ಆಪ್ತ ಸ್ನೇಹಿತನ ಮೃತದೇಹ ಹೊತ್ತು ಕಣ್ಣೀರು ಇಟ್ಟ ರಶೀದ್ ಖಾನ್.. ಫೋಟೋಗಳು
ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಪೂರ್ ಜುಲೈ 7ರಂದು ಕೊನೆಯುಸಿರೆಳೆದಿದ್ದರು. ವಿಧಿಯ ವೈಪರೀತ್ಯವೆಂದರೆ, ಅವರ ಜನ್ಮದಿನದಂದೇ ಪಾರ್ಥಿವ ಶರೀರ ಕಾಬೂಲ್ಗೆ ತಲುಪಿತು. ಕುಟುಂಬಸ್ಥರು ಮತ್ತು ಸಹ ಆಟಗಾರರು ಮೃತದೇಹವನ್ನು ಕಂಡು ಆಕ್ರಂದನ ಮುಗಿಲು ಮುಟ್ಟಿತು.

ಹುಟ್ಟುಹಬ್ಬದಂದೇ ಬಂದ ಶವಪೆಟ್ಟಿಗೆ!
ಕಾಬೂಲ್: ವಿಧಿಯ ಆಟ ಯಾರೂ ಬಲ್ಲರು? ಸಂಭ್ರಮಿಸಬೇಕಿದ್ದ ದಿನವೇ ಸೂತಕದ ಛಾಯೆ ಆವರಿಸಿದೆ. ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ದಿಗ್ಗಜ ವೇಗಿ ಶಾಪೂರ್ ಜದ್ರಾನ್ ಅವರ ಅಂತ್ಯಕ್ರಿಯೆ ಅತೀವ ನೋವಿನ ನಡುವೆ ನಡೆದಿದೆ. ಜೀವನದ ಹೋರಾಟದಲ್ಲಿ ಗೆದ್ದಿದ್ದ ಈ ವೀರ, ಸಾವಿನ ಮುಂದೆ ಮಂಡಿಯೂರಿರುವುದು ಇಡೀ ಕ್ರಿಕೆಟ್ ಲೋಕವನ್ನೇ ಕಣ್ಣೀರಲ್ಲಿ ಮುಳುಗಿಸಿದೆ.
ಮುಗಿಲು ಮುಟ್ಟಿದ ಆಕ್ರಂದನ
ಜುಲೈ 8 ಶಾಪೂರ್ ಜದ್ರಾನ್ ಅವರ 39ನೇ ಹುಟ್ಟುಹಬ್ಬ. ಮನೆಯವರೆಲ್ಲಾ ಸಂಭ್ರಮದ ಸಿದ್ಧತೆಯಲ್ಲಿದ್ದರೆ, ಅತ್ತ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಪೂರ್ ಜುಲೈ 7ರಂದು ಕೊನೆಯುಸಿರೆಳೆದಿದ್ದರು. ವಿಧಿಯ ವೈಪರೀತ್ಯವೆಂದರೆ, ಅವರ ಜನ್ಮದಿನದಂದೇ ಅವರ ಪಾರ್ಥಿವ ಶರೀರ ಕಾಬೂಲ್ಗೆ ತಲುಪಿತು. ಕೇಕ್ ಕತ್ತರಿಸಿ ಸಂಭ್ರಮಿಸಬೇಕಿದ್ದ ದಿನವೇ ಕುಟುಂಬಸ್ಥರು ಮತ್ತು ಸಹ ಆಟಗಾರರು ಅವರ ಮೃತದೇಹವನ್ನು ಕಂಡು ಆಕ್ರಂದನ ಮುಗಿಲು ಮುಟ್ಟಿತು.
ಮೃತದೇಹಕ್ಕೆ ಹೆಗಲು ಕೊಟ್ಟು ಕಣ್ಣೀರಿಟ್ಟ ರಶೀದ್ ಖಾನ್
ಕಾಬೂಲ್ ವಿಮಾನ ನಿಲ್ದಾಣಕ್ಕೆ ಶಾಪೂರ್ ಪಾರ್ಥಿವ ಶರೀರ ಬರುತ್ತಿದ್ದಂತೆ ಅಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳು ಹಾಗೂ ಕ್ರಿಕೆಟಿಗರ ಕಣ್ಣೀರ ಕೋಡಿ ಹರಿಯಿತು. ಅಫ್ಘಾನಿಸ್ತಾನದ ಸ್ಟಾರ್ ಆಟಗಾರ ರಶೀದ್ ಖಾನ್ ತಮ್ಮ ಹಿರಿಯ ಸಹೋದರನಂತಿದ್ದ ಶಾಪೂರ್ ಮೃತದೇಹ ಕಂಡು ಬಿಕ್ಕಿ ಬಿಕ್ಕಿ ಅತ್ತರು. ಅಷ್ಟೇ ಅಲ್ಲದೆ, ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ತಾವೇ ಮುಂದೆ ನಿಂತು ಶಾಪೂರ್ ಅವರ ಮೃತದೇಹವನ್ನು ಹೆಗಲ ಮೇಲೆ ಹೊತ್ತು ಸಾಗಿದರು. ವಿಶ್ವದ ಶ್ರೇಷ್ಠ ಸ್ಪಿನ್ನರ್ ತನ್ನ ಆಪ್ತ ಗೆಳೆಯನ ಶವಪೆಟ್ಟಿಗೆಯನ್ನು ಹೊತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರತಿಯೊಬ್ಬರ ಕಣ್ಣಂಚನ್ನು ತೇವಗೊಳಿಸುತ್ತಿವೆ.
ದೆಹಲಿಯಲ್ಲಿ ಹೋರಾಡಿ ಸೋತ 'ವೇಗದ ಸರದಾರ'
ರೋಗನಿರೋಧಕ ಶಕ್ತಿಗೆ (Immune System) ಸಂಬಂಧಿಸಿದ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಶಾಪೂರ್ ಅವರು ದೆಹಲಿ-ಎನ್ಸಿಆರ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾರತದ ನೆಲದಲ್ಲಿ ಕೊನೆಯುಸಿರೆಳೆದ ಇವರು, ತಮ್ಮ ಕೆರಿಯರ್ನಲ್ಲಿ ಭಾರತದ ದಿಗ್ಗಜರಾದ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಅವರಂತಹ ಘಟಾನುಘಟಿಗಳ ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಎತ್ತರದ ನಿಲುವು, ಹಾರುವ ಉದ್ದನೆಯ ಕೂದಲು ಮತ್ತು ಬೆಂಕಿಯಂತಹ ವೇಗದ ಬೌಲಿಂಗ್ಗೆ ಇವರು ಹೆಸರುವಾಸಿಯಾಗಿದ್ದರು.
ಅಂತಿಮಯಾತ್ರೆ
ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ನೇತೃತ್ವದಲ್ಲಿ ಗುರುವಾರ ಕಾಬೂಲ್ನ ಈದ್ಗಾ ಮಸೀದಿಯಲ್ಲಿ ಅಂತಿಮ ಪ್ರಾರ್ಥನೆ ನಡೆದಿದೆ. ನಂತರ ಮರಂಜನ್ ಹಿಲ್ ಸ್ಮಶಾನದಲ್ಲಿ ಅವರನ್ನು ಸಕಲ ಗೌರವಗಳೊಂದಿಗೆ ಸುಪುರ್ದೆ-ಎ-ಖಾಕ್ (ಅಂತ್ಯಕ್ರಿಯೆ) ಮಾಡಲಾಗಿದೆ. ಅಫ್ಘಾನ್ ಕ್ರಿಕೆಟ್ ತಂಡ ಬೆಳೆದು ನಿಲ್ಲಲು ಭದ್ರ ಬುನಾದಿ ಹಾಕಿದ್ದ ಶಾಪೂರ್, ಇಂದು ದೈಹಿಕವಾಗಿ ಇಲ್ಲದಿರಬಹುದು. ಆದರೆ ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಿರುವ ರಶೀದ್ ಖಾನ್ರಂತಹ ಆಟಗಾರರು ಪ್ರತಿ ವಿಕೆಟ್ ಪಡೆದಾಗಲೂ ಶಾಪೂರ್ ನೆನಪಾಗುತ್ತಲೇ ಇರುತ್ತಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

