ಈ ವಾರ ಕನ್ನಡ ಬಿಗ್'ಬಾಸ್'ನಿಂದ ಶೀತಲ್ ಶೆಟ್ಟಿ ಔಟ್
ಸೀಕ್ರೆಟ್ ರೂಮಿನಿಂದ ವಾಪಸ್ ಬಂದ ಬಳಿಕ ಶೀತಲ್ ಶೆಟ್ಟಿಯವರ ವರ್ತನೆಯು ಮನೆಯ ಇತರ ಕೆಲ ಸದಸ್ಯರಿಗೆ ಇರಿಸುಮುರಿಸು ಉಂಟು ಮಾಡಿದ್ದು ವೀಕ್ಷಕರ ಅನುಭವಕ್ಕೆ ಬಂದಿದೆ.
ಬೆಂಗಳೂರು(ಡಿ. 31): ಕನ್ನಡ ಬಿಗ್'ಬಾಸ್'ನ ಪ್ರಬಲ ಸ್ಪರ್ಧಿಗಳ ಪೈಕಿ ಒಬ್ಬರೆನಿಸಿರುವ ಶೀತಲ್ ಶೆಟ್ಟಿ ಈ ವಾರ ಔಟ್ ಆಗಿದ್ದಾರೆಂಬ ಮಾಹಿತಿ ಕೇಳಿಬಂದಿದೆ. ಇದರಿಂದ ಈಗ ಬಿಗ್'ಬಾಸ್ ಮನೆಯಲ್ಲಿ ಏಳು ಮಂದಿ ಉಳಿದುಕೊಂಡಂತಾಗಿದೆ. ಶೀತಲ್ ಶೆಟ್ಟಿ ನಿರ್ಗಮನದ ಬಳಿಕ ಈಗ ಬಿಗ್ ಬಾಸ್ ಮನೆಯಲ್ಲಿ ಮೋಹನ್, ಪ್ರಥಮ್, ಕೀರ್ತಿಕುಮಾರ್, ಭುವನ್, ಶಾಲಿನಿ, ಮಾಳವಿಕಾ ಮತ್ತು ರೇಖಾ ಸ್ಪರ್ಧಾಕಣದಲ್ಲಿದ್ದಾರೆ.
ಶೀತಲ್ ಶೆಟ್ಟಿ ನೇರಾನೇರ:
ಬಿಗ್'ಬಾಸ್ ಶೋನ ಆರಂಭದಿಂದಲೂ ಶೀತಲ್ ಶೆಟ್ಟಿಯವರು ನೇರ ನಡೆ-ನುಡಿಯಿಂದ ಜನಪ್ರಿಯತೆ ಗಳಿಸಿದ್ದರು. ಅದೇ ಕಾರಣಕ್ಕೂ ಅವರು ಟೀಕೆಗೂ ಒಳಗಾಗಿದ್ದರು. ಕೆಲ ವಾರಗಳ ಹಿಂದೆ ಶಾಲಿನಿ ಜೊತೆ ಶೀತಲ್ ಶೆಟ್ಟಿಯವರನ್ನೂ ಎಲಿಮಿನೇಟ್ ಮಾಡಲಾಗಿದೆ ಎಂದು ಘೋಷಿಸಲಾಗಿತ್ತು. ಆದರೆ, ಅವರಿಬ್ಬರನ್ನು ಬಿಗ್'ಬಾಸ್ ಮನೆಯ ಸೀಕ್ರೆಟ್ ರೂಮಿನಲ್ಲಿಟ್ಟು ಒಂದು ವಾರದ ಬಳಿಕ ಬಿಗ್'ಬಾಸ್ ಮನೆಗೆ ವಾಪಸ್ ಕರೆಸಲಾಗಿತ್ತು. ಸೀಕ್ರೆಟ್ ರೂಮಿನಿಂದ ವಾಪಸ್ ಬಂದ ಬಳಿಕ ಶೀತಲ್ ಶೆಟ್ಟಿಯವರ ವರ್ತನೆಯು ಮನೆಯ ಇತರ ಕೆಲ ಸದಸ್ಯರಿಗೆ ಇರಿಸುಮುರಿಸು ಉಂಟು ಮಾಡಿದ್ದು ವೀಕ್ಷಕರ ಅನುಭವಕ್ಕೆ ಬಂದಿದೆ.
ಇಂದು ಶನಿವಾರ ರಾತ್ರಿ ಶೀತಲ್ ಶೆಟ್ಟಿಯವರ ನಿರ್ಗಮನವನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ.