‘ಶೀಘ್ರ ನಿಮ್ಮ ಮುಂದೆ ಬರ್ತೀವಿ’: ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಸಂದೇಶ!
ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಶೂಟಿಂಗ್ ಕೊನೆಗೂ ಮುಕ್ತಾಯಗೊಂಡಿದೆ. ಈ ಸಿನಿಮಾದ ಅಪ್ಡೇಟ್ಸ್ ಕೇಳುತ್ತಿದ್ದ ಅಭಿಮಾನಿಗಳಿಗೆ ‘ಶೀಘ್ರ ನಿಮ್ಮ ಮುಂದೆ ಬರ್ತೀವಿ’ ಎಂಬ ಶುಭ ಸುದ್ದಿಯನ್ನು ಸುದೀಪ್ ನೀಡಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ, ‘ಮಹಾಬಲಿಪುರಂನಲ್ಲಿ ಮ್ಯಾಕ್ಸ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದೇವೆ. 10 ತಿಂಗಳ ಸುದೀರ್ಘ ಪಯಣ ಇದಾಗಿತ್ತು. ಈ ಪಯಣದಲ್ಲಿ ಪ್ರತಿ ಕ್ಷಣವನ್ನೂ ಆನಂದಿಸಿದ್ದೇನೆ. ಅದ್ಭುತ ತಂಡ ಹಾಗೂ ಕಲಾವಿದರೊಂದಿಗೆ ಕೆಲಸ ಮಾಡಿದ್ದು ಅವಿಸ್ಮರಣೀಯ ಅನುಭವ’ ಎಂದಿದ್ದಾರೆ.
ಈ ಪೋಸ್ಟ್ ಜೊತೆಗೆ ಈ ಶೂಟಿಂಗ್ ಸ್ಥಳದ ಆಸುಪಾಸಿನ ಜಾಗಗಳು, ಶೂಟಿಂಗ್ ಸೆಟ್, ತಮ್ಮ ಮೇಕಪ್ ರೂಂ ಇವನ್ನೆಲ್ಲ ತೋರಿಸುವ ವೀಡಿಯೋವನ್ನೂ ಪೋಸ್ಟ್ ಮಾಡಿದ್ದಾರೆ. ‘ಮ್ಯಾಕ್ಸ್’ ಸಿನಿಮಾವನ್ನು ವಿಜಯ್ ಕಾರ್ತಿಕೇಯನ್ ನಿರ್ದೇಶನ ಮಾಡಿದ್ದಾರೆ.
ಈ ಪ್ಯಾನ್ ಇಂಡಿಯಾ ಸಿನಿಮಾ ಮೂರು ತಿಂಗಳಲ್ಲಿ ಪೋಸ್ಟ್ ಪ್ರೊಡಕ್ಷನ್ ಮುಗಿಸಿ ತೆರೆಗೆ ಬರುವ ಸಾಧ್ಯತೆ ಇದೆ. ಅಂದಹಾಗೆ, ಸುದೀಪ್ ಜೊತೆ ವರಲಕ್ಷ್ಮಿ ಶರತ್ ಕುಮಾರ್, ಸಂಯುಕ್ತಾ ಹೊರನಾಡ್, ಸುಕೃತಾ, ಅನಿರುದ್ಧ ಭಟ್ ಸೇರಿದಂತೆ ಅನೇಕರು ನಟಿಸಿದ್ದಾರೆ.
ಕೆಲ ದಿನಗಳ ಹಿಂದೆ, ಮ್ಯಾಕ್ಸ್ ಚಿತ್ರದ ಮಾಹಿತಿಯನ್ನ ಮೇಲಿಂದ ಮೇಲೆ ಕೇಳುತ್ತಿದ್ದವರಿಗೆ ಸುದೀಪ್ ಉತ್ತರ ಕೊಟ್ಟಿದ್ದರು. ಅಪ್ಡೇಟ್ಸ್ ಬಗ್ಗೆ ಅನೇಕರು ಟ್ವೀಟ್ಗಳನ್ನು ಮಾಡುತ್ತಿರುವುದು ನೋಡಲು ಕ್ರೇಜಿ ಎನಿಸುತ್ತದೆ.
ಬಿಡುಗಡೆ ಆಗುತ್ತಿರುವ ಬೇರೆ ಸಿನಿಮಾಗಳ ಜೊತೆ ಸ್ಪರ್ಧೆ ಮಾಡಲು ಅಥವಾ ಬೇರೆ ನಟರ ಜೊತೆ ಪೈಪೋಟಿ ಮಾಡಲು ಅಪ್ಡೇಟ್ಸ್ ನೀಡುವುದಿಲ್ಲ. ಚಿತ್ರತಂಡದಿಂದ ಪೂರ್ಣವಾಗಿ ಏನನ್ನಾದರೂ ಅನೌನ್ಸ್ ಮಾಡಬೇಕು ಎಂದಾಗ ಅಪ್ಡೇಟ್ಸ್ ನೀಡಲಾಗುವುದು ಎಂದು ಹೇಳಿದ್ದರು.
ಪೊಲೀಸ್ ರೋಲ್ ನಲ್ಲಿ ಕಿಚ್ಚ..?: ಅರ್ಜುನ್ ಮಹಾಕ್ಷಯ್. ಖಡಕ್ ಪೊಲೀಸ್ ಆಫೀಸರ್. 2 ತಿಂಗಳು ಅಮಾನತಿನಲ್ಲಿದ್ದ ಅರ್ಜುನ್ ಬಳಿಕ ಹೊಸ ಪೊಲೀಸ್ ಠಾಣೆಯಲ್ಲಿ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳುತ್ತಾನೆ. ಈ ಹಾದಿಯಲ್ಲಿ ಮಂತ್ರಿಗಳ ಮಗ ತನ್ನ ಇಲಾಖೆಯ ಅಧಿಕಾರಿಗಳ ಮೇಲೆ ದೌರ್ಜನ್ಯ ಎಸಗುತ್ತಿರುವುದನ್ನು ನೋಡಿ ಬಂಧಿಸುತ್ತಾನೆ.
ದುರದೃಷ್ಟವಶಾತ್ ಆತ ಸಾಯ್ತಾನೆ. ಮುಂದೆ ಅರ್ಜುನ್ ಏನು ಮಾಡ್ತಾನೆ? ಅನ್ನೋದೇ 'ಮ್ಯಾಕ್ಸ್' ಸಿನಿಮಾ ಕಥೆ ಅನ್ನುವ ವಿಚಾರ ಬುಕ್ ಮೈ ಶೋನಲ್ಲಿ ಹಿಂದೆ ಕಂಡು ಬಂದಿತ್ತು. ನಿಜಕ್ಕೂ ಚಿತ್ರದ ಕಥೆ ಇದೇನಾ ಅನ್ನುವುದಕ್ಕೆ ಉತ್ತರ ಚಿತ್ರ ತೆರೆಗೆ ಬಂದಾಗಲೇ ಗೊತ್ತಾಗಲಿದೆ.