2023ರ ಜನವರಿ 31 ರಂದು ಮಾವನ ಮನೆಯಿಂದ ವ್ಯಕ್ತಿಯೊಬ್ಬ ನಿಗೂಢವಾಗಿ ನಾಪತ್ತೆಯಾಗಿದ್ದ. ಮದುವೆಗೆಂದು ಹೊರಟಿದ್ದವ ವಾಪಾಸ್‌ ಬಂದಿರಲೇ ಇಲ್ಲ. ಸಾಕಷ್ಟು ಹುಡುಕಾಡಿದರೂ ಈತ ಸಿಕ್ಕಿರಲೇ ಇಲ್ಲ. ಕೊನೆಗೆ ಈತ ಸತ್ತಿದ್ದಾನೆ ಎಂದು ಕುಟುಂಬ ನಂಬಿತ್ತು. 

ನವದೆಹಲಿ (ಜೂ.14): ಬರೋಬ್ಬರಿ ನಾಲ್ಕು ತಿಂಗಳ ಹಿಂದೆ ಬಿಹಾರದ ಭಾಗಲ್‌ಪುರದಲ್ಲಿದ್ದ ತನ್ನ ಮಾವನ ಮನೆಯಿಂದ ಕಾಣೆಯಾಗಿದ್ದ ವ್ಯಕ್ತಿಯೊಬ್ಬ ಇತ್ತೀಚೆಗೆ ನೋಯ್ಡಾದಲ್ಲಿ ಮೆಮೋಸ್‌ ತಿನ್ನುವಾಗ ಪತ್ತೆಯಾಗಿದ್ದಾರೆ. 2023ರ ಜನವರಿ 31 ರಂದು ಕಾಣೆಯಾಗಿದ್ದ ಈತನನ್ನು ಹುಡುಕಲು ತೀವ್ರ ಪಯತ್ನ ಪಡಲಾಗಿತ್ತು. ಆದರೆ, ಆತ ಎಲ್ಲಿ ಹೋಗಿರಬಹುದು ಎನ್ನುವ ಸಣ್ಣ ಸೂಚನೆಯೂ ಸಿಗದ ಕಾರಣ ಈತನ ಕುಟುಂಬ ಹಾಗೂ ಸಂಬಂಧಿಗಳು ಕೆಲವು ದಿನಗಳ ಕಾಲ ದುಃಖದಲ್ಲಿದ್ದು, ಬಳಿಕ ಈತ ಸಾವು ಕಂಡಿರಬಹುದು ಎಂದೇ ಭಾವಿಸಿದ್ದರು. ಆದರೆ, ಆತ ನಾಪತ್ತೆಯಾದ ನಾಲ್ಕು ತಿಂಗಳ ಬಳಿಕ ಮೆಮೋಸ್‌ ತಿನ್ನುವ ವೇಳೆ ನೋಯ್ಡಾದಲ್ಲಿ ಪತ್ತೆಯಾಗಿದೆ. ಈ ಆಘಾತಕಾರಿ ಪ್ರಕರಣ ಬಿರಾಹದ ಭಾಗಲ್ಪುರದ ಸುಲ್ತಾನ್‌ಗಂಜ್‌ನಲ್ಲಿ ನಡೆದಿದೆ. ನಿಶಾಂತ್‌ ಕುಮಾರ್‌ ಎನ್ನುವ ವ್ಯಕ್ತಿ, ಜನವರಿ 31 ರಂದು ಮದುವೆಗೆಂದು ಹೊರಹೋಗಿದ್ದ. ಆದರೆ, ಮನೆಗೆ ವಾಪಾಸ್‌ ಬಂದಿರಲೇ ಇಲ್ಲ. ಈ ಸಂಬಂಧ ಸಾಕಷ್ಟು ಹುಡುಕಾಟ ನಡೆಸಿದ ಬಳಿಕ ಅವರ ಸೋದರ ಮಾವ ರವಿಶಂಕರ್‌ ಸಿಂಗ್‌ ಪೊಲೀಸ್‌ ಠಾಣೆಯನ್ನು ನಾಪತ್ತೆಯ ದೂರು ದಾಖಲು ಮಾಡಿದ್ದರು. 

ಇನ್ನೊಂದೆಡೆ ನಿಶಾಂತ್‌ನ ತಂದೆ ಸಚ್ಚಿದಾನಂದ ಸಿಂಗ್‌ ಹಾಗೂ ಅವರ ಸಂಬಂಧಿ ನವೀನ್‌ ಸಿಂಗ್‌, ರವಿಶಂಕರ್‌ ಸಿಂಗ್‌ ಅವರೇ ನಿಶಾಂತ್‌ನನ್ನು ಅಪಹರಣ ಮಾಡಿರಬಹುದು ಎಂದು ಆರೋಪ ಮಾಡಿದ್ದರು. ಕೆಲವು ತಿಂಗಳುಗಳ ಕಾಲ ಹುಡುಕಾಟ ನಡೆಸಿದರೂ, ಮಗನ ಸುಳಿವು ಸಿಗದ ಹಿನ್ನಲೆಯಲ್ಲಿ ಆತ ಸತ್ತಿರಬಹುದು ಎಂದು ಭಾವಿಸಿ ಕುಟುಂಬ ಜೀವನ ಸಾಗಿಸುತ್ತಿತ್ತು.

ಈ ನಡುವೆ ಇತ್ತೀಚೆಗೆ ರವಿಶಂಕರ್‌ ಸಿಂಗ್‌ ಯಾವುದೋ ಕೆಲಸದ ಸಲುವಾಗಿ ನೋಯ್ದಾಗೆ ಬಂದಿದ್ದಾರೆ. ಈ ವೇಳೆ ಸೆಕ್ಟರ್‌ 50ಯ ಬಳಿ ಇರುವ ಮೆಮೋಸ್‌ ಅಂಗಡಿಗೆ ತೆರಳಿದ್ದ. ಈ ವೇಳೆ ಅಂಗಡಿಯ ಬಳಿ ಉದ್ದನೆಯ ಗಡ್ಡ, ಮೀಸೆ, ಕೊಳಕಾದ ಬಟ್ಟೆ ಧರಿಸಿ ಭಿಕ್ಷುಕನಂತೆ ಕಾಣುವ ವ್ಯಕ್ತಿಯೊಬ್ಬನನ್ನು ಅಂಗಡಿಯ ಮಾಲೀಕ ಬೆದರಿಸಿ ಓಡಿಸುತ್ತಿದ್ದ. ಈ ವೇಳೆ ಆತನ ಬಗ್ಗೆ ಸಹಾನೂಭೂತಿ ತೋರಿದ್ದ ರವಿಶಂಕರ್‌, ಆತನಿಗೆ ಮೆಮೋಸ್‌ ನೀಡಿ ಅದರ ಹಣವನ್ನು ತಾನು ನೀಡುತ್ತೇನೆ ಎಂದು ಹೇಳಿದ್ದಾರೆ. ಈ ವೇಳೆ ಭಿಕ್ಷುಕನಂತೆ ಕಾಣುವ ವ್ಯಕ್ತಿಯ ಜೊತೆ ಮಾತನಾಡಿದ ರವಿಶಂಕರ್‌, ಹೆಸರು, ವಿಳಾಸವನ್ನು ಕೇಳಿದ್ದಾರೆ. ಆದರೆ, ಯಾರನ್ನು ತಾನು ಭಿಕ್ಷುಕ, ಬಡವ ಎಂದುಕೊಂಡಿದ್ದೇನೋ ಆತ 4 ತಿಂಗಳ ಹಿಂದೆ ಕಾಣೆಯಾಗಿದ್ದ ಸೋದರ ಮಾವ ನಿಶಾಂತ್‌ ಕುಮಾರ್ ಎನ್ನುವುದು ಈ ಹಂತದಲ್ಲಿ ಗೊತ್ತಾಗಿದೆ.

ನಿಶಾಂತ್‌ ಕಾಣೆಯಾಗಿದ್ದಕ್ಕೂ ರವಿಶಂಕರ್‌ ಮೇಲೆಯೂ ಆರೋಪ ಮಾಡಲಾಗಿತ್ತು. ಆದರೆ ರವಿಶಂಕರ್‌ 100 ನಂಬರ್‌ಗೆ ಕರೆ ಮಾಡಿ, ಪೊಲೀಸರನ್ನು ಕರೆಸಿ ಅವರನ್ನು ಠಾಣೆಗೆ ತಲುಪಿಸಿದ್ದಾರೆ. ನಂತರ ದೆಹಲಿ ಪೊಲೀಸರು ಹಲವು ತಿಂಗಳುಗಳಿಂದ ನಾಪತ್ತೆಯಾಗಿದ್ದ ನಿಶಾಂತ್ ನನ್ನು ಸುಲ್ತಂಗಂಜ್ ಪೊಲೀಸ್ ಠಾಣೆಯಲ್ಲಿ ಬಿಹಾರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೊಸಳೆಗಿಂತ ಮನುಷ್ಯನೇ ಕ್ರೂರಿ.. 14 ವರ್ಷದ ಬಾಲಕನ ತಿಂದ ಮೊಸಳೆಯ ಜೀವ ತೆಗೆದ ಗ್ರಾಮಸ್ಥರು!

ಮಂಗಳವಾರ ಪೊಲೀಸರು ನಿಶಾಂತ್‌ನನ್ನು ಭಾಗಲ್ಪುರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಆತ ನಾಪತ್ತೆಯಾಗಿದ್ದು ಹೇಗೆ? ಅಪಹರಣವಾಗಿತ್ತೇ? ದೆಹಲಿ ತಲುಪಿದ್ದು ಹೇಗೆ ಎನ್ನುವ ಬಗ್ಗೆ ವಿಚಾರಣೆ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂರು ದಿನ ನಾಪತ್ತೆಯಾದವಳು ಸಿಕ್ಕಿದ್ದು ಹೆಣವಾಗಿ: ರುಂಡ.. ಮುಂಡ ಕತ್ತರಿಸಿ ಒಂದೊಂದು ದಿಕ್ಕಿಗೆ ಎಸೆದಿದ್ರು..!