ಕೇರಳದ ಕೋಝಿಕ್ಕೋಡ್‌ನಲ್ಲಿ, ಕಡಿಮೆ ಸಂಬಳ ಪಡೆಯುತ್ತಿದ್ದ ಮೂವರು ಮಹಿಳಾ ಶಿಕ್ಷಕಿಯರು ಎಂಡಿಎಂಎ ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡು ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದುದು ಬೆಳಕಿಗೆ ಬಂದಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಕೇರಳದ ಕೋಝಿಕ್ಕೋಡ್ ಜಿಲ್ಲೆಯ ವಡಕರದಲ್ಲಿ ಬೆಳಕಿಗೆ ಬಂದಿರುವ ಎಂಡಿಎಂಎ (MDMA) ಮಾದಕವಸ್ತು ಕಳ್ಳಸಾಗಣೆ ಪ್ರಕರಣವು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಬೇಕಾದ ಮೂವರು ಮಹಿಳಾ ಶಿಕ್ಷಕಿಯರೇ ಡ್ರಗ್ಸ್ ಜಾಲದ ಪ್ರಮುಖ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದುದನ್ನು ಪೊಲೀಸರು ರಟ್ಟು ಮಾಡಿದ್ದಾರೆ. ವಡಕರದ ಪೆರಂಬರದಲ್ಲಿ ಸಮಗ್ರ ಶಿಕ್ಷಾ ಕೇರಳ (SSK) ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಈ ಶಿಕ್ಷಕಿಯರು, ಶಾಲೆಯನ್ನೇ ತಮ್ಮ ಅಕ್ರಮ ದಂಧೆಗೆ ಕವರ್ ಆಗಿ ಬಳಸಿಕೊಳ್ಳುತ್ತಿದ್ದರು.

ಐದು ಜನರ ಬಂಧನ!

'ಆಪರೇಷನ್ ತೂಫಾನ್' ಯೋಜನೆಯಡಿ ವಡಕರ ಇನ್ಸ್‌ಪೆಕ್ಟರ್ ಎ.ವಿ. ದಿನೇಶ್ ನೇತೃತ್ವದ ವಿಶೇಷ ತನಿಖಾ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು ಐವರನ್ನು ಬಂಧಿಸಲಾಗಿದೆ. ಜೂನ್ 26 ರಂದು ಜಪ್ತಿಯಾದ ಎಂಡಿಎಂಎ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ ಪೊಲೀಸರು ಜುಲೈ 11 ರಿಂದ 28 ರ ಅವಧಿಯಲ್ಲಿ ದೈಹಿಕ ಶಿಕ್ಷಣ ಬೋಧಕಿ ಕೆ.ಸಿ. ಕೀರ್ತನಾ, ಆಟಿಸಂ ಪೀಡಿತ ಮಕ್ಕಳಿಗೆ ಕಲಿಸುತ್ತಿದ್ದ ಕೆ. ಕಾವ್ಯಾ ಮತ್ತು ತರಬೇತುದಾರೆ ವಿ.ಪಿ. ನೀಷ್ಮಾ ಎಂಬ ಮೂವರು ಶಿಕ್ಷಕಿಯರನ್ನು ಬಂಧಿಸಿದ್ದಾರೆ. ಇವರೊಂದಿಗೆ ಡ್ರಗ್ಸ್ ಹಾಗೂ ಹಣದ ವಹಿವಾಟು ನೋಡಿಕೊಳ್ಳುತ್ತಿದ್ದ ವಿತರಣಾ ಕೆಲಸಗಾರ ಜಿಜಿಲ್ ಕುರಿಯಾಕೋಸ್ ಎಂಬಾತನನ್ನೂ ಜೈಲಿಗಟ್ಟಲಾಗಿದೆ.

ಖಾತೆಯಲ್ಲಿತ್ತು ಲಕ್ಷಾಂತರ ಹಣ!

ಮಾಸಿಕ ಕೇವಲ 12,000 ದಿಂದ 13,000 ರೂಪಾಯಿ ವೇತನ ಪಡೆಯುತ್ತಿದ್ದ ಈ ತಾತ್ಕಾಲಿಕ ಶಿಕ್ಷಕಿಯರ ಖಾತೆಗಳಲ್ಲಿ ಲಕ್ಷಾಂತರ ರೂಪಾಯಿ ಬ್ಯಾಲೆನ್ಸ್ ಇರುವುದನ್ನು ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಆರಂಭದಲ್ಲಿ ಸ್ವತಃ ಡ್ರಗ್ಸ್ ಬಳಸಲು ಪ್ರಾರಂಭಿಸಿದ ಈ ಶಿಕ್ಷಕಿಯರು, ನಂತರ ಹಣದ ಆಸೆಗೆ ಬಿದ್ದು ಏಜೆಂಟ್‌ಗಳಾಗಿ ಬದಲಾಗಿದ್ದರು. ಸಿಕ್ಕ ಅಪಾರ ಕಮಿಷನ್ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದ ಇವರಲ್ಲಿ ಕೀರ್ತನಾ, ಶಾಲೆಯಲ್ಲಿ ಡ್ರಗ್ಸ್ ವಿರೋಧಿ ಅಭಿಯಾನ ಹಾಗೂ ಜುಂಬಾ ತರಗತಿಗಳನ್ನು ಮುನ್ನಡೆಸುತ್ತಾ ಜಾಣತನದಿಂದ ಸಮಾಜದ ಕಣ್ಣಿಗೆ ಮಣ್ಣೆರಚುತ್ತಿದ್ದಳು.

ಪೊಲೀಸರು ಹೇಳಿದ್ದೇನು?

ಅದೃಷ್ಟವಶಾತ್ ಈ ಜಾಲದಲ್ಲಿ ಶಾಲಾ ಮಕ್ಕಳು ಭಾಗಿಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಪೊಲೀಸರು, ಆರೋಪಿಗಳು ಕಾಲೇಜು ವಿದ್ಯಾರ್ಥಿಗಳನ್ನು ಪ್ರಮುಖವಾಗಿ ಗುರಿಯಾಗಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ. ತನಿಖೆಯ ಪ್ರಕಾರ, ಬೆಂಗಳೂರಿನಿಂದ ಕೋಝಿಕ್ಕೋಡ್‌ಗೆ ಎಂಡಿಎಂಎ ತರಲಾಗುತ್ತಿತ್ತು. ಇನ್‌ಸ್ಟಾಗ್ರಾಮ್, ಗಲ್ಫ್ ದೇಶಗಳ ಫೋನ್ ಸಂಖ್ಯೆಗಳು ಹಾಗೂ ಕ್ಯೂಆರ್ ಕೋಡ್ ಮೂಲಕ ಡಿಜಿಟಲ್ ಪಾವತಿ ಪಡೆದು 'ಡೆಡ್ ಡ್ರಾಪ್' ವಿಧಾನದಲ್ಲಿ ಕವರ್ ಸ್ಥಳಗಳಲ್ಲಿ ಡ್ರಗ್ಸ್ ಇಟ್ಟು ವಿತರಿಸಲಾಗುತ್ತಿತ್ತು. ಈ ಅಕ್ರಮಕ್ಕೆ ಜುಂಬಾ ತರಗತಿ ಹಾಗೂ ಬನ್ ಮಾರಾಟವನ್ನು ನೆಪವಾಗಿ ಬಳಸಿಕೊಳ್ಳಲಾಗಿತ್ತು.

ಕಟ್ಟುನಿಟ್ಟಿನ ಕಣ್ಣಿಟ್ಟ ಇಲಾಖೆ!

ಈ ಕಪ್ಪು ದಂಧೆ ಬಹಿರಂಗವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆಯು ಕೀರ್ತನಾ ಮತ್ತು ಕಾವ್ಯಾ ಅವರನ್ನು ಕೆಲಸದಿಂದ ವಜಾಗೊಳಿಸಿದ್ದು, ನೀಷ್ಮಾ ಅವರನ್ನು ವಜಾಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸಮಗ್ರ ಶಿಕ್ಷಾ ಕೇರಳ ಸಂಸ್ಥೆಯು ರಾಜ್ಯಾದ್ಯಂತ ತುರ್ತು ಸುತ್ತೋಲೆ ಹೊರಡಿಸಿದ್ದು, ವಿಶೇಷ ಶಿಕ್ಷಕರ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ಕಣ್ಣಿಡಲು ಎಲ್ಲಾ ಬಿಆರ್‌ಸಿ ಸಂಯೋಜಕರಿಗೆ ನಿರ್ದೇಶನ ನೀಡಿದೆ.