Asianet Suvarna News Asianet Suvarna News

ಪರ್ಕಳ; ಪ್ರಚಲಿತಕ್ಕೆ ಬಾರದ ಪುರಾತನ ಹೊಯ್ಸಳ ಕಾಲದ ವಿಷ್ಣು ದೇವಾಲಯ!

ಹೊಯ್ಸಳ ಕಾಲದ ದೇವಾಲಯ, ಇನ್ನಷ್ಟೇ ಆಗಬೇಕಿದೆ ಅಧ್ಯಯನ
45 ವರ್ಷಗಳಿಂದ ಪೂಜೆಯಿಂದ ವಂಚಿತವಾಗಿರುವ ವಿಷ್ಣು ದೇವಾಲಯ
ಇಲ್ಲಿವೆ 101 ಬಾವಿಗಳು, ಮತ್ತಷ್ಟು ವಿಶಿಷ್ಠತೆ

12th centuary Vishnu temple in Parkala is calling for attention skr
Author
First Published Feb 22, 2023, 11:04 AM IST | Last Updated Feb 22, 2023, 11:04 AM IST

ವರದಿ: ಶಶಿಧರ ಮಾಸ್ತಿಬೆಟ್ಟು,ಸುವರ್ಣ ನ್ಯೂಸ್, ಉಡುಪಿ

ಪರ್ಕಳ ರಾಷ್ಟ್ರೀಯ ಹೆದ್ದಾರಿ ಕಾಂಕ್ರೀಟ್  ಮಿಕ್ಸಿಂಗ್ ಘಟಕದ ಹತ್ತಿರ ಇರುವ ಮಾಣೆಬೆಟ್ಟು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಗೆ ತಾಕಿದಂತೆ ಅಪರೂಪದ ದೇವಾಲಯ ಇದೆ. ಕ್ರಿಸ್ತಶಕ 12ನೇ ಶತಮಾನಕ್ಕೆ ಸೇರಿದೆ ಎನ್ನಲಾದ ಹೊಯ್ಸಳರ  ಕಾಲದ ವಿಷ್ಣುವಿನ ವಿಗ್ರಹ ಇರುವ ಪುರಾತನ ಕಾಲದ  ದೇವಾಲಯವು  ಪ್ರಚಲಿತಕ್ಕೆ ಬಾರದೆ ಹಾಗೆಯೇ ಇದೆ.

ಈ ದೇವಾಲಯದ ಒಳಗೆ ವಿಷ್ಣುವಿನ ಮೂರ್ತಿ ಇರುವುದು ಕಂಡು ಬಂದಿದೆ. ಮುರಕಲ್ಲಿನಿಂದ ಲಾಕ್ ಸಿಸ್ಟಮ್ ನಲ್ಲಿ ಕೂಡಿರುವ ಗೋಲಾಕಾರದ ಗೋಪುರವು ಕಾಣಸಿಗುತ್ತದೆ. ಒಬ್ಬ ಮನುಷ್ಯ ಒಳಗೆ ಸುತ್ತು ಬರುವಷ್ಟು ಜಾಗವಿದೆ. ಸಣ್ಣ ಎರಡು ದ್ವಾರ ಒಂದು ಬಾಗಿಲು ಹೊಂದಿರುತ್ತದೆ.

ಹಳೇ ಕಾಲದ ಲಾಕ್ ಸಿಸ್ಟಮ್ ಆಧಾರಿತ ಮರದ ಬಾಗಿಲು ಕೂಡಾ ಈ ದೇವಾಲಯದಲ್ಲಿದೆ. ಪೀಠದ ಮೇಲೆ ಕುಳಿತಂತಹ ವಿಷ್ಣುವಿನ ತಲೆಗೆ ನೆರಳು ನೀಡುವಂತೆ ಐದು ತಲೆ ಹಾವು ಹೆಡೆ ಬಿಚ್ಚಿದ ಶಿಲಾ ವಿನ್ಯಾಸ ಇಲ್ಲಿದೆ.  ಶಂಖ, ಚಕ್ರ,ಗದಾ ಪದ್ಮ ಇರುವ ಕಲ್ಲಿನ ವಿಷ್ಣು ಮೂರ್ತಿ ಇದಾಗಿದೆ. 

ದಿನಕ್ಕೆರಡು ಬಾರಿ ಅದೃಶ್ಯವಾಗಿ ಪ್ರತ್ಯಕ್ಷವಾಗುವ ಶಿವ ದೇವಾಲಯ!

ವಿಶಿಷ್ಠ ಬಾವಿ
ಸುಮಾರು 28 ಸೆಂಟ್ಸ್  ಸರಕಾರಿ ಜಾಗ ಹೊಂದಿದ್ದು ವೃತ್ತಾಕಾರದ ಬಾವಿ ಒಳಾಂಗಣದಲ್ಲಿದೆ. ಒಬ್ಬ ಮನುಷ್ಯ ನೇರವಾಗಿ ಮಾತ್ರ ಈ ಬಾವಿಗೆ ಇಳಿಯಯಬಹುದಾದ ವಿನ್ಯಾಸ ಹೊಂದಿದ್ದು ತುಂಬಾ 
ಆಳವಿದೆ. ಹಳೆಕಾಲದ ಗಜಗಾತ್ರದ ಕಪ್ಪು  ಮುರಕಲ್ಲುವಿನಿಂದ ಕೂಡಿದ ದೇವಾಲಯದ ಸುತ್ತಲೂ ಆವರಣ ಗೊಡೆ ಇದೆ. ಎದುರಿನಲ್ಲಿ ನಾಗಬನ ಇದೆ. ಹಾಗೂ ರಕ್ತೇಶ್ವರಿಯ ಹಾಸಿಗಲ್ಲು ಇದೆ. 

45 ವರ್ಷಗಳಿಂದ ಪೂಜೆ ಇಲ್ಲ..
ಈ ರಸ್ತೆಗೆ ಈಗ ಕಾಂಕ್ರೀಕರಣವಾಗಿದೆ. ಈ ಭಾಗದ ಜನರು  ಹೆಚ್ಚಿನವರು ಇದಕ್ಕೆ ಗೋಪಾಲಕೃಷ್ಣ ಮೇಲ್ ಮಠ ಎಂದು ಕರೆಯುತ್ತಿದ್ದರು, ಈ ದೇವಾಲಯದಲ್ಲಿ ಪೂಜೆ ನಡೆಯದೇ ಸುಮಾರು 45 ವರ್ಷಗಳೇ ಕಳೆದಿದೆ. 12 ರೂಪಾಯಿ ತಸ್ತೀಕ್ ಸರಕಾರ ಮಟ್ಟದಲ್ಲಿ ಇಲಾಖೆಯಿಂದ  ವೆಂಕಟಕೃಷ್ಣ ಶಾಸ್ತ್ರಿಯವರಿಗೆ ಅಂದಿನ ಕಾಲದಲ್ಲಿ ಪೂಜೆಗಾಗಿ ಬರುತ್ತಿತ್ತು, ಈ ಸ್ಥಳದ ಬಗ್ಗೆ ಅಂದಿನ ಕಾಲದಲ್ಲಿ ಹಿರಿಯ ಸಂಶೋಧಕರಾದ ಶ್ರೀ ಗುರುರಾಜ್ ಭಟ್ ಅವರು ಭೇಟಿ ನೀಡಿ ಕ್ರಿಸ್ತಶಕ 12ನೇ ಶತಮಾನದ ವಿಷ್ಣುಮೂರ್ತಿ ದೇವರ ವಿಗ್ರಹ ಇದಾಗಿದೆ ಎಂದು ಅಂದು ತಿಳಿಸಿದ್ದರು.

ಈ ವಿಷ್ಣು ದೇವಾಲಯದ ಎದುರಿನಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಇನ್ನೊಂದು ಮಗ್ಗುಲಲ್ಲಿ 101 ಬಾವಿ ಇರುವ ಸ್ಥಳವೂ ಇದೆ, ಒಟ್ಟಿನಲ್ಲಿ ಹೊಯ್ಸಳರ ಕಾಲ ಘಟ್ಟದಲ್ಲಿ ಈ ಭಾಗದಲ್ಲಿಯೂ ಪೂಜಿಸುವ ವಿಷ್ಣುಮೂರ್ತಿ ದೇವಾಲಯವು  ಸರಕಾರ ಜಾಗದಲ್ಲಿದ್ದು ಪ್ರಚಲಿತಕ್ಕೆ ಬಾರದೆ ಇರುವುದು ಬೇಸರದ ಸಂಗತಿಯಾಗಿದೆ. ಹೊಯ್ಸಳ ಕಾಲದ ವಿಗ್ರಹ, ದೇವಾಲಯದ ಕುರುಹು ನಮ್ಮ ಪರ್ಕಳದಲ್ಲಿರುವುದು ಹೆಮ್ಮೆ ಎನಿಸಿದೆ. ಹಿಂದೆ ಇದೇರೀತಿ ಪರ್ಕಳದ 80ನೇ ಬಡಗುಬೆಟ್ಟುವಿನ ಆಲಂಬಿಯಲ್ಲಿಯೂ ಕೂಡ ಅಳಿದುಳಿದ ದೇವಾಲಯದ ಕುರುಹು ಇದೆ ಎಂದು ಸ್ಥಳೀಯ ನಿವಾಸಿ ಗಣೇಶ ರಾಜ ಸರಳಬೆಟ್ಟು ತಿಳಿಸಿದ್ದಾರೆ .

ಪಶ್ಚಿಮ ದಿಕ್ಕಿನ ಅಧಿಪತಿ ಶನಿಯನ್ನು ಸಂತೋಷವಾಗಿಡಲು ವಾಸ್ತು ಟಿಪ್ಸ್

ಆ ಸ್ಥಳಕ್ಕೆ ಪ್ರಾಚ್ಯವಸ್ತು ಸಂಶೋಧಕರಾದ  ಪ್ರೊ ಟಿ. ಮುರುಗೇಶಿಯವರಿಗೆ ಮಾಹಿತಿ ನೀಡಿದಾಗ ಅವರ ತಂಡದವರು ಬಡಗಬೆಟ್ಟುವಿನ ಬಾವಿಯಲ್ಲಿ ಹುಡುಕಾಟ ನಡೆಸಿದಾಗ ನಿಂತುಕೊಂಡಿದ್ದ  ಭಂಗಿಯಲ್ಲಿದ್ದ ವಿಷ್ಣುವಿನ ವಿಗ್ರಹ ಬಾವಿಯಲ್ಲಿ ಪತ್ತೆಯಾಗಿತ್ತು. ಆ ವಿಗ್ರಹ ಕ್ರಿಸ್ತಶಕ 13ನೇ ಶತಮಾನದ್ದು ಎಂದು ಅಂದಾಜಿಸಲಾಗಿತ್ತು. ಅಲ್ಲಿಯ ದೇವಾಲಯದ ಗೋಪುರ ಕೂಡ ಮುರಕಲ್ಲಿನಿಂದ ಲಾಕ್ ಮಾಡಿದ ವಿನ್ಯಾಸವಿತ್ತು. ಅದೇ ರೀತಿ ಈಗ ಮಾಣೆಬೆಟ್ಟುವಿನಲ್ಲಿ ಕಂಡು ಬಂದ ದೇವಾಲಯ ಕೂಡಾ ಇದೆ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರತ್ನಾಕರ್ ನಾಯಕ್ ಮಾಣೆಬೆಟ್ಟು, ರಾಜೇಶ್ ಪ್ರಭು ಪರ್ಕಳ ಜೊತೆಗಿದ್ದು ಸಹಕರಿಸಿದರು. ಈ ಸ್ಥಳದ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಿದರೆ ಇಲ್ಲಿಯ ಸ್ಥಳದ ಮಾಹಿತಿಗೆ ಬೆಳಕು ಚೆಲ್ಲಬಹುದು ಎಂದು ಗಣೇಶ್ ರಾಜ್ ಸರಳೇಬೆಟ್ಟು ಅಭಿಪ್ರಾಯ ಪಟ್ಟಿದ್ದಾರೆ.

Latest Videos
Follow Us:
Download App:
  • android
  • ios