ದೇಶದ ಅತ್ಯಂತ ಶ್ರೀಮಂತ ಗಣೇಶ ಮಂಡಳಿಯಾದ ಮುಂಬೈನ 'ಜಿಎಸ್‍ಬಿ ಸೇವಾ ಮಂಡಳ' ಈ ಬಾರಿಯ ಗಣೇಶೋತ್ಸವಕ್ಕಾಗಿ ₹508 ಕೋಟಿ ಮೊತ್ತದ ದಾಖಲೆಯ ವಿಮೆ ಪಡೆಯಲು ಮುಂದಾಗಿದೆ. ಚಿನ್ನ ಮತ್ತು ಬೆಳ್ಳಿಯ ದರ ಏರಿಕೆಯಿಂದಾಗಿ ವಿಮಾ ಮೊತ್ತ ಹೆಚ್ಚಾಗಿದೆ.

ಮುಂಬೈ (ಆ.18): ದೇಶದ ಅತ್ಯಂತ ಶ್ರೀಮಂತ ಗಣೇಶ ಮಂಡಳಿ ಎಂದೇ ಪ್ರಸಿದ್ಧವಾಗಿರುವ ಮುಂಬೈನ ಕಿಂಗ್ಸ್ ಸರ್ಕಲ್‌ನ 'ಜಿಎಸ್‍ಬಿ ಸೇವಾ ಮಂಡಳ' (GSB Seva Mandal) ಈ ಬಾರಿಯ ಗಣೇಶೋತ್ಸವಕ್ಕಾಗಿ ಬರೋಬ್ಬರಿ ₹508 ಕೋಟಿ ಮೊತ್ತದ ದಾಖಲೆಯ ವಿಮೆ (Insurance) ಪಡೆಯಲು ಮುಂದಾಗಿದೆ. ಈ ವಿಮಾ ಒಪ್ಪಂದಕ್ಕಾಗಿ ಮೂರು ಪ್ರಮುಖ ಕಂಪನಿಗಳಿಂದ ಸ್ಪರ್ಧಾತ್ಮಕ ಟೆಂಡರ್‌ಗಳು ಸಲ್ಲಿಕೆಯಾಗಿದ್ದು, ಕಳೆದ ವರ್ಷ ವಿಮೆ ಒದಗಿಸಿದ್ದ 'ನ್ಯೂ ಇಂಡಿಯಾ ಅಶ್ಯೂರೆನ್ಸ್' ಕಂಪನಿಯೊಂದಿಗೆ ಮಂಗಳವಾರ ನಡೆಯಲಿರುವ ಅಂತಿಮ ಸುತ್ತಿನ ಮಾತುಕತೆಯ ನಂತರ ವಿಜೇತ ಸಂಸ್ಥೆಯನ್ನು ಅಧಿಕೃತವಾಗಿ ಘೋಷಿಸಲಾಗುವುದು.

ಕಳೆದ 2025ರ ಗಣೇಶೋತ್ಸವದಲ್ಲಿ ಜಿಎಸ್‌ಬಿ ಮಂಡಳವು ₹474 ಕೋಟಿ ಹಾಗೂ 2024ರಲ್ಲಿ ₹400 ಕೋಟಿ ಮೊತ್ತದ ವಿಮೆ ಮಾಡಿಸಿತ್ತು. ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ನಿರಂತರವಾಗಿ ಏರಿಕೆಯಾಗುತ್ತಿರುವುದೇ ಈ ವಿಮಾ ಮೊತ್ತ ವರ್ಷದಿಂದ ವರ್ಷಕ್ಕೆ ಬೃಹತ್ ಪ್ರಮಾಣದಲ್ಲಿ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.

ಬಂಗಾರ, ಬೆಳ್ಳಿಯ ಆಭರಣಗಳಿಗೇ ₹99.6 ಕೋಟಿ ವಿಮೆ!

ಸೋಮವಾರ ತಡರಾತ್ರಿ ಟೆಂಡರ್‌ಗಳನ್ನು ತೆರೆಯಲಾಗಿದ್ದು, ಈ ಕುರಿತು ಮಾಹಿತಿ ನೀಡಿರುವ ಮಂಡಳಿಯ ವಕ್ತಾರ ಅಮಿತ್ ಪೈ, "ಚಿನ್ನ, ಬೆಳ್ಳಿ ಮತ್ತು ರತ್ನಖಚಿತ ಆಭರಣಗಳನ್ನು ಒಳಗೊಂಡ 'ಆಲ್ ರಿಸ್ಕ್ ಇನ್ಶೂರೆನ್ಸ್ ಪಾಲಿಸಿ'ಯ ಮೊತ್ತದಲ್ಲಿ ಈ ಬಾರಿ ಶೇಕಡಾ 33 ರಷ್ಟು ಭಾರಿ ಏರಿಕೆಯಾಗಿದೆ. ಕಳೆದ 2025ರಲ್ಲಿ ಆಭರಣಗಳಿಗೆ ₹67 ಕೋಟಿ ವಿಮೆ ಮಾಡಿಸಲಾಗಿತ್ತು. ಆದರೆ ಈ ವರ್ಷ ಅಪಾರ ಮೌಲ್ಯದ ಈ ಆಭರಣಗಳಿಗೆ ₹99.6 ಕೋಟಿ ರೂಪಾಯಿಗಳ ವಿಮೆ ನೀಡಲಾಗುತ್ತಿದೆ" ಎಂದು ತಿಳಿಸಿದ್ದಾರೆ. ಕಳೆದ 2024ರಲ್ಲಿ ಮಂಡಳಿಯು ಆಭರಣಗಳಿಗೆ ₹43 ಕೋಟಿ ಹಾಗೂ 2023ರಲ್ಲಿ ₹38 ಕೋಟಿ ವಿಮೆ ಪಡೆದಿತ್ತು.

ವಿಮಾ ಮೊತ್ತದ ಹಂಚಿಕೆ ವಿವರ

₹508 ಕೋಟಿ ಬೃಹತ್ ವಿಮಾ ಮೊತ್ತವನ್ನು ವಿವಿಧ ವಿಭಾಗಗಳಲ್ಲಿ ಈ ಕೆಳಗಿನಂತೆ ವಿಂಗಡಿಸಲಾಗಿದೆ.

ಸೇವಕರು ಹಾಗೂ ಸಿಬ್ಬಂದಿಗೆ ವೈಯಕ್ತಿಕ ಅಪಘಾತ ವಿಮೆ (₹376.5 ಕೋಟಿ): ವಿಮಾ ಮೊತ್ತದ ಸಿಂಹಪಾಲು ಅಂದರೆ ₹376.5 ಕೋಟಿಯನ್ನು ಸ್ವಯಂಸೇವಕರು, ಅರ್ಚಕರು, ಅಡುಗೆಯವರು, ಪಾದರಕ್ಷೆ ಕಾಯುವ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಮತ್ತು ವ್ಯಾಲೆಟ್ ಪಾರ್ಕಿಂಗ್ ಕೆಲಸಗಾರರ ವೈಯಕ್ತಿಕ ಅಪಘಾತ ವಿಮೆಗಾಗಿ ಕಾಯ್ದಿರಿಸಲಾಗಿದೆ. (ಕಳೆದ 2025ರಲ್ಲೂ ಈ ವಿಭಾಗಕ್ಕೆ ₹375 ಕೋಟಿ ವಿಮೆ ಮಾಡಿಸಲಾಗಿತ್ತು).

ಸಾರ್ವಜನಿಕ ಹೊಣೆಗಾರಿಕೆ ವಿಮೆ (₹30 ಕೋಟಿ): ಮಂಟಪ, ಕ್ರೀಡಾಂಗಣ ಹಾಗೂ ಆಗಮಿಸುವ ಲಕ್ಷಾಂತರ ಭಕ್ತಾದಿಗಳ ಸುರಕ್ಷತೆಯ ಸಾರ್ವಜನಿಕ ಹೊಣೆಗಾರಿಕೆಗಾಗಿ (Public Liability) ₹30 ಕೋಟಿ ವಿಮೆ ಒಳಗೊಂಡಿದೆ.

ಪೀಠೋಪಕರಣ ಹಾಗೂ ಉಪಕರಣಗಳ ವಿಮೆ (₹2 ಕೋಟಿ): 'ಸ್ಟ್ಯಾಂಡರ್ಡ್ ಫೈರ್ ಅಂಡ್ ಸ್ಪೆಷಲ್ ಪೆರಿಲ್ ಪಾಲಿಸಿ' ಅಡಿಯಲ್ಲಿ ಭೂಕಂಪದ ಅಪಾಯವನ್ನೂ ಒಳಗೊಂಡು ಮಂಟಪದ ಪೀಠೋಪಕರಣಗಳು, ಸಿವಿಲ್ ಫಿಟ್ಟಿಂಗ್‌ಗಳು, ಸಿಸಿಟಿವಿ ಕ್ಯಾಮೆರಾಗಳು, ಕಂಪ್ಯೂಟರ್‌ಗಳು, ಪಾತ್ರೆಗಳು, ದಿನಸಿ ವಸ್ತುಗಳು, ಹಣ್ಣು-ತರಕಾರಿಗಳು ಮತ್ತು ಕ್ಯೂಆರ್ ಕೋಡ್ ಸ್ಕ್ಯಾನರ್‌ಗಳಿಗೆ ₹2 ಕೋಟಿ ವಿಮೆ ಮಾಡಿಸಲಾಗಿದೆ.

ಮಂಟಪದ ಆವರಣದ ವಿಮೆ (₹43 ಲಕ್ಷ): ಮಂಡಳಿಯ ಕಟ್ಟಡ ಹಾಗೂ ಆವರಣದ ರಕ್ಷಣೆಗಾಗಿ ₹43 ಲಕ್ಷ ಮೌಲ್ಯದ ಪ್ರತ್ಯೇಕ ಅಗ್ನಿ ಅವಘಡ ವಿಮೆ ಪಡೆಯಲಾಗಿದೆ.

ಜಿಎಸ್‌ಬಿ ಸೇವಾ ಮಂಡಳದ ಇತಿಹಾಸ

ಮುಂಬೈನ ಗೌಡ ಸಾರಸ್ವತ ಬ್ರಾಹ್ಮಣ (GSB) ಸೇವಾ ಮಂಡಳವು 1951ರ ವಿಜಯದಶಮಿಯಂದು ಸ್ಥಾಪನೆಗೊಂಡಿತು. ತದನಂತರ 1955ರಿಂದ ಈ ಮಂಡಳಿಯು ಅತ್ಯಂತ ವೈಭವಪೂರ್ಣವಾಗಿ ಗಣೇಶೋತ್ಸವ ಆಚರಣೆಯನ್ನು ಪ್ರಾರಂಭಿಸಿತು. ಪ್ರಸ್ತುತ ಇದು ಭಾರತದ ಅತ್ಯಂತ ಶ್ರೀಮಂತ ಮತ್ತು ಶ್ರದ್ಧಾಭಕ್ತಿಯ ಗಣೇಶೋತ್ಸವ ಮಂಡಳಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.