- Home
- Life
- Relationship
- ಕಿಸ್ ಮಾಡಿ ವಿವಾದಕ್ಕೀಡಾಗಿದ್ದ ಗಾಯಕನಿಗೆ ಮತ್ತೆ ಸಂಕಷ್ಟ: ಕೋರ್ಟ್ ಮೆಟ್ಟಿಲೇರಿದ ಉದಿತ್ ನಾರಾಯಣ್ ಮೊದಲ ಪತ್ನಿ
ಕಿಸ್ ಮಾಡಿ ವಿವಾದಕ್ಕೀಡಾಗಿದ್ದ ಗಾಯಕನಿಗೆ ಮತ್ತೆ ಸಂಕಷ್ಟ: ಕೋರ್ಟ್ ಮೆಟ್ಟಿಲೇರಿದ ಉದಿತ್ ನಾರಾಯಣ್ ಮೊದಲ ಪತ್ನಿ
Udit Narayan first wife complaint: ಖ್ಯಾತ ಗಾಯಕ ಉದಿತ್ ನಾರಾಯಣ್ ಅವರ ಮೊದಲ ಪತ್ನಿ ರಂಜನಾ ತಮ್ಮ ಮಾಜಿ ಪತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಉದಿತ್ ನಾರಾಯಣ್ ವಿರುದ್ಧ ಠಾಣೆ ಮೆಟ್ಟಿಲೇರಿದ ಮೊದಲ ಪತ್ನಿ
ವೇದಿಕೆಯಲ್ಲಿ ಸಹ ಗಾಯಕಿಯರಿಗೆ, ಮಹಿಳಾ ಅಭಿಮಾನಿಗಳಿಗೆ ಚುಂಬಿಸಿ ವಿವಾದ ಸೃಷ್ಟಿಸಿದ್ದ ಖ್ಯಾತ ಹಿನ್ನೆಲೆ ಗಾಯಕ ಉದಿತ್ ನಾರಾಯಣ್ ಅವರು ಈಗ ಹೊಸ ವಿವಾದದಲ್ಲಿ ಸಿಲುಕಿದ್ದು, ಸ್ವತಃ ಅವರ ಮೊದಲ ಪತ್ನಿಯೇ ಅವರ ವಿರುದ್ಧ ಗಂಭೀರ ಆರೋಪ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹೌದು ಗಾಯಕ ಉದಿತ್ ನಾರಾಯಣ್ ಅವರ ಮೊದಲ ಪತ್ನಿ ರಂಜನಾ ಬಿಹಾರದ ಸುಪೌಲ್ನಲ್ಲಿರುವ ಮಹಿಳಾ ಪೊಲೀಸ್ ಠಾಣೆಗೆ ಉದಿತ್ ನಾರಾಯಣ್ ವಿರುದ್ಧ ದೂರು ನೀಡಿದ್ದು, ಉದಿತ್ ನಾರಾಯಣ್, ಅವರ ಇಬ್ಬರು ಸಹೋದರರು ಮತ್ತು ಎರಡನೇ ಪತ್ನಿಯ ವಿರುದ್ಧವೂ ಗಂಭೀರ ಕ್ರಿಮಿನಲ್ ಅಪರಾಧಗಳ ಆರೋಪ ಹೊರಿಸಿದ್ದಾರೆ.
1984 ರಲ್ಲಿ ಉದಿತ್ ನಾರಾಯಣ್ ಜೊತೆ ಮದುವೆ
ರಂಜನಾ ಮಂಗಳವಾರ ತಮ್ಮ ವಕೀಲ ಕರುಣಾಕಾಂತ್ ಝಾ ಅವರೊಂದಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿ ಔಪಚಾರಿಕ ದೂರು ದಾಖಲಿಸಿದರು. ತಮ್ಮ ದೂರಿನಲ್ಲಿ ರಂಜನಾ ಅವರು, ತಮ್ಮ ಪತಿ ಉದಿತ್ ನಾರಾಯಣ್ ತಮಗೆ ತಿಳಿಯದೆಯೇ ತಮ್ಮ ಗರ್ಭಕೋಶವನ್ನು ತೆಗೆದುಹಾಕುವ ಮೂಲಕ ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ವರ್ಷಗಳ ನಂತರ ವೈದ್ಯಕೀಯ ಚಿಕಿತ್ಸೆಯ ಸಮಯದಲ್ಲಿ ಈ ವಿಚಾರದ ಬಗ್ಗೆ ತಮಗೆ ಅರಿವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.
ತಾನು ಸುಪೌಲ್ ಜಿಲ್ಲೆಯ ಬಲುವಾ ಬಜಾರ್ ಪೊಲೀಸ್ ಠಾಣೆ ಪ್ರದೇಶದ ಸಂಸ್ಕೃತ ನಿರ್ಮಲಿ ವಾರ್ಡ್ ಸಂಖ್ಯೆ 11 ರ ನಿವಾಸಿ ಚಂದ್ರಕಾಂತ್ ಝಾ ಅವರ 61 ವರ್ಷದ ಮಗಳು ರಂಜನಾ ಝಾ ಎಂದು ಉದಿತ್ ಪತ್ನಿ ರಂಜನಾ ತಮ್ಮ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಹಿಂದೂ ವಿವಾಹದ ಸಂಪ್ರದಾಯಗಳಂತೆ 1984 ರ ಡಿಸೆಂಬರ್ 7ರಂದು ಉದಿತ್ ನಾರಾಯಣ್ ಜೊತೆ ತಮ್ಮ ವಿವಾಹ ನಡೆದಿದ್ದಾಗಿ ಅವರು ಮಾಹಿತಿ ನೀಡಿದ್ದಾರೆ.
ಗರ್ಭಕೋಶವನ್ನು ಪತ್ನಿಗೆ ತಿಳಿಸದೇ ತೆಗೆಸಿದ ಆರೋಪ
ರಂಜನಾ ಅವರ ಪ್ರಕಾರ, ಉದಿತ್ 1985 ರಲ್ಲಿ ಸಂಗೀತ ವೃತ್ತಿಜೀವನವನ್ನು ಮುಂದುವರಿಸಲು ಮುಂಬೈಗೆ ತೆರಳಿದರು. ಈ ಅವಧಿಯಲ್ಲಿ, ಅವರು ದೀಪಾ ನಾರಾಯಣ್ ಎಂಬ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾರೆಂದು ನಂತರ ಮಾಧ್ಯಮ ವರದಿಗಳ ಮೂಲಕ ತಮಗೆ ತಿಳಿದು ಬಂತು. ಆದರೂ ತಾನು ಈ ಬಗ್ಗೆ ಪ್ರಶ್ನಿಸಿದಾಗಲೆಲ್ಲಾ ಅವರು ನನ್ನನ್ನು ದಾರಿ ತಪ್ಪಿಸುತ್ತಿದ್ದರು ಎಂದು ರಂಜನಾ ಹೇಳಿಕೊಂಡಿದ್ದಾರೆ.
1996 ರಲ್ಲಿ, ವೈದ್ಯಕೀಯ ಚಿಕಿತ್ಸೆಯ ನೆಪದಲ್ಲಿ, ಉದಿತ್ ಮತ್ತು ಅವರ ಸಹೋದರರಾದ ಸಂಜಯ್ ಕುಮಾರ್ ಝಾ ಮತ್ತು ಲಲಿತ್ ನಾರಾಯಣ್ ಝಾ ಅವರು ದೆಹಲಿಯ ಪ್ರಮುಖ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ನನ್ನ ಒಪ್ಪಿಗೆ ಅಥವಾ ಅರಿವಿಲ್ಲದೆಯೇ ಅವರು ನನ್ನ ಗರ್ಭಕೋಶವನ್ನು ತೆಗೆದು ಹಾಕುವಂತೆ ಮಾಡಿದರು. ಆ ಸಮಯದಲ್ಲಿ ದೀಪಾ ನಾರಾಯಣ್ ಕೂಡ ಆಸ್ಪತ್ರೆಯಲ್ಲಿದ್ದರು ಎಂದು ರಂಜನಾ ಹೇಳಿದ್ದಾರೆ.
ಉದಿತ್ ಹಾಗೂ 2ನೇ ಪತ್ನಿ ದೀಪಾರಿಂದ ದೌರ್ಜನ್ಯ
2006 ರಲ್ಲಿ ಮುಂಬೈಗೆ ಭೇಟಿ ನೀಡಿದ್ದಾಗ ಉದಿತ್ ಮತ್ತು ದೀಪಾ ತನ್ನ ಮೇಲೆ ದೌರ್ಜನ್ಯ ಎಸಗಿದ್ದರು ಮತ್ತು ಅವರ ಮನೆಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದು ರಂಜನಾ ಹೇಳಿದ್ದಾರೆ. ನಂತರ ನೇಪಾಳದಲ್ಲಿರುವ ತನ್ನ ಅತ್ತೆಯ ಮನೆಗೆ ಹೋದಾಗ, ಅಲ್ಲಿ ನನಗೆ ಅವಮಾನಿಸಿ ಓಡಿಸಿದರು. ಅಂದಿನಿಂದ, ತಾನು ತನ್ನ ಪೋಷಕರ ಮನೆಯಲ್ಲಿ ವಾಸಿಸುತ್ತಿರುವುದಾಗಿ ರಂಜನಾ ಝಾ ಹೇಳಿದ್ದಾರೆ.
ತಾನು ಈ ಹಿಂದೆ ಸುಪೌಲ್ನಲ್ಲಿರುವ ಕುಟುಂಬ ನ್ಯಾಯಾಲಯ ಮತ್ತು ಮಹಿಳಾ ಆಯೋಗವನ್ನು ಸಂಪರ್ಕಿಸಿದ್ದೆ, ಅಲ್ಲಿ ಉದಿತ್ ತನ್ನನ್ನು ತನ್ನ ಹೆಂಡತಿಯಾಗಿ ಒಪ್ಪಿಕೊಂಡು ರಾಜಿ ಒಪ್ಪಂದವನ್ನು ಸಲ್ಲಿಸಿದ್ದರು. ಆದರೆ, ನಂತರ ಅವರು ತಮ್ಮ ಬದ್ಧತೆಗಳನ್ನು ಪೂರೈಸಲು ವಿಫಲರಾಗಿದ್ದಾರೆ ಮತ್ತು ತನಗೆ ಗೌರವ ಅಥವಾ ಬೆಂಬಲವನ್ನು ನೀಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ನಂತರದಲ್ಲಿ ಅನಾರೋಗ್ಯ ಮತ್ತು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದ ರಂಜನಾ ಅವರಿಗೆ ನಂತರ ವೈದ್ಯಕೀಯ ಚಿಕಿತ್ಸೆಗೆಂದು ಹೋದ ಸಮಯದಲ್ಲಿ ತನ್ನ ಗರ್ಭಕೋಶವನ್ನೇ ತೆಗೆದು ಹಾಕಿರುವುದು ತಿಳಿದು ಬಂತು, ಇದರಿಂದಾಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಹೊಸ ದೂರು ದಾಖಲಿಸಲಾಯಿತು ಎಂದು ಅವರು ಹೇಳಿದರು.
ಇದನ್ನೂ ಓದಿ: ನಟನೆಯ ಜೊತೆಗೆ MBBS ಕೋರ್ಸ್ ಮುಗಿಸಿ ವೈದ್ಯೆಯಾದ ಶ್ರೀಲೀಲಾ: ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದೇಕೆ?
ಮತ್ತೊಮ್ಮೆ ಠಾಣೆ ಮೆಟ್ಟಿಲೇರಿದ ರಂಜನಾ ಝಾ
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರಂಜನಾ, ಹೀಗಾಗಿ ಮತ್ತೊಮ್ಮೆ ನ್ಯಾಯಾಲಯವನ್ನು ಸಂಪರ್ಕಿಸಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ. ಉದಿತ್ ನಾರಾಯಣ್ ಜಿ ಪದೇ ಪದೇ ಭರವಸೆಗಳನ್ನು ನೀಡುತ್ತಾರೆ ಆದರೆ ಅವುಗಳನ್ನು ಈಡೇರಿಸುವುದಿಲ್ಲ ಎಂದು ನಿಮಗೆಲ್ಲರಿಗೂ ತಿಳಿದಿದೆ. ಅವರು ಇಲ್ಲಿಯವರೆಗೆ ಏನನ್ನೂ ಮಾಡಿಲ್ಲ, ಅದಕ್ಕಾಗಿಯೇ ನಾನು ಮಹಿಳಾ ಪೊಲೀಸ್ ಠಾಣೆಗೆ ಬಂದಿದ್ದೇನೆ. ನನಗೆ ನ್ಯಾಯ ಸಿಗಬೇಕು ಎಂದು ಅವರು ಹೇಳಿದ್ದಾರೆ.
ನಾವು ಮಹಿಳಾ ಆಯೋಗಕ್ಕೆ ಹೋದಾಗ, ಅವರು ಆರಂಭದಲ್ಲಿ ನಮ್ಮ ದೂರನ್ನು ಸ್ವೀಕರಿಸಲು ನಿರಾಕರಿಸಿದರು. ನಾವು ಲಿಖಿತ ಅರ್ಜಿಯನ್ನು ಸಲ್ಲಿಸಿದ ನಂತರ, ಅದನ್ನು ಸ್ವೀಕರಿಸಲಾಯಿತು. ಆದರೆ ಇಂದಿಗೂ ಅವರು ನನ್ನನ್ನು ಮೋಸ ಮಾಡುತ್ತಲೇ ಇದ್ದಾರೆ. ಅವರು ಹಳ್ಳಿಗೆ ಬಂದಾಗಲೆಲ್ಲಾ ಮತ್ತೆ ಅದೇ ಭರವಸೆಗಳನ್ನು ನೀಡುತ್ತಾರೆ ಎಂದು ಅವರು ಹೇಳಿದರು. ಇತ್ತೀಚಿನ ದಿನಗಳಲ್ಲಿ, ನಾನು ನಿರಂತರವಾಗಿ ಅಸ್ವಸ್ಥನಾಗಿದ್ದೇನೆ ಮತ್ತು ಅವರ ಬೆಂಬಲದ ಅಗತ್ಯವಿದೆ. ಆದರೆ ಉದಿತ್ ನಾರಾಯಣ್ ಏನನ್ನೂ ಹೇಳುತ್ತಿಲ್ಲ ಅಥವಾ ಏನನ್ನೂ ಮಾಡುತ್ತಿಲ್ಲ. ಅವರು ಇತ್ತೀಚೆಗೆ ಹಳ್ಳಿಗೆ ಬಂದು ಮತ್ತೊಮ್ಮೆ ಭರವಸೆ ನೀಡಿ ಹೊರಟುಹೋದರು ಎಂದು ಅವರು ರಂಜನಾ ಹೇಳಿದ್ದಾರೆ.
ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಅಂಜು ತಿವಾರಿ ಪ್ರತಿಕ್ರಿಯಿಸಿದ್ದು, ದೂರಿನಲ್ಲಿ ಉಲ್ಲೇಖಿಸಲಾದ ಘಟನೆಗಳು ಸುಮಾರು ಮೂರು ದಶಕಗಳ ಹಿಂದಿನವು. ಈ ವಿಷಯ ತನಿಖೆ ಹಂತದಲ್ಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗಂಡನ ಮೇಲೆ ಅನೈತಿಕ ಸಂಬಂಧದ ಆರೋಪ ಮಾಡಿದ ಕೆಲ ದಿನಗಳಲ್ಲೇ ಮರು ಮದ್ವೆಯಾದ್ರಾ ಬಿಗ್ಬಾಸ್ ಒಟಿಟಿ ಸ್ಪರ್ಧಿ
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

