ಕೊನೆಗೂ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು; ಗುಡ್ ನ್ಯೂಸ್ ಹಂಚಿಕೊಂಡ ಸಂಸದ...!
ತಿರುಪತಿ: ಕಳೆದ ಮೂರ್ನಾಲ್ಕು ವರ್ಷಗಳಿಂದ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಬರಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಲೇ ಇದ್ದವು. ಇದೀಗ ಭಾರತೀಯ ರೈಲ್ವೆ ಇಲಾಖೆಯು, ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಆರಂಭಿಸಲು ಕ್ರಿಯಾ ಯೋಜನೆ ರೂಪಿಸಿದೆ. ಈ ಸಂಬಂಧ ತಿರುಪತಿ ಸಂಸದರು ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಮಲೆನಾಡಿಗೆ ವಂದೇ ಭಾರತ್ ಎಕ್ಸ್ಪ್ರೆಸ್ ಶೀಘ್ರ ಕಾರ್ಯಾಚರಣೆ
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೆ ವಂದೇ ಭಾರತ್ ರೈಲಿನ ಕನಸು ನನಸಾಗುವ ನಿಟ್ಟಿನಲ್ಲಿ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಈ ಕುರಿತಂತೆ ತಿರುಪತಿ ಸಂಸದ ಮದ್ದಿಲಾ ಗುರುಮೂರ್ತಿಯವರು ಮಹತ್ವದ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ.
ಶಿವಮೊಗ್ಗಕ್ಕೆ ವಂದೇ ಭಾರತ್ ಆರಂಭಿಸಲು ರೈಲ್ವೆ ಇಲಾಖೆ ಸಕಾರಾತ್ಮಕ ಸ್ಪಂದನೆ
ಹೌದು, ಶಿವಮೊಗ್ಗದಿಂದ ತಿರುಪತಿ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಆರಂಭಿಸಲು ಭಾರತೀಯ ರೈಲ್ವೆ ಮಂಡಳಿಯುವ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈಗಾಗಲೇ ಈ ರೈಲು ಆರಂಭಿಸಲು ಕ್ರಿಯಾಯೋಜನೆಯನ್ನು ಸಿದ್ದಪಡಿಸಿದೆ ಎಂದು ತಿಳಿಸಿದ್ದಾರೆ.
ಎಕ್ಸ್ ಖಾತೆಯಲ್ಲಿ ಗುಡ್ ನ್ಯೂಸ್ ಹಂಚಿಕೊಂಡ ತಿರುಪತಿ ಸಂಸದ
ಈ ಕುರಿತಂತೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಶಿವಮೊಗ್ಗ-ತಿರುಪತಿ-ಶಿವಮೊಗ್ಗಕ್ಕೆ ವಂದೇ ಭಾರತ ಎಕ್ಸ್ಪ್ರೆಸ್ ರೈಲು ಓಡಿಸಬೇಕು ಎನ್ನುವ ನನ್ನ ಬೇಡಿಕೆಗೆ ಕೇಂದ್ರ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಆದಷ್ಟು ಬೇಗ ಸೇವೆ ಆರಂಭಿಸಲು ಮನವಿ
ಉಳಿದಿರುವ ಔಪಚಾರಿಕ ಪ್ರಕ್ರಿಯೆಗಳನ್ನು ತ್ವರಿತಗೊಳಿಸಿ, ಆದಷ್ಟು ಶೀಘ್ರವಾಗಿ ಸೇವೆಯನ್ನು ಪ್ರಾರಂಭಿಸುವಂತೆ ನಾನು ರೈಲ್ವೆ ಮಂಡಳಿಯನ್ನು ಒತ್ತಾಯಿಸುತ್ತೇನೆ. ಇದು ಶಿವಮೊಗ್ಗ, ಬೆಂಗಳೂರು ಮತ್ತು ತಿರುಪತಿ ನಡುವಿನ ಸಂಪರ್ಕವನ್ನು ಬಲಪಡಿಸುವುದಲ್ಲದೆ, ಯಾತ್ರಾರ್ಥಿಗಳು, ವಿದ್ಯಾರ್ಥಿಗಳು, ರೋಗಿಗಳು ಮತ್ತು ಇತರ ಪ್ರಯಾಣಿಕರಿಗೆ ಪ್ರಯೋಜನಕಾರಿಯಾಗಲಿದೆ ಎಂದು ತಿರುಪತಿ ಸಂಸದ ಮದ್ದಿಲಾ ಗುರುಮೂರ್ತಿ ಬರೆದುಕೊಂಡಿದ್ದಾರೆ.
ಶಿವಮೊಗ್ಗಕ್ಕೆ ವಂದೇ ಭಾರತ್ ಎಕ್ಸ್ಪ್ರೆಸ್ ಬಹುಕಾಲದ ಬೇಡಿಕೆ
ಅಂದಹಾಗೆ ಶಿವಮೊಗ್ಗಕ್ಕೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ತರಬೇಕು ಎನ್ನುವುದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಬಹುಕಾಲದ ಬೇಡಿಕೆಯಾಗಿದೆ. ಕೇಂದ್ರ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್, ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವೈ ಸೋಮಣ್ಣ ಅವರನ್ನು ಅವಕಾಶ ಸಿಕ್ಕಾಗಲೆಲ್ಲಾ ಮನವಿ ಮಾಡುತ್ತಾ ಬಂದಿದ್ದಾರೆ. ಇದೆಲ್ಲದರ ನಡುವೆ, ತಿರುಪತಿ ಸಂಸದರು ನೀಡಿದ ಈ ಅಪ್ಡೇಟ್, ಶಿವಮೊಗ್ಗ ಜನತೆಯ ವಂದೇ ಭಾರತ್ ಕನಸಿಗೆ ಮತ್ತಷ್ಟು ಬಲ ಬಂದಂತೆ ಆಗಿದೆ.
ಶಿವಮೊಗ್ಗ ಪ್ರಯಾಣಿಕರಿಗೆ, ಯಾತ್ರಿಕರಿಗೆ ಗುಡ್ ನ್ಯೂಸ್
ಇನ್ನು ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು, ಶಿವಮೊಗ್ಗದಿಂದ ರಾಜ್ಯ ರಾಜಧಾನಿ ಬೆಂಗಳೂರು ಮೂಲಕ ತಿರುಪತಿಗೆ ಸಂಚಾರ ನಡೆಸಲಿದೆ. ಹೀಗಾಗಿ ಬೆಂಗಳೂರು ಮತ್ತು ಶಿವಮೊಗ್ಗ ಹಾಗೆಯೇ ಶಿವಮೊಗ್ಗದಿಂದ ಪವಿತ್ರ ಕ್ಷೇತ್ರ ತಿರುಪತಿಗೆ ಯಾತ್ರಿಕರಿಗೆ ಪ್ರಯಾಣಿಸಲು ಅನುಕೂಲವಾಗಲಿದೆ.

