹವನ್ನು ವಿಪಕ್ಷಗಳು ಮಾಡಿದೆ. ಈ ಬೆಳವಣಿಗೆ ನಡುವೆ ಮಣಿಪುರದ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ ದೇಶಾದ್ಯಂತ ಭಾರಿ ಆಕ್ರೋಶಕ್ಕೂ ಕಾರಣವಾಗಿದೆ. ಇದೀಗ ಈ ಪ್ರಕರಣವನ್ನು ಕೇಂದ್ರ ಸರ್ಕಾರ ಸಿಬಿಐಗೆ ಹಸ್ತಾಂತರಿಸಿದೆ. ಇಷ್ಟೇ ಅಲ್ಲ ಬೆತ್ತಲೆ ಮೆರವಣಿಗೆ ಪ್ರಕರಣವನ್ನು ಮಣಿಪುರದಿಂದ ಹೊರಗಡೆ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ಗೆ ಅಫಿದವಿತ್ ಸಲ್ಲಿಸಿದೆ.
ಮಣಿಪುರ ಹಿಂಸಾಚಾರದಲ್ಲಿ ಗುಂಡಿನ ದಾಳಿ, ಭೀಕರ ಹತ್ಯೆಗಳ ಜೊತೆಯಲ್ಲಿ ಮಹಿಳೆಯರು, ಹೆಣ್ಣುಮಕ್ಕಳ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣಗಳು ಒಂದೊಂದಾಗಿ ಹೊರಬರುತ್ತಿದೆ. ಈ ಪೈಕಿ ಮೇ.4 ರಂದು ನಡೆದ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಬೆತ್ತಲೆ ಮೆರವಣಿಗೆ ಭಾರತವನ್ನೇ ತಲೆ ತಗ್ಗಿಸುವಂತೆ ಮಾಡಿತ್ತು. ಈ ವಿಡಿಯೋ ಬಳಿಕ ಮಣಿಪುರದಲ್ಲಿ ಹಿಂಸಾಚಾರ ಮತ್ತಷ್ಟು ತೀವ್ರಗೊಂಡಿತ್ತು. ಇದೀಗ ಈ ಪ್ರಕರಣದ ಸಂಪೂರ್ಣ ತನಿಖೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದೆ.
ಮಣಿಪುರ ಹಿಂಸೆಗೆ ಮತ್ತೆ ಕಲಾಪ ಭಂಗ: ಚರ್ಚೆಗೆ ಸಿದ್ಧ ಎಂಬ ಶಾ ಮನವಿಗೂ ಓಗೊಡದ ವಿಪಕ್ಷ
ಇನ್ನು ಬೆತ್ತಲೇ ವಿಡಿಯೋ ಪ್ರಕರಣದ ಕೋರ್ಟ್ ವಿಚಾರಣೆಯನ್ನು ಮಣಿಪುರದಿಂದ ಬಿಟ್ಟು ಬೇರೆ ರಾಜ್ಯದ ಕೋರ್ಟ್ನಲ್ಲಿ ಮಾಡುವಂತೆ ಮನವಿ ಮಾಡಿದೆ. ಪ್ರಕರದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಅಮಾಯಕ ಮಹಿಳೆಯರಿಗೆ ನ್ಯಾಯ ಸಿಗಬೇಕು ಎಂದು ಅಫಿದವಿತ್ನಲ್ಲಿ ಉಲ್ಲೇಖಿಸಲಾಗಿದೆ. ಇತ್ತ ಕೇಂದ್ರ ಸರ್ಕಾರ ನಿಷ್ಪಕ್ಷಪಾತ ತನಿಖೆಗೆ ಸಿಬಿಐಗೆ ಜವಾಬ್ದಾರಿಯನ್ನು ವಹಿಸಿದೆ.
ಮಹಿಳೆಯರನ್ನು ಬೆತ್ತಲೆ ಪರೇಡ್ ಮಾಡಿ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಮತ್ತೊಬ್ಬನನ್ನು ಬಂಧಿಸಲಾಗಿದೆ. ಇದರಿಂದ ಬಂಧಿತರ ಸಂಖ್ಯೆ 7ಕ್ಕೆ ಏರಿದೆ. ಸೋಮವಾರ ಸಂಜೆ ಥೌಬಾಲ್ ಜಿಲ್ಲೆಯಲ್ಲಿ ಆತನನ್ನು ಬಂಧಿಸಲಾಗಿದೆ. ಉಳಿದ ದುಷ್ಕರ್ಮಿಗಳಿಗೆ ಶೋಧ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ. ಆದರೆ ಬಂಧಿತನ ವೈಯಕ್ತಿಕ ವಿವರವನ್ನು ಪೊಲೀಸರು ನೀಡಿಲ್ಲ. ಪೊಲೀಸರು ವಿಡಿಯೋ ಆಧರಿಸಿ, ಪರೇಡ್ನಲ್ಲಿ ಭಾಗಿ ಆಗಿದ್ದ 14 ಜನರ ಚಹರೆಯನ್ನು ವಿಡಿಯೋದಲ್ಲಿ ಗುರುತಿಸಿದ್ದರು.
Manipur: ಒಂದಲ್ಲ.. ಎರಡಲ್ಲ.. 7 ಅತ್ಯಾಚಾರ ನಡೆದಿದೆ: ಬಗೆದಷ್ಟೂ ಬಯಲಿಗೆ ಬರ್ತಿದೆ ರೇಪ್ ಕೇಸ್!
ಹಿಂಸಾಪೀಡಿತ ಮಣಿಪುರದಲ್ಲಿ ಕುಕಿ-ಜೋಮಿ ಸಮುದಾಯದ ಇಬ್ಬರು ಮಹಿಳೆಯರನ್ನು ಮೈತೇಯಿ ಸಮುದಾಯದವರು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ ಘಟನೆ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವಾಗಲೇ, ಮಿಜೋರಂನಲ್ಲಿರುವ ಮೈತೇಯಿ ಸಮುದಾಯಕ್ಕೆ ಆತಂಕ ಎದುರಾಗಿದೆ. ಈಗ ಅಲ್ಲಿನ ಜನರು ಸುರಕ್ಷಿತ ರಾಜ್ಯಕ್ಕೆ ವಲಸೆ ಹೋಗಲು ಆರಂಭಿಸಿದ್ದಾರೆ. ಪರಿಸ್ಥಿತಿಯನ್ನು ಅರಿತಿರುವ ಮಣಿಪುರ ಸರ್ಕಾರ, ಮಿಜೋರಂನಿಂದ ಬರುವ ಮೈತೇಯಿ ಸಮುದಾಯದವರಿಗೆ ವಿಶೇಷ ವಿಮಾನ ವ್ಯವಸ್ಥೆ ಮಾಡಲು ಸಿದ್ಧವಿರುವುದಾಗಿ ಘೋಷಿಸಿದೆ.
