ಶಿವಮೊಗ್ಗ: ಪ್ಲಾಸ್ಟಿಕ್ ಚೀಲಗಳ ಸಂಧಿಯಲ್ಲಿ ಬೆಚ್ಚಗೆ ಹೊದ್ದು ಮಲಗಿದ್ದ ದೈತ್ಯ ಹೆಬ್ಬಾವು!
ಶಿವಮೊಗ್ಗದ ಕಲ್ಲೂರು ಕೈಗಾರಿಕಾ ಪ್ರದೇಶದ ಪ್ಲಾಸ್ಟಿಕ್ ಫ್ಯಾಕ್ಟರಿಯೊಂದರಲ್ಲಿ ಬೃಹತ್ ಹೆಬ್ಬಾವೊಂದು ಪತ್ತೆಯಾಗಿದೆ. ಹೆಬ್ಬಾವನ್ನು ಕಂಡು ಆತಂಕಗೊಂಡ ಕಾರ್ಮಿಕರು ಕೆಲಸ ನಿಲ್ಲಿಸಿದಾಗ, ಸ್ಥಳೀಯ ಉರಗತಜ್ಞ ಸ್ನೇಕ್ ಕಿರಣ್ ಅವರು ಅದನ್ನು ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.

ಫ್ಯಾಕ್ಟರಿಯೊಂದರಲ್ಲಿ ನೂರಾರು ಪ್ಲಾಸ್ಟಿಕ್ ಚೀಲಗಳ ಸಂಧಿಯಲ್ಲಿ ಬೆಚ್ಚಗೆ ಹೊದ್ದು ಮಲಗಿದ್ದ ಬೃಹತ್ ಹೆಬ್ಬಾವೊಂದು ಪತ್ತೆಯಾಗಿರುವ ಘಟನೆ ಶಿವಮೊಗ್ಗದ ಕಲ್ಲೂರು ಮಂಡಳಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ನಡೆದಿದೆ. ಹೆಬ್ಬಾವನ್ನು ಕಂಡು ಬೆಚ್ಚಿಬಿದ್ದ ಕಾರ್ಮಿಕರು ಆತಂಕದಿಂದ ಕೆಲಸ ಮಾಡಲು ಹಿಂದೇಟು ಹಾಕಿದ ಘಟನೆ ನಡೆದಿದೆ.
ಶಿವಮೊಗ್ಗದ ಕಲ್ಲೂರು ಮಂಡಳಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ 'ಎಸ್.ಎಸ್. ಪಾಲಿಮರ್ಸ್' (SS Polymers) ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಈ ಘಟನೆ ನಡೆದಿದೆ. ಎಂದಿನಂತೆ ಕಾರ್ಮಿಕರು ತಮ್ಮ ಕೆಲಸದಲ್ಲಿ ನಿರತರಾಗಿದ್ದ ವೇಳೆ, ಫ್ಯಾಕ್ಟರಿಯಲ್ಲಿ ರಾಶಿಹಾಕಲಾಗಿದ್ದ ನೂರಾರು ಪ್ಲಾಸ್ಟಿಕ್ ಚೀಲಗಳ ಮಧ್ಯೆ ದೊಡ್ಡ ಗಾತ್ರದ ಹೆಬ್ಬಾವೊಂದು ಮಲಗಿರುವುದು ಗಮನಕ್ಕೆ ಬಂದಿದೆ.
ಪ್ಲಾಸ್ಟಿಕ್ ಚೀಲಗಳ ಸಂಧಿಯಲ್ಲಿ ಬೆಚ್ಚಗೆ ಆಶ್ರಯ ಪಡೆದಿದ್ದ ಈ ಹೆಬ್ಬಾವನ್ನು ಕಣ್ಣಾರೆ ಕಂಡ ಕಾರ್ಮಿಕರು ಒಮ್ಮೆಲೆ ಗಾಬರಿಗೊಂಡು ದಿಘ್ರ್ಭೆಗೊಂಡರು. ಫ್ಯಾಕ್ಟರಿಯೊಳಗೆ ಬೃಹತ್ ಗಾತ್ರದ ಹಾವು ಇದ್ದಿದ್ದರಿಂದ ಕಾರ್ಮಿಕರು ಆತಂಕಗೊಂಡು ಕೆಲಸ ಮಾಡಲು ಹಿಂದೇಟು ಹಾಕಿದರು.
ಉರಗತಜ್ಞರಿಂದ ಹೆಬ್ಬಾವು ಸೆರೆ:
ತಕ್ಷಣವೇ ಎಚ್ಚೆತ್ತ ಕಾರ್ಮಿಕರು ಮತ್ತು ಫ್ಯಾಕ್ಟರಿ ಆಡಳಿತ ಮಂಡಳಿಯವರು ಸ್ಥಳೀಯ ಉರಗತಜ್ಞ 'ಸ್ನೇಕ್ ಕಿರಣ್' ಅವರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ನೇಕ್ ಕಿರಣ್, ಕಾರ್ಮಿಕರ ಆತಂಕವನ್ನು ದೂರಮಾಡಿ ಅತ್ಯಂತ ಜಪದಿಂದ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾದರು.
ಸಿಕ್ಕಿಬಿದ್ದ ಹೆಬ್ಬಾವು ಸುಮಾರು 7.5 ಅಡಿ ಉದ್ದವಿದ್ದು, 10 ಕೆಜಿ ತೂಕವಿತ್ತು ಎಂದು ತಿಳಿದುಬಂದಿದೆ. ನಂತರ ಉರಗತಜ್ಞ ಕಿರಣ್ ಅವರು ಈ ಹೆಬ್ಬಾವನ್ನು ಹತ್ತಿರದ ಜನವಸತಿ ಇಲ್ಲದ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟುಬಂದಿದ್ದಾರೆ. ಹೆಬ್ಬಾವನ್ನು ಯಶಸ್ವಿಯಾಗಿ ಸೆರೆಹಿಡಿದ ಬಳಿಕ ಫ್ಯಾಕ್ಟರಿ ಕಾರ್ಮಿಕರು ಮತ್ತು ಮಾಲೀಕರು ನಿಟ್ಟುಸಿರು ಬಿಟ್ಟಿದ್ದಾರೆ.
