- Home
- Entertainment
- ಕಷ್ಟಪಡುತ್ತಿದ್ದ ನಟರಿಗೆ ಧರ್ಮಛತ್ರದಂತಿತ್ತು ರಾಜ್ಪಾಲ್ ಮನೆ: ಸಾಲ ಕಟ್ಟಲಾಗದೇ ಜೈಲಿಗೆ ಹೋದ ಗೆಳೆಯನ ಉದಾರತೆ ತೆರೆದಿಟ್ಟ ನಟ
ಕಷ್ಟಪಡುತ್ತಿದ್ದ ನಟರಿಗೆ ಧರ್ಮಛತ್ರದಂತಿತ್ತು ರಾಜ್ಪಾಲ್ ಮನೆ: ಸಾಲ ಕಟ್ಟಲಾಗದೇ ಜೈಲಿಗೆ ಹೋದ ಗೆಳೆಯನ ಉದಾರತೆ ತೆರೆದಿಟ್ಟ ನಟ
ಚೆಕ್ಬೌನ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ರಾಜ್ಪಾಲ್ ಯಾದವ್ ಜೈಲು ಸೇರಿದ್ದಾರೆ. ಈ ಸಂದರ್ಭದಲ್ಲಿ, ಅವರ ಆಪ್ತಮಿತ್ರ ನವಾಜುದ್ದೀನ್ ಸಿದ್ದಿಕಿ ಹಿಂದೊಮ್ಮೆ ನೀಡಿದ್ದ ಸಂದರ್ಶನವೊಂದು ವೈರಲ್ ಆಗಿದೆ.

ರಾಜ್ಪಾಲ್ ಉದಾರತೆಯ ಬಗ್ಗೆ ನವಾಜುದ್ದೀನ್ ಸಿದ್ಧಿಕಿ ಮಾತು
ಈ ಕಲಿಯುಗದಲ್ಲಿ ಒಳ್ಳೆಯವರಿಗೆ ಒಳ್ಳೆಯದು ಮಾಡಿದವರಿಗೆ ಸಾಲು ಸಾಲು ಕಷ್ಟಗಳೇ ಬರುತ್ತವೆ. ಬಹುಶಃ ಚೆಕ್ಬೌನ್ಸ್ ಆಗಿ ಈಗ ಜೈಲಿಗೆ ಹೋದ ಬಾಲಿವುಡ್ ಹಾಸ್ಯನಟ ರಾಜ್ಪಾಲ್ ಯಾದವ್ ಅವರ ಬಗ್ಗೆ ಬೇರೆ ನಟರು ಹೇಳುವ ಮಾತು ಕೇಳಿದರೆ ಇದು ನಿಜ ಎನಿಸುತ್ತಿದೆ. ಹೌದು ದೀರ್ಘಕಾಲದ ಚೆಕ್ ಬೌನ್ಸ್ ಮತ್ತು ಸಾಲ ಮರುಪಾವತಿ ಮಾಡಲಾಗದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ರಾಜ್ಪಾಲ್ ಯಾದವ್ ಇತ್ತೀಚೆಗೆ ತಿಹಾರ್ ಜೈಲು ಪಾಲಾಗಿದ್ದಾರೆ. ಹೀಗಾಗಿ ಈಗ ಅವರ ವೈಯಕ್ತಿಕ ಮತ್ತು ವೃತ್ತಿಜೀವನದ ಬಗ್ಗೆ ಸಾಕಷ್ಟು ಜನ ಮಾತನಾಡುತ್ತಿದ್ದಾರೆ.
ಹಾಗೆಯೇ ರಾಜ್ಪಾಲ್ ಅವರ ಬಗೆಗಿನ ಕಾನೂನು ಬೆಳವಣಿಗೆಗಳ ಮಧ್ಯೆ, ಬಾಲಿವುಡ್ನ ಮತ್ತೊಬ್ಬ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ಅವರು ಹಿಂದೊಮ್ಮೆ ರಾಜ್ಪಾಲ್ ಯಾದವ್ ಅವರ ಬಗ್ಗೆ ಆಡಿದ ಮಾತುಗಳು ಈಗ ವೈರಲ್ ಆಗುತ್ತಿವೆ. ನಟ ನವಾಜುದ್ದೀನ್ ಸಿದ್ದಿಕಿ ಅವರು ದಿ ಲಲ್ಲಂಟಾಪ್ ಗೆ ನೀಡಿದ ಸಂದರ್ಶನವೊಂದು ರಾಜ್ಪಾಲ್ ಅವರ ಬಗ್ಗೆ ಜನರಿಗೆ ಹೆಚ್ಚೇನು ತಿಳಿದಿರದ ಅವರ ಮಾನವೀಯ ಮುಖವೊಂದರ ಪರಿಚಯ ಮಾಡುತ್ತದೆ.
ರಾಜ್ಪಾಲ್ ಯಾದವ್ ಬಗ್ಗೆ ನವಾಜುದ್ದೀನ್ ಸಿದ್ದಿಕಿ ಹೇಳಿದ್ದೇನು?
ಬಾಲಿವುಡ್ನಲ್ಲಿ ನೆಲೆ ಕಾಣಲು ಬಯಸಿದ್ದ ಕಷ್ಟದಲ್ಲಿದ್ದ ಅನೇಕ ನಟರಿಗೆ(Struggling Actors) ರಾಜ್ಪಾಲ್ ಅವರ ಮನೆ ಧರ್ಮಛತ್ರದಂತಿತ್ತು.ಅನೇಕ ಕಷ್ಟದಲ್ಲಿದ್ದ ನಟರು ಮೂಲಭೂತ ಜೀವನೋಪಾಯಕ್ಕಾಗಿ ರಾಜ್ಪಾಲ್ ಅವರನ್ನು ಅವಲಂಬಿಸಿದ್ದರು ಎಂದು ನವಾಜುದ್ದೀನ್ ಸಿದ್ಧಿಕಿ ಆ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದರು
ರಾಜ್ಪಾಲ್ಗೆ ಸಿನಿಮಾಗಳಲ್ಲಿ ಒಳ್ಳೆಯ ಕೆಲಸ ಸಿಗಲು ಪ್ರಾರಂಭಿಸಿದಾಗ ಅವರ ಮನೆಯಲ್ಲಿ ಬಹಳಷ್ಟು ಜನರು ಊಟ ಮಾಡುತ್ತಿದ್ದರು ಮತ್ತು ಅವರು ಎಂದಿಗೂ ಯಾರ ಬಗ್ಗೆಯೂ ದೂರುತ್ತಿರಲಿಲ್ಲ. ಅವರು ಯಾವಾಗಲೂ ಜನರಿಗೆ ಸಹಾಯ ಮಾಡುತ್ತಿದ್ದರು. ನಾನು ಮಾತ್ರವಲ್ಲ, ಬಹಳಷ್ಟು ನಟರು ಕಷ್ಟಪಡುತ್ತಿದ್ದಾಗ, ಅವರ ಮನೆ ಧರ್ಮಛತ್ರದಂತಿತ್ತು. ಯಾರಾದರೂ ಅಲ್ಲಿಗೆ ಬಂದು ಊಟ ಮಾಡಬಹುದಿತ್ತು. ಅವರು ತುಂಬಾ ತಮಾಷೆ ಮಾಡುತ್ತಾರೆ, ಆದರೆ ವಾಸ್ತವದಲ್ಲಿ, ಅವರು ತುಂಬಾ ಸೂಕ್ಷ್ಮ ಮನುಷ್ಯ ಎಂದು ನವಾಜುದ್ದೀನ್ ಸಿದ್ಧಿಕಿ ಹೇಳಿದ್ದಾರೆ.
ಇವರಿಬ್ಬರು ಹಿಂದಿ ಸಿನಿಮಾಗೆ ಬರುವ ಮೊದಲೇ ಪರಿಚಿತರು
ಹಿಂದಿ ಸಿನಿಮಾದಲ್ಲಿ ಪರಿಚಿತರಾಗುವ ಮೊದಲೇ ನವಾಜುದ್ದೀನ್ ಸಿದ್ಧಿಕಿ ಹಾಗೂ ರಾಜ್ಪಾಲ್ ಅವರ ಸ್ನೇಹ ಪ್ರಾರಂಭವಾಯಿತು. ಇಬ್ಬರೂ ಲಕ್ನೋದ ಭರತೇಂದು ನಾಟ್ಯ ಅಕಾಡೆಮಿಯಲ್ಲಿ ಮತ್ತು ನಂತರ ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಒಟ್ಟಿಗೆ ತರಬೇತಿ ಪಡೆದಿದ್ದರು. ತಮ್ಮಿಬ್ಬರ ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಮಾತನಾಡುತ್ತಾ, ನವಾಜುದ್ದೀನ್ ಸಿದ್ಧಿಕಿ, ನಾವು ಕೇವಲ ಐದು ವರ್ಷಗಳ ಕಾಲ ನಟನೆಯಲ್ಲಿ ತರಬೇತಿ ಪಡೆದಿದ್ದೇವೆ. ಶೈಕ್ಷಣಿಕವಾಗಿ ಹೇಳುವುದಾದರೆ, ರಾಜ್ಪಾಲ್ ಮತ್ತು ನಾನು ಈ ನಟನಾ ಉದ್ಯಮದಲ್ಲಿ ಹೆಚ್ಚಿನ ಶಿಕ್ಷಣವನ್ನು ಹೊಂದಿದ್ದೇವೆ. ನೋಡುವುದಕ್ಕೆ ನಾವು ಹಾಗೆ ಕಾಣುವುದಿಲ್ಲ, ಆದರೆ ನಾವು ಇಲ್ಲಿ ಹೆಚ್ಚು ವಿದ್ಯಾವಂತ ನಟರು. ರಾಜ್ಪಾಲ್ ಅವರು ಅದ್ಭುತ ಮನುಷ್ಯ ಎಂದು ಅವರು ನಗುತ್ತಾ ಹೇಳಿದ್ದರು.
ರಾಜ್ಪಾಲ್ ಯಾದವ್ ವಿರುದ್ಧದ ಪ್ರಕರಣವೇನು?
ಇತ್ತೀಚಿನ ವರ್ಷಗಳಲ್ಲಿ ನಟ ರಾಜ್ಪಾಲ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದು, ಅವರು ಈಗ ಅವರು ಜೈಲಿಗೆ ಶರಣಾಗುವುದರೊಂದಿಗೆ ಅಂತ್ಯಗೊಂಡ ಈ ಪ್ರಕರಣವು 2010 ಕ್ಕೂ ಹಿಂದಿನದು ಮತ್ತು ಇದರಲ್ಲಿ ಮರು ಪಾವತಿಸದ ಸಾಲ ಮತ್ತು ಸಾಲದಾತರಿಗೆ ನೀಡಿದ ಬೌನ್ಸ್ ಆದ ಚೆಕ್ಗಳನ್ನು ಒಳಗೊಂಡಿದೆ. ಇವರು ನೀಡಿದ ಹಲವು ಚೆಕ್ಗಳು ಪಾವತಿಯಾಗದೆ ಬೌನ್ಸ್ ಆದಾಗ, ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಡಿಯಲ್ಲಿ(Negotiable Instruments Act) ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಯ್ತು.
ಚೆಕ್ಬೌನ್ಸ್ ಪ್ರಕರಣದಲ್ಲಿ ದೋಷಿ
ಏಪ್ರಿಲ್ 2018 ರಲ್ಲಿಯೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ರಾಜ್ಪಾಲ್ ಹಾಗೂ ಅವರ ಪತ್ನಿಯನ್ನು ಹಲವಾರು ಚೆಕ್ ಬೌನ್ಸ್ ಪ್ರಕರಣಗಳಲ್ಲಿ ದೋಷಿಗಳೆಂದು ಘೋಷಿಸಿ, ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತು. 2019 ರಲ್ಲಿ ಸೆಷನ್ಸ್ ನ್ಯಾಯಾಲಯವು ಈ ನಿರ್ಧಾರವನ್ನು ಎತ್ತಿಹಿಡಿಯಿತು, ನಂತರ ಅವರು ದೆಹಲಿ ಹೈಕೋರ್ಟ್ ಅನ್ನು ಸಂಪರ್ಕಿಸಿದರು.
ಸಾಲದ ಬಾಕಿಗಳನ್ನು ಸಾಮಾನ್ಯವಾಗಿ ಸಿವಿಲ್ ವಿಷಯಗಳಾಗಿ ಪರಿಗಣಿಸಲಾಗಿದ್ದರೂ, ಪಾವತಿ ಮಾಡುವಲ್ಲಿ ಅವರು ಪದೇ ಪದೇ ವಿಫಲರಾದ ಕಾರಣ ಹೈಕೋರ್ಟ್ ದೃಢ ನಿಲುವು ತೆಗೆದುಕೊಂಡಿತು. ಕಂತುಗಳಲ್ಲಿ ಬಾಕಿಗಳನ್ನು ಪಾವತಿಸಲು ಅವರಿಗೆ ಹಲವಾರು ಅವಕಾಶಗಳನ್ನು ನೀಡಲಾಗಿದ್ದರು ಅವರು ವಿಫಲರಾದ ನಂತರ ನ್ಯಾಯಾಲಯವು ಏಳು ಪ್ರಕರಣಗಳಲ್ಲಿ ತಲಾ 1.35 ಕೋಟಿ ರೂ. ಠೇವಣಿ ಇಡುವಂತೆ ಅವರಿಗೆ ಸೂಚಿಸಿತು ಮತ್ತು ಠೇವಣಿ ಮಾಡಿದ ಮೊತ್ತವನ್ನು ದೂರುದಾರರಿಗೆ ಬಿಡುಗಡೆ ಮಾಡುವಂತೆ ಆದೇಶಿಸಿತು. ಅಕ್ಟೋಬರ್ 2025 ರಲ್ಲಿ, ಅವರು 75 ಲಕ್ಷ ರೂ. ಮೌಲ್ಯದ ಎರಡು ಡಿಮ್ಯಾಂಡ್ ಡ್ರಾಫ್ಟ್ಗಳನ್ನು ಸಲ್ಲಿಸಿದರು. ಆದರೆ ಸುಮಾರು 9 ಕೋಟಿ ರೂ. ಪಾವತಿಸದೆ ಬಾಕಿ ಉಳಿದಿದೆ.
ಇದನ್ನೂ ಓದಿ: ಕಿಸ್ ಮಾಡಿ ವಿವಾದಕ್ಕೀಡಾಗಿದ್ದ ಗಾಯಕನಿಗೆ ಮತ್ತೆ ಸಂಕಷ್ಟ: ಕೋರ್ಟ್ ಮೆಟ್ಟಿಲೇರಿದ ಉದಿತ್ ನಾರಾಯಣ್ ಮೊದಲ ಪತ್ನಿ
ತಿಹಾರ್ ಜೈಲಿಗೆ ಶರಣಾದ ನಟ
ಜೂನ್ 2024 ರಲ್ಲಿ ಅವರ ಶಿಕ್ಷೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದ , ನ್ಯಾಯಾಲಯವು ಈ ವಿಷಯವನ್ನು ಪರಿಹರಿಸಲು ಪ್ರಾಮಾಣಿಕ ಮತ್ತು ನಿಜವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರಿಗೆ ಒತ್ತಾಯಿಸಿತು. ಹೀಗೆ ಪ್ರಕರಣದಲ್ಲಿ ಸ್ವಲ್ಪ ಪ್ರಗತಿಯಾದರೂ. ಮೊನ್ನೆ ಫೆಬ್ರವರಿ 2ರಂದು, ನ್ಯಾಯಾಲಯವು ಫೆಬ್ರವರಿ 4 ರೊಳಗೆ ಶರಣಾಗುವಂತೆ ಅವರಿಗೆ ಸೂಚಿಸಿತು. ಹೀಗಾಗಿ ಕೋರ್ಟ್ ಆದೇಶದಂತೆ ಸಾಲ ಪಾಲಿಸಲು ವಿಫಲವಾದ ನಂತರ, ಹೆಚ್ಚಿನ ಸಮಯಕ್ಕಾಗಿ ಅವರ ವಕೀಲರ ಮನವಿಯನ್ನು ತಿರಸ್ಕರಿಸಲಾಯಿತು. ಹೀಗಾಗಿ ಫೆಬ್ರವರಿ 5 ರಂದು ಅವರು ಹೊಸ ಮರುಪಾವತಿ ಪ್ರಸ್ತಾವನೆಯೊಂದಿಗೆ ನ್ಯಾಯಾಲಯಕ್ಕೆ ಹಾಜರಾದರು. ಆದರೆ ಆ ಪ್ರಸ್ತಾವನೆಯನ್ನು ತಿರಸ್ಕರಿಸಸಿದ್ದರಿಂದ ಅವರು ತಿಹಾರ್ ಜೈಲಿಗೆ ಹೋಗಬೇಕಾಯ್ತು.
ಇದನ್ನೂ ಓದಿ: ನಟನೆಯ ಜೊತೆಗೆ MBBS ಕೋರ್ಸ್ ಮುಗಿಸಿ ವೈದ್ಯೆಯಾದ ಶ್ರೀಲೀಲಾ: ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದೇಕೆ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

