ಭಾರತದ ಈ ನದಿ ಕೆಂಪು ಬಣ್ಣದಲ್ಲಿ ಹರಿಯುತ್ತದೆ. ದೂರದಿಂದ ನೋಡಿದಾಗ ನದಿಯಲ್ಲಿ ತುಂಬಾ ರಕ್ತವೇ ಹರಿಯುತ್ತಿದೆ ಎಂದು ಭಾಸವಾಗುತ್ತದೆ. ಅತ್ಯಂತ ಸುಂದರ ಹಾಗೂ ಪ್ರಕೃತಿ ರಮಣೀಯ ಈ ನದಿಗೆ ರಿವರ್ ಆಫ್ ಬ್ಲಡ್ ಎಂಬ ಹೆಸರಿದೆ. ಈ ರಕ್ತ ನದಿಯ ರಹಸ್ಯವೇನು? ಎಲ್ಲಿದೆ ಇದು?

ಭಾರತದ ಪ್ರತಿ ನದಿಗಳ ಬಣ್ಣ ಒಂದೊಂದು. ಕಡು ನೀಲಿ, ಕಡು ಹಸಿರು, ಬಿಳಿ , ಕೆಸರು ಮಿಶ್ರಿತ ಸೇರಿದಂತೆ ಹಲವು ಬಣ್ಣಗಳಲ್ಲಿ ನದಿ ಹರಿಯುತ್ತದೆ. ಆದರೆ ಭಾರತದಲ್ಲಿ ರಕ್ತದ ರೀತಿ ಹರಿಯುವ ನದಿ ಇದೆ. ಕೆಂಪು ಬಣ್ಣದಲ್ಲಿ ಈ ನದಿ ಹರಿಯುತ್ತದೆ. ಕಾಡು ಹಾಗೂ ಪರ್ವತಗಳ ನಡುವೆ ಹರಿಯುವ ಈ ನದಿಯ ನೀರು ಕೆಂಪು ಹಾಗೂ ಕೇಸರಿ ಬಣ್ಣದಿಂದ ಕೂಡಿದೆ. ದೂರದಿಂದ ನೋಡಿದರೆ ಈ ನದಿ ತುಂಬಾ ರಕ್ತವೇ ಹರಿಯುತ್ತಿದೆ ಎಂದೇ ಭಾಸವಾಗುತ್ತದೆ. ಈ ನದಿ ಹೆಸರು ಲೋಹಿತ.

ರಿವರ್ ಆಫ್ ಬ್ಲಡ್ ಎಂದೇ ಖ್ಯಾತಿ

ಭಾರತದ ಲೋಹಿತ ನದಿ ರಿವರ್ ಆಫ್ ಬ್ಲಡ್ ಎಂದೇ ಖ್ಯಾತಿಗೊಂಡಿದೆ. ಇದು ಅರುಣಾಚಲ ಪ್ರದೇಶಧಲ್ಲಿ ಹರಿಯುವ ನದಿ.ಲೋಹಿತ್ ನದಿ ಪೂರ್ವ ಟಿಬೆಟ್‌ನ ಜಾಯಲ್ ಚು ಪರ್ವತ ಶ್ರೇಣಿಗಳಲ್ಲಿ ಹುಟ್ಟುತ್ತೆ. ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಮೂಲಕ ಭಾರತವನ್ನು ಪ್ರವೇಶಿಸಿ, ಸುಮಾರು 200 ಕಿಲೋಮೀಟರ್‌ಗಳಷ್ಟು ಹರಿಯುತ್ತೆ. ದಟ್ಟ ಕಾಡು, ಆಳವಾದ ಕಣಿವೆಗಳ ಮೂಲಕ ಸಾಗುವ ಈ ನದಿ, ಕೊನೆಗೆ ಬ್ರಹ್ಮಪುತ್ರ ನದಿಯನ್ನು ಸೇರುತ್ತೆ.

ಈ ನದಿಯನ್ನು 'ರಿವರ್ ಆಫ್ ಬ್ಲಡ್' ಅಂತ ಕರೆಯಲು ಎರಡು ಕಾರಣಗಳಿವೆ. ಒಂದು ಭೌಗೋಳಿಕ ಕಾರಣ. ಲೋಹಿತ್ ಕಣಿವೆ ಮತ್ತು ಮಿಶ್ಮಿ ಬೆಟ್ಟಗಳಲ್ಲಿ 'ಲ್ಯಾಟರೈಟ್' ಎಂಬ ಕಬ್ಬಿಣಾಂಶ ಹೆಚ್ಚಿರುವ ಕೆಂಪು ಮಣ್ಣು ಇದೆ. ಮಳೆಗಾಲದಲ್ಲಿ ಈ ಮಣ್ಣು ನದಿಯ ನೀರಿನಲ್ಲಿ ಸೇರಿಕೊಂಡು, ನೀರು ತುಕ್ಕು ಹಿಡಿದ ಕೆಂಪು ಅಥವಾ ರಕ್ತದ ಬಣ್ಣಕ್ಕೆ ತಿರುಗುತ್ತೆ.

ನದಿ ಹಿಂದಿನ ಪೌರಾಣಿಕ ಕತೆ

ಎರಡನೇ ಕಾರಣ ಪೌರಾಣಿಕ ಕಥೆ. ವಿಷ್ಣುವಿನ ಅವತಾರವಾದ ಪರಶುರಾಮ, ತಂದೆ ಜಮದಗ್ನಿಯ ಆಜ್ಞೆಯಂತೆ ತಾಯಿ ರೇಣುಕಾದೇವಿಯ ಶಿರಚ್ಛೇದ ಮಾಡುತ್ತಾನೆ. ಈ ಮಾತೃಹತ್ಯಾ ದೋಷವನ್ನು ತೊಳೆದುಕೊಳ್ಳಲು ಪರಶುರಾಮ ಇದೇ ನದಿಯಲ್ಲಿ ಸ್ನಾನ ಮಾಡಿದಾಗ, ಅವನ ತಾಯಿಯ ರಕ್ತದಿಂದ ನದಿಯ ನೀರು ಕೆಂಪಾಯಿತು ಎಂದು ನಂಬಲಾಗಿದೆ. ಪರಶುರಾಮ ಕುಂಡ: ಈಶಾನ್ಯ ಭಾರತದ ಅತ್ಯಂತ ಪವಿತ್ರ ಹಿಂದೂ ಯಾತ್ರಾ ಸ್ಥಳಗಳಲ್ಲಿ ಪರಶುರಾಮ ಕುಂಡ ಕೂಡ ಒಂದು. ಕಾಮ್‌ಲಾಂಗ್ ರಿಸರ್ವ್ ಫಾರೆಸ್ಟ್‌ನಲ್ಲಿರುವ ಈ ಕ್ಷೇತ್ರದಲ್ಲಿ, ಪರಶುರಾಮ ಮತ್ತು ಶಿವನಿಗೆ ಅರ್ಪಿತವಾದ ದೇವಾಲಯವಿದೆ. ಮಕರ ಸಂಕ್ರಾಂತಿಯಂದು ಸಾವಿರಾರು ಭಕ್ತರು ಇಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ.

ಇದು ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಸ್ಥಳ. ಈ ನದಿಯ ದಡದಲ್ಲಿ ಪ್ರಯಾಣಿಸುವುದು ಜೀವನದಲ್ಲಿ ಮರೆಯಲಾಗದ ಅನುಭವ ನೀಡುತ್ತೆ. ಭಾರತದಲ್ಲಿ ಎಲ್ಲರಿಗಿಂತ ಮೊದಲು ಸೂರ್ಯೋದಯವನ್ನು ಕಾಣುವುದೇ ಈ ಲೋಹಿತ್ ನದಿ ತೀರದ (ಡೋ ಗ್ರಾಮ) ಜನರು. ದೇಶದ ಮೊದಲ ಸೂರ್ಯಕಿರಣ ಈ ರಕ್ತದ ಬಣ್ಣದ ನೀರಿನ ಮೇಲೆ ಬಿದ್ದಾಗ, ನದಿ ಚಿನ್ನದಂತೆ ಹೊಳೆಯುತ್ತೆ. ಈ ನದಿ ಟಿಬೆಟಿಯನ್ ಹಿಮಾಲಯದಲ್ಲಿ ಹುಟ್ಟಿ, ಅರುಣಾಚಲದ ಕಾಡುಗಳನ್ನು ಸೀಳಿಕೊಂಡು ಬಂದು ಬ್ರಹ್ಮಪುತ್ರವನ್ನು ಸೇರುತ್ತೆ. ಇದರ ಪ್ರವಾಹ ಎಷ್ಟು ರಭಸವಾಗಿರುತ್ತೆ ಅಂದ್ರೆ, ಮೈಲಿಗಟ್ಟಲೆ ದೂರದವರೆಗೆ ಅದರ ಭಯಂಕರ ಗರ್ಜನೆ ಕೇಳಿಸುತ್ತೆ.

ಈ ನದಿ ದಡದಲ್ಲಿ ಮಾತ್ರ ಸಿಗುವ 'ಮಿಶ್ಮಿ ತೀತ' ಎಂಬ ಅಪರೂಪದ ಮೂಲಿಕೆ ಬಂಗಾರಕ್ಕಿಂತಲೂ ಅಮೂಲ್ಯವಾದದ್ದು. ಇದು ಜಗತ್ತಿನ ಬೇರೆಲ್ಲೂ ಸಿಗದ, ಅನೇಕ ರೋಗಗಳನ್ನು ಗುಣಪಡಿಸುವ ದಿವ್ಯೌಷಧ. ತೇಜು ಪಟ್ಟಣದಿಂದ ಭಾರತದ ಕೊನೆಯ ಗಡಿ ಗ್ರಾಮವಾದ ವಾಲೋಂಗ್‌ವರೆಗೆ ಲೋಹಿತ್ ನದಿಯ ಪಕ್ಕದಲ್ಲಿ ಸಾಗುವ ರಸ್ತೆ ಪ್ರಯಾಣ ಅದ್ಭುತ ಅನುಭವ ನೀಡುತ್ತೆ. ಒಂದೆಡೆ ಆಕಾಶമുಟ್ಟುವ ದಟ್ಟ ಹಸಿರು ಪರ್ವತಗಳು, ಇನ್ನೊಂದೆಡೆ ನೂರಾರು ಅಡಿ ಆಳದಲ್ಲಿ ಹರಿಯುವ ಕೆಂಪು ನದಿ, ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಬಿಳಿ ಮಂಜು... ಈ ದಾರಿಯಲ್ಲಿ ಹೋಗ್ತಿದ್ರೆ ಮೋಡಗಳಲ್ಲೇ ತೇಲುತ್ತಿರುವಂತೆ ಭಾಸವಾಗುತ್ತೆ. ಇಲ್ಲಿನ ಬುಡಕಟ್ಟು ಜನರು ಬಿದಿರು ಮತ್ತು ಕಬ್ಬಿಣದ ತಂತಿಗಳಿಂದ ಕಟ್ಟಿದ ಕಿಲೋಮೀಟರ್‌ಗಟ್ಟಲೆ ಉದ್ದದ ತೂಗು ಸೇತುವೆಗಳಿವೆ. ಅವುಗಳ ಮೇಲೆ ನಡೆಯುತ್ತಾ ಕೆಳಗೆ ಹರಿಯುವ ನದಿಯನ್ನು ನೋಡುವುದೇ ಒಂದು ಮರೆಯಲಾಗದ ಸಾಹಸ.