ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಡಗರಕ್ಕಾಗಿ, ಯೂಟ್ಯೂಬ್‌ನಲ್ಲಿ ಲಭ್ಯವಿರುವ 'ಕಂಡಿರಾ ಕೃಷ್ಣನ' ಎಂಬ ಜ್ಯೂಕ್‌ಬಾಕ್ಸ್‌ ಅತ್ಯುತ್ತಮ ಭಕ್ತಿಗೀತೆಗಳ ಸಂಗ್ರಹವನ್ನು ಹೊಂದಿದೆ. ವಿದ್ಯಾಭೂಷಣ, ಎಸ್. ಜಾನಕಿ, ವಾಣಿ ಜಯರಾಮ್ ಅವರಂತಹ ಶ್ರೇಷ್ಠ ಗಾಯಕರು ಹಾಡಿರುವ ಹಾಡುಗಳು ಇದರಲ್ಲಿವೆ.

ರಾಜ್ಯ ಹಾಗೂ ದೇಶದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಡಗರದ ಸಂಭ್ರಮ ಮನೆಮಾಡಿದೆ. ಸೆಪ್ಟೆಂಬರ್‌ 4 ರಂದು ಇಡೀ ದೇಶದಲ್ಲಿ ಅತ್ಯಂತ ವೈಭವವಾಗಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಣೆ ಮಾಡಲಾಗುತ್ತದೆ. ಈ ಪವಿತ್ರ ಹಬ್ಬದ ಅಂಗವಾಗಿ ಕೃಷ್ಣನ ಭಕ್ತರಿಗಾಗಿ ಶ್ರೀಕೃಷ್ಣನ ಭಕ್ತಿಯಲ್ಲಿ ತೇಲಿಸುವ ಹಾಡುಗಳನ್ನು ಹುಡುಕುವುದು ಸವಾಲೆನಿಸಬಹುದು. ಆದರೆ, ಯೂಟ್ಯೂಬ್‌ನಲ್ಲಿರುವ ಈ ಪ್ರಸಿದ್ಧ ಜ್ಯೂಕ್‌ಬಾಕ್ಸ್‌ ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಭಕ್ತಿಯಲ್ಲಿ ತೇಲಿಸುವ ಮನಮೋಹಕ ಹಾಡುಗಳನ್ನು ಹೊಂದಿದೆ. ಈ ಜ್ಯೂಕ್‌ ಬಾಕ್ಸ್‌ನ ಹೆಸರು 'ಕಂಡಿರಾ ಕೃಷ್ಣನ'. ಲಹರಿ ಮ್ಯೂಸಿಕ್‌ ಚಾನೆಲ್‌ನಲ್ಲಿ ಈ ಭಕ್ತಿಗೀತೆಗಳ ಗುಚ್ಛ ಲಭ್ಯವಿದೆ.

ವಿದ್ಯಾಭೂಷಣ, ಎಸ್. ಜಾನಕಿ, ವಾಣಿ ಜಯರಾಮ್, ಬಿ.ಆರ್. ಚಾಯಾ, ಮಂಜುಳಾ ಗುರುರಾಜ್ ಅವರಂತಹ ಶ್ರೇಷ್ಠ ಗಾಯಕರು ಹಾಡಿರುವ, ಪೂಜ್ಯ ಶ್ರೀ ವಾದಿರಾಜ ಸ್ವಾಮಿಗಳು ಹಾಗೂ ರತ್ನಾಕರ ವರ್ಣಿ/ಆರ್.ಎನ್. ಜಯಗೋಪಾಲ್ ಅವರಂತಹ ಶ್ರೇಷ್ಠ ಸಾಹಿತಿಗಳು ರಚಿಸಿದ ಕಾಲಾತೀತ ಗೀತೆಗಳು ಈ ಜೂಕ್‌ಬಾಕ್ಸ್‌ನಲ್ಲಿವೆ.

ಜೂಕ್‌ಬಾಕ್ಸ್‌ನಲ್ಲಿರುವ ಪ್ರಮುಖ ಗೀತೆಗಳು ಮತ್ತು ವಿವರ ಇಲ್ಲಿದೆ

ಬಾರೋ ಬೇಗ ಬಾರೋ: ಶ್ರೀ ವಾದಿರಾಜ ಸ್ವಾಮಿಗಳ ಸಾಹಿತ್ಯ ಹಾಗೂ ಟಿ.ವಿ. ಗೋಪಾಲಕೃಷ್ಣನ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಕ್ಲಾಸಿಕ್ ಹಾಡನ್ನು ವಿದ್ಯಾಭೂಷಣ ತೀರ್ಥ ಸ್ವಾಮೀಜಿ ಗಾಯನ ಮಾಡಿದ್ದಾರೆ.

ಕೃಷ್ಣ ನೋಡಿದಿರಾ: ಚಿ. ಬಾಲಕೃಷ್ಣ ಸಾಹಿತ್ಯ ಹಾಗೂ ಸಂಗೀತ ನೀಡಿದ್ದು, ಪ್ರಸಿದ್ಧ ಗಾಯಕಿ ಮಂಜುಳಾ ಗುರುರಾಜ್ ದನಿಯಾಗಿದ್ದಾರೆ.

ಅಮ್ಮ ಇವನಾರಮ್ಮ: ಆರ್.ಎನ್. ಜಯಗೋಪಾಲ್ ಸಾಹಿತ್ಯ, ಪಲ್ಲವಿ ಹೆಚ್. ಪ್ರಕಾಶ್ ಸಂಗೀತ ರಚನೆಯ ಈ ಸುಮಧುರ ಗೀತೆಯನ್ನು ದಿವಂಗತ ವಾಣಿ ಜಯರಾಮ್ ಹಾಡಿದ್ದಾರೆ.

ಹಾಲನು ಕುಡಿಯದೆ: ಡಾ. ಹೆಚ್.ಎಸ್. ವೆಂಕಟೇಶಮೂರ್ತಿ ಅವರ ಸಾಹಿತ್ಯ ಮತ್ತು ಸುನೀತಾ ಚಂದ್ರಕುಮಾರ್ ಸಂಗೀತಕ್ಕೆ ನಾಗಚಂದ್ರಿಕಾ ಭಟ್ ಅವರ ಗಾಯನ ಜೀವ ತುಂಬಿದೆ.

ನಾಟ್ಯಲೋಲನೆ: ಬಿ.ಎಂ. ಪ್ರಸಾದ್ ರಚನೆ ಹಾಗೂ ನರಸಿಂಹ ನಾಯಕ್ ಸಂಗೀತ ಸಂಯೋಜನೆಯ ಹಾಡಿಗೆ ಗಾಯಕಿ ಕುಸುಮಾ ಧ್ವನಿಯಾಗಿದ್ದಾರೆ.

ಕಂಡೀರಾ ಕೃಷ್ಣನ: ಎನ್.ಜೆ. ರವಿಶೇಖರ್ ಅವರೇ ಸಾಹಿತ್ಯ, ಸಂಗೀತ ಹಾಗೂ ಗಾಯನ ನೀಡಿದ 'ಒಂದೇ ಮಂತ್ರ ಸಾಲದೇ' ಆಲ್ಬಂನ ಹಿಟ್ ಗೀತೆ ಇದಾಗಿದೆ.

ದಿವ್ಯ ಮೋಹನ: ಜಯಗೋಪಾಲ್ ಸಾಹಿತ್ಯ ಹಾಗೂ ಪಲ್ಲವಿ ಹೆಚ್. ಪ್ರಕಾಶ್ ಸಂಗೀತ ನೀಡಿದ ಈ ಹಾಡಿಗೆ ಗಾನಕೋಗಿಲೆ ಎಸ್. ಜಾನಕಿ ದನಿಯಾಗಿದ್ದಾರೆ.

ದೇವಕಿಗೆ ಸಂತಸವ: ಬನ್ನಂಜೆ ಗೋವಿಂದಾಚಾರ್ಯರ ದಿವ್ಯ ಸಾಹಿತ್ಯಕ್ಕೆ ವಿದ್ಯಾಭೂಷಣ ಅವರ ಧ್ವನಿ ಹಾಗೂ ಟಿ.ವಿ. ಗೋಪಾಲಕೃಷ್ಣನ್ ಅವರ ಸಂಗೀತ ರಚನೆಯಿದೆ.

ಶ್ಯಾಮ ಶ್ಯಾಮ: 'ಉಡುಪಿ ಕೃಷ್ಣ ಅಂಡ್ ಶ್ರೀ ಮಂಜುನಾಥ' ಆಲ್ಬಂನ ಈ ಗೀತೆಯನ್ನು ವಾಣಿ ಜಯರಾಮ್ ಹಾಡಿದ್ದು, ಪಲ್ಲವಿ ಹೆಚ್. ಪ್ರಕಾಶ್ ಸಂಗೀತ ಸಂಯೋಜಿಸಿದ್ದಾರೆ.

ಶ್ರೀ ಕೃಷ್ಣ ಚರಣ: ಹೆಚ್. ಕೆ. ನಾರಾಯಣ್ ಸಂಗೀತ, ಲಕ್ಷ್ಮೀನಾರಾಯಣ ಭಟ್ಟರ ಸಾಹಿತ್ಯ ಹಾಗೂ ಬಿ.ಆರ್. ಚಾಯಾ ಅವರ ಧ್ವನಿಯಿರುವ ಅದ್ಭುತ ಭಕ್ತಿಗೀತೆ.

ಜನ್ಮಾಷ್ಟಮಿ ಹಬ್ಬದ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ವೇಳೆ ಈ ಮನಸ್ಸಿಗೆ ಮುದ ನೀಡುವ, ಭಕ್ತಿಭಾವ ಮೂಡಿಸುವ ಜೂಕ್‌ಬಾಕ್ಸ್ ಕೇಳಿ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಬಹುದು.