ಯಾವುದೇ ಹೈಪ್ ಇಲ್ಲದೆ ಬಿಡುಗಡೆಯಾದ, ನೀಮ್ ಕರೋಲಿ ಬಾಬಾ ಅವರ ಜೀವನ ಆಧಾರಿತ 'ಹನುಮಾನ್ ಅಂಶ್' ಎಂಬ ಆಧ್ಯಾತ್ಮಿಕ ಸಿನಿಮಾವು ಪ್ರೇಕ್ಷಕರ ಮೌತ್ ಟಾಕ್ನಿಂದಾಗಿ ಬಾಕ್ಸ್ ಆಫೀಸ್ನಲ್ಲಿ ಅಚ್ಚರಿಯ ಯಶಸ್ಸು ಸಾಧಿಸಿದೆ. ಕಡಿಮೆ ಸ್ಕ್ರೀನ್ಗಳಲ್ಲಿ ಆರಂಭವಾದ ಈ ಚಿತ್ರ ಇದೀಗ 400ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಪ್ರದರ್ಶನ ಕಾಣುತ್ತಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
ಭಾರೀ ಬಜೆಟ್ನೊಂದಿಗೆ ನಿರ್ಮಾಣವಾಗಿರುವ, ಸ್ಟಾರ್ ನಟ-ನಟಿಯರನ್ನು ಹೊಂದಿರುವ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ತೀವ್ರವಾಗಿ ಶ್ರಮಿಸುತ್ತಿವೆ. ಆದರೆ ಯಾವುದೇ ಹೈಪ್ ಇಲ್ಲದೇ ಬಿಡುಗಡೆಯಾದ ಆಧ್ಯಾತ್ಮೀಕ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೂಳೆಬ್ಬಿಸುತ್ತಿದೆ.
ಪ್ರಮುಖ ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಜೀವನವನ್ನು ಆಧರಿಸಿ ನಿರ್ಮಾಣ ಮಾಡಲಾಗಿರುವ ಆಧ್ಯಾತ್ಮಿಕ ಸಿನಿಮಾ 'ಹನುಮಾನ್ ಅಂಶ್'. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ, ಆ ಮೂಲಕ ಸಿನಿಮಾ ರಂಗ ಖ್ಯಾತ ವ್ಯಕ್ತಿಗಳಿಗೆ ಅಚ್ಚರಿ ಮೂಡಿಸುತ್ತಿದೆ.
ಹೈಪ್ ಇಲ್ಲದೆ ಗೆದ್ದ ‘ಹನುಮಾನ್ ಅಂಶ್’
ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಕೆಲವೇ ಚಿತ್ರಮಂದಿರಲ್ಲಿ ಬಿಡುಗಡೆಯಾದರೂ, ಆ ಬಳಿಕ ಸ್ಕ್ರೀನ್ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಿನಿಮಾ ಬಿಡುಗಡೆಯಾದ ಮೊದಲ ಎರಡು ವಾರದಲ್ಲಿ ಈ ಸಿನಿಮಾ ದೇಶದಾದ್ಯಂತ ಕೇವಲ 1.30 ಕೋಟಿ ರೂಪಾಯಿ ಮಾತ್ರ ಗಳಿಸಿತ್ತು. ಹಲವು ಪ್ರದೇಶಗಳಲ್ಲಿ ಸಿನಿಮಾ ಬಗ್ಗೆ ಪ್ರಚಾರ ಇಲ್ಲದ ಕಾರಣ ಸಿನಿಮಾ ಥಿಯೇಟರ್ಗಳು ರದ್ದಾಗುವ ಪರಿಸ್ಥಿತಿ ಎದುರಾಗಿತ್ತು.
ಬಾಕ್ಸ್ ಆಫೀಸ್ ಅಲ್ಲಾಡಿಸಿದ ಆಧ್ಯಾತ್ಮಿಕ ಸಿನಿಮಾ: ಏನಿದರ ಗುಟ್ಟು?
ಆದರೆ ಈ ಸಂದರ್ಭದಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರಿಂದ ವ್ಯಕ್ತವಾದ ಮೌತ್ ಟಾಕ್, ಏಕಾಏಕಿ ಪರಿಸ್ಥಿತಿಯನ್ನು ಬದಲಿಸಿತ್ತು. ಸಿನಿಮಾದಲ್ಲಿರುವ ಆಧ್ಯಾತ್ಮಿಕ ಭಾವ, ಅಧ್ಬುತ ಕಥೆ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಇದರಿಂದ ದೇಶದಾದ್ಯಂತ ಸಿನಿಮಾ ಬಿಡುಗಡೆಗೆ ಡಿಮ್ಯಾಂಡ್ ಹೆಚ್ಚಾಗಿತ್ತು. ಎರಡನೇ ವಾರದಲ್ಲಿ ಕೇವಲ 40 ಸ್ಕ್ರೀನ್ಗಳಲ್ಲಿ ಮಾತ್ರ ಪ್ರದರ್ಶನ ಕಾಣುತ್ತಿದ್ದ ಈ ಸಿನಿಮಾ ಈಗ 400 ಹೆಚ್ಚು ಸ್ಕ್ರೀನ್ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬುಕ್ ಮೈ ಶೋನಲ್ಲಿ ಒಂದು ಟಿಕೆಟ್ ಖರೀದಿಸಿದರೆ ಮತ್ತೊಂದು ಟಿಕೆಟ್ ಫ್ರೀ ಎಂಬ ಆಫರ್ ಕೂಡ ನಡೆಯುತ್ತಿದೆ. ಇದರೊಂದಿಗೆ ಸಿನಿಮಾ ನೋಡುವ ಪ್ರೇಕ್ಷಕರ ಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ.
ಕೇವಲ ಎರಡು ಕೋಟಿ ಬಜೆಟ್ನಲ್ಲಿ ನಿರ್ಮಾಣ ಮಾಡಿರುವ ಈ ಸಿನಿಮಾ ದೇಶದಾದ್ಯಂತ ಈಗಾಗಲೇ 8 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಪ್ರಮುಖವಾಗಿ ದೆಹಲಿ, ಉತ್ತರ ಪ್ರದೇಶ, ಪಂಜಾಬ್, ಮುಂಬೈ ನಂತಹ ನಗರಗಳಲ್ಲಿ ಹೆಚ್ಚು ಪ್ರದರ್ಶನ ಕಾಣುತ್ತಿದೆ. 2026ರ ಸೂಪರ್ ಸಿನಿಮಾಗಳಲ್ಲಿ ಈ ಚಿತ್ರ ಸ್ಥಾನ ಪಡೆದುಕೊಳ್ಳುವುದು ಖಚಿತವಾಗಿದ್ದು, ತನ್ನ ವಿಜಯದ ಯಾತ್ರೆಯನ್ನು ಮುಂದುವರಿಸಿದೆ.
ನೀಮ್ ಕರೋಲಿ ಬಾಬಾ ಯಾರು?
ಹನುಮಾನ್ ಅಂಶ ಸಿನಿಮಾ ಇದೇ ತಿಂಗಳ 07ರಂದು ಬಿಡುಗಡೆಯಾಗಿತ್ತು. ಸಿನಿಮಾದ ಗಳಿಕೆ ಇದೇ ರೀತಿ ಮುಂದುವರಿದರೆ ಈ ವಾರಾಂತ್ಯದ ವೇಳೆ 20 ಕೋಟಿ ರೂಪಾಯಿ ಗಳಿಸುವುದು ಖಚಿತ ಎಂದು ಸಿನಿಮಾ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂದಹಾಗೇ ಹನುಮಾನ್ ಅಂಶ್ ಸಿನಿಮಾ ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಅವರ ಆಧ್ಯಾತ್ಮಿಕ ವಿಚಾರಗಳ ಸುತ್ತ ನಡೆದ ಘಟನೆಗಳ ಕಥೆಯನ್ನು ಹೊಂದಿದ್ದು, ಆಧ್ಯಾತ್ಮಿಕ ಸಿನಿಮಾಗಳನ್ನು ಇಷ್ಟಪಡುವ ಸಿನಿಮಾ ಪ್ರೇಕ್ಷಕರಿಗೆ ಈ ಸಿನಿಮಾ ಖಂಡಿತ ಇಷ್ಟವಾಗುತ್ತದೆ. ವಿಶಾಲ್ ಚತುರ್ವೇದಿ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದು, ಇತ್ತೀಚಿನ ದಿನಗಳಲ್ಲಿ ಆಧ್ಯಾತ್ಮಿಕ ಕಥಾಹಂದರ ಹೊಂದಿರುವ ಸಿನಿಮಾಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳುವುದಕ್ಕೆ ಈ ಸಿನಿಮಾ ತಾಜಾ ಉದಾಹರಣೆಯಾಗಿದೆ.
ನೀಮ್ ಕರೋಲಿ ಬಾಬಾ ಪ್ರಸಿದ್ಧ ಹಿಂದೂ ಆಧ್ಯಾತ್ಮಿಕ ಗುರು ಆಗಿದ್ದು, ಪರಮ ಹನುಮ ಭಕ್ತರು. ಭಕ್ತರು ಇವರನ್ನು ಮಹಾರಾಜ್ ಜೀ ಎಂದು ಕರೆಯುತ್ತಾರೆ. ಉತ್ತರಾಖಂಡದ ನೈನಿತಾಲ್ ಬಳಿ ಇವರ ಕೈಂಚಿ ಧಾಮ ಆಶ್ರಮವಿದ್ದು, ಜಗತ್ತಿನಾದ್ಯಂತ ಖ್ಯಾತಿ ಪಡೆದುಕೊಂಡಿದೆ.
ನೀಮ್ ಕರೋಲಿ ಬಾಬಾ ಅವರ ಮೂಲ ಹೆಸರು ಲಕ್ಷ್ಮಣ ನಾರಾಯಣ ಶರ್ಮಾ, ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಅಕ್ಬರ್ಪುರ ಎಂಬ ಹಳ್ಳಿಯ ಶ್ರೀಮಂತ ಜಮೀನುದಾರ ಕುಟುಂಬದಲ್ಲಿ ಜನಿಸಿದ್ದರು. 'ಎಲ್ಲರನ್ನೂ ಪ್ರೀತಿಸಿ, ಎಲ್ಲರಿಗೂ ಸಹಾಯ ಮಾಡಿ, ದೇವರನ್ನು ಯಾವಾಗಲೂ ಸ್ಮರಿಸಿ' ಎಂಬುವುದು ಇವರ ಸರಳ ತತ್ವ ಆಗಿದೆ. 1973ರಲ್ಲಿ ಇವರು ವೃಂದಾವನ ಆಸ್ಪತ್ರೆಯಲ್ಲಿ ಮಹಾನಿರ್ವಾಣ ಆಗಿದ್ದರು, ಅವರ ಸಮಾಧಿ ವೃಂದಾವನ ಆಶ್ರಮದಲ್ಲಿದೆ.
ನೀಮ್ ಕರೋಲಿ ಬಾಬಾ ಅವರ ಪ್ರಭಾವ ಕೇವಲ ಭಾರತದಕ್ಕೆ ಸೀಮಿತವಾಗಿಲ್ಲ. ಜಗತ್ತಿನ ದೊಡ್ಡ ದೊಡ್ಡ ಪ್ರಭಾವಿಗಳು ಇವರ ಭಕ್ತರಾಗಿದ್ದಾರೆ. ಆಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್ಬರ್ಗ್, ವಿರಾಟ್ ಕೊಹ್ಲಿ, ಪ್ರಸಿದ್ಧ ಅಮೆರಿಕ ಲೇಖಕ ರಾಮ್ ದಾಸ್ ಅಲಿಯಾಸ್ ರಿಚರ್ಡ್ ಆಲ್ಬರ್ಟ್ ಅವರು ಆಶ್ರಮಕ್ಕೆ ಭೇಟಿ ನೀಡಿದ್ದರು. ವಿರಾಟ್ ಕೊಹ್ಲಿ ಅವರ ಮೊಬೈಲ್ ವಾಲ್ ಪೇಪರ್ಗೂ ಬಾಬಾ ಅವರ ಫೋಟೋ ಇಟ್ಟುಕೊಂಡಿದ್ದರು. ರಿಚರ್ಡ್ ಆಲ್ಬರ್ಟ್ ಬಾಬಾ ಅವರ ಶಿಷ್ಯರಾಗಿ 'ಮಿರಾಕಲ್ ಆಫ್ ಲವ್' ಎಂಬ ಪುಸ್ತಕವನ್ನು ಬರೆದಿದ್ದಾರೆ.


