Asianet Suvarna News Asianet Suvarna News

2 ತಿಂಗಳ ರಥಯಾತ್ರೆ ಮೂಲಕ ಅಯೋಧ್ಯೆ ತಲುಪಿದ ಕರ್ನಾಟಕದ ಕಿಷ್ಕಿಂಧೆ ಹನುಮರಥ

ರಾಮಭಕ್ತ ಹನುಮಂತನ ಜನ್ಮಸ್ಥಳ ಎಂದೇ ಪರಿಗಣಿತವಾಗಿರುವ ಕರ್ನಾಕಟದ ಕಿಷ್ಕಿಂಧೆ(ಹಂಪಿ)ಯಿಂದ ರಥಯಾತ್ರೆಗೆ ಹೊರಟಿದ್ದ ಹನುಮರಥ ವಿವಿಧ ದಿವ್ಯ ಕ್ಷೇತ್ರಗಳ ಮೂಲಕ ಅಯೋಧ್ಯೆಗೆ ಬಂದು ತಲುಪಿದೆ.

Kishkindhe Hanumaratha of Karnataka reached Ayodhya after a 2 month chariot journey akb
Author
First Published Jan 20, 2024, 7:10 AM IST

ಅಯೋಧ್ಯೆ: ರಾಮಭಕ್ತ ಹನುಮಂತನ ಜನ್ಮಸ್ಥಳ ಎಂದೇ ಪರಿಗಣಿತವಾಗಿರುವ ಕರ್ನಾಕಟದ ಕಿಷ್ಕಿಂಧೆ(ಹಂಪಿ)ಯಿಂದ ರಥಯಾತ್ರೆಗೆ ಹೊರಟಿದ್ದ ಹನುಮರಥ ವಿವಿಧ ದಿವ್ಯ ಕ್ಷೇತ್ರಗಳ ಮೂಲಕ ಅಯೋಧ್ಯೆಗೆ ಬಂದು ತಲುಪಿದೆ.

ಈ ಕುರಿತು ಮಾತನಾಡಿದ ಹನುಮಾನ್‌ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಅಭಿಷೇಕ್‌ ಕೃಷ್ಣಶಾಸ್ತ್ರಿ, ಎರಡು ತಿಂಗಳ ಕಾಲ ಸೀತೆಯ ಜನ್ಮಸ್ಥಳವಾದ ನೇಪಾಳದ ಜನಕಪುರಿಯೂ ಸೇರಿದಂತೆ ಭಾರತದ ಹಲವು ದಿವ್ಯಕ್ಷೇತ್ರಗಳ ಮೂಲಕ ರಥಯಾತ್ರೆಯಲ್ಲಿ ಟ್ರಸ್ಟ್‌ನಿಂದ 100 ಸ್ವಯಂಸೇವಕರು ಅಯೋಧ್ಯೆಗೆ ಆಗಮಿಸಿದ್ದೇವೆ. ದಾರಿಯಲ್ಲಿ ಭಕ್ತಾದಿಗಳು ನೀಡಿದ ದೇಣಿಗೆಯನ್ನು ಕಿಷ್ಕಿಂಧೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಹನುಮ ಗುಡಿ ಮತ್ತು 215 ಮೀ. ಎತ್ತರದ ಹನುಮನ ಮೂರ್ತಿ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಕರ್ನಾಟಕ- ಅಯೋಧ್ಯೆ ಪಾದಯಾತ್ರೆ: ರಾಮ ಮಂದಿರಕ್ಕೆ 1,800 ಕಿ.ಮೀ. ನಡೆದುಕೊಂಡು ಹೋದ ಗದಗಿನ ಗಾಂಧಿ

ಏನಿದು ಹನುಮರಥ?

ಹನುಮರಥವನ್ನು ದೇಗುಲದಂತೆಯೇ ವಿನ್ಯಾಸಗೊಳಿಸಲಾಗಿದ್ದು, ಶ್ರೀರಾಮ, ಲಕ್ಷ್ಮಣ, ಸೀತೆ, ಹನುಮಂತ, ಹಂಪಿ ವಿರೂಪಾಕ್ಷ ಮತ್ತು ಅಂಜನಿಯ ವಿಗ್ರಹಗಳನ್ನು ಇರಿಸಲಾಗಿದೆ. ಇದರ ಸುತ್ತಲೂ ರಥಯಾತ್ರೆಯ ಅಪೂರ್ವ ಕ್ಷಣಗಳ ಭಾವಚಿತ್ರಗಳಿವೆ. ಈ ರಥವನ್ನು ಹನುಮಾನ್‌ ತೀರ್ಥಕ್ಷೇತ್ರ ಟ್ರಸ್ಟ್‌ 40 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಪ್ರಸ್ತುತ ಅಯೋಧ್ಯೆಯ ಸರಯೂ ನದಿ ತೀರದಲ್ಲಿ ಜ.25ರವರೆಗೆ ನಿಲ್ಲಿಸಲಾಗಿರುತ್ತದೆ. ಈ ರಥಯಾತ್ರೆಯಲ್ಲಿ , ಇಲ್ಲಿ ಬಂದ ದೇಣಿಗೆಯನ್ನು ಕರ್ನಾಟಕದ ಅಂಜನಾದ್ರಿ ಬೆಟ್ಟದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಭವ್ಯ ಹನುಮ ದೇಗುಲ ಸಂಕೀರ್ಣಕ್ಕೆ ಬಳಸಿಕೊಳ್ಳಲಾಗುವುದು.

ಅಯೋಧ್ಯೆ ರಾಮನಿಗೆ ರಾಮನಗರದ ಮಂಗಳವಾದ್ಯ ಸೇವೆ

ರಾಮನಗರ: ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ರಾಮಲಲ್ಲನ ಮೂರ್ತಿ ಪ್ರತಿಷ್ಠಾಪನಾ ಕಾರ್ಯದಲ್ಲಿ ವಾದ್ಯ ನುಡಿಸಲು ಕರ್ನಾಟಕದಿಂದ ತೆರಳಿದ ಮಂಗಳವಾದ್ಯ ತಂಡದಲ್ಲಿ ರಾಮನಗರ ಜಿಲ್ಲೆಯ ವಿಜಿ ಕುಮಾರ್ ಮತ್ತವರ ವಾದ್ಯತಂಡವೂ ಸೇರಿದೆ. ಅಯೋಧ್ಯೆಯಲ್ಲಿ ಜ.23ರಿಂದ ಮಾರ್ಚ್ 10ರವರೆಗೆ ಬರೋಬ್ಬರಿ 48 ದಿನಗಳ ಕಾಲ ವಿಜಿ ಕುಮಾರ್ ನೇತೃತ್ವದ ವಾದ್ಯ ತಂಡ ಬಾಲರಾಮನಿಗೆ ರಾಗ ಸೇವೆ ಸಲ್ಲಿಸಲಿದ್ದಾರೆ.

RamLalla Photo: ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ, ಹೀಗಿದ್ದಾನೆ ನೋಡಿ ಶ್ರೀರಾಮ!

ಅಯೋಧ್ಯೆ ರಾಮಜನ್ಮ ಭೂಮಿ ವತಿಯಿಂದ ವಿಜಿಕುಮಾರ್ ಅವರಿಗೆ ಮಂಗಳವಾದ್ಯ ನುಡಿಸುವ ಸಂಬಂಧ ಆಹ್ವಾನ ಬಂದಿದೆ. ಹಾಗಾಗಿ ಜ.19ರಂದೇ ಈ ಮಂಗಳವಾದ್ಯ ತಂಡವೂ ಅಯೋಧ್ಯೆಗೆ ಪ್ರಯಾಣ ಬೆಳೆಸಿದೆ. ಈ 10 ಮಂದಿ ತಂಡದಲ್ಲಿ ರಾಮನಗರ, ಮೈಸೂರು , ಶ್ರೀರಂಗಪಟ್ಟಣ ಹಾಗೂ ಮಂಡ್ಯದ ಆಯ್ದ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ತಂಡವೂ ರಾಮನಿಗೆ ಪ್ರಿಯವಾದ ರಾಗವನ್ನು ನುಡಿಸಲಿದ್ದು, ಆ ಮೂಲಕ ಅಳಿಲು ಸೇವೆ ಸಲ್ಲಿಸಲಿದೆ.

ರಾಮನಗರದಿಂದ ಅಯೋಧ್ಯೆಗೆ ನಂಟು:

ಅಯೋಧ್ಯೆಯಲ್ಲಿ ತಮಿಳುನಾಡು ಮೂಲದ ಅಮ್ಮಾಜಿ ದೇವಾಲಯವಿದೆ. ಈ ದೇವಾಲಯದಲ್ಲಿ ವಿಜಿಕುಮಾರ್ ಮತ್ತವರ ತಂಡ ಕಳೆದ 10 ವರ್ಷದಿಂದ ಮಂಗಳವಾದ್ಯ ನುಡಿಸುತ್ತಿದೆ. ಇವರ ಮಂಗಳವಾದ್ಯವನ್ನು ವೀಕ್ಷಣೆ ಮಾಡಿದ ರಾಮ ಜನ್ಮ ಭೂಮಿ ಟ್ರಸ್ಟ್‌ನ ಚಂಪತ್ ರಾಯ್ ಹಾಗೂ ಗೋಪಾಲ್ ಜೀ ಅವರು ಪ್ರತಿ ವರ್ಷ ಶ್ರೀರಾಮನವಮಿಯಂದು ಅಯೋಧ್ಯೆಯಲ್ಲಿ ಕಾರ್ಯಕ್ರಮ ನೀಡುವಂತೆ ಸೂಚಿಸಿದ್ದರು. ಇವರ ಸೂಚನೆ ಮೇರೆಗೆ ಕಳೆದ ನಾಲ್ಕು ವರ್ಷದಿಂದ ವಿಜಿಕುಮಾರ್ ಅವರ ಮಂಗಳವಾದ್ಯ ತಂಡವೂ ಪ್ರತಿ ವರ್ಷ ರಾಮನವಮಿ ದಿನದಂದು ಮಂಗಳವಾದ್ಯ ನುಡಿಸಿಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ದೇವಾಲಯ ಉದ್ಘಾಟನೆಯಂದು ವಾದ್ಯ ನುಡಿಸಲು ಅವಕಾಶ ಲಭಿಸಿದೆ.

ಅಯೋಧ್ಯೆ ರಾಮಮಂದಿರಕ್ಕೆ ನಟ ಪ್ರಭಾಸ್ 50 ಕೋಟಿ ರೂ. ದೇಣಿಗೆ? ಊಟದ ಖರ್ಚು ಪೂರ್ತಿ ಯಂಗ್ ರೆಬೆಲ್ ಸ್ಟಾರ್‌ದಾ?

ಜ.23ರಿಂದ ದೇವಾಯದಲ್ಲಿ ಅಭಿಷೇಕ ಹಾಗೂ ಪೂಜೆಯ ವೇಳೆ ಮಂಗಳವಾದ್ಯ ನುಡಿಸುವರು. ಜ.22ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯ ಉದ್ಘಾಟನೆ ನೆರವೇರಿಸಲಿದ್ದಾರೆ. ಅಂದು ಶಿಷ್ಟಾಚಾರ ಇರುವುದರಿಂದ ಮಂಗಳವಾದ್ಯ ನುಡಿಸಲು ಅವಕಾಶ ಸಿಗುವುದು ಕಷ್ಟ. ಹಾಗಾಗಿ ಜ.23ರಿಂದ 48ದಿನಗಳ ಕಾಲ ಕರ್ನಾಟಕ ತಂಡದಿಂದ ಮಂಗಳವಾದ್ಯ ಮೊಳಗಲಿದೆ.

Follow Us:
Download App:
  • android
  • ios