ಪ್ರತಿ ವರ್ಷ ಶಿವರಾತ್ರಿ ಸಮಯದಲ್ಲಿ ಬಬಲಾದಿ ಮಠದಲ್ಲಿ ನುಡಿವ ಬೆಂಕಿಯಂಥ ಭವಿಷ್ಯಕ್ಕೆ ವಿಶೇಷ ಮಹತ್ವವಿದೆ. ಅವರು ಈ ವರ್ಷ ರಾಜ್ಯ ರಾಜಕಾರಣದ ಬಗ್ಗೆ ಹೇಳಿದ ಮಾತು ಚುನಾವಣೆ ಫಲಿತಾಂಶದ ವಿಷಯದಲ್ಲಿ ಸತ್ಯವಾಗಿದೆ. 

ವಿಜಯಪುರ: ಪ್ರತಿ ವರ್ಷ ವಿಶೇಷ ಸಂದರ್ಭಗಳಲ್ಲಿ ಕೆಲ ಜ್ಯೋತಿಷಿಗಳು, ಕಾಲಜ್ಞಾನಿಗಳು ರಾಜ್ಯ, ದೇಶ, ವಿಶ್ವದ ಭವಿಷ್ಯದ ಬಗ್ಗೆ ತಿಳಿಸುತ್ತಾರೆ. ಇವರಲ್ಲಿ ಕೆಲವರು ನುಡಿವ ಕಾರ್ಣಿಕಗಳು ಸದಾ ನಿಜವಾಗುತ್ತಾ ಬಂದು ಜನರಲ್ಲಿ ನಂಬಿಕೆಯನ್ನೂ, ಕುತೂಹಲವನ್ನೂ ಹುಟ್ಟಿಸಿವೆ. ಅದರಂತೆ, ಕಾಲಜ್ಞಾನ ನುಡಿಯುವ ಮಠಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಬೆಂಕಿ ಮಠ ಅಂತ ಕರೆಯಿಸಿಕೊಳ್ಳುವ ಬಬಲಾದಿ ಮಠ ಕೂಡ ಒಂದು. ಇಲ್ಲಿ ಪ್ರತಿ ವರ್ಷ ಶಿವರಾತ್ರಿ ಸಂದರ್ಭದಲ್ಲಿ ನುಡಿಯಲಾಗುವ ಕಾಲಜ್ಞಾನ ಕೇಳಲು ಭಕ್ತರಷ್ಟೇ ಅಲ್ಲ, ರಾಜ್ಯದ ಎಲ್ಲ ಕ್ಷೇತ್ರದವರೂ ಕಾತರರಾಗಿರುತ್ತಾರೆ. ಅದರಲ್ಲೂ ರಾಜಕಾರಣಿಗಳಿಗೆ ಈ ಕಾರ್ಣಿಕವೆಂದರೆ ಅಪಾರ ವಿಶ್ವಾಸ. ಏಕೆಂದರೆ, ರಾಜಕೀಯ ವಿಷಯವಾಗಿ ಇಲ್ಲಿವರೆಗೆ ಇಲ್ಲಿ ನುಡಿದ ಕಾರಣಿಕವಾವೂದೂ ಸುಳ್ಳಾಗಿಲ್ಲ ಎಂಬ ನಂಬಿಕೆ. ಅಂತೆಯೇ 2023ನೇ ಸಾಲಿನ ಕಾಲಜ್ಞಾನವನ್ನ ಫೆ.22ರಂದು ಬಬಲಾದಿ ಮಠದ ಸಿದ್ದು ಮುತ್ಯಾ ಹೇಳಿದ್ದರು. ಇದೀಗ ಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಅವರು ನುಡಿದ ಕಾರಣಿಕ ನಿಜವಾಗುವ ಮೂಲಕ ಮತ್ತಷ್ಟು ಅಚ್ಚರಿ ಹುಟ್ಟಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುತ್ಯಾ ಹೇಳಿದ್ದ ತಿರುವು ಸ್ಪಷ್ಟ!
ಈ ವರ್ಷ ಚುನಾವಣೆ ಇದ್ದ ಹಿನ್ನೆಲೆಯಲ್ಲಿ ಈ ಬಾರಿಯ ಬಬಲಾದಿ ಮಠದ ಭವಿಷ್ಯ ಬಹಳ ಕುತೂಹಲ ಮೂಡಿಸಿತ್ತು. ಅದಕ್ಕೆ ಸರಿಯಾಗಿ ಸಿದ್ದು ಮುತ್ಯಾ ಕೂಡಾ ಕಾಲಜ್ಞಾನವನ್ನು ಓದಿ, ರಾಜ್ಯ ರಾಜಕಾರಣಲ್ಲಿ ತಿರುವು ಉಂಟಾದಿತು ಮಕ್ಕಳಿರ್ಯಾ ಎಂದು ಭವಿಷ್ಯ ನುಡಿದಿದ್ದರು. ರಾಜಕಾರಣದಲ್ಲೆ ಊಹಿಸಲಾಗದ‌ ತಿರುವು ಉಂಟಾಗಲಿದೆ ಎನ್ನುವ ಭವಿಷ್ಯ ರಾಜಕೀಯ ಪಕ್ಷಗಳನ್ನು ಕಂಗೆಡಿಸಿತ್ತು. ಇದೀಗ ಅವರು ನುಡಿದಂತೆ ರಾಜ್ಯ ಚುನಾವಣೆಯ ಫಲಿತಾಂಶ ನೋಡಿದಾಗ ಯಾರೂ ಊಹಿಸದಿದ್ದ ಫಲಿತಾಂಶವೇ ಬಂದಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಬಬಲಾದಿ ಭವಿಷ್ಯಕ್ಕೆ ಮತ್ತಷ್ಟು ಬಲ ಬಂದಿದೆ. 

ಈ ರಾಜಕಾರಣದ ತಿರುವಿನ ಬಗ್ಗೆ ಹೇಳುವಾಗ, ಪ್ರಜೆಗಳಲ್ಲಿ ಏರುಪೇರಾಗಲಿದೆ. ಜಾತಿ-ಮತ, ಬೇಧ-ಭಾವ ಬಗೆಗೆ ಹೆಚ್ಚಿನ ಒಲವು ಐತಿ ಎನ್ನುವ ಮೂಲಕ ರಾಜಕೀಯ ತಿರುವಿನ ಮೂಲವನ್ನ ಇನ್ನು ಸ್ವಲ್ಪ ಬಿಡಿಸಿ ಹೇಳುವ ಪ್ರಯತ್ನ ಮಾಡಿದ್ದರು. ಅವೆಲ್ಲವೂ ಈ ಕರ್ನಾಟಕ ಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಸತ್ಯವೆನಿಸಿವೆ. 

ಬೆಂಕಿ ಭವಿಷ್ಯದ ಹಿನ್ನೆಲೆ
ಈ ಮಠದ ವಿಶೇಷವೆಂದರೆ 300 ವರ್ಷದ ಹಿಂದೆ ಸದಾಶಿವ ಅಜ್ಜನವರು ಬಬಲಾದಿ ಕ್ಷೇತ್ರದಲ್ಲಿ ನೆಲೆಸಿದ್ದರು. ಅವರೊಬ್ಬ ಪವಾಡ ಪುರುಷರು. ಅವರು ನುಡಿದ ಎಲ್ಲ ಮಾತುಗಳೂ ಸತ್ಯವಾಗಿವೆ. ಅವರು ಬರೆದಿರುವ ಕಾಲಜ್ಞಾನ ಇಂದು 12 ಪುಟಗಳಲ್ಲಿದೆ. ಪ್ರತಿ ವರ್ಷ ಅದನ್ನು ತೆರೆದು ಆಯಾ ವರ್ಷದ ಕಾಲಜ್ಞಾನ ಓದಲಾಗುತ್ತದೆ. ಈ ಎಲ್ಲ ಭವಿಷ್ಯಗಳೂ ಶೇ.100ರಷ್ಟು ನಿಜವಾಗಿವೆ ಎನ್ನುತ್ತಾರೆ ಮಠದ ಭಕ್ತರು.