ಗಾಜಿಯಾಬಾದ್ ದುರಂತ: ಮಕ್ಕಳು ಹೀಗಾಗಲು ಕಾರಣ ಮೊಬೈಲ್ ಮಾತ್ರವಲ್ಲ, ನಿಜವಾದ ಕಾರಣ ಇದೇ!
Ghaziabad Tragedy: ಒಂಟಿತನವನ್ನು ಅನುಭವಿಸುತ್ತಿರುವವರೂ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಮನೋವೈದ್ಯರಾದ ಡಾ. ತಾರಾಚಂದ್ ತಿಳಿಸಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ್ದಾರೆ ಓದಿ..

ಮಾನಸಿಕ ಅಸ್ವಸ್ಥತೆ, ಕೌಟುಂಬಿಕ ಒತ್ತಡ
ಗಾಜಿಯಾಬಾದ್ನಲ್ಲಿ ನಡೆದ ದುರಂತವು ಕೇವಲ ಆಘಾತಕಾರಿ ವಿಚಾರವಲ್ಲದೆ, ಎಚ್ಚರಿಕೆಯ ಗಂಟೆಯೂ ಕೂಡ. ಈ ರೀತಿಯ ಘಟನೆಗಳು ಇದ್ದಕ್ಕಿದ್ದಂತೆ ಸಂಭವಿಸುವುದಿಲ್ಲ ಎಂಬುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು. ದೀರ್ಘಕಾಲದಿಂದ ಮಾನಸಿಕ ಅಸ್ವಸ್ಥತೆ, ಕೌಟುಂಬಿಕ ಒತ್ತಡ ಮತ್ತು ತೀವ್ರವಾದ ಒಂಟಿತನವನ್ನು ಅನುಭವಿಸುತ್ತಿರುವವರು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಮನೋವೈದ್ಯರಾದ ಡಾ. ತಾರಾಚಂದ್ ತಿಳಿಸಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ್ದಾರೆ ಓದಿ..
ಭಯದಿಂದ ಮೌನಕ್ಕೆ ಶರಣು
ವೈದ್ಯರು ಹೇಳುವ ಪ್ರಕಾರ, ವ್ಯಕ್ತಿಯು ತನಗೆ ಮಾತ್ರ ಕಷ್ಟ ಬಂದಿದೆ. ಈ ಸಮಸ್ಯೆಯಿಂದ ಹೊರಬರಲು ಸಾಧ್ಯವೇ ಇಲ್ಲ ಎಂದು ಭಾವಿಸಿ ಸಾವೊಂದೇ ಪರಿಹಾರ ಎಂಬ ಕಠಿಣ ನಿರ್ಧಾರ ಕೈಗೊಳ್ಳುವ ಸಂಭವ ಇರುತ್ತದೆ. ಯುವ ಪೀಳಿಗೆಯು ಮಾನಸಿಕ ಆರೋಗ್ಯದ ಸುತ್ತ ಮೌನದ ಗೋಡೆಯನ್ನು ನಿರ್ಮಿಸಿಕೊಂಡಿದ್ದು, ಇಂತಹ ಅಪಾಯದ ಮುನ್ಸೂಚನೆಗಳನ್ನು ಅರಿಯುವುದು ಕಷ್ಟವಾಗಿದೆ. ಜನರು ಭರವಸೆ ಕಳೆದುಕೊಳ್ಳುತ್ತಿದ್ದಾರೆ, ಭವಿಷ್ಯದ ಬಗೆಗೆ ಯೋಜನೆಗಳನ್ನು ಹಾಕಿಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ ಮತ್ತು ತಮ್ಮೊಳಗೆ ತಾವು ಕುಸಿಯುತ್ತಿದ್ದಾರೆ. ಸಮಾಜ ನಮ್ಮನ್ನು ಹೇಗೆ ನೋಡುತ್ತದೆಯೋ ಎಂಬ ಭಯದಿಂದ ಮೌನಕ್ಕೆ ಶರಣಾಗುತ್ತಿದ್ದಾರೆ.
ಡಾಕ್ಟರ್ ಹೇಳಿದ್ದೇನು?
ಈ ರೀತಿಯ ಪರಿಸ್ಥಿತಿ ಬದಲಾಗಬೇಕು. ಮಕ್ಕಳನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ಗಮನಿಸುವುದು ಮತ್ತು ಪರಿಸ್ಥಿತಿ ಕೈಮೀರುವ ಮೊದಲೇ ಸಹಾಯ ಕೇಳುವುದನ್ನು ಪ್ರೋತ್ಸಾಹಿಸಬೇಕಿದೆ. ಮಾನಸಿಕ ಆರೋಗ್ಯವು ದೈಹಿಕ ಆರೋಗ್ಯದಷ್ಟೇ ಮುಖ್ಯವಾಗಿದ್ದು, ನೀವು ಅತಿಯಾದ ಒತ್ತಡದಲ್ಲಿದ್ದರೆ ಅಥವಾ ನಿಮ್ಮ ಸುತ್ತಮುತ್ತಲಿನಲ್ಲಿ ಯಾರಾದರೂ ಈ ರೀತಿ ಮಾನಸಿಕವಾಗಿ ಕುಗ್ಗಿದ್ದರೆ ದಯವಿಟ್ಟು ಅವರೊಂದಿಗೆ ಮಾತನಾಡಿ. ನೆರವು ಕೋರುವುದು ಕೇವಲ ಒಂದು ಆಯ್ಕೆಯಲ್ಲ, ಅದೊಂದು ಬದುಕುವ ದಾರಿ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವ ಅಗತ್ಯ ಇಂದು ನಮ್ಮ ಮುಂದಿದೆ ಎಂದು ಡಾಕ್ಟರ್ ತಿಳಿಸಿದ್ದಾರೆ.
ಈ ಹಂತದಲ್ಲಿ ಬಹಳ ಮುಖ್ಯ
ಪ್ರಸಕ್ತ ಗಾಜಿಯಾಬಾದ್ ಪ್ರಕರಣವು ಮಕ್ಕಳೆಡೆಗಿನ ಪೋಷಕರ ಕಾಳಜಿ ಮತ್ತು ಕೌಟುಂಬಿಕ ವಾತಾವರಣದ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿರುವ ತಾರಾಚಂದ್ ಅವರು ಮಕ್ಕಳು ಮತ್ತು ಹದಿಹರೆಯದವರಿಗೆ ತಮ್ಮ ಪಾಲಕರಿಂದ ನಿರಂತರವಾಗಿ ಭಾವನಾತ್ಮಕ ಬೆಂಬಲ ಮತ್ತು ಯಾವುದೇ ಪೂರ್ವಾಗ್ರಹವಿಲ್ಲದ ಮುಕ್ತ ಸಂವಹನದ ಅಗತ್ಯವಿರುತ್ತದೆ. ಪೋಷಕರ ಪ್ರೀತಿ, ಬಾಂಧವ್ಯ, ಮಕ್ಕಳ ಮಾತುಗಳನ್ನು ಆಲಿಸುವಿಕೆಯ ತಾಳ್ಮೆ ಹಾಗೂ ಸದಾ ರಕ್ಷಣಾ ಕವಚದಂತೆ ಕಾಪಾಡಿಕೊಳ್ಳುವುದು ಈ ಹಂತದಲ್ಲಿ ಮುಖ್ಯವಾಗಿರುತ್ತದೆ. ಅಷ್ಟೇ ಮುಖ್ಯವಾಗಿ ಪೋಷಕರು ತಮ್ಮ ಮಕ್ಕಳ ಆನ್ಲೈನ್ ಚಟುವಟಿಕೆಗಳ ಬಗ್ಗೆ ಜಾಗೃತರಾಗಿರಬೇಕು ಮತ್ತು ಅವುಗಳನ್ನು ಗಮನಿಸುತ್ತಿರಬೇಕು. ಏಕೆಂದರೆ ಸಾಮಾಜಿಕ ಜಾಲತಾಣಗಳಲ್ಲಿನ ಹಾನಿಕಾರಕ ವಿಷಯಗಳಿಗೆ ಒಡ್ಡಿಕೊಳ್ಳುವುದು, ಸೈಬರ್ ಬೆದರಿಕೆ, ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವ ಸಂಸ್ಕೃತಿ ಅಥವಾ ಅತಿರಂಜಿತ ಸುದ್ದಿಗಳು ಮಕ್ಕಳ ಮಾನಸಿಕ ದುರ್ಬಲತೆಯನ್ನು ಮತ್ತು ಒತ್ತಡವನ್ನು ಮತ್ತಷ್ಟು ಹೆಚ್ಚಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

