ಬಿಟ್ಟು ತಬಾಹಿ ಯುವಕ ಕೈಯಾರೆ ನದಿ ಸ್ವಚ್ಚಗೊಳಿಸಿ ಸರ್ಕಾರದ ಸನ್ಮಾನಕ್ಕೂ ಪಾತ್ರವಾಗಿದ್ದಾನೆ. ಇದೀಗ ಬಿಟ್ಟು ಪ್ರೇರಣೆಯಿಂದ ಯುವಕರ ತಂಡ ದೇಶದ ನದಿ, ಕೆರೆ, ಕೊಳ ಸ್ವಚ್ಚಗೊಳಿಸುತ್ತಿದೆ. ಈ ತಂಡದ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನವದೆಹಲಿ (ಸೆ.08) ಸ್ವಚ್ಚತೆ ವಿಚಾರದಲ್ಲಿ ಅಭಿಯಾನ, ಜಾಗೃತಿ, ದಂಡ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡರೂ ಭಾರತದಲ್ಲಿ ಪರಿಣಾಮಕಾರಿಯಾಗಿಲ್ಲ. ಮೇಲ್ನೋಟಕ್ಕೆ ಶುಚಿಯಾಗಿ ಕಂಡರೂ ಭಾರತದ ನದಿ, ಕೊಳ, ಕೆರೆ, ಕಾಡು, ರಸ್ತೆ ಬದಿ ಸೇರಿದಂತೆ ಎಲ್ಲೆಡೆ ಕಸ, ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯಗಳು ತುಂಬಿಕೊಂಡಿದೆ. ಇತ್ತೀಚೆಗೆ ಮಧ್ಯಪ್ರದೇಶದ ಯುವಕ ಬಿಟ್ಟು ತಬಾಹಿ ಅಲಿಯಾಸ್ ಸುರೇಂದ್ರ ಚೌಧರಿ ಕೈಯಾರೆ ನದಿ ಸ್ವಚ್ಚಗೊಳಿಸಿ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಧ್ಯಪ್ರದೇಶ ಸರ್ಕಾರ ಕೂಡ ಬಿಟ್ಟು ತಬಾಹಿಗೆ ಸನ್ಮಾನ ಮಾಡಿದೆ. ಇದೀಗ ಬಿಟ್ಟು ತಬಾಹಿಯಿಂದ ಪ್ರೇರಣೆ ಪಡೆದ ಹಲವು ಯುವ ಸಮೂಹ ದೇಶದಲ್ಲಿ ಸ್ವಚ್ಚತಾ ಕಾರ್ಯ ನಡೆಸುತ್ತಿದೆ. ದೆಹಲಿಯ ಮುನಾಕ್ ನಾಲೆಯನ್ನು ಯುವ ಸಮೂಹ ಸ್ವಚ್ಚಗೊಳಿಸಿ ಭಾರಿ ಮೆಚ್ಚುಗೆ ಪಾತ್ರವಾಗಿದೆ.
102 ಕಿಲೋಮೀಟರ್ ಉದ್ದದ ನಾಲೆ
ಹರ್ಯಾಣದ ರಾಜಧಾನಿಗೆ ನೀರು ಪೂರೈಕೆ ಮಾಡುವ ಈ ಡೆಲ್ಲಿ ಮುನಾಕ್ ನಾಲೆ ಕಸದ ರಾಶಿಯಿಂದ ತುಂಬಿಕೊಂಡಿತ್ತು. ಬರೋಬ್ಬರಿ 102 ಕಿಲೋಮೀಟರ್ ಉದ್ದದ ಈ ನಾಲೆಯಲ್ಲಿ ಪ್ಲಾಸ್ಟಿಕ್ ಸೇರಿದಂತೆ ಎಲ್ಲಾ ತ್ಯಾಜ್ಯಗಲು ತುಂಬಿಕೊಂಡಿತ್ತು. ಸ್ವಯಂ ಸೇವಕರ ತಂಡ ಆಗಮಿಸಿ ಈ ನಾಲೆಯನ್ನು ಸ್ವಚ್ಚಗೊಳಿಸಿದೆ. ಟನ್ಗಟ್ಟಲೇ ತ್ಯಾಜ್ಯವನ್ನು ಕೈಯಿಂದಲೇ ತೆಗೆದು ನಾಲೆಯನ್ನು ಸ್ವತಚ್ಚಗೊಳಿಸಿದೆ. ಇದೇ ವೇಳೆ ನಾಲೆಯ ಅಕ್ಕ ಪಕ್ಕದಲ್ಲಿದ್ದ ಕಸಗಳನ್ನು ತೆಗೆದು ಸ್ವಚ್ಚಗೊಳಿಸಲಾಗಿದೆ. ಈ ಯುವ ಸಮೂಹದ ಕಾರ್ಯಕ್ಕೆ ಎಲ್ಲರು ಮೆಚ್ಚುಗೆ ಸೂಚಿಸಿದ್ದಾರೆ.
ಉತ್ತರ ಪ್ರದೇಶದಲ್ಲಿನ ಖ್ಯಾತ 22 ಎಕರೆ ಕೆರೆ ಕಸಗಳಿಂದ ತುಂಬಿ ಹೋಗಿತ್ತು. ಬಹುತೇಕರು ಈ ಕೆರೆಗೆ ಕಸ ಎಸೆದು ಕೆರೆಯ ನೀರಿಗಂತ ಹೆಚ್ಚು ಕಸವೇ ತುಂಬಿಕೊಂಡಿತ್ತು. ತೀವ್ರ ದುರ್ನಾತ ಬೀರುತ್ತಿದ್ದ ಈ ಕೆರೆಯನ್ನು 21 ವರ್ಷದ ಸೇವೇಂದ್ರ ಲೋಧಿ ಹಾಗೂ ಆತನ ಸ್ನೇಹಿತರು ಸ್ವಚ್ಚಗೊಳಿಸಿದ್ದಾರೆ. ಬರೋಬ್ಬರಿ 22 ಎಕರೆ ಹರಡಿಕೊಂಡಿದ್ದ ವಿಶಾಲವಾದ ಈ ಕೆರೆ ಪ್ರಮುಖ ನೀರಿನ ಮೂಲವಾಗಿತ್ತು. ಆದರೆ ಕಸಗಳಿಂದ ತುಂಬಿಹೋಗಿದ್ದ ಕಾರಣ ಈ ನೀರು ಬಳಸಲು ಮಾತ್ರವಲ್ಲ, ಹತ್ತಿರ ಹೋಗಲು ಅಸಾಧ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಈ ಕೆರೆಯನ್ನು ಸ್ವಚ್ಚಗೊಳಿಸಲಾಗಿದೆ.
ದೇಶದ ಹಲವು ಭಾಗದಲ್ಲಿ ಈ ರೀತಿಯ ಸ್ವಚ್ಚತಾ ಕಾರ್ಯಗಳು ನಡೆಯುತ್ತಿದೆ. ಕರ್ನಾಟಕದಲ್ಲಿ ಹಲವು ಭಾಗದಲ್ಲಿ ಯುವಾ ಬ್ರಿಗೇಡ್ ತಂಡ ನದಿ, ಕೆರೆ ಸೇರಿದಂತೆ ಹಲವು ಪ್ರದೇಶ ಸ್ವಚ್ಚಗೊಳಿಸುವ ಕಾರ್ಯ ನಡೆಸಿದೆ. ಆದರೆ ಜನ ಈ ಕುರಿತು ಗಂಭೀರವಾಗದ ಕಾರಣ ಸ್ವಚ್ಚತಾ ಕಾರ್ಯಕ್ಕೆ ಯಶಸ್ಸು ಸಿಗುತ್ತಿಲ್ಲ.

