ತನ್ನ ಸ್ನೇಹಿತೆಗೆ ಕಾಕ್ಪಿಟ್ನೊಳಗೆ ಪ್ರವೇಶಿಸಲು ಹಾಗೂ ಅದರಲ್ಲೇ ಉಳಿಯಲು ಅವಕಾಶ ನೀಡಿದ್ದಕ್ಕಾಗಿ ಪೈಲಟ್ನನ್ನು ಸಸ್ಪೆಂಡ್ ಮಾಡಲಾಗಿದೆ. ಅಲ್ಲದೆ, ಏರ್ ಇಂಡಿಯಾಗೆ ವಿಮಾನಯಾನ ನಿಯಂತ್ರಕ ಡಿಜಿಸಿಎ (DGCA) 30 ಲಕ್ಷ ರು. ದಂಡ ವಿಧಿಸಿದೆ.
ನವದೆಹಲಿ: ದುಬೈ-ದಿಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ತನ್ನ ಸ್ನೇಹಿತೆಗೆ ಕಾಕ್ಪಿಟ್ನೊಳಗೆ ಪ್ರವೇಶಿಸಲು ಹಾಗೂ ಅದರಲ್ಲೇ ಉಳಿಯಲು ಅವಕಾಶ ನೀಡಿದ್ದಕ್ಕಾಗಿ ಪೈಲಟ್ನನ್ನು ಸಸ್ಪೆಂಡ್ ಮಾಡಲಾಗಿದೆ. ಅಲ್ಲದೆ, ಏರ್ ಇಂಡಿಯಾಗೆ ವಿಮಾನಯಾನ ನಿಯಂತ್ರಕ ಡಿಜಿಸಿಎ (DGCA) 30 ಲಕ್ಷ ರು. ದಂಡ ವಿಧಿಸಿದೆ. ಕಳೆದ ಫೆಬ್ರವರಿಯಲ್ಲಿ ದುಬೈನಿಂದ ದೆಹಲಿಗೆ ಪ್ರಯಾಣಿಸುವಾಗ ಈ ಘಟನೆ ನಡೆದಿತ್ತು. ವಿಮಾನದ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣ ದಾಖಲಾಗಿತ್ತು.
ಅನಧಿಕೃತ ಜನರನ್ನು ಕಾಕ್ಪಿಟ್ಗೆ (cockpit) ಪ್ರವೇಶಿಸಲು ಅನುಮತಿಸುವುದಿಲ್ಲ ಮತ್ತು ಅಂತಹ ಯಾವುದೇ ಪ್ರವೇಶವು ನಿಯಮಗಳ ಉಲ್ಲಂಘನೆಯಾಗಿದೆ. ಆದರೆ, ವಿಮಾನದ ಕಮಾಂಡ್ನಲ್ಲಿರುವ ಪೈಲಟ್ ಪ್ರಯಾಣದ ಸಮಯದಲ್ಲಿ ಸ್ನೇಹಿತೆಗೆ ಕಾಕ್ಪಿಟ್ಗೆ ಪ್ರವೇಶಿಸಲು ಅನುಮತಿಸಿದ್ದ. ಇದು ಸುರಕ್ಷತಾ ಉಲ್ಲಂಘನೆ ಆಗಿದ್ದರೂ ಏರ್ ಇಂಡಿಯಾ (Air India) ತ್ವರಿತ ಕ್ರಮ ಕೈಗೊಂಡಿರಲಿಲ್ಲ ಎಂದು ಡಿಜಿಸಿಎ ಕಿಡಿಕಾರಿದೆ.
ಕ್ಯಾಬಿನ್ ಸಿಬ್ಬಂದಿ ಮೇಲೆ ಪ್ರಯಾಣಿಕನ ಹಲ್ಲೆ, ಲಂಡನ್ಗೆ ಹೋಗಬೇಕಿದ್ದ ಏರ್ಇಂಡಿಯಾ ವಿಮಾನ ದೆಹಲಿಗೆ ವಾಪಸ್!
ಏರ್ ಇಂಡಿಯಾದಲ್ಲಿ ಚೇಳು
ಏರ್ ಇಂಡಿಯಾ ಸೇರಿದಂತೆ ವಿಮಾನ ಪ್ರಯಾಣದ ವೇಳೆ ಸಾಕಷ್ಟು ಅವಾಂತರಗಳಾಗುತ್ತಿರುವುದು ಇತ್ತೀಚೆಗೆ ಆಗಾಗ ಬೆಳಕಿಗೆ ಬರುತ್ತಿದೆ. ವಿಮಾನದ ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದು, ವಿಮಾನದೊಳಗೆ ಅಸಭ್ಯವಾಗಿ ವರ್ತಿಸುವುದು, ಸಹ ಪ್ರಯಾಣಿಕರ ಮೇಲೆ ದೌರ್ಜನ್ಯವೆಸಗುವುದು ಇತ್ಯಾದಿ ಇತ್ತೀಚೆಗೆ ಕಂಡು ಬಂದ ಪ್ರಕರಣಗಳು. ಇದರ ಜೊತೆ ಕೆಲ ದಿನಗಳ ಹಿಂದೆ ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯೊಬ್ಬರಿಗೆ ಚೇಳು ಕಚ್ಚಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ತೀರಾ ಅಪರೂಪದ ಪ್ರಕರಣದಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಗೆ ಚೇಳು ಕಚ್ಚಿದೆ. ಕಳೆದ ತಿಂಗಳು ಈ ಘಟನೆ ನಡೆದಿದ್ದಾಗಿ ಸ್ವತಃ ಏರ್ಲೈನ್ಸ್ ಖಚಿತಪಡಿಸಿದ್ದು, ಇದು ಅತ್ಯಂತ ಅಪರೂಪದ ಹಾಗೂ ದುರಾದೃಷ್ಟಕರ ಎಂದು ಹೇಳಿದೆ.
ಏರ್ಪೋರ್ಟ್ನಲ್ಲಿ ವಿಮಾನ ಲ್ಯಾಂಡ್ ಆದ ಬಳಿಕ ಮಹಿಳೆಗೆ ಚಿಕಿತ್ಸೆ ನೀಡಲಾಗಿದೆ. ಸ್ವತಃ ವೈದ್ಯರೇ ಆಕೆಯನ್ನು ಪರಿಶೀಲನೆ ಮಾಡಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೂ ದಾಖಲು ಮಾಡಲಾಗಿತ್ತು. ಹೆಚ್ಚೇನೂ ಅಪಾಯವಾಗದ ಕಾರಣ ಅದೇ ದಿನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಏರ್ಲೈನ್ ಶನಿವಾರ ನೀಡಿದ ಪ್ರಕಟಣೆಯಲ್ಲಿ ತಿಳಿಸಿದೆ. "2023ರ ಏಪ್ರಿಲ್ 23ರಂದು ನಮ್ಮ ವಿಮಾನ AI 630 ನಲ್ಲಿ ಪ್ರಯಾಣಿಕರಿಗೆ ಚೇಳೊಂದು ಕಚ್ಚಿದ ಅತ್ಯಂತ ಅಪರೂಪದ ಮತ್ತು ದುರದೃಷ್ಟಕರ ಘಟನೆ ನಡೆದಿದೆ" ಎಂದು ಏರ್ ಇಂಡಿಯಾ ಹೇಳಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ವಿಮಾನಯಾನ ಸಂಸ್ಥೆಯು ಅಗತ್ಯವಿರುವ ಪ್ರೋಟೋಕಾಲ್ ಅನ್ನು ಅನುಸರಿಸಿದೆ ಮತ್ತು ವಿಮಾನದ ಸಂಪೂರ್ಣ ತಪಾಸಣೆ ಕೂಡ ನಡೆಸಿತ್ತು. ವಿಮಾನದಲ್ಲಿ ಚೇಳು ಪತ್ತೆಯಾಗಿರುವ ಕಾರಣ ಇಡೀ ವಿಮಾನಕ್ಕೆ ಹೊಗೆಯಾಡಿಸುವ (ಫ್ಯೂಮಿಗೇಷನ್ ಪ್ರಕ್ರಿಯೆ) ಕೂಡ ನಡೆಸಲಾಗಿದೆ ಎಂದು ಏರ್ಲೈನ್ಸ್ ತಿಳಿಸಿದೆ.
ಏರ್ ಇಂಡಿಯಾ- ನೇಪಾಳ ವಿಮಾನ ಮುಖಾಮುಖಿ, ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ!
ಕಳೆದ ವರ್ಷ ಏರ್ ಇಂಡಿಯಾ ವಿಮಾನದಲ್ಲಿ ಹಾವು ಪತ್ತೆಯಾಗಿತ್ತು: ಕಳೆದ ವರ್ಷ ಅಂದರೆ 2022ರಲ್ಲಿ ದುಬೈನಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಹಾವು ಕಾಣಿಸಿಕೊಂಡಿತ್ತು. ಹಾವು ಕಂಡ ತಕ್ಷಣ ವಿಮಾನದಲ್ಲಿ ಗಲಿಬಿಲಿ ಉಮಟಾಗಿತ್ತು. ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ವಿಮಾನವನ್ನು ತಲುಪಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರ ಕರೆದುಕೊಂಡು ಬಂದಿದ್ದರು. ಬಳಿಕ ಪ್ರಯಾಣಿಕರನ್ನು ಸಮೀಪದ ಹೋಟೆಲ್ಗೆ ಕರೆದೊಯ್ಯಲಾಯಿತು. ದುಬೈನಿಂದ ಕರಿಪುರಕ್ಕೆ ಬರುತ್ತಿದ್ದ ಈ ವಿಮಾನದಿಂದ ಹಾವನ್ನು ಹೊರಹಾಕಲು ಸಾಕಷ್ಟು ಶ್ರಮ ವಹಿಸಲಾಗಿತ್ತು. ಹಾವನ್ನು ಹೊರತೆಗೆಯಲು ವಿಳಂಬವಾದ ಕಾರಣಈ ವಿಮಾನವನ್ನು ರದ್ದುಗೊಳಿಸಲಾಗಿತ್ತು.
ಘಟನೆಯ ಬೆನ್ನಲ್ಲಿಯೇ ಏರ್ ಇಂಡಿಯಾ ತನ್ನ ಕ್ಯಾಟರಿಂಗ್ ವಿಭಾಗಕ್ಕೆ ಸಲಹೆಯನ್ನು ನೀಡಿದ್ದು, ಇಡೀ ವಿಭಾಗದಲ್ಲಿ ಡ್ರೈಕ್ಲೀನರ್ ವ್ಯವಸ್ಥೆಯನ್ನು ಬಳಸಿಕೊಂಡು, ಸಣ್ಣಪುಟ್ಟ ಕ್ರಿಮಿಗಳಿದ್ದರೆ ಗಮನಿಸುವಂತೆ ಸೂಚಿಸಿದೆ. ಅಗತ್ಯಬಿದ್ದಲ್ಲಿ, ಬೆಡ್ ಬಗ್ಗಳ ತೊಂದರೆ ನಿವಾರಿಸಲು ಹೊಗೆಯಾಡಿಸುವ ಪ್ರಕ್ರಿಯೆಯನ್ನೂ ನಡೆಸಿ. ವಿಮಾನಕ್ಕೆ ವಸ್ತುಗಳನ್ನು ಹಾಕುವಾಗ ಬಹಳ ಎಚ್ಚರಿಕೆಯಿಂದ ಇರುವಂತೆ ಏರ್ ಇಂಡಿಯಾ ತಿಳಿಸಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
