ಶಿವರಾಜ್ ಕುಮಾರ್ ಮತ್ತು ರಾಧಿಕಾ ಕುಮಾರಸ್ವಾಮಿ ಕನ್ನಡದ ಐಕಾನಿಕ್ ಅಣ್ಣ-ತಂಗಿ ಜೋಡಿಯಾಗಿದ್ದು, 'ತವರಿಗೆ ಬಾ ತಂಗಿ'ಯಂತಹ ಹಿಟ್ ಚಿತ್ರಗಳಿಂದ ಇವರು ಚಿರಪರಿಚಿತರು. ರಕ್ಷಾ ಬಂಧನದಂದು ರಾಧಿಕಾ ಅವರು ಶಿವಣ್ಣನಿಗೆ ಚಿನ್ನದ ರಾಖಿ ಕಟ್ಟುವ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು, ಅವರ ತೆರೆಯ ಮೇಲಿನ ಬಾಂಧವ್ಯವನ್ನು ಮತ್ತೆ ನೆನಪಿಸುತ್ತದೆ.
ಇಂದು ರಕ್ಷಾ ಬಂಧನ ಆಚರಣೆಯನ್ನು ದೇಶಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಸಹೋದರ ಪ್ರೀತಿಯ ಸಂಕೇತವಾಗಿರುವ ಈ ಹಬ್ಬವನ್ನು ಸಿನಿ ತಾರೆಯರು ಕೂಡ ಆಚರಿಸಿಕೊಂಡಿದ್ದಾರೆ. ಆದರೆ ಸಿನಿಮಾದ ವಿಷಯಕ್ಕೆ ಬರುವುದಕ್ಕಾಗಿ ಅಣ್ಣ-ತಂಗಿ ಎಂದಾಕ್ಷಣ ಥಟ್ಟನೆ ನೆನಪಾಗುವುದು, ಶಿವರಾಜ್ ಕುಮಾರ್ ಮತ್ತು ರಾಧಿಕಾ ಕುಮಾರಸ್ವಾಮಿ ಅವರು. ಇವರಿಬ್ಬರ ಜೋಡಿಯ 'ತವರಿಗೆ ಬಾ ತಂಗಿ' ಹಾಗೂ 'ಅಣ್ಣ-ತಂಗಿ' ಚಿತ್ರ ದಶಕಗಳವರೆಗೆ ನೆನಪಿನಲ್ಲಿ ಇಡುವಂಥದ್ದು. ಇದ್ದರೆ ಇರಬೇಕು ಇಂಥ ಅಣ್ಣ-ತಂಗಿ ಎನ್ನುವುದನ್ನು ನೆನಪಿಸುತ್ತವೆ ಈ ಸಿನಿಮಾಗಳು. ಓಂ ಸಾಯಿ ಪ್ರಕಾಶ್ ನಿರ್ದೇಶನದ ಈ ಚಿತ್ರಗಳ ಸಕತ್ ಹಿಟ್ ಆಗಿದ್ದವು, ಜೊತೆಗೆ ಇವರನ್ನು ನಿಜ ಜೀವನದ ಅಣ್ಣ-ತಂಗಿ ಎಂದೇ ಹೇಳಲಾಗುತ್ತದೆ.
ಅದಾದ ಬಳಿಕ ಶಿವರಾಜ್ ಕುಮಾರ್ ಮತ್ತು ರಾಧಿಕಾ ಕುಮಾರಸ್ವಾಮಿ ಅವರ 'ದೇವರು ಕೊಟ್ಟ ತಂಗಿ' ಬರಬೇಕಿತ್ತು. ಆದರೆ ರಾಧಿಕಾ ಅವರು ಕೆಲವು ಕಾರಣಗಳಿಂದ ಚಿತ್ರಕ್ಕೆ ಬರಲು ಸಾಧ್ಯವಾಗದ್ದರಿಂದ ಅವರ ಬದಲಿಗೆ ನಟಿ ಮೀರಾ ಜಾಸ್ಮಿನ್ ನಟಿಸಿದ್ದರು. ಆದರೆ ಇದು ಹೇಳಿಕೊಳ್ಳುವಷ್ಟು ಸಕ್ಸಸ್ ಆಗದೇ ಇದ್ದುದರಿಂದ, ಎಲ್ಲರೂ ರಾಧಿಕಾ ಅವರೇ ಇರಬೇಕಿತ್ತು ಅಂದದ್ದು ಆ ಕಾಲದಲ್ಲಿ ಸಕತ್ ಸದ್ದು ಮಾಡಿತ್ತು.
ಹಳೆಯ ವಿಡಿಯೋ ವೈರಲ್
ರಕ್ಷಾ ಬಂಧನದ ಈ ಹೊತ್ತಿನಲ್ಲಿ ಮತ್ತೆ ಇವರಿಬ್ಬರ ವಿಡಿಯೋ ಒಂದು ವೈರಲ್ ಆಗುತ್ತಿದೆ. ಅದು ರಾಧಿಕಾ ಅವರು ಶಿವರಾಜ್ ಕುಮಾರ್ ಅವರಿಗೆ ಚಿನ್ನದ ರಾಖಿಯನ್ನು ಕಟ್ಟಿದ್ದ ಸಂದರ್ಭ. ಇದು ಕೆಲ ವರ್ಷಗಳ ಹಿಂದಿನ ವಿಡಿಯೋ. ಆದರೆ ಪ್ರತಿ ಬಾರಿ ರಕ್ಷಾ ಬಂಧನದ ಸಮಯದಲ್ಲಿ ಜಾಲತಾಣಗಳಲ್ಲಿ ಇದೇ ವರ್ಷದ್ದು ಎನ್ನುವ ರೀತಿಯಲ್ಲಿ, ಈ ವಿಡಿಯೋ ವೈರಲ್ ಆಗುತ್ತಲೇ ಇರುತ್ತದೆ. ಇದರಲ್ಲಿ ಶಿವರಾಜ್ ಕುಮಾರ್ ಅವರಿಗೆ ರಾಧಿಕಾ ರಾಖಿ ಕಟ್ಟಿದ ಬಳಿಕ, ಅವರು ಆಶೀರ್ವದಿಸುವುದನ್ನು ನೋಡಬಹುದಾಗಿದೆ.
ಅಣ್ಣ-ತಂಗಿ ನೆನಪಿಸಿಕೊಂಡಿದ್ದ ಸಾಯಿ ಪ್ರಕಾಶ್
ಈ ಹಿಂದೆ ಇವರಿಬ್ಬರ ಬಾಂಧವ್ಯದ ಬಗ್ಗೆ ಮಾತನಾಡಿದ್ದರು. ನನ್ನ ತಂಗಿ ಜೊತೆಗಿನ ನನ್ನ ಅನುಬಂಧವೇ ಈ ಸಿನಿಮಾಗಳಲ್ಲಿ ಕೂಡ ಸೇರಿಸಿದ್ದೆ ಎಂದಿದ್ದರು. ದಕ್ಷಿಣ ಭಾರತದಲ್ಲಿ ಮೊದಲಿಲ್ಲಾ ರಕ್ಷಾಬಂಧನಕ್ಕೆ ಅಷ್ಟೊಂದು ಮಹತ್ವ ಇರಲಿಲ್ಲ. ಆದರೆ ನನ್ನ ಸಿನಿಮಾದಲ್ಲಿ ಅದನ್ನೇ ಹೈಲೆಟ್ ಮಾಡಿದ್ದೆ. 'ತವರಿಗೆ ಬಾ ತಂಗಿ' ಚಿತ್ರಕ್ಕೆ ಅಜಯ್ ಕುಮಾರ್ ಕಥೆ, ಚಿತ್ರಕಥೆ ಬರೆದಿದ್ದರು. ಅದನ್ನು ಅಣ್ಣಾವ್ರು, ವರದಪ್ಪ ಎಲ್ಲಾ ಒಪ್ಪಿ ಸಿನಿಮಾ ಆಗಿತ್ತು. ಬಳಿಕ 'ಅಣ್ಣ-ತಂಗಿ' ಚಿತ್ರಕ್ಕೆ ನಾನೇ ಕಥೆ ಮಾಡಿದ್ದೆ" ಎಂದು ಸಾಯಿಪ್ರಕಾಶ್ ಹೇಳಿದ್ದರು.


