ಅವಿಶ್ವಾಸ ನಿರ್ಣಯಕ್ಕೆ ಸೋಲಾಗುತ್ತದೆ ಎಂಬುದು ವಿಪಕ್ಷಗಳಿಗೂ ಗೊತ್ತಿದೆ. ಆದರೂ ಮಣಿಪುರ ವಿಷಯವಾಗಿ ಪ್ರಧಾನಿ ಮಾತನಾಡುವಂತೆ ಮಾಡುವ ಮೂಲಕ ನೈತಿಕೆ ಗೆಲುವು ಸಾಧಿಸಲು ಈ ನಿರ್ಣಯ ಮಂಡಿಸಿವೆ.

ನವದೆಹಲಿ (ಜುಲೈ 29, 2023): ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಮಂಡಿಸುವ ಅವಿಶ್ವಾಸ ನಿರ್ಣಯದ ಚರ್ಚೆ ಯಾವಾಗ ಆರಂಭವಾಗಲಿದೆ ಎಂಬುದರ ಕುರಿತಾಗಿ ಸೋಮವಾರ ದಿನಾಂಕ ನಿಗದಿಪಡಿಸಲಾಗುತ್ತದೆ. ಈ ಚರ್ಚೆ ಆರಂಭವಾಗುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಸದನದಲ್ಲಿ ಹಾಜರಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Add Asianetnews Kannada as a Preferred SourcegooglePreferred

ಮಣಿಪುರ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸಿರುವ ವಿರೋಧ ಪಕ್ಷಗಳು ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಬುಧವಾರ ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ಇದನ್ನು ಸ್ವೀಕರಿಸಿದ ಸ್ಪೀಕರ್‌ ಓಂ ಬಿರ್ಲಾ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದರು. 3 ದಿನ ಕಳೆದರೂ ಅವಿಶ್ವಾಸ ನಿರ್ಣಯವನ್ನು ಚರ್ಚೆ ತೆಗೆದುಕೊಂಡಿಲ್ಲ ಎಂದು ಶುಕ್ರವಾರವೂ ವಿಪಕ್ಷಗಳು ಸದನದಲ್ಲಿ ಪ್ರತಿಭಟನೆ ನಡೆಸಿದವು. ಈ ಹಿನ್ನೆಲೆಯಲ್ಲಿ ಚರ್ಚೆಗೆ ಸೋಮವಾರ ದಿನಾಂಕ ನಿಗದಿಪಡಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ: Manipur Violence: ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಕಾಂಗ್ರೆಸ್‌, ಕೆಸಿಆರ್‌ ಪಕ್ಷ

ಈ ಅವಿಶ್ವಾಸ ನಿರ್ಣಯಕ್ಕೆ ಸೋಲಾಗುತ್ತದೆ ಎಂಬುದು ವಿಪಕ್ಷಗಳಿಗೂ ಗೊತ್ತಿದೆ. ಆದರೂ ಮಣಿಪುರ ವಿಷಯವಾಗಿ ಪ್ರಧಾನಿ ಮಾತನಾಡುವಂತೆ ಮಾಡುವ ಮೂಲಕ ನೈತಿಕೆ ಗೆಲುವು ಸಾಧಿಸಲು ಈ ನಿರ್ಣಯ ಮಂಡಿಸಿವೆ.

ಮಣಿಪುರ, ಅವಿಶ್ವಾಸ ಗದ್ದಲಕ್ಕೆ ಸಂಸತ್‌ ಕಲಾಪ ಭಂಗ
ಮಣಿಪುರ ಹಿಂಸಾಚಾರ ಹಾಗೂ ಅವಿಶ್ವಾಸ ನಿರ್ಣಯದ ಚರ್ಚೆಗೆ ವಿಪಕ್ಷಗಳು ಪಟ್ಟು ಹಿಡಿದ ಪರಿಣಾಮ ಸತತ 7ನೇ ದಿನವಾದ ಶುಕ್ರವಾರ ಕೂಡ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಗಳು ಭಂಗವಾಗಿವೆ. ಈ ಗದ್ದಲದ ನಡುವೆಯೇ 3 ಮಸೂದೆಗಳಿಗೆ ಲೋಕಸಭೆ ಅಂಗೀಕಾರ ನೀಡಿದೆ.

ಇದನ್ನೂ ಓದಿ: Manipur: ಬಿಎಸ್‌ಎಫ್‌ ಯೋಧನಿಂದ ಮಹಿಳೆಗೆ ಲೈಂಗಿಕ ಕಿರುಕುಳ ; ಸಿಸಿ ಕ್ಯಾಮರಾದಲ್ಲಿ ಸೆರೆ

ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು, ಬೆಳಗ್ಗೆ ಕಲಾಪ ಆರಂಭವಾದ ಕೂಡಲೇ ಅವಿಶ್ವಾಸ ನಿರ್ಣಯದ ಚರ್ಚೆಗೆ ಪಟ್ಟು ಹಿಡಿದರು. ಇದಕ್ಕೆ ಉತ್ತರಿಸಿದ ಸಂಸದೀಯ ಸಚಿವ ಪ್ರಹ್ಲಾದ ಜೋಶಿ, ‘ಅವಿಶ್ವಾಸ ನಿರ್ಣಯ ಮಂಡಿಸಿ 10 ದಿನದಲ್ಲಿ ಚರ್ಚೆ ನಡೆಯಬೇಕು ಎಂಬ ನಿಯಮವಿದೆ. ಮೊನ್ನೆಯಷ್ಟೇ ಮಂಡಿಸಿದ್ದೀರಿ. ಅಷ್ಟು ಗಡಿಬಿಡಿ ಏಕೆ?’ ಎಂದರು. ಆಗ ಮಾತಿನ ಚಕಮಕಿ ನಡೆದು ಕಲಾಪ ಮುಂದೂಡಿಕೆ ಆಯಿತು. ಈ ಗದ್ದಲದ ನಡುವೆಯೇ 3 ವಿಧೇಯಕಗಳಿಗೆ ಸದನ ಅನುಮೋದನೆ ನೀಡಿತು.

ರಾಜ್ಯಸಭೆಯಲ್ಲಿ ಸ್ಪೀಕರ್‌-ಡೆರಿಕ್‌ ಚಕಮಕಿ:
ಈ ನಡುವೆ ರಾಜ್ಯಸಭೆಯಲ್ಲೂ ದಿನದ ಕಲಾಪವನ್ನು ಬೆಳಗ್ಗೆಯೇ ಮುಂದೂಡಲಾಯಿತು. ಇದಕ್ಕೂ ಮುನ್ನ ಸ್ಪೀಕರ್‌ ಜಗದೀಪ್‌ ಧನಕರ್‌ ಹಾಗೂ ಟಿಎಂಸಿ ಸಂಸದ ಡೆರಿಕ್‌ ಓ’ಬ್ರಿಯಾನ್‌ ನಡುವೆ ಭಾರಿ ವಾಕ್ಸಮರ ನಡೆಯಿತು.

ಇದನ್ನೂ ಓದಿ: Manipur: ಒಂದಲ್ಲ.. ಎರಡಲ್ಲ.. 7 ಅತ್ಯಾಚಾರ ನಡೆದಿದೆ: ಬಗೆದಷ್ಟೂ ಬಯಲಿಗೆ ಬರ್ತಿದೆ ರೇಪ್‌ ಕೇಸ್‌!

47 ವಿಪಕ್ಷ ಸಂಸದರು, ‘ಇತರ ಕಲಾಪ ಬದಿಗೊತ್ತಿ ಮಣಿಪುರ ಚರ್ಚೆ ಅವಕಾಶ ನೀಡಿ’ ಎಂದು ನೋಟಿಸ್‌ ನೀಡಿದ್ದರು. ಇದಕ್ಕೆ ಧನಕರ್‌ ಅವಕಾಶ ನೀಡಲಿಲ್ಲ. ಆಗ ಓ’ಬ್ರಿಯಾನ್‌ ಮೇಜು ಕುಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕ್ರುದ್ಧರಾದ ಧನಕರ್‌, ‘ಇಂಥ ನಾಟಕ ಸಹಿಸಲ್ಲ’ ಎಂದು ಹೇಳಿ ಸದನ ಮುಂದೂಡಿದರು.

ಇದನ್ನೂ ಓದಿ: Manipur: ಪೊಲೀಸರಿಂದ ಬಿಡಿಸಿ ಎಳೆದೊಯ್ದು ನಗ್ನ ಪರೇಡ್‌ ಮಾಡಿ ರೇಪ್‌; ಈ ವಿಕೃತ ಘಟನೆಗೆ ಇಲ್ಲಿದೆ ಅಸಲಿ ಕಾರಣ..