- Home
- News
- State
- ನಂದಿನಿ ಹಾಲಿನ ದಿಢೀರ್ ₹10 ಏರಿಕೆಗೆ ಆಗ್ರಹ! ಸರ್ಕಾರಕ್ಕೆ 3 ದಿನ ಗಡುವು ಕೊಟ್ಟ ಬಮುಲ್ ನಿರ್ದೇಶಕರು!
ನಂದಿನಿ ಹಾಲಿನ ದಿಢೀರ್ ₹10 ಏರಿಕೆಗೆ ಆಗ್ರಹ! ಸರ್ಕಾರಕ್ಕೆ 3 ದಿನ ಗಡುವು ಕೊಟ್ಟ ಬಮುಲ್ ನಿರ್ದೇಶಕರು!
ರಾಜ್ಯದಲ್ಲಿ ತೀವ್ರ ಬರಗಾಲ ಮತ್ತು ಮೇವಿನ ಕೊರತೆಯಿಂದ ಹೈನುಗಾರರು ಸಂಕಷ್ಟದಲ್ಲಿದ್ದಾರೆ. ರೈತರ ನೆರವಿಗಾಗಿ ನಂದಿನಿ ಹಾಲಿನ ದರವನ್ನು ಲೀಟರ್ಗೆ 10 ರೂ. ಹೆಚ್ಚಿಸುವಂತೆ ಬಮೂಲ್ ಆಗ್ರಹಿಸಿದೆ. ಸರ್ಕಾರಕ್ಕೆ 3 ದಿನಗಳ ಗಡುವು ನೀಡಿದ್ದು, ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು (ಸೆ.18): ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ಹಾಗೂ ಮೇವಿನ ಕೊರತೆಯಿಂದ ಕಷ್ಟಪDತ್ತಿರುವ ರೈತರ ರಕ್ಷಣೆಗಾಗಿ ನಂದಿನಿ ಹಾಲಿನ ದರವನ್ನು ಲೀಟರ್ಗೆ 10 ರೂಪಾಯಿಗಳಷ್ಟು ಏರಿಕೆ ಮಾಡಬೇಕು ಎಂದು ಬಮೂಲ್ (BAMUL) ನಿರ್ದೇಶಕ ನಾಗರಾಜ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆಗೆ ಮಾತನಾಡಿದ ಅವರು, ದರ ಏರಿಕೆಗೆ 3 ದಿನಗಳ ಗಡುವು ನೀಡಿದ್ದು, ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ರೈತರ ಸಂಕಷ್ಟ ಮತ್ತು ದರ ಏರಿಕೆಯ ಅಗತ್ಯತೆ:
ರಾಜ್ಯದಲ್ಲಿ ಪ್ರಸ್ತುತ ಬರಗಾಲದ ಛಾಯೆ ಮುಂದುವರಿದಿದ್ದು, ಹಸುಗಳಿಗೆ ಮೇವಿನ ತೀವ್ರ ಕೊರತೆ ಎದುರಾಗಿದೆ. ಇದರ ಜತೆಗೆ ಹಸುಗಳ ನೆಲಹಾಸು (Rubber Mat) ಹಾಗೂ ಪಶು ಆಹಾರದ ದರ ಗಗನಕ್ಕೇರಿದೆ. ಈ ಎಲ್ಲಾ ಖರ್ಚುಗಳನ್ನು ಭರಿಸಿ ಹೈನುಗಾರಿಕೆ ನಡೆಸುವುದು ರೈತರಿಗೆ ಕಷ್ಟಕರವಾಗಿದೆ ಎಂದು ನಾಗರಾಜ್ ಕಳವಳ ವ್ಯಕ್ತಪಡಿಸಿದ್ದಾರೆ.
ಇತರ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದಾಗ ಗ್ರಾಹಕರು ಅದನ್ನು ಭರಿಸುತ್ತಾರೆ. ಅದೇ ರೀತಿ ರೈತರ ಕಷ್ಟಕ್ಕೂ ಸಾರ್ವಜನಿಕರು ಹಾಗೂ ಗ್ರಾಹಕರು ಸ್ಪಂದಿಸಬೇಕು. ರೈತರಿಗೆ ಆರ್ಥಿಕವಾಗಿ ನೆರವಾಗಲು ಹಾಲಿನ ದರವನ್ನು 10 ರೂ. ಹೆಚ್ಚಿಸಬೇಕು ಹಾಗೂ ರೈತರಿಗೆ ನೀಡುವ ಪ್ರೋತ್ಸಾಹ ಧನವನ್ನು 8 ರೂ.ಗೆ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮೂರು ದಿನಗಳ ಗಡುವು, 'ವಿಧಾನ್ಸೌಧ ಚಲೋ' ಎಚ್ಚರಿಕೆ:
ಹಾಲಿನ ದರ ಏರಿಕೆ ಮಾಡುವ ಸಂಬಂಧ ಸರ್ಕಾರಕ್ಕೆ ಮೂರು ದಿನಗಳ ಗಡುವು ನೀಡುತ್ತಿರುವುದಾಗಿ ತಿಳಿಸಿರುವ ನಾಗರಾಜ್, ಒಂದು ವೇಳೆ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳದಿದ್ದರೆ ರೈತರನ್ನು ಒಗ್ಗೂಡಿಸಿ 'ವಿಧಾನ್ಸೌಧ ಚಲೋ' ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಹಾಲಿನ ದರ ಏರಿಕೆಯ ಅಂತಿಮ ನಿರ್ಧಾರವನ್ನು ಸರ್ಕಾರವೇ ಕೈಗೊಳ್ಳಬೇಕಿದ್ದು, ರೈತರ ಹಿತದೃಷ್ಟಿಯಿಂದ ಹಾಲಿನ ದರ ಏರಿಕೆಯಾಗಲೇಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

