Asianet Suvarna News Asianet Suvarna News

ವಿಜಯಪುರದಲ್ಲಿ ನಡೆಯುತ್ತೆ ಹೊಡಿಬಡಿ ಜಾತ್ರೆ; ರಕ್ತ ಸುರಿಯೋವರೆಗೂ ನಿಲ್ಲಲ್ಲ ಹೊಡೆದಾಟ!

ರಕ್ತ ನೆಲಕ್ಕೆ ಬೀಳುವವರೆಗೂ ನಡೆಯುತ್ತೆ ಹೊಡೆದಾಟ!
ಗ್ರಾಮಸ್ಥರನ್ನೆ ಅಟ್ಟಾಡಿಸಿ ಹೊಡೆಯೋ ಸಾಕ್ಷಾತ್ ದೇವರು!
ಕನ್ನೂರಿನಲ್ಲಿ 300 ವರ್ಷಗಳಿಂದ ನಡೆದು ಬರ್ತಿದೆ ಬಡಿಗೆ ಜಾತ್ರೆ!

badige Jatre in Vijayapura looks cruel yet gives message skr
Author
First Published May 18, 2023, 4:50 PM IST | Last Updated May 18, 2023, 4:50 PM IST

ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ: ರಾಜ್ಯದ ಹಲವೆಡೆ ಜಾತ್ರೆಗಳು ನಡೆಯುತ್ತವೆ. ಒಂದೊಂದು ಜಾತ್ರೆಗಳು ಒಂದೊಂದು ರೀತಿಯಲ್ಲಿರುತ್ತವೆ. ಆದ್ರೆ ಗುಮ್ಮಟನಗರಿ ವಿಜಯಪುರದಲ್ಲಿ ಹೊಡಿಬಡಿ ಜಾತ್ರೆಯೊಂದು ನಡೆಯುತ್ತೆ. ಈ ಜಾತ್ರೆಯನ್ನ ಕಣ್ಣಾರೆ ಕಂಡ್ರೆ ಬೆಚ್ಚಿ ಬೀಳ್ತೀರಾ. ಏಕೆಂದರೆ, ಸ್ವತಃ ಗ್ರಾಮ ದೇವರೆ ಗ್ರಾಮಸ್ಥರನ್ನ ಅಟ್ಟಾಡಿಸಿ ಹೊಡೆಯೋ ಜಾತ್ರೆ ಇದು. ಕಳೆದ ನೂರಾರು ವರ್ಷಗಳಿಂದ ಈ ಜಾತ್ರೆ ನಡೆಯುತ್ತ ಬಂದಿದ್ದು, ದೇವರಿಂದ ಏಟು ತಿನ್ನುವ ಭಕ್ತರು ಪ್ರಾಯಶ್ಚಿತ ಮಾಡಿಕೊಳ್ಳುವುದು ವಿಶೇಷ. ಈ ಹೊಡಿ ಬಡಿ ಜಾತ್ರೆಯ ಹಿಂದೆ ಐತಿಹ್ಯವು ಇದೆ.

ಕನ್ನೂರು ಗ್ರಾಮದಲ್ಲಿ ಬಡಿಗೆ ಜಾತ್ರೆ..!
ಗ್ರಾಮೀಣ ಪ್ರದೇಶಗಳಲ್ಲಿ ನಾನಾ ತರಹದಲ್ಲಿ ಜಾತ್ರೆಗಳು ನಡೆಯುತ್ತವೆ. ಜಿಲ್ಲೆಯ ಕನ್ನೂರು ಗ್ರಾಮದಲ್ಲಿ ನಡೆಯೋ ಜಾತ್ರೆಯ ವಿಶೇಷವೇ ಬೇರೆ. ಬಡಿಗೆಗಳಿಂದ ಹೊಡೆದಾಡುವ ಮೂಲಕ ವಿಚಿತ್ರ ರೀತಿಯಲ್ಲಿ ಜಾತ್ರೆ ಆಚರಣೆ ನಡೆಯುತ್ತೆ. ಬಾದಾಮಿ ಅಮವಾಸ್ಯೆಗೂ ಮುನ್ನ ಕನ್ನೂರು ಗ್ರಾಮದಲ್ಲಿ ಬಡಿಗೆಗಳಿಂದ ಹೊಡೆದಾಡುವ ಮೂಲಕ ಜಾತ್ರೆ ಆಚರಿಸೋ ಸಂಪ್ರದಾಯವಿದೆ. ಗ್ರಾಮದ ರೇವಣಸಿದ್ದೇಶ್ವರ ಜಾತ್ರೆ ಅಂಗವಾಗಿ ಗ್ರಾಮದಲ್ಲಿ ದೇವರ ಮುಖವಾಡ ತೊಟ್ಟ ವ್ಯಕ್ತಿ ಹಾಗೂ ಅನ್ಯಕೋಮಿನ ಜನರ ನಡುವೆ ಬಡಿಗೆಗಳಿಂದ ಹೊಡೆದಾಟ ನಡೆಯುತ್ತೆ.

Nautapa 2023: 9 ದಿನಗಳ ಉರಿತಾಪ; ಜ್ಯೋತಿಷ್ಯ, ವಿಜ್ಞಾನದ ತಾಳಮೇಳ

300 ವರ್ಷಗಳ ಇತಿಹಾಸದ ಬಡಿಗೆ ಜಾತ್ರೆ!
ಈ ಬಡಿಗೆ ಜಾತ್ರೆ ಕಳೆದ 300 ವರ್ಷಗಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದಕ್ಕೊಂಡು ಹಿನ್ನೆಲೆಯೂ ಕೂಡಾ ಇದೆ. ಬದಾಮಿ ಅಮವಾಸ್ಯೆಯ ಮೂರು ದಿನ ಮುಂಚೆ ಆಚರಿಸಲ್ಪಡುವ ರೇವಣಸಿದ್ದನ ಜಾತ್ರೆಯೂ ಸಹ ಅಣ್ಣ ತಮ್ಮಂದಿರರ ನಡುವಿನ ದ್ವೇಷದ ಹಿನ್ನೆಲೆಯನ್ನು  ಹೊಂದಿದೆ. ಜಾತ್ರೆಯ ನಿಮಿತ್ಯ ರೇವಣಸಿದ್ದ ದೇವರು ಹಾಗೂ ಅನ್ಯ ಕೋಮಿನ ಯುವಕರ ನಡುವೆ ಬಡಿಗೆಗಳಿಂದ ಹೊಡೆದಾಡುವ ಸಂಪ್ರದಾಯವಿದೆ. ಇದಕ್ಕೆ ಮೂರು ದಶಕಗಳ ಐತಿಹ್ಯ ಇದೆ ಅನ್ನೋದೆ ವಿಶೇಷ!

ಜಾತ್ರೆ ಆಚರಣೆ ಹಿಂದೆ ಒಂದು ಹತ್ಯೆಯ ಕಥೆ!
ಕನ್ನೂರು ಗ್ರಾಮದ  ನಂದಗೊಂಡಗೌಡ  ಎಂಬುವವರು ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ 2ನೇ ಮದುವೆಯನ್ನು ಮಾಡಿಕೊಳ್ಳುತ್ತಾರೆ. ನಂತರ ಮೊದಲನೇಯ ಹೆಂಡತಿಗೆ  ರೇವಣಸಿದ್ದ ಎಂಬ ಮಗುವಿನ ಜನನವಾಗುತ್ತದೆ. ಹಾಗೂ ಎರಡನೇಯ ಹೆಂಡತಿಗೆ 7 ಗಂಡು ಮಕ್ಕಳು ಜನ್ಮ ತಾಳುತ್ತಾರೆ. ಮೊದಲ ಹೆಂಡತಿ ಪದ್ಮಾವತಿ ಬೀಸುವಾಗ ಹಾಡುತ್ತಾ ತನ್ನ ಮಗನಿಗೆ 7 ಬಂಡಿ ಬಂಗಾರದ  ಐಶ್ವರ್ಯ ಸಿಗಲಿ ಎಂದು ಹಾಡುತ್ತಾ ಪ್ರಾರ್ಥನೆ ಮಾಡುತ್ತಾಳೆ. ಇದನ್ನು ಕೇಳಿದ 2ನೇ ಹೆಂಡತಿ ಲಕ್ಕವ್ವಾ ತನ್ನ ಮಕ್ಕಳಿಗೆ ಐಶ್ವರ್ಯ ಸಿಗಲಾರದು ಎಂದು ತಿಳಿದು ತನ್ನ ಸವತಿಯ ಮಗನನ್ನು ಕೊಲೆ ಮಾಡಲು ಅನ್ಯ ಕೋಮಿನ ಜನರಿಗೆ ಹೇಳುತ್ತಾಳೆ. ನಂತರ ಅನ್ಯಕೋಮಿನ ಜನ ಮೊದಲ ಹೆಂಡತಿಯ ಮಗನನ್ನು ಕೊಲೆ ಮಾಡುತ್ತಾರೆ. ಮಗ ಕೊಲೆಯಾಗಿದ್ದನ್ನು ಕನಸಿನಲ್ಲಿಯೇ ಕಂಡ ಪದ್ಮಾವತಿ ದುಖಃತಪ್ತಳಾಗುತ್ತಾಳೆ. ನಂತರ ಗ್ರಾಮದಲ್ಲಿ ಕಾದಾಟಗಳು ಪ್ರಾರಂಭವಾಗುತ್ತವೆ. 
ಪ್ರತಿ ವರ್ಷ ರೇವಣಸಿದ್ದನ ಜಾತ್ರೆಯನ್ನು ಮಾಡಿದ್ರೆ ಎಲ್ಲ ತೊಂದರೆಗಳು ಪರಿಹಾರವಾಗುತ್ತವೆ  ಎಂಬ ನಂಬಿಕೆ ಇದೆ. ಈ ಕಾರಣದಿಂದ ಗ್ರಾಮದಲ್ಲಿ ವರ್ಷಂ ಪ್ರತಿ ರೇವಣಸಿದ್ದನ ಜಾತ್ರೆಯನ್ನು ಆಚರಣೆ  ಮಾಡಿಕೊಂಡು ಬರಲಾಗುತ್ತಿದೆ. ಜಾತ್ರೆಯಂದು ರೇವಣಸಿದ್ದನನ್ನು ಕೊಲೆ ಮಾಡಿರುವ ಅನ್ಯಕೋಮಿನ ಜನರು ಬಡಿಗೆಗಳನ್ನು ಹಿಡಿದುಕೊಂಡು ಬಂದು ರೇವಣಸಿದ್ದನನ್ನು ಕೆಣಕುತ್ತಾರೆ. ರೇವಣಸಿದ್ದ ದೇವರ ವೇಷಧಾರಿ ಎಲ್ಲರನ್ನು ಅಟ್ಟಾಡಿಸಿಕೊಂಡು ಬಡಿಗೆಯಿಂದ ಹೊಡೆಯುತ್ತಾ ಹಿಮ್ಮೆಟ್ಟಿಸುತ್ತಾ ಸಾಗುತ್ತಾನೆ.

ರಕ್ತ ನೆಲಕ್ಕೆ ಬೀಳುವವರೆಗೂ ನಡೆಯುತ್ತೆ ಹೊಡೆದಾಟ..!
ಈ  ರೀತಿಯಾಗಿ ಬಡಿಗೆಗಳಿಂದ ಪರಸ್ಪರ ಹೊಡೆದಾಡುತ್ತಾ,  ಸಾಗುವಾಗ ರೇವಣಸಿದ್ದನ ಹೊಡೆತದಿಂದ ಅನ್ಯಕೋಮಿನವರ ರಕ್ತ ತರ್ಪಣವಾಗಬೇಕೆಂಬ ಸಂಪ್ರದಾಯವೂ ಇದೆ. ಹೀಗೆ ಬಡಿಗೆಗಳಿಂದ ಹೊಡೆದಾಡುತ್ತಾ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಈ ಕಾದಾಟ ನಡೆಯುತ್ತದೆ. ಆಗ ಬಡಿಗೆಯಿಂದ ಹೊಡೆದ ರಕ್ತ ನೆಲಕ್ಕೆ ಬಿದ್ದರೆ ಜಾತ್ರೆ ಮುಗಿಯಿತು ಎಂಬ ನಂಬಿಕೆ ಇದೆ.

ಭಂಡಾರದಲ್ಲಿ ಮಿಂದೆಳುವ ಭಕ್ತರು..!
ಬಡಿಗೆಗಳಿಂದ ಹೊಡೆದಾಡುವಾಗ ಭಂಡಾರವನ್ನು ತೂರಲಾಗುತ್ತದೆ. ಪರಸ್ಪರರು ಭಂಡಾರದಲ್ಲಿ ಮಿಂದೇಳುತ್ತಾರೆ. ನಂತರ  ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಎಲ್ಲರೂ ಗ್ರಾಮದ ಹಳ್ಳದ ಹತ್ತಿರ ಹೋಗುತ್ತಾರೆ. ಅಲ್ಲಿ  ರೇವಣಸಿದ್ದನಿಗೆ ಜೋಳದ ಗುಗ್ಗರಿ ಹಾಗೂ ಇನ್ನಿತರ  ಪದಾರ್ಥಗಳನ್ನು ನೈವೇದ್ಯ ಮಾಡಲಾಗುತ್ತದೆ. ಅಲ್ಲಿಗೆ ಜಾತ್ರೆಯು ಮುಕ್ತಾಯವಾಗುತ್ತದೆ. ಗಾಯವಾದವರ ಮೇಲೆ ಭಂಡಾರ ಬಿದ್ದರೆ ಅಂತವರ ಗಾಯಗಳು ಮಾಯವಾಗುತ್ವೆ ಅನ್ನೋ ನಂಬಿಕೆಯು ಭಕ್ತರದಲ್ಲಿದೆ. ಇದೆಲ್ಲವು ರೇವಣಸಿದ್ದ ಸ್ವಾಮಿಯ ಪವಾಡ ಎನ್ನಲಾಗುತ್ತೆ..!

ಇಲ್ಲಿ ಮನೆಗಳಿಗಷ್ಟೇ ಅಲ್ಲ, ಅಂಗಡಿ, ಶೌಚಾಲಯಕ್ಕೂ ಬಾಗಿಲಿಲ್ಲ; ಆದರೂ ಯಾರಿಗೂ ಭಯವಿಲ್ಲ!

ನೆರೆಯ ಮಹಾರಾಷ್ಟ್ರದಿಂದಲೂ ಜತ್ರೆ ನೋಡಲು ಬರುವ ಜನ..!
ವಿಜಯಪುರ ತಾಲೂಕಿನ ಕನ್ನೂರು ಗ್ರಾಮದಲ್ಲಿ  ನಡೆಯುವ ರೇವಣಸಿದ್ದ ಜಾತ್ರೆಯು ಅತ್ಯಂತ  ವಿಶೇಷವಾಗಿದೆ. ಈ ಜಾತ್ರೆಯ ವೀಕ್ಷಣೆಗೆ ನೆರೆಯ ಮಹಾರಾಷ್ಟ್ರ ಹಾಗೂ ಆಂದ್ರಪ್ರದೇಶಗಳಿಂದಲೂ ಜನರು ಬರುತ್ತಾರೆ. ಕನ್ನೂರಿನ ಹೆಣ್ಣು ಮಕ್ಕಳು  ಜಾತ್ರೆಯ ಪ್ರಯುಕ್ತ ತವರಿಗೆ ಆಗಮಿಸುವ ವಾಡಿಕೆ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ದಾಯಾದಿ ಮತ್ಸರ, ಆಸ್ತಿಯಾಸೆ ಒಳ್ಳೆಯದಲ್ಲಾ ಎಂಬುದಕ್ಕೆ ರೇವಣಸಿದ್ದ ಸ್ವಾಮಿಯ ಜಾತ್ರೆಯೇ ಸಾಕ್ಷಿಯಾಗಿದೆ ಎಂದು ಹೇಳಬಹುದು.

Latest Videos
Follow Us:
Download App:
  • android
  • ios