ಜ್ವರ ಅಥವಾ ವೈರಲ್ ಸೋಂಕುಗಳು ಹೃದಯದ ಸ್ನಾಯುಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ಈ ಕುರಿತ ಒಂದು ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ಹವಾಮಾನ ಬದಲಾದಾಗ ಬರುವ ಜ್ವರ, ಶೀತ ಅಥವಾ ಕೋವಿಡ್-19 ನಂತಹ ವೈರಲ್ ಸೋಂಕುಗಳು ಬಂದಾಗ ಮೈಕೈ ನೋವು, ಸುಸ್ತು ಕಾಣಿಸಿಕೊಳ್ಳುವುದು ಸಹಜ. ಇವು ಕೆಲವು ದಿನಗಳ ವಿಶ್ರಾಂತಿಯ ನಂತರ ಗುಣವಾಗುತ್ತವೆ ಎಂದು ನಾವು ಭಾವಿಸುತ್ತೇವೆ. ಆದರೆ ವೈದ್ಯಕೀಯ ತಜ್ಞರ ಪ್ರಕಾರ, ಕೆಲವು ವೈರಸ್‌ಗಳು ಕೇವಲ ಶ್ವಾಸಕೋಶಕ್ಕೆ ಸೀಮಿತವಾಗದೆ ನೇರವಾಗಿ ನಿಮ್ಮ ಹೃದಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.

ವೈರಾಣುಗಳ ವಿರುದ್ಧ ಹೋರಾಡುವ ಪ್ರಕ್ರಿಯೆಯಲ್ಲಿ ನಮ್ಮ ದೇಹದಲ್ಲಿ ಉಂಟಾಗುವ ಉರಿಯೂತವು (Inflammation) ಹೃದಯದ ಸ್ನಾಯುಗಳನ್ನು ಮತ್ತು ಹೃದಯದ ಹೊರಪದರವನ್ನು ಹಾನಿಗೊಳಿಸಬಹುದು. ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ಕಾಣಿಸಿಕೊಳ್ಳುವ 5 ಪ್ರಮುಖ ಎಚ್ಚರಿಕೆಯ ಸಂಕೇತಗಳನ್ನು ಇಲ್ಲಿ ನೀಡಲಾಗಿದೆ. ಇವುಗಳನ್ನು ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ.

1. ಮಲಗಿದಾಗ ಹೆಚ್ಚಾಗುವ ಎದೆನೋವು

ನಿಮಗೆ ಎದೆನೋವು ಕಾಣಿಸಿಕೊಳ್ಳುತ್ತಿದ್ದು, ಅದು ಮಲಗಿದಾಗ ಅಥವಾ ಪಲ್ಟಿಯಾದಾಗ ಹೆಚ್ಚಾಗಿ, ಸ್ವಲ್ಪ ಮುಂದಕ್ಕೆ ಬಾಗಿದಾಗ ಕಡಿಮೆಯಾದಂತೆ ಅನಿಸಿದರೆ ಅದು ವೈರಲ್ ಸೋಂಕಿನಿಂದ ಹೃದಯದ ಪದರವು ಊದಿಕೊಂಡಿದೆ (Pericarditis) ಎಂಬುದರ ಸಂಕೇತವಾಗಿರಬಹುದು.

2. ಅತಿಯಾದ ಉಸಿರಾಟದ ತೊಂದರೆ

ಸುಮ್ಮನೆ ಕುಳಿತಿದ್ದಾಗಲೂ ಉಸಿರಾಟಕ್ಕೆ ತೊಂದರೆಯಾಗುವುದು ಅಥವಾ ಮಧ್ಯರಾತ್ರಿ ಇದ್ದಕ್ಕಿದ್ದಂತೆ ಉಸಿರುಗಟ್ಟಿದಂತಾಗಿ ಎಚ್ಚರವಾಗುವುದು ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ. ಇದು ಹೃದಯದ ದೌರ್ಬಲ್ಯದ ಲಕ್ಷಣವಾಗಿರಬಹುದು.

3. ಅನಿಯಮಿತ ಹೃದಯ ಬಡಿತ (ದವದವ ಎನ್ನುವುದು)

ಜ್ವರ ಕಡಿಮೆಯಾದ ನಂತರವೂ ನಿಮ್ಮ ಹೃದಯ ಅತಿ ವೇಗವಾಗಿ ಬಡಿಯುತ್ತಿದ್ದರೆ ಅಥವಾ ಬಡಿತದಲ್ಲಿ ಏರುಪೇರು ಕಾಣಿಸಿಕೊಳ್ಳುತ್ತಿದ್ದರೆ ಅದು 'ಅರಿತ್ಮಿಯಾ' (Arrhythmia) ಎಂಬ ಹೃದಯದ ಸಮಸ್ಯೆಗೆ ದಾರಿಯಾಗಬಹುದು.

4. ಕಾಲುಗಳಲ್ಲಿ ಊತ ಮತ್ತು ಇದ್ದಕ್ಕಿದ್ದಂತೆ ತೂಕ ಹೆಚ್ಚಾಗುವುದು

ಹೃದಯದ ಪಂಪಿಂಗ್ ಸಾಮರ್ಥ್ಯ ಕಡಿಮೆಯಾದಾಗ ದೇಹದಲ್ಲಿ ದ್ರವದ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಹಿಮ್ಮಡಿ ಮತ್ತು ಪಾದಗಳಲ್ಲಿ ಇದ್ದಕ್ಕಿದ್ದಂತೆ ಊತ ಕಾಣಿಸಿಕೊಳ್ಳಬಹುದು. ಕೇವಲ 24 ರಿಂದ 48 ಗಂಟೆಗಳಲ್ಲಿ ಗಮನಾರ್ಹವಾಗಿ ತೂಕ ಹೆಚ್ಚಾಗುವುದು ಕೂಡ ಹೃದಯದ ಸಮಸ್ಯೆಯ ಲಕ್ಷಣವಾಗಿದೆ.

5. ವಿಪರೀತ ಸುಸ್ತು ಮತ್ತು ತಲೆಸುತ್ತು

ಸೋಂಕು ಕಡಿಮೆಯಾದ ಮೇಲೂ ವಿಪರೀತ ಸುಸ್ತು ಇರುವುದು, ತಲೆಸುತ್ತು ಅಥವಾ ಪ್ರಜ್ಞೆ ತಪ್ಪುವುದು ಕಂಡುಬಂದರೆ ಅದು ರಕ್ತದೊತ್ತಡ (Blood Pressure) ಕುಸಿಯುತ್ತಿರುವುದರ ಸಂಕೇತವಾಗಿರಬಹುದು.

ಓಪನ್ ಹಾರ್ಟ್ ಜರ್ನಲ್ ಮತ್ತು ಕರೆಂಟ್ ಪ್ರಾಬ್ಲಮ್ಸ್ ಇನ್ ಕಾರ್ಡಿಯಾಲಜಿ ಜರ್ನಲ್'ಗಳ ಅಧ್ಯಯನದ ಪ್ರಕಾರ, ಕೋವಿಡ್ ಸೇರಿದಂತೆ ಇತರ ತೀವ್ರ ವೈರಲ್ ಸೋಂಕುಗಳಿಂದ ಹೃದಯದ ಸಮಸ್ಯೆಗಳ ಅಪಾಯ ಹೆಚ್ಚಿರುತ್ತದೆ. ಆದ್ದರಿಂದ ಇವುಗಳನ್ನು ಕೇವಲ ಸಾಮಾನ್ಯ ಫ್ಲೂ ಎಂದು ಭಾವಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಅಗತ್ಯ.